Homeಕ್ರೀಡೆಒಲಂಪಿಕ್ಒಲಿಂಪಿಕ್ಸ್ ಪದಕಗಳ ಹಿಂದಿದೆ ಪರಿಶ್ರಮ; ತೆರೆಯ ಹಿಂದಿನ ಸಾಧಕರಿವರು

ಒಲಿಂಪಿಕ್ಸ್ ಪದಕಗಳ ಹಿಂದಿದೆ ಪರಿಶ್ರಮ; ತೆರೆಯ ಹಿಂದಿನ ಸಾಧಕರಿವರು

- Advertisement -
- Advertisement -

ಕೊರೊನಾ ಸಾಂಕ್ರಾಮಿಕದ ಕರಿನೆರಳಿನಲ್ಲಿ ಆತಂಕ, ದುಃಖದುಮ್ಮಾನದಲ್ಲಿಯೇ ಇದ್ದ ಭಾರತೀಯರಿಗೆ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಒಂದಿಷ್ಟು ಖುಷಿ ನೀಡಿದೆ. ಈ ಬಾರಿ ಭಾರತ ಐತಿಹಾಸಿಕ ಸಾಧನೆಗೈದಿದೆ. ಒಟ್ಟು 7 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ. ಪದಕ ಗಳಿಸದೆ ಹೋದರೂ ಮಹಿಳಾ ಹಾಕಿ ತಂಡ ಮತ್ತು ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರ ದಿಟ್ಟ ಆಟಕ್ಕೆ ಕೋಟ್ಯಂತರ ಭಾರತೀಯರು ಮನಸೋತಿದ್ದಾರೆ. ಅತಿ ಉತ್ಸಾಹದಿಂದ ಈ ಸಂಭ್ರಮದ ಕ್ಷಣಗಳನ್ನು ಆನಂದಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಮೊದಲ ಬೆಳ್ಳಿ ಗೆದ್ದಾಗಿನಿಂದ ಹಿಡಿದು ನೀರಜ್ ಚೋಪ್ರ ಚಿನ್ನದ ಪದಕಕ್ಕೆ ಮುತ್ತಿಡುವವರೆಗೂ ಎಲ್ಲ ಪದಕ ವಿಜೇತರನ್ನು ಭಾರತದ ಹೆಮ್ಮೆಯ ಪುತ್ರಿ-ಪುತ್ರರೆಂದು ಕೊಂಡಾಡಲಾಗಿದೆ. ಜೊತೆಗೆ ಈ ಬಾರಿ, ಪದಕ ಗೆದ್ದ ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಕೋಚ್‌ಗಳ ಅಪರಿಮಿತ ಶ್ರಮವನ್ನು ಶ್ಲಾಘಿಸಿ, ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಲಾಗಿದೆ. ತೆರೆಯ ಹಿಂದಿನ ಸಾಧಕರೆಂದು ಅಭಿಮಾನ ತೋರಲಾಗಿದೆ. ಈ ಬಾರಿ ಪದಕ ಗೆದ್ದ ಹಾಗೂ ನಾಲ್ಕನೇ ಸ್ಥಾನಕ್ಕೆ ಬಂದ ಭಾರತದ ಕ್ರೀಡಾಳುಗಳನ್ನು ಪರಿಗಣಿಸಿದರೆ ಅವರಿಗೆ ಏಳು ವಿದೇಶಿ ಮತ್ತು ಒಬ್ಬ ಭಾರತದ ಕೋಚ್ ತರಬೇತಿ ನೀಡಿದ್ದಾರೆ. ಅವರ ಕುರಿತು ಕಿರು ಟಿಪ್ಪಣಿಗಳು ಇಲ್ಲಿವೆ.

ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಮುಖ್ಯ ಕೋಚ್ ವಿಜಯ್ ಶರ್ಮಾ ಮತ್ತು ಡಾ. ಆರನ್ ಹಾರ್ಶಿಗ್

“ನಾನು ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ನಾನು ಅನ್ವಯಿಸಿದ ತಂತ್ರಗಳಿಂದ ಮತ್ತು ದೇವರ ಅನುಗ್ರಹದಿಂದ ಇಂದು ನನಗೆ ಯಶಸ್ಸು ಸಿಕ್ಕಿದೆ” – ಜುಲೈ 24ರಂದು ಮಹಿಳೆಯರ 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದಾಗ ಆಕೆಯ ಕೋಚ್ ವಿಜಯ್ ಶರ್ಮಾ ಹೇಳಿದ ಮಾತಿದು.

ಉತ್ತರ ಪ್ರದೇಶ ರಾಜ್ಯ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಿ, ಆ ತಂಡ ಸತತ ಮೂರು ಬಾರಿ ನ್ಯಾಷನಲ್ ಚಾಂಪಿಯನ್ ಆಗಲು ಕಾರಣರಾಗಿದ್ದ ವಿಜಯ್ ಶರ್ಮಾ, 2012ರಲ್ಲಿ ರಾಷ್ಟ್ರೀಯ ತಂಡಕ್ಕೆ ಸಹಾಯಕ ತರಬೇತುದಾರರಾಗಿ ನೇಮಕಗೊಂಡರು.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಗಾಯಗೊಂಡು ಭಾರ ಎತ್ತದೆ ಹಿಂದೆ ಸರಿಯಬೇಕಾಗಿತ್ತು. ಆಗ ಆಕೆಗೆ ಧೈರ್ಯ ತುಂಬಿದವರಲ್ಲಿ ವಿಜಯ್ ಕೂಡ ಒಬ್ಬರು. ಮೀರಾಬಾಯಿ ಚಾನು ಕೋಚ್ ವಿಜಯ್ ಶರ್ಮಾರೊಂದಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಅಮೆರಿಕೆಗೆ ತೆರಳಿ ಡಾ.ಆರೋನ್‌ರವರಿಂದ ತರಬೇತಿ ಪಡದಿದ್ದರು.

1990ರಲ್ಲಿ ಶರ್ಮಾ ಸ್ವತಃ ವೇಟ್ ಲಿಫ್ಟರ್ ಆಗಿದ್ದರು. ಆದರೆ ಮುಷ್ಠಿ ಗಾಯಗೊಂಡು ಹಿಂದೆ ಸರಿಯಬೇಕಾಯಿತು. “ನನ್ನ ವೇಟ್ ಲಿಫ್ಟಿಂಗ್ ವೃತ್ತಿಜೀವನದಲ್ಲಿ ನಾನು ಬಹಳಷ್ಟು ವೈಫಲ್ಯಗಳನ್ನು ಎದುರಿಸಿದ್ದೇನೆ. ಆ ಅನುಭವದಿಂದ, ವೇಟ್ ಲಿಫ್ಟರ್‌ಗಳು ಯಾವ ಸಮಸ್ಯೆಗಳನ್ನು ಎದುರಿಸುತ್ತಾರೆ, ಯಾವ ಬದಲಾವಣೆಗಳನ್ನು ತರಬೇಕು ಎಂಬುದನ್ನು ನಾನು ಕಲಿತಿದ್ದೇನೆ” ಎನ್ನುತ್ತಾರೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ವಿಜಯ್ ಶರ್ಮಾ.

ಕೊನೆಗೂ ಒಲಂಪಿಕ್ ಪದಕ ಗೆದ್ದ ಪಾರ್ಕ್ ಟೇ-ಸಾಂಗ್

ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡಯುತ್ತಿದ್ದ ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು 2019 ರಲ್ಲಿ ಮನಸ್ಸು ಬದಲಿಸಿದರು. ಅವರು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಕೊರಿಯಾದ ಕಿಮ್ ಜಿ ಹ್ಯುನ್ ನೇತೃತ್ವದಲ್ಲಿ ತರಬೇತಿ ಪಡೆಯಲು ನಿರ್ಧರಿಸಿದರು. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಕಿಮ್ ಜಿ ಹ್ಯುನ್ ಭಾರತೀಯ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಕೋಚ್ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದರು. ಆಗ ಸಿಂಧು ಆಸರೆಗೆ ನಿಂತವರು ಅದೇ ದೇಶದವರಾದ ಮತ್ತು ಪುರುಷರ ಬ್ಯಾಡ್ಮಿಂಟನ್ ಕೋಚ್ ಆಗಿದ್ದ ಪಾರ್ಕ್
ಟೇ-ಸಾಂಗ್.

ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಭಾರತದ ನೆಚ್ಚಿನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಆಗಸ್ಟ್ 1ರಂದು ಕಂಚಿನ ಪದಕ ಗೆದ್ದರು. ಆಗ ಆಕೆಗಿಂತಲೂ ಹೆಚ್ಚು ಸಂಭ್ರಮಿಸಿದ್ದು ಆಕೆಯ ಕೋಚ್ ಸಾಂಗ್. ಪ್ರತಿ ಪಾಯಿಂಟ್ ಗಳಿಸಿದಾಗಲೂ ಸಿಂಧು ತರವೇ ಕೂಗುವ ಸಾಂಗ್, ಪಾಯಿಂಟ್ ಹೋದಾಗ ಆರಾಮ್ ಸೆ, ಆರಾಮ್ ಸೆ ಎಂದು ಸಮಾಧಾನ ಮಾಡಿ ಪಂದ್ಯ ಇನ್ನು ಮುಗಿದಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದರು!

2002ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದ ಪಾರ್ಕ್ ಟೇ-ಸಾಂಗ್ 2004ರ ಅಥೆನ್ಸ್ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರು. ಅದಾಗಿ 17 ವರ್ಷದ ನಂತರ ಅವರಿಂದ ತರಬೇತುಗೊಂಡ ಸಿಂಧು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದು ಅವರ ಕನಸು ನನಸು ಮಾಡಿದ್ದಾರೆ.

“ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ, ನಾಲ್ಕನೇ ಸ್ಥಾನ ಮತ್ತು ಕಂಚಿನ ಪದಕದ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಸಾಂಗ್ ನನಗೆ ಹೇಳಿದರು. ಇದು ನನ್ನನ್ನು ಬಲವಾಗಿ ತಟ್ಟಿತು. ಪದಕ ಪಡೆಯುವುದು ಎಷ್ಟು ಮುಖ್ಯ ಎಂದು ಅರಿತುಕೊಂಡೆ ಮತ್ತು ಅದೇ ಮನಸ್ಥಿತಿಯೊಂದಿಗೆ ಮುಂದಿನ ಪಂದ್ಯಕ್ಕೆ ತಯಾರಿ ನಡೆಸಿದೆ” ಎಂದು ತಮ್ಮ ಕೋಚ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ ಪಿ.ವಿ ಸಿಂಧು.

“ಇದು ನನ್ನ ನಾಯಕತ್ವ ಮತ್ತು ವೃತ್ತಿಜೀವನದ ಮಹತ್ವದ ಕ್ಷಣವಾಗಿದೆ. ಏಕೆಂದರೆ ಒಬ್ಬ ಆಟಗಾರನಾಗಿ ನಾನು ಒಲಿಂಪಿಕ್ಸ್ ಪದಕ ಗೆಲ್ಲಲಾಗಲಿಲ್ಲ. ಆದರೆ ಒಬ್ಬ ತರಬೇತುದಾರನಾಗಿ ಪದಕ ಗೆದ್ದಿದ್ದೇನೆ. ಹಾಗಾಗಿ ನನಗೆ ತುಂಬಾ ಸಂತೋಷವಾಗಿದೆ. ನಾನು ಮೊದಲು ಸಿಂಧುಗೆ ಕಲಿಸಲು ಪ್ರಾರಂಭಿಸಿದಾಗ, ಅವಳು ಆಗಲೇ ದೊಡ್ಡ ಒಲಿಂಪಿಕ್ಸ್ ತಾರೆಯಾಗಿದ್ದಳು. ಹಾಗಾಗಿ ನಾನು ಸ್ವಲ್ಪ ಒತ್ತಡ ಅನುಭವಿಸಿದೆ. ಆದರೆ ನಾನು ಪ್ರಯತ್ನಿಸಿದೆ. ಅದಕ್ಕೆ ಪ್ರತಿಫಲ ಸಿಕ್ಕಿದೆ” ಎನ್ನುತ್ತಾರೆ ಸಾಂಗ್. ಕೋವಿಡ್ ಸಾಂಕ್ರಾಮಿಕದ ಲಾಕ್‌ಡೌನ್ ಕಾರಣಕ್ಕಾಗಿ ಒಂದೂವರೆ ವರ್ಷದಿಂದ ತನ್ನ ಕುಟುಂಬದಿಂದ ದೂರ ಇರುವ ಅವರು ಈಗ ಸಂತೋಷದಿಂದ ತನ್ನ ಪರಿವಾರ ಸೇರಿಕೊಳ್ಳಲು ಹೊರಟಿದ್ದಾರೆ.

ಸ್ವತಃ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ರಾಫೆಲೆ ಬರ್ಗಮಾಸ್ಕೊ

ಇಟಲಿಯ ಬರ್ಗಮಾಸ್ಕೊ ಬಾಕ್ಸಿಂಗ್‌ನಲ್ಲಿ ಐದು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದವರು. ಅಲ್ಲದೇ ಬೀಜಿಂಗ್, ಲಂಡನ್ ಮತ್ತು ರಿಯೊ ಒಲಿಂಪಿಕ್ಸ್‌ನಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದವರು. 2001 ರಿಂದ 2007ರವರೆಗೆ ಇಟಲಿಯ ಮಹಿಳಾ ತಂಡಕ್ಕೆ ಮಾರ್ಗದರ್ಶನ ನೀಡಿದ ಅವರು ಆರು ಒಲಿಂಪಿಕ್ಸ್ ಪದಕಗಳನ್ನು ಗೆಲ್ಲಲು ಕೊಡುಗೆ ನೀಡಿದರು. ರಿಯೊದಲ್ಲಿ ಯಾವುದೇ ಪದಕ ಗೆಲ್ಲಿಸಲಾಗದ್ದಕ್ಕೆ ಅವರನ್ನು ಕೈಬಿಡಲಾಯಿತು. ಹಾಗಾಗಿ 2017ರಲ್ಲಿ ಭಾರತದ ಬಾಕ್ಸಿಂಗ್ ಕೋಚ್ ಆದ ಅವರು ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನ, ಎರಡು ಕಂಚಿನ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರು ಹಿರಿಯ ಮಹಿಳಾ ತಂಡದ ನಿರ್ದೇಶಕರಾಗಿದ್ದಾರೆ. ಈಗ ಲವ್ಲಿನಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವುದರಲ್ಲಿ ಅವರ ಪಾತ್ರ ಮಹತ್ವದ್ದು.

ಭಾರತದ ಹಾಕಿ ಗತ ವೈಭವವನ್ನು ನೆನಪಿಸಿಕೊಳ್ಳಲು ಸಹಾಯ ಮಾಡಿದ ಗ್ರಹಾಂ ರೀಡ್

ಈ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಬರೋಬ್ಬರಿ 41 ವರ್ಷಗಳ ನಂತರ ಸೆಮಿಫೈನಲ್ ತಲುಪಿ ಇತಹಾಸ ನಿರ್ಮಿಸಿತ್ತು. ಸೆಮಿಯಲ್ಲಿ ಸೋತರೂ ಕಂಚಿನ ಪದಕಕ್ಕಾಗಿನ ಸೆಣಸಾಟದಲ್ಲಿ ವಿಜಯಿಯಾಗಿ ಮೆರೆದಿತ್ತು. ಈ ತಂಡಕ್ಕೆ ಬೆನ್ನೆಲುಬು ಆಗಿದ್ದವರು ಕೋಚ್ ಗ್ರಹಾಂ ರೀಡ್.

ಆಸ್ಟ್ರೇಲಿಯಾದ ಗ್ರಹಾಂ ರೀಡ್ 1992ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಆಗ ಆ ತಂಡ ಬೆಳ್ಳಿ ಪದಕ ಜಯಿಸಿತ್ತು. 2014ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕೋಚ್ ಆದ ಅವರು, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾಟರ್‌ಪೈನಲ್‌ವರೆಗೆ ಮಾತ್ರ ತಲುಪಿಸಲು ಶಕ್ತರಾಗಿದ್ದರು. ತದನಂತರ ನೆದರ್ಲೆಂಡ್ ಪರವಾಗಿ ಎರಡು ವರ್ಷ ಕೆಲಸ ಮಾಡಿ 2019ರಿಂದ ಭಾರತ ತಂಡಕ್ಕೆ ಕೋಚ್ ಆಗಿದ್ದಾರೆ.

ಕಮಲ್ ಮಾಲಿಕೋವ್

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ರವಿಕುಮಾರ್ ದಹಿಯಾ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಇವರ ಕೋಚ್ ರಷ್ಯಾದ ಕಮಲ್ ಮಾಲಿಕೋವ್.

ಕಮಲ್ ಮಾಲಿಕೋವ್‌ರವರನ್ನು 2008ರಲ್ಲಿ ಕಂಚು ಮತ್ತು 2012ರಲ್ಲಿ ಬೆಳ್ಳಿ ಗೆದ್ದ ಕುಸ್ತಿಪಟು ಸುಶೀಲ್ ಕುಮಾರ್‌ರವರಿಗೆ ಫಿಟ್ನೆಸ್ ತರಬೇತಿ ನೀಡಲು ಮತ್ತು ಅವರನ್ನು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಂತೆ ತರಬೇತಿ ನೀಡಲು ಕರೆತರಲಾಗಿತ್ತು. ಆದರೆ ಅದು ಸಾಧ್ಯವಾಗದಿದ್ದಾಗ ರವಿಕುಮಾರ್ ದಹಿಯಾಗೆ ಸಹಾಯ ಮಾಡಲು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ ಅಡಿಯಲ್ಲಿ ಏಪ್ರಿಲ್ 2021ರಲ್ಲಿ ನೇಮಿಸಿಕೊಳ್ಳಲಾಯಿತು. ಅದು ದಹಿಯಾ ಬೆಳ್ಳಿ ಪದಕ ಗೆಲ್ಲುವಂತೆ ಮಾಡುವ ಮೂಲಕ ಫಲ ನೀಡಿದೆ.

ಬಜರಂಗ್ ಪುನಿಯಾಗೆ ಕಂಚಿನ ಪದಕ ಕೊಡಿಸಿದ ಶಾಕೋ ಬೆಂಟಿನಿಡಿಸ್

ಜಾರ್ಜಿಯಾದ ಶಾಕೋ ಬೆಂಟಿನಿಡಿಸ್ ರಷ್ಯಾ ಮತ್ತು ಅಮೆರಿಕದ ಸಹಾಯಕ ಕುಸ್ತಿಪಟುಗಳನ್ನು ಬಳಸಿಕೊಂಡ ಬಜರಂಗ್ ಪುನಿಯಾರನ್ನು ಅತ್ಯುತ್ತಮ ಕುಸ್ತಿಪಟುವನ್ನಾಗಿ ತಯಾರು ಮಾಡಿದರು. ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದ ಬಜರಂಗ್ ಪುನಿಯಾ ಟೋಕಿಯೊದಲ್ಲಿಯೂ ಚಿನ್ನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಮೊಣಕಾಲಿನ ಗಾಯವು ಅವರ ಅತ್ಯುತ್ತಮ ಪ್ರದರ್ಶನಕ್ಕೆ ತಡೆಯೊಡ್ಡಿತು. ಆದರೆ ಶಾಕೊ ಬೆಂಟಿನಿಡಿಸ್ ಅವರ ಜೊತೆ ನಿಂತು ಕಂಚಿನ ಪದಕ ಖಾತ್ರಿಗೊಳಿಸಿದರು.

ಭಾರತೀಯ ಕ್ರೀಡಾ ಪ್ರಾಧಿಕಾರದ ವಿರುದ್ಧ ಕಿಡಿಕಾರಿದ್ದ ನೀರಜ್ ಚೋಪ್ರಾ ಕೋಚ್ ಉವೆ ಹಾನ್

ಇನ್ನೇನು ಟೋಕಿಯೋ ಒಲಿಂಪಿಕ್ಸ್ ಮುಗಿಯುತ್ತಿದೆ ಎನ್ನುವಾಗ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ 87.65 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಆ ಸಾಧನೆಯ ಹಿಂದಿದ್ದವರು ಅವರ ಕೋಚ್ ಜರ್ಮನಿ ದೇಶದ ಜಾವಲಿನ್ ದಂತಕಥೆ ಉವೆ ಹಾನ್.

104.80 ಮೀಟರ್ ದೂರ ಜಾವಲಿನ್ ಎಸೆದು ವಿಶ್ವದಾಖಲೆ ಮಾಡಿರುವ ಮತ್ತು ನೂರು ಮೀಟರ್‌ಗಿಂತ ಹೆಚ್ಚು ದೂರ ಎಸೆದ ಏಕೈಕ ಕ್ರೀಡಾಪಟು ಎನಿಸಿಕೊಂಡಿರುವ ಉವೆ ಹಾನ್ 1999ರಿಂದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. 2017ರಿಂದ ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡು ಜಾವಲಿನ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

“ನಾನು ಕೋಚ್ ಆಗಿ ಬಂದಾಗ ಇಲ್ಲೇನಾದ್ರೂ ಬದಲಾಯಿಸಬಹುದೆಂದು ಊಹಿಸಿದ್ದೆ. ಆದರೆ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಲ್ಲಿ ಇದು ಸಾಧ್ಯವಿಲ್ಲ. ತರಬೇತಿ, ಕ್ಯಾಂಪ್ ಬಿಡಿ, ನಮ್ಮ ಟಾಪ್ ಆಟಗಾರರಿಗೆ ಬೇಕಾಗುವ ಪೌಷ್ಠಿಕ ಆಹಾರ ಕೂಡಾ ಸಿಗುತ್ತಿಲ್ಲ ಎಂದು ಉವೆ ಹಾನ್ ಒಲಿಂಪಿಕ್ಸ್ ಆರಂಭವಾಗುವ ಒಂದು ತಿಂಗಳ ಮೊದಲು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

“ಪಟಿಯಾಲದ ಧಗೆಯಲ್ಲಿ ಕೇವಲ ಬೆಳಗಿನ ಜಾವ ಹಾಗೂ ಸಂಜೆ ಆರರ ಬಳಿಕ ಮಾತ್ರ ತರಬೇತಿ ಸಾಧ್ಯವಾಗಿದ್ದರೂ, ಆಟಗಾರರನ್ನು ಹೊರದೇಶಕ್ಕೆ ಕಳುಹಿಸಿ ತರಬೇತಿ ಪಡೆಯಲು ಹಾಗೂ ಪಂದ್ಯಗಳಲ್ಲಿ ಭಾಗವಹಿಸುವಂತೆ ಮಾಡಲು ಸರಕಾರ ಏನೂ ಮಾಡುತ್ತಿಲ್ಲ. ನೀರಜ್ ಚೋಪ್ರಾ ವಿದೇಶದಲ್ಲಿ ತರಬೇತಿ ಪಡೆಯಲು ಸಹಾಯ ಮಾಡಿದ್ದು ಸರಕಾರ ಅಲ್ಲ, ಬದಲಿಗೆ ಅವರನ್ನು ವೈಯಕ್ತಿಕವಾಗಿ ಪ್ರಾಯೋಜಿಸುತ್ತಿರುವ ಜೆಎಸ್‌ಡಬ್ಲ್ಯೂ” ಎಂದೂ ಅವರು ಹೇಳಿದ್ದರು.

ಜೋರ್ಡ್ ಮರಿಜ್‌ನೆ

“ನಾವು ಪದಕ ಗೆಲ್ಲಲಾಗಲಿಲ್ಲ. ಆದರೆ ಅದಕ್ಕಿಂತಲೂ ದೊಡ್ಡದನ್ನು ಗೆದ್ದಿದ್ದೇವೆ ಎಂದು ನನಗನ್ನಿಸುತ್ತದೆ. ನಾವು ಭಾರತೀಯರನ್ನು ಮತ್ತೊಮ್ಮೆ ಹೆಮ್ಮೆ ಪಡುವಂತೆ ಮಾಡಿದ್ದೇವೆ ಮತ್ತು ಲಕ್ಷಾಂತರ ಹುಡುಗಿಯರಿಗೆ, ನೀವು ಕಷ್ಟಪಟ್ಟರೆ, ನಿಜವಾಗಿ ನಂಬಿಕೆ ಇಟ್ಟರೆ ನಿಮ್ಮ ಕನಸುಗಳು ನನಸಾಗಬಹುದು ಎಂದು ಸ್ಫೂರ್ತಿ ನೀಡುತ್ತಿದ್ದೇವೆ”.

ನಾಲ್ಕು ವರ್ಷದಿಂದ ಭಾರತ ಮಹಿಳಾ ಹಾಕಿ ತಂಡದ ಕೋಚ್ ಆಗಿ ತಮ್ಮ ಕರ್ತವ್ಯ ನಿಭಾಯಿಸಿದ ಡಚ್ ದೇಶದ ಜೋರ್ಡ್ ಮರಿಜ್‌ನೆ ಅವರು ಹೇಳಿದ ಮಾತುಗಳಿವು. ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಲು ಸಹಾಯಕವಾಗಿದ್ದ ಅವರು ಈಗ ನಿವೃತ್ತಿ ಘೋಷಿಸಿದ್ದಾರೆ.

“ನಾನು ಈ ಹುಡುಗಿಯರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ನನ್ನ ಕುಟುಂಬವನ್ನು ಸಹ ಕಳೆದ ಮೂರುವರೆ ವರ್ಷದಿಂದ ಮಿಸ್ ಮಾಡಿಕೊಂಡಿದ್ದೇನೆ. ಉಳಿದ ಸಮಯವನ್ನು ಅವರೊಟ್ಟಿಗೆ ಕಳೆಯುವ ಮೂಲಕ ಈ ಪ್ರಯಾಣವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬೇಕೆಂದಿದ್ದೇನೆ” ಎಂದು ಜೋರ್ಡ್ ಮರಿಜ್‌ನೆ ಹೇಳಿದ್ದಾರೆ.

ಗಾಲ್ಫ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನದಲ್ಲಿರುವ ಭಾರತದ ಅದಿತಿ ಅಶೋಕ್ ಈ ಒಲಿಂಪಿಕ್ಸ್‌ನಲ್ಲಿ ಅದ್ವಿತೀಯ ಆಟ ಪ್ರದರ್ಶಿಸಿ ವಿಶ್ವದ ಗಮನ ಸೆಳೆದರು. ಪದಕ ಗೆಲ್ಲುವ ಸನಿಹದಲ್ಲಿದ್ದ ಅವರು ಕೊನೆಗೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಗಾಲ್ಫ್ ಬಗ್ಗೆ ಸಾಮಾನ್ಯ ಭಾರತೀಯನಿಗೆ ಆಸಕ್ತಿ ಕಡಿಮೆ. ಆದರೆ ಅದಿತಿ ಅಶೋಕ್ ತಮ್ಮ ಪ್ರಚಂಡ ಆಟದ ಮೂಲಕ ಹಲವರಲ್ಲಿ ಬೆರಗು ಮೂಡಿಸಿದ್ದಾರೆ. ಈ ಹೋರಾಟದ ಪಯಣದಲ್ಲಿ ಭಾಗಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ ಎನ್ನುತ್ತಾರೆ ಅದಿತಿಯವರ ಮಾಜಿ ತರಬೇತುದಾರ ತರುಣ್ ಸರ್ದೇಸಾಯಿ.

ಒಟ್ಟಿನಲ್ಲಿ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿದೆ. ಒಟ್ಟಾರೆ ಪದಕ ಗಳಿಕೆಯ ಸಂಖ್ಯೆಯನ್ನು ತೆಗೆದುಕೊಂಡರೆ 33ನೇ ಸ್ಥಾನದಲ್ಲಿದೆ. ಈ ಪ್ರಯತ್ನಕ್ಕೆ ಆಟಗಾರರೊಂದಿಗೆ ಕೋಚ್‌ಗಳನ್ನು ಅಭಿನಂದಿಸಬೇಕು. ಇನ್ನಾದರೂ ನಮ್ಮ ಸರ್ಕಾರಗಳು ಕ್ರೀಡೆಗೆ ಹೆಚ್ಚಿನ ಒತ್ತು ಮತ್ತು ಅನುದಾನ ನೀಡುವ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭರ್ಜರಿಯಾಗಿ ಸಿದ್ಧತೆ ನಡೆಸಬೇಕಿದೆ


ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ರೈತರ ಮಕ್ಕಳ ಕಮಾಲ್, ಸಂತಸ ಹಂಚಿಕೊಂಡ ಪ್ರತಿಭಟನಾ ನಿರತ ರೈತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...