Homeಮುಖಪುಟ"ಉಚ್ಛಿಷ್ಟ" ಸೇತುರಾಮ್‌ರವರ ಮಾತಿನ ಮಹಲಿನ ಕೀಳು ಅಭಿರುಚಿಯ ನಾಟಕ...

“ಉಚ್ಛಿಷ್ಟ” ಸೇತುರಾಮ್‌ರವರ ಮಾತಿನ ಮಹಲಿನ ಕೀಳು ಅಭಿರುಚಿಯ ನಾಟಕ…

"ಉಚ್ಛಿಷ್ಟ"ದ ಮೂಲಕ ತನ್ನ ಮುಖಕ್ಕೆ ತಾನೆ ಉಗಿದುಕೊಂಡ ಸೇತುರಾಮ್...

- Advertisement -
- Advertisement -

ನಿನ್ನೇ ರವೀಂದ್ರ ಕಲಾಕ್ಷೇತ್ರದಲ್ಲಿ ಸೇತುರಾಮ್ ಅವರ ಉಚ್ಛಿಷ್ಟ ನಾಟಕ ಪ್ರದರ್ಶನಗೊಂಡಿತು. ಮೊದಲೆಲ್ಲ ಅವರ ಮಂಥನ ದಾರಾವಾಹಿ ಕಂತುಗಳನ್ನು ಹುಡುಕಿ ಹುಡುಕಿ ನೋಡಿದ್ದ ನಮಗೆ ಈ ನಾಟಕ ನೋಡಿದ ಮೇಲೆ ಅವರು ತಲುಪಿರುವ ದುರ್ಗಮ್ಯವನ್ನು ನೋಡಿ ಅಯ್ಯೋ ಅನ್ನಿಸುವುದಂತೂ ಸುಳ್ಳಲ್ಲ. ಈ ನಾಟಕದಲ್ಲಿ  ತಮ್ಮ ಚತುರ ಮತ್ತು ಮೋಹಕ ಸಂಭಾಷಣೆಯ ಮೂಲಕ ಸೇತುರಾಮ್ ಅವರು ಒಂದೇ ಕಲ್ಲಿನಲ್ಲಿ ತಮಗಾಗದ ಎರಡು ತಾತ್ವಿಕತೆಯವರಿಗೆ ಟಾಂಗ್ ಕೊಡಲು ಈ ರಂಗಭೂಮಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಂದು ಸ್ತ್ರಿವಾದಿ ಚಿಂತನೆಯ ಮಹಿಳೆಯರನ್ನು, ಮತ್ತೊಂದು ವೈಚಾರಿಕ ಪ್ರಗತಿಪರ ಸಾಹಿತಿಗಳನ್ನು. ಇವರಿಬ್ಬರನ್ನು ಹಿಗ್ಗಾಮುಗ್ಗಾ ವಿಡಂಬಿಸಲು ಹೋಗಿ ತಮ್ಮ ವಿಕೃತ ಮನಸ್ಥಿತಿಯನ್ನು ಹೊರಹಾಕಿದ್ದಾರೆ.

ಇಲ್ಲಿನ ಮುಖ್ಯಪಾತ್ರಧಾರಿಯಾದ 70 ವರ್ಷದ ವೃದ್ಧ ವೈಚಾರಿಕ ಸಾಹಿತಿಯನ್ನಂತೂ ಕನಿಷ್ಠ ಪ್ರಾಮಾಣಿಕತೆ ಇಲ್ಲದ ಸ್ವಾರ್ಥವೇ ತುಂಬಿದವರಂತೆ ತೋರಿಸಿದ್ದಾರೆ. ಈ ಸಾಹಿತಿ ಸದಾ ಒಂದಿಲ್ಲ ಒಂದು ಪ್ರಶಸ್ತಿಗೆ, ಅವಕಾಶಕ್ಕಾಗಿ ಹಪಹಪಿಸುತ್ತಿರುತ್ತಾನೆ. ತಾನು ಸತ್ತ ಮೇಲೆ ತನ್ನ ಸಾಹಿತ್ಯ ನಿರಂತರವಾಗಿಸಲು, ತನ್ನ ಹೆಸರಲ್ಲಿ ಪ್ರತಿಷ್ಠಾನ ಆಗಬೇಕು, ದತ್ತಿ ಪ್ರಶಸ್ತಿ ಸ್ಥಾಪನೆಯಾಗಬೇಕು, ರಾಜ್ಯಾದ್ಯಂತ ವಿಚಾರಸಂಕಿರಣಗಳು ನಡೆಯಬೇಕೆಂದು ತನ್ನ ಶಿಷ್ಯವೃಂಧದ ಮೂಲಕ ಲಾಬಿ ಮಾಡಿಸುತ್ತಿರುತ್ತಾನೆ. ಮನೆಯಲ್ಲಿ ಹೆಂಡತಿ ಇದ್ದರೂ ಕಚ್ಚೆಹರುಕ ಸ್ವಭಾವದವನಾದ ಆತ ತನ್ನ ಸಾಹಿತ್ಯ ಮೆಚ್ಚಿ ಬರುವ ಗಂಡ ಬಿಟ್ಟವಳಿಗೆ ಸಹಾಯ ಮಾಡುವ ನೆಪದಲ್ಲಿ, ಹೊಸ ಬದುಕು ಕಲ್ಪಿಸಿದೆನೆಂಬ ಭ್ರಮೆಯಲ್ಲಿ ಅವಳೊಂದಿಗೆ ಸಂಸಾರ ಮಾಡುತ್ತಾನೆ. ಅವಳ ಹೆಸರಲ್ಲಿ ತಾನೆ ಪುಸ್ತಕಗಳನ್ನು ಬರೆದು 500  ಪ್ರತಿ ಪ್ರಕಟಿಸಿ, ಲೈಬ್ರರಿಗೆ ಕಳಿಸಿ, ಉಳಿದವುಗಳನ್ನು ಪ್ರಶಸ್ತಿಗಾಗಿ ಕಳಿಸಿ, ಅಲ್ಲೂ ಪ್ರಭಾವ ಬೀರಿ ಪ್ರಶಸ್ತಿ ಕೊಡಿಸಿ, ಅವಳನ್ನು ಶ್ರೇಷ್ಠ ಲೇಖಕಿಯನ್ನಾಗಿ ಮಾಡುತ್ತಾನೆ.

ಸ್ವಾರ್ಥವೇ ತುಂಬಿರುವ ಇಂಥ ಸಾಹಿತಿ ಅದ್ಯಾವ ಲೋಕದಲ್ಲಿ ಬದುಕಿದ್ದಾರೋ, ಗೊತ್ತಿಲ್ಲ. ಪ್ರಶಸ್ತಿಯ ಹಪಾಹಪಿ, ವಸೂಲಿಬಾಜಿ ಮಾಡುವುದು, “ಬಕೇಟ್” ಹಿಡಿಯುವುದು ಕೆಲ ಬುದ್ಧಿ ಸಾಹಿತಿಗಳಿಗೆ ಇದ್ದೇ ಇರುತ್ತದೆ, ನಿಜ. ಅದು ಎಲ್ಲಾ ಧಾರೆಯ ಸಾಹಿತಿಗಳಿಗೂ ಇದೇ ಹೊರತು ಕೇವಲ ಒಂದು ವರ್ಗಕ್ಕಲ್ಲ. ಆದರೆ, ವಯಸ್ಸಾದಂತೆ ಸಾಹಿತಿ ಮಾಗುತ್ತಾ ಪ್ರಬುದ್ಧನಾಗುತ್ತಾನೆ. ದಾರ್ಶನಿಕನಾಗುತ್ತಾನೆ. ಕೀರ್ತಿಯ, ಪ್ರಶಸ್ತಿಯ ನಿರರ್ಥಕತೆ ಅರ್ಥವಾಗತೊಡಗಿದಂತೆ ಅವೆಲ್ಲದಕ್ಕಿಂತಲೂ ಬದುಕು ದೊಡ್ಡದು ಎನ್ನುವ ಸತ್ಯದ ಅರಿವಾಗಿ ಇಡೀ ಸಮಾಜಕ್ಕೆ ಪೊರೆಯುವ ತಾಯ್ತನ ಅವನಲ್ಲಿ ಹರಳುಗಟ್ಟತೊಡಗುತ್ತದೆ. ಆದರೆ, ವಯಸ್ಸಾದಂತೆ ತನ್ನ ಕೀರ್ತಿ ಶನಿಯ ಪ್ರತಿಮೆಯನ್ನು ತಾನೆ ತಯಾರಿಸಿಕೊಳ್ಳುವ, ಕನಿಷ್ಠ ಪ್ರಾಮಾಣಿಕತೆಯೂ ಇಲ್ಲದ, ಈ ನಾಟಕದಲ್ಲಿನ ಸಾಹಿತಿಯನ್ನು ಸೇತುರಾಮ್ ಅವರು ಅದೆಲ್ಲಿಂದ ಹುಡುಕಿ ತಂದಿದ್ದಾರೋ ಅವರಿಗೆ ಗೊತ್ತು.

ಇನ್ನು ಈ ಸಾಹಿತಿಯನ್ನು ನಂಬಿ ಬಂದಿರುವ ಆ ಹೆಣ್ಣುಮಗಳು ಕೂಡ ಕಿರುಕುಳ ಕೊಡುವ ಗಂಡನನ್ನು ಕುಕ್ಕರಿನ ಹಿಡಿಕೆಯಿಂದ ತಲೆಗೆ ಹೊಡೆದು ಮನೆ ಬಿಟ್ಟು ಓಡಿಸಿದವಳು.  ಆಮೇಲೆ ಬಂದು ಈ ಸಾಹಿತಿಯ ಆಶ್ರಯ ಪಡೆಯುತ್ತಾಳೆ. ಆದರೆ, ಲೋಕವೆಲ್ಲ  ತನ್ನ ಕಡೆ ಬೊಟ್ಟು ಮಾಡಿ ಹಾದರಗಿತ್ತಿ ಅಂತಿದೆ ಅನ್ನೋ ಗುಮಾನಿ ಸದಾ ಇವಳಿಗೆ. ತನ್ನದು ಹಾದರ ಎಂದು ಕರೆಯುವ ಈ ಸಮಾಜ ಮತ್ತು ಉಳಿದೆಲ್ಲ ಸ್ತ್ರೀಯರು ಹೇಗೆಲ್ಲ ಹಾದರ ಮಾಡ್ತಿದ್ದಾರೆ ಎಂದು ಆಗಾಗ ಸಿಡುಕುತ್ತಾ ಸಮರ್ಥಿಸಿಕೊಳ್ಳುತ್ತಾಳೆ. ಆಶ್ರಯ, ಮನೆ, ಹೆಸರು, ಕೀರ್ತಿಗಾಗಿ ಮಾತ್ರ ಈ ಮುದುಕನನ್ನು ಸಹಿಸಿಕೊಂಡಿದ್ದೇನೆ ಎಂದು ಬಾಯ್ಬಿಟ್ಟೆ ಹೇಳುತ್ತಿರುತ್ತಾಳೆ. ಮುಪ್ಪಿನ ಕಾಲದಲ್ಲಿ ಆ ಮುದುಕನ ವಿಸರ್ಜನೆಗಳೆಲ್ಲ ಹೇಗಪ್ಪ ಸ್ವಚ್ಚಗೊಳಿಸುವುದು ಎಂದು ಆಗಾಗ ಹಲಬುತ್ತಿರುತ್ತಾಳೆ.

ತಾಯಿ ಮಗಳ ನಡುವೆ ನಡೆಯುವ ಒಂದು ಸಂಭಾಷಣೆಯಂತೂ ಇಡೀ ಸ್ತ್ರೀಕುಲಕ್ಕೆ ಮಾಡುವ ಅವಮಾನದಂತಿದೆ. ಗಂಡನನ್ನು ಮನೆಬಿಟ್ಟು ಓಡಿಸಿರುವ ನೀನು, ಅವನ ಪಿಂಡವಾದ ನನ್ನನ್ನೇಕೆ ಸಾಕಿ ಸಲುಹಿದೆ ಎಂದು ಮಗಳು ಪ್ರಶ್ನಿಸುತ್ತಾಳೆ. ಆಗ ತಾಯಿ, “ನೀನು ಬೇಸರ ಮಾಡಿಕೊಳ್ಳುವುದಿಲ್ಲವೆಂದರೆ ಸತ್ಯ ಹೇಳುತ್ತೇನೆ ಕೇಳು. ಗರ್ಭದಲ್ಲಿದ್ದ ನಿನ್ನ ಮೇಲೆ ನನಗೆ ಯಾವ ಮೋಹವೂ ಇರಲಿಲ್ಲ. ನಿನ್ನನ್ನು ತೆಗೆಸಿಬಿಟ್ಟರೆ ನನ್ನ ಜೀವಕ್ಕೆ ಅಪಾಯ ಎಂಬ ಭಯದಿಂದ ತೆಗೆಸಿಲಿಲ್ಲ” ಎನ್ನುತ್ತಾಳೆ. ಹೊಟ್ಟೆಯಲ್ಲಿದ್ದ ಚೊಚ್ಚಲ ಗರ್ಭದ ಕುರಿತು ಎಂಥ ಕ್ರೂರಿ ಮಹಿಳೆಯಾದರೂ ಹೀಗೆ ಹೇಳಲಿಕ್ಕಿಲ್ಲ. ತಾಯ್ತನದ ಸಂಭ್ರಮವೇ ಅಂಥದ್ದು.  ಸೇತುರಾಮ್ ಅವರ ನಾಟಕದಲ್ಲಿನ ಹೆಣ್ಣುಮಗಳು ಮಾತ್ರ ಹೀಗೆ ಹೇಳಬಲ್ಲಳೇನೋ.

ನಾಟಕದ ಕೊನೆಯಲ್ಲಿ ಆ ಮುದಿ ಸಾಹಿತಿಯನ್ನು ಬಿಟ್ಟು ಹೋಗುವ ಮೂಲಕ, ಒಂಚೂರು ಮಹಿಳೆಯರ ಸ್ವಾತಂತ್ರ್ಯದ ಕಡೆ ವಾಲಿದಂತೆ ಅಷ್ಟೊತ್ತಿಗಾಗಲೇ ಸ್ತ್ರೀಕುಲದ ಮಾನವೆಲ್ಲ ಹರಾಜಾಗ್ತಿರದೆ ಅನ್ನೋದನ್ನ ಮರೆಯುವಂತಿಲ್ಲ.

ಹೀಗೆ ಮೂರೆ ಪಾತ್ರಗಳನ್ನಿಟ್ಟುಕೊಂಡು ಬರೀ ಮಾತು, ಮಾತು, ಮಾತುಗಳಿಂದಲೇ ಒಂದೂವರೆ ಗಂಟೆಯವರೆಗೂ ನಿರ್ದೇಶಕರು ನಾಟಕ ಓಡಿಸುತ್ತಾರೆ. ವರ್ಷಿಣಿ ಮತ್ತು ಅಕ್ಷತಾ ತಮಗೆ ಒಪ್ಪಿಸಿದ ಡೈಲಾಗ್ ಗಳನ್ನು ಅಚ್ಚುಕಟ್ಟಾಗಿ ಒಪ್ಪಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಹಿರಿಯ ಸಾಹಿತಿಯ ಪಾತ್ರಕ್ಕೆ ಸೇತುರಾಮ್ ಅವರು ಸಹ ಈ ಇಳಿ ವಯಸ್ಸಿನಲ್ಲೂ ನ್ಯಾಯ ಒದಗಿಸಿದ್ದನ್ನು ಮೆಚ್ಚಲೇಬೇಕು. ಆದರೆ, ಸಂಗೀತ, ಬೆಳಕು, ಮೇಕಪ್, ವಸ್ತ್ರ ವಿನ್ಯಾಸ ಇತ್ಯಾದಿ ರಂಗ ಸಾಧ್ಯತೆಗಳು ಇಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ.  ಬೇರೆ ಬ್ಯಾನರಿನ ನಾಟಕಗಳನ್ನು ನೋಡಿದ ಪ್ರೇಕ್ಷಕರಿಗೆ ಈ ಮಾತಿನ ಮಹಲಿನ ನಾಟಕ ಖಂಡಿತ ಬೋರು ಹೊಡೆಸಬಹುದೇನೋ, ಆದ್ರೂ ಈ ನಾಟಕಕ್ಕೆ 200, 150 ಮತ್ತೂ 100 ರೂ.ಗಳ ಟಿಕೇಟ್ ಗಳನ್ನಿಟ್ಟು, ಅತಿ ಕಡಿಮೆ ದುಡ್ಡು ನೀಡಿದವರನ್ನು ಮೇಲಿನ ಬಾಲ್ಕಿನಿಗೆ (ಕೆಳಗಡೆ ಸಾಕಷ್ಟು ಆಸನಗಳು ಖಾಲಿಯಿದ್ದರೂ) ಕಳಿಸುವ ಮೂಲಕ ನಾನು ಗೊತ್ತಿರುವ ಮಟ್ಟಿಗೆ ರಂಗಭೂಮಿಯಲ್ಲಿ ಮೊದಲ ಬಾರಿಗೆ ಪ್ರೇಕ್ಷಕರನ್ನು ವಿಂಗಡಿಸಿದ್ದು ಮೊದಲಿಗೆ ಕಂಡು ಬಂತು.

ಇನ್ನೊಂದು ಮಾತು ಹೇಳಲೇಬೇಕು. ಸೇತುರಾಮ್ ಅವರ ಮೊದಲಿನ, ಗತಿ, ಅತೀತ, ನಾಟಕಗಳನ್ನು ನೋಡಿದವರಿಗಂತೂ ಈ ನಾಟಕದಲ್ಲಿ ಯಾವ ವಿಶೇಷವೂ ಸಿಗುವುದಿಲ್ಲ. ಅವವೇ ಡೈಲಾಗ್ ಗಳು ಈ ನಾಟಕದಲ್ಲೂ ರಿಪೀಟ್‌ ಆಗಿವೆ. ಉದಾಹರಣೆಗೆ “ಅತೀತ”ದಲ್ಲಿ ಬರುವ ಲಾಯರ್ ಪಾತ್ರ ಈ ನಾಟಕದಲ್ಲಿ ವಿಚಾರವಾದಿ ಸಾಹಿತಿಯಾಗಿದ್ದಾನಷ್ಟೇ. ಅಲ್ಲಿ ಲಾಯರ್ ಕೈ ಕೆಳಗೆ ಬರುವ ಯುವ ವಕೀಲೆ ಇಲ್ಲಿ ಗಂಡ ಬಿಟ್ಟ ಮಹಿಳೆಯಾಗಿದ್ದಾಳೆ. ಅಲ್ಲಿ ಲಾಯರ್ ಮಾತಾಡುವ  ಬಹುತೇಕ ಮಾತುಗಳನ್ನು ಇಲ್ಲಿ ಸಾಹಿತಿ ಮಾತನಾಡುತ್ತಾನೆ ಅಷ್ಟೆ.

ಉಚ್ಛಿಷ್ಟ ಎಂದರೆ ಇನ್ನೊಬ್ಬರು ತಿಂದುಬಿಟ್ಟ ಎಂಜಲು ಅಂಥ ಅರ್ಥ. ಗಂಡ ಬಿಟ್ಟ ಹೆಣ್ಣು ಎಷ್ಟೇ ಆದರೂ ಎಂಜಲು ಎಂದು ಹೇಳಲು ಈ ಹೆಸರಿಟ್ಟಿರಬಹುದು. ಇದನ್ನು ಇನ್ನೊಂದು ಅರ್ಥದಲ್ಲಿ ಅರ್ಥೈಸಬಹುದು. ಭೈರಪ್ಪನವರ ಹೇಳಿಬಿಟ್ಟಿರುವ ಈ ವಿಚಾರಗಳನ್ನೇ ಈ ನಾಟಕವೂ ಹೇಳುತ್ತಿರುವುದರಿಂದ ಇದನ್ನು ಅವರ ಉಚ್ಛಿಷ್ಟ ಎನ್ನಬಹುದೇನೋ. ಕವಲು ಕಾದಂಬರಿಯ ಪಾತ್ರಗಳ ಆತ್ಮ ಇಲ್ಲೂ ಕೂಡ ಜೀವನದುದ್ದಕ್ಕೂ ಮಾಡಬಾರದೆಲ್ಲವನ್ನು ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ ಹುಯಿಲಿಡುತ್ತಿವೆ ಎನ್ನಿಸಿತು.

ಒಟ್ನಲ್ಲಿ ಈ ನಾಟಕ ತನ್ನ ಪಾಡಿಗೆ ತಾನು ಹುಟ್ಟಿಕೊಂಡ ನಾಟಕವಲ್ಲ, ತಮಗೆ ಆಗಿಬಾರದ ತಾತ್ವಿಕತೆಯನ್ನು ವಿರೋಧಿಸಲು ಕಷ್ಟಪಟ್ಟು ಆಕರ್ಷಕ ಸಂಭಾಷಣೆಗಳ ಮೂಲಕ ಕಟ್ಟಿಸಿಕೊಂಡ ನಾಟಕವಿದು. ಧಾರಾವಾಹಿ ನಿರ್ದೇಶಕರಾಗಿ, ಕಥೆಗಾರರಾಗಿ ಹೆಸರು ಮಾಡಿದ್ದ ಹಿರಿಯ ಬರಹಗಾರರಾದ ಸೇತುರಾಮ್ ಅವರು ಈ ನಾಟಕಗಳ ಮೂಲಕ ವಿಚಾರವಾದಿ ಸಾಹಿತಿಗಳಿಗೆ ಟಾಂಗ್ ಕೊಡಲು ಹೋಗಿ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಒಬ್ಬ ಸಾಹಿತಿಯಾಗಿ ತಮ್ಮ ಮುಖಕ್ಕೆ ತಾವೇ ಉಗಿದುಕೊಳ್ಳುತ್ತಿದ್ದಾರೆ. ಎಂದೆನಿಸಿದ್ದಂತೂ ಸುಳ್ಳಲ್ಲ. ಮುಂದಿನ ನಾಟಕಗಳಲ್ಲಿ ಹಾಗಾಗದಿರಲಿ ಅಂತ ಹಾರೈಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹನಮಂತ ಹಾಲಿಗೇರಿ ಅವರಿಗೆ, ವಿಮರ್ಶಕರಿಗೆ ಜೀವನಾನುಭವ ಇರಬೇಕು ಅನ್ನುತ್ತಾರೆ. ಈ ನಾಟಕದ ಕುರಿತು ನೀವು ಹೇಳಿದ ಇದೊಂದು ಮಾತು ನಿಮಗೆ ಜೀವನಾನುಭವದ ಕೊರತೆ ಇದೆ ಎನ್ನುವುದನ್ನು ಪ್ರಕಟಪಡಿಸುತ್ತದೆ ಮತ್ತು ಕೊನೆ ಪಕ್ಷ ಹೀಗೂ ಇರಬಹುದೇ ಅನ್ನುವ ಬೆರಗಾದರೂ ನಿಮಗೆ ಇರಬೇಕಾಗಿತ್ತಲ್ಲವೇ ಎನ್ನಿಸುತ್ತದೆ.ಇಡೀ ಸ್ತ್ರೀ ಕುಲಕ್ಕೆ ಮಾನ ಯಾವುದು ಅವಮಾನ ಯಾವುದು ಎನ್ನುವುದನ್ನು ನೀವು ಒಂದು ಮಾತಿನ ಮೂಲಕ ನಿರ್ಧರಿಸುವಿರೇ?! ಮುಕ್ತ ಮನಸ್ಸು ಇಲ್ಲದಿದ್ದರೆ ಕಲೆಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. – (ತಾಯಿ ಮಗಳ ನಡುವೆ ನಡೆಯುವ ಒಂದು ಸಂಭಾಷಣೆಯಂತೂ ಇಡೀ ಸ್ತ್ರೀಕುಲಕ್ಕೆ ಮಾಡುವ ಅವಮಾನದಂತಿದೆ……”ತಾಯಿ, “ನೀನು ಬೇಸರ ಮಾಡಿಕೊಳ್ಳುವುದಿಲ್ಲವೆಂದರೆ ಸತ್ಯ ಹೇಳುತ್ತೇನೆ ಕೇಳು. ಗರ್ಭದಲ್ಲಿದ್ದ ನಿನ್ನ ಮೇಲೆ ನನಗೆ ಯಾವ ಮೋಹವೂ ಇರಲಿಲ್ಲ. ನಿನ್ನನ್ನು ತೆಗೆಸಿಬಿಟ್ಟರೆ ನನ್ನ ಜೀವಕ್ಕೆ ಅಪಾಯ ಎಂಬ ಭಯದಿಂದ ತೆಗೆಸಿಲಿಲ್ಲ” ಎನ್ನುತ್ತಾಳೆ. ಹೊಟ್ಟೆಯಲ್ಲಿದ್ದ ಚೊಚ್ಚಲ ಗರ್ಭದ ಕುರಿತು ಎಂಥ ಕ್ರೂರಿ ಮಹಿಳೆಯಾದರೂ ಹೀಗೆ ಹೇಳಲಿಕ್ಕಿಲ್ಲ. ತಾಯ್ತನದ ಸಂಭ್ರಮವೇ ಅಂಥದ್ದು.”)

  2. ಇಲ್ಲಿ ನಿರ್ದೇಶಕರು, ಒಂದು ವೇಳೆ ಎಲ್ಲಾ ಸಾಹಿತಿಗಳು, ಎಲ್ಲಾ ಹಣ್ಣು (ತಾಯಂದಿರು) ಮಕ್ಕಳು ಹೀಗೆಯೇ ಎಂದು ಹೇಳಿ(ಸಿ)ದರೆ ನಿಜಕ್ಕೂ ಅದು ತಪ್ಪು. ಆದರೆ ಈ ನಿರ್ದಶಕರು ಹಾಗೆ ಹೇಳಿ(ಸಿ)ರಲಿಕ್ಕಿಲ್ಲ. ಆದರೆ ಈ ಸರಸ್ವತಿಯ ದೇಗುಲದಲ್ಲಿ (ಅತೀ ವಿರಳ) ಇಂತಹವರೂ ಇರುತ್ತಾರೆ, ಇಂತಹವರು ತನ್ನ ಸ್ವಾರ್ಥಕ್ಕಾಗಿ
    ಅಬಲೆಯವರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ, ಎಂಬುದನ್ನು ಹೇಳಿ(ಸಿ)ದ್ದರೆ ಅದರಲ್ಲಿ ತಪ್ಪೇನಿಲ್ಲ. ಎನ್ನುವುದು ನನ್ನ ಅಭಿಮತ.

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...