ಪೊಲೀಸ್ ಸಿಬ್ಬಂದಿಯೊಬ್ಬರ ಮನೆಯಲ್ಲಿ ಕಳ್ಳನೊಬ್ಬ ಕಳ್ಳತನ ಮಾಡಿ, ಕ್ಷಮಿಸು ಎಂದು ಕ್ಷಮಾಪಣಾ ಪತ್ರ ಬರೆದಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ನಡೆದಿದೆ.
ಛತ್ತೀಸ್ಗಢದ ಕೊತ್ವಾಲಿ ಪೊಲೀಸ್ ಸ್ಟೇಷನ್ನಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಮಲೇಶ್ ಕಠಾರೆ ಮನೆಯಲ್ಲಿ ಕಳ್ಳತನ ನಡೆದಿತ್ತು. ಕಮಲೇಶ್ ಕಠಾರೆ ಅವರ ಕುಟುಂಬವು ಭಿಂದ್ನಲ್ಲಿ ನೆಲೆಸಿದೆ.
ತನಿಖೆ ನಡೆಸಿರುವ ಪೊಲೀಸರಿಗೆ, ಮನೆಯಲ್ಲಿ ಕಳ್ಳ ಬರೆದಿರುವ ಪತ್ರ ದೊರೆತಿದೆ. “ಕ್ಷಮಿಸು ಗೆಳೆಯ.. ಅನಿವಾರ್ಯ ಕಾರಣಗಳಿಂದ ಮತ್ತು ಅಸಹಾಯಕತೆಯಿಂದ ನಾನು ನಿಮ್ಮ ಮನೆ ಕಳ್ಳತನ ಮಾಡಿದ್ದೇನೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಒಂದೇ ಕುಟುಂಬದ ಐವರನ್ನು ಕೊಲೆಗೈದು 8 ಅಡಿ ಆಳದ ಗುಂಡಿಯಲ್ಲಿ ಹೂತಿದ್ದ ಕೊಲೆಗಡುಕರು
“ಇಂತಹ ಕೃತ್ಯವನ್ನು ನಾನು ಎಂದೂ ಮಾಡಿಲ್ಲ. ಆದರೆ, ನನ್ನ ಸ್ನೇಹಿತನ ಜೀವವನ್ನು ಉಳಿಸಲು ನಾನು ಈ ಕೆಲಸ ಮಾಡಬೇಕಾಗಿದೆ. ಕಳ್ಳತನ ಮಾಡಿದಂತಹ ಬೆಲೆಬಾಳುವ ಆಭರಣಗಳು ಮತ್ತು ದುಡ್ಡನ್ನು ಅತಿ ಬೇಗನೆ ಹಿಂದಿರುಗಿಸುತ್ತೇನೆ. ನಾನು ಕಳ್ಳತನ ಮಾಡದೆ ಇದ್ದರೆ ನನ್ನ ಸ್ನೇಹಿತನ ಪ್ರಾಣ ಉಳಿಸುವುದು ಕಷ್ಟ” ಎಂದು ಪತ್ರ ಬರೆದಿಟ್ಟು ಹೋಗಿದ್ದಾನೆ.
ಮನೆಯಲ್ಲಿದ್ದ ಕಮಲೇಶ್ ಕಠಾರೆ ಪತ್ನಿ ಮತ್ತು ಮಕ್ಕಳು ತಮ್ಮ ಸಂಬಂಧಿಕರ ಮನೆಗೆ ಜೂನ್ 30ಕ್ಕೆ ತೆರಳಿದ್ದರು. ಸೋಮವಾರ ರಾತ್ರಿ ಮನೆಗೆ ಹಿಂದಿರುಗಿದಾಗ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿದ್ದಾರೆ. ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಮತ್ತು ಹಣವನ್ನು ಕಳ್ಳತನ ಮಾಡಿರುವುದು ಕಂಡು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇನ್ನು ಕ್ಷಮಾಪಣೆ ಪತ್ರವನ್ನು ನೋಡಿದ ಪೊಲೀಸರು ಈ ಕೃತ್ಯದಲ್ಲಿ ದೂರದ ಸಂಬಂಧಿಕರ ಕೈವಾಡ ಇರಬಹುದೆಂದು ಶಂಕಿಸಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಹಿಂದೆ ಹರಿಯಾಣದ ಜಿಂದ್ನಲ್ಲಿ 1,700 ಡೋಸ್ಗಳಷ್ಟು ಕೊರೊನಾ ಲಸಿಕೆಗಳು ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದ ಕಳ್ಳ, ವಾಪಸ್ ತಂದು ಇಟ್ಟು ಕ್ಷಮೆ ಕೇಳಿರುವ ಘಟನೆ ನಡೆದಿತ್ತು. “ಕ್ಷಮಿಸಿ, ಇದು ಕೊರೊನಾಗೆ ಇರುವ ಔಷಧಿಗಳೆಂದು ನನಗೆ ತಿಳಿದಿರಲಿಲ್ಲ” ಎಂದು ಹಿಂದಿ ಭಾಷೆಯಲ್ಲಿ ಪತ್ರ ಬರೆದು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳಿಂದ ತುಂಬಿದ ಬ್ಯಾಗ್ ಪೊಲೀಸ್ ಠಾಣೆ ಬಳಿ ಅಂಗಡಿಯಲ್ಲಿದ್ದ ವ್ಯಕ್ತಿಗೆ ಕೊಟ್ಟು ಹೋಗಿದ್ದ ಘಟನೆ ನಡೆದಿತ್ತು.
ಇದನ್ನೂ ಓದಿ: ಮಧ್ಯಪ್ರದೇಶ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರ್ಎಸ್ಎಸ್ ಮುಖಂಡ, ಬಂಧನ