Homeಮುಖಪುಟ"ಉಚ್ಛಿಷ್ಟ" ಸೇತುರಾಮ್‌ರವರ ಮಾತಿನ ಮಹಲಿನ ಕೀಳು ಅಭಿರುಚಿಯ ನಾಟಕ...

“ಉಚ್ಛಿಷ್ಟ” ಸೇತುರಾಮ್‌ರವರ ಮಾತಿನ ಮಹಲಿನ ಕೀಳು ಅಭಿರುಚಿಯ ನಾಟಕ…

"ಉಚ್ಛಿಷ್ಟ"ದ ಮೂಲಕ ತನ್ನ ಮುಖಕ್ಕೆ ತಾನೆ ಉಗಿದುಕೊಂಡ ಸೇತುರಾಮ್...

- Advertisement -
- Advertisement -

ನಿನ್ನೇ ರವೀಂದ್ರ ಕಲಾಕ್ಷೇತ್ರದಲ್ಲಿ ಸೇತುರಾಮ್ ಅವರ ಉಚ್ಛಿಷ್ಟ ನಾಟಕ ಪ್ರದರ್ಶನಗೊಂಡಿತು. ಮೊದಲೆಲ್ಲ ಅವರ ಮಂಥನ ದಾರಾವಾಹಿ ಕಂತುಗಳನ್ನು ಹುಡುಕಿ ಹುಡುಕಿ ನೋಡಿದ್ದ ನಮಗೆ ಈ ನಾಟಕ ನೋಡಿದ ಮೇಲೆ ಅವರು ತಲುಪಿರುವ ದುರ್ಗಮ್ಯವನ್ನು ನೋಡಿ ಅಯ್ಯೋ ಅನ್ನಿಸುವುದಂತೂ ಸುಳ್ಳಲ್ಲ. ಈ ನಾಟಕದಲ್ಲಿ  ತಮ್ಮ ಚತುರ ಮತ್ತು ಮೋಹಕ ಸಂಭಾಷಣೆಯ ಮೂಲಕ ಸೇತುರಾಮ್ ಅವರು ಒಂದೇ ಕಲ್ಲಿನಲ್ಲಿ ತಮಗಾಗದ ಎರಡು ತಾತ್ವಿಕತೆಯವರಿಗೆ ಟಾಂಗ್ ಕೊಡಲು ಈ ರಂಗಭೂಮಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಂದು ಸ್ತ್ರಿವಾದಿ ಚಿಂತನೆಯ ಮಹಿಳೆಯರನ್ನು, ಮತ್ತೊಂದು ವೈಚಾರಿಕ ಪ್ರಗತಿಪರ ಸಾಹಿತಿಗಳನ್ನು. ಇವರಿಬ್ಬರನ್ನು ಹಿಗ್ಗಾಮುಗ್ಗಾ ವಿಡಂಬಿಸಲು ಹೋಗಿ ತಮ್ಮ ವಿಕೃತ ಮನಸ್ಥಿತಿಯನ್ನು ಹೊರಹಾಕಿದ್ದಾರೆ.

ಇಲ್ಲಿನ ಮುಖ್ಯಪಾತ್ರಧಾರಿಯಾದ 70 ವರ್ಷದ ವೃದ್ಧ ವೈಚಾರಿಕ ಸಾಹಿತಿಯನ್ನಂತೂ ಕನಿಷ್ಠ ಪ್ರಾಮಾಣಿಕತೆ ಇಲ್ಲದ ಸ್ವಾರ್ಥವೇ ತುಂಬಿದವರಂತೆ ತೋರಿಸಿದ್ದಾರೆ. ಈ ಸಾಹಿತಿ ಸದಾ ಒಂದಿಲ್ಲ ಒಂದು ಪ್ರಶಸ್ತಿಗೆ, ಅವಕಾಶಕ್ಕಾಗಿ ಹಪಹಪಿಸುತ್ತಿರುತ್ತಾನೆ. ತಾನು ಸತ್ತ ಮೇಲೆ ತನ್ನ ಸಾಹಿತ್ಯ ನಿರಂತರವಾಗಿಸಲು, ತನ್ನ ಹೆಸರಲ್ಲಿ ಪ್ರತಿಷ್ಠಾನ ಆಗಬೇಕು, ದತ್ತಿ ಪ್ರಶಸ್ತಿ ಸ್ಥಾಪನೆಯಾಗಬೇಕು, ರಾಜ್ಯಾದ್ಯಂತ ವಿಚಾರಸಂಕಿರಣಗಳು ನಡೆಯಬೇಕೆಂದು ತನ್ನ ಶಿಷ್ಯವೃಂಧದ ಮೂಲಕ ಲಾಬಿ ಮಾಡಿಸುತ್ತಿರುತ್ತಾನೆ. ಮನೆಯಲ್ಲಿ ಹೆಂಡತಿ ಇದ್ದರೂ ಕಚ್ಚೆಹರುಕ ಸ್ವಭಾವದವನಾದ ಆತ ತನ್ನ ಸಾಹಿತ್ಯ ಮೆಚ್ಚಿ ಬರುವ ಗಂಡ ಬಿಟ್ಟವಳಿಗೆ ಸಹಾಯ ಮಾಡುವ ನೆಪದಲ್ಲಿ, ಹೊಸ ಬದುಕು ಕಲ್ಪಿಸಿದೆನೆಂಬ ಭ್ರಮೆಯಲ್ಲಿ ಅವಳೊಂದಿಗೆ ಸಂಸಾರ ಮಾಡುತ್ತಾನೆ. ಅವಳ ಹೆಸರಲ್ಲಿ ತಾನೆ ಪುಸ್ತಕಗಳನ್ನು ಬರೆದು 500  ಪ್ರತಿ ಪ್ರಕಟಿಸಿ, ಲೈಬ್ರರಿಗೆ ಕಳಿಸಿ, ಉಳಿದವುಗಳನ್ನು ಪ್ರಶಸ್ತಿಗಾಗಿ ಕಳಿಸಿ, ಅಲ್ಲೂ ಪ್ರಭಾವ ಬೀರಿ ಪ್ರಶಸ್ತಿ ಕೊಡಿಸಿ, ಅವಳನ್ನು ಶ್ರೇಷ್ಠ ಲೇಖಕಿಯನ್ನಾಗಿ ಮಾಡುತ್ತಾನೆ.

ಸ್ವಾರ್ಥವೇ ತುಂಬಿರುವ ಇಂಥ ಸಾಹಿತಿ ಅದ್ಯಾವ ಲೋಕದಲ್ಲಿ ಬದುಕಿದ್ದಾರೋ, ಗೊತ್ತಿಲ್ಲ. ಪ್ರಶಸ್ತಿಯ ಹಪಾಹಪಿ, ವಸೂಲಿಬಾಜಿ ಮಾಡುವುದು, “ಬಕೇಟ್” ಹಿಡಿಯುವುದು ಕೆಲ ಬುದ್ಧಿ ಸಾಹಿತಿಗಳಿಗೆ ಇದ್ದೇ ಇರುತ್ತದೆ, ನಿಜ. ಅದು ಎಲ್ಲಾ ಧಾರೆಯ ಸಾಹಿತಿಗಳಿಗೂ ಇದೇ ಹೊರತು ಕೇವಲ ಒಂದು ವರ್ಗಕ್ಕಲ್ಲ. ಆದರೆ, ವಯಸ್ಸಾದಂತೆ ಸಾಹಿತಿ ಮಾಗುತ್ತಾ ಪ್ರಬುದ್ಧನಾಗುತ್ತಾನೆ. ದಾರ್ಶನಿಕನಾಗುತ್ತಾನೆ. ಕೀರ್ತಿಯ, ಪ್ರಶಸ್ತಿಯ ನಿರರ್ಥಕತೆ ಅರ್ಥವಾಗತೊಡಗಿದಂತೆ ಅವೆಲ್ಲದಕ್ಕಿಂತಲೂ ಬದುಕು ದೊಡ್ಡದು ಎನ್ನುವ ಸತ್ಯದ ಅರಿವಾಗಿ ಇಡೀ ಸಮಾಜಕ್ಕೆ ಪೊರೆಯುವ ತಾಯ್ತನ ಅವನಲ್ಲಿ ಹರಳುಗಟ್ಟತೊಡಗುತ್ತದೆ. ಆದರೆ, ವಯಸ್ಸಾದಂತೆ ತನ್ನ ಕೀರ್ತಿ ಶನಿಯ ಪ್ರತಿಮೆಯನ್ನು ತಾನೆ ತಯಾರಿಸಿಕೊಳ್ಳುವ, ಕನಿಷ್ಠ ಪ್ರಾಮಾಣಿಕತೆಯೂ ಇಲ್ಲದ, ಈ ನಾಟಕದಲ್ಲಿನ ಸಾಹಿತಿಯನ್ನು ಸೇತುರಾಮ್ ಅವರು ಅದೆಲ್ಲಿಂದ ಹುಡುಕಿ ತಂದಿದ್ದಾರೋ ಅವರಿಗೆ ಗೊತ್ತು.

ಇನ್ನು ಈ ಸಾಹಿತಿಯನ್ನು ನಂಬಿ ಬಂದಿರುವ ಆ ಹೆಣ್ಣುಮಗಳು ಕೂಡ ಕಿರುಕುಳ ಕೊಡುವ ಗಂಡನನ್ನು ಕುಕ್ಕರಿನ ಹಿಡಿಕೆಯಿಂದ ತಲೆಗೆ ಹೊಡೆದು ಮನೆ ಬಿಟ್ಟು ಓಡಿಸಿದವಳು.  ಆಮೇಲೆ ಬಂದು ಈ ಸಾಹಿತಿಯ ಆಶ್ರಯ ಪಡೆಯುತ್ತಾಳೆ. ಆದರೆ, ಲೋಕವೆಲ್ಲ  ತನ್ನ ಕಡೆ ಬೊಟ್ಟು ಮಾಡಿ ಹಾದರಗಿತ್ತಿ ಅಂತಿದೆ ಅನ್ನೋ ಗುಮಾನಿ ಸದಾ ಇವಳಿಗೆ. ತನ್ನದು ಹಾದರ ಎಂದು ಕರೆಯುವ ಈ ಸಮಾಜ ಮತ್ತು ಉಳಿದೆಲ್ಲ ಸ್ತ್ರೀಯರು ಹೇಗೆಲ್ಲ ಹಾದರ ಮಾಡ್ತಿದ್ದಾರೆ ಎಂದು ಆಗಾಗ ಸಿಡುಕುತ್ತಾ ಸಮರ್ಥಿಸಿಕೊಳ್ಳುತ್ತಾಳೆ. ಆಶ್ರಯ, ಮನೆ, ಹೆಸರು, ಕೀರ್ತಿಗಾಗಿ ಮಾತ್ರ ಈ ಮುದುಕನನ್ನು ಸಹಿಸಿಕೊಂಡಿದ್ದೇನೆ ಎಂದು ಬಾಯ್ಬಿಟ್ಟೆ ಹೇಳುತ್ತಿರುತ್ತಾಳೆ. ಮುಪ್ಪಿನ ಕಾಲದಲ್ಲಿ ಆ ಮುದುಕನ ವಿಸರ್ಜನೆಗಳೆಲ್ಲ ಹೇಗಪ್ಪ ಸ್ವಚ್ಚಗೊಳಿಸುವುದು ಎಂದು ಆಗಾಗ ಹಲಬುತ್ತಿರುತ್ತಾಳೆ.

ತಾಯಿ ಮಗಳ ನಡುವೆ ನಡೆಯುವ ಒಂದು ಸಂಭಾಷಣೆಯಂತೂ ಇಡೀ ಸ್ತ್ರೀಕುಲಕ್ಕೆ ಮಾಡುವ ಅವಮಾನದಂತಿದೆ. ಗಂಡನನ್ನು ಮನೆಬಿಟ್ಟು ಓಡಿಸಿರುವ ನೀನು, ಅವನ ಪಿಂಡವಾದ ನನ್ನನ್ನೇಕೆ ಸಾಕಿ ಸಲುಹಿದೆ ಎಂದು ಮಗಳು ಪ್ರಶ್ನಿಸುತ್ತಾಳೆ. ಆಗ ತಾಯಿ, “ನೀನು ಬೇಸರ ಮಾಡಿಕೊಳ್ಳುವುದಿಲ್ಲವೆಂದರೆ ಸತ್ಯ ಹೇಳುತ್ತೇನೆ ಕೇಳು. ಗರ್ಭದಲ್ಲಿದ್ದ ನಿನ್ನ ಮೇಲೆ ನನಗೆ ಯಾವ ಮೋಹವೂ ಇರಲಿಲ್ಲ. ನಿನ್ನನ್ನು ತೆಗೆಸಿಬಿಟ್ಟರೆ ನನ್ನ ಜೀವಕ್ಕೆ ಅಪಾಯ ಎಂಬ ಭಯದಿಂದ ತೆಗೆಸಿಲಿಲ್ಲ” ಎನ್ನುತ್ತಾಳೆ. ಹೊಟ್ಟೆಯಲ್ಲಿದ್ದ ಚೊಚ್ಚಲ ಗರ್ಭದ ಕುರಿತು ಎಂಥ ಕ್ರೂರಿ ಮಹಿಳೆಯಾದರೂ ಹೀಗೆ ಹೇಳಲಿಕ್ಕಿಲ್ಲ. ತಾಯ್ತನದ ಸಂಭ್ರಮವೇ ಅಂಥದ್ದು.  ಸೇತುರಾಮ್ ಅವರ ನಾಟಕದಲ್ಲಿನ ಹೆಣ್ಣುಮಗಳು ಮಾತ್ರ ಹೀಗೆ ಹೇಳಬಲ್ಲಳೇನೋ.

ನಾಟಕದ ಕೊನೆಯಲ್ಲಿ ಆ ಮುದಿ ಸಾಹಿತಿಯನ್ನು ಬಿಟ್ಟು ಹೋಗುವ ಮೂಲಕ, ಒಂಚೂರು ಮಹಿಳೆಯರ ಸ್ವಾತಂತ್ರ್ಯದ ಕಡೆ ವಾಲಿದಂತೆ ಅಷ್ಟೊತ್ತಿಗಾಗಲೇ ಸ್ತ್ರೀಕುಲದ ಮಾನವೆಲ್ಲ ಹರಾಜಾಗ್ತಿರದೆ ಅನ್ನೋದನ್ನ ಮರೆಯುವಂತಿಲ್ಲ.

ಹೀಗೆ ಮೂರೆ ಪಾತ್ರಗಳನ್ನಿಟ್ಟುಕೊಂಡು ಬರೀ ಮಾತು, ಮಾತು, ಮಾತುಗಳಿಂದಲೇ ಒಂದೂವರೆ ಗಂಟೆಯವರೆಗೂ ನಿರ್ದೇಶಕರು ನಾಟಕ ಓಡಿಸುತ್ತಾರೆ. ವರ್ಷಿಣಿ ಮತ್ತು ಅಕ್ಷತಾ ತಮಗೆ ಒಪ್ಪಿಸಿದ ಡೈಲಾಗ್ ಗಳನ್ನು ಅಚ್ಚುಕಟ್ಟಾಗಿ ಒಪ್ಪಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಹಿರಿಯ ಸಾಹಿತಿಯ ಪಾತ್ರಕ್ಕೆ ಸೇತುರಾಮ್ ಅವರು ಸಹ ಈ ಇಳಿ ವಯಸ್ಸಿನಲ್ಲೂ ನ್ಯಾಯ ಒದಗಿಸಿದ್ದನ್ನು ಮೆಚ್ಚಲೇಬೇಕು. ಆದರೆ, ಸಂಗೀತ, ಬೆಳಕು, ಮೇಕಪ್, ವಸ್ತ್ರ ವಿನ್ಯಾಸ ಇತ್ಯಾದಿ ರಂಗ ಸಾಧ್ಯತೆಗಳು ಇಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ.  ಬೇರೆ ಬ್ಯಾನರಿನ ನಾಟಕಗಳನ್ನು ನೋಡಿದ ಪ್ರೇಕ್ಷಕರಿಗೆ ಈ ಮಾತಿನ ಮಹಲಿನ ನಾಟಕ ಖಂಡಿತ ಬೋರು ಹೊಡೆಸಬಹುದೇನೋ, ಆದ್ರೂ ಈ ನಾಟಕಕ್ಕೆ 200, 150 ಮತ್ತೂ 100 ರೂ.ಗಳ ಟಿಕೇಟ್ ಗಳನ್ನಿಟ್ಟು, ಅತಿ ಕಡಿಮೆ ದುಡ್ಡು ನೀಡಿದವರನ್ನು ಮೇಲಿನ ಬಾಲ್ಕಿನಿಗೆ (ಕೆಳಗಡೆ ಸಾಕಷ್ಟು ಆಸನಗಳು ಖಾಲಿಯಿದ್ದರೂ) ಕಳಿಸುವ ಮೂಲಕ ನಾನು ಗೊತ್ತಿರುವ ಮಟ್ಟಿಗೆ ರಂಗಭೂಮಿಯಲ್ಲಿ ಮೊದಲ ಬಾರಿಗೆ ಪ್ರೇಕ್ಷಕರನ್ನು ವಿಂಗಡಿಸಿದ್ದು ಮೊದಲಿಗೆ ಕಂಡು ಬಂತು.

ಇನ್ನೊಂದು ಮಾತು ಹೇಳಲೇಬೇಕು. ಸೇತುರಾಮ್ ಅವರ ಮೊದಲಿನ, ಗತಿ, ಅತೀತ, ನಾಟಕಗಳನ್ನು ನೋಡಿದವರಿಗಂತೂ ಈ ನಾಟಕದಲ್ಲಿ ಯಾವ ವಿಶೇಷವೂ ಸಿಗುವುದಿಲ್ಲ. ಅವವೇ ಡೈಲಾಗ್ ಗಳು ಈ ನಾಟಕದಲ್ಲೂ ರಿಪೀಟ್‌ ಆಗಿವೆ. ಉದಾಹರಣೆಗೆ “ಅತೀತ”ದಲ್ಲಿ ಬರುವ ಲಾಯರ್ ಪಾತ್ರ ಈ ನಾಟಕದಲ್ಲಿ ವಿಚಾರವಾದಿ ಸಾಹಿತಿಯಾಗಿದ್ದಾನಷ್ಟೇ. ಅಲ್ಲಿ ಲಾಯರ್ ಕೈ ಕೆಳಗೆ ಬರುವ ಯುವ ವಕೀಲೆ ಇಲ್ಲಿ ಗಂಡ ಬಿಟ್ಟ ಮಹಿಳೆಯಾಗಿದ್ದಾಳೆ. ಅಲ್ಲಿ ಲಾಯರ್ ಮಾತಾಡುವ  ಬಹುತೇಕ ಮಾತುಗಳನ್ನು ಇಲ್ಲಿ ಸಾಹಿತಿ ಮಾತನಾಡುತ್ತಾನೆ ಅಷ್ಟೆ.

ಉಚ್ಛಿಷ್ಟ ಎಂದರೆ ಇನ್ನೊಬ್ಬರು ತಿಂದುಬಿಟ್ಟ ಎಂಜಲು ಅಂಥ ಅರ್ಥ. ಗಂಡ ಬಿಟ್ಟ ಹೆಣ್ಣು ಎಷ್ಟೇ ಆದರೂ ಎಂಜಲು ಎಂದು ಹೇಳಲು ಈ ಹೆಸರಿಟ್ಟಿರಬಹುದು. ಇದನ್ನು ಇನ್ನೊಂದು ಅರ್ಥದಲ್ಲಿ ಅರ್ಥೈಸಬಹುದು. ಭೈರಪ್ಪನವರ ಹೇಳಿಬಿಟ್ಟಿರುವ ಈ ವಿಚಾರಗಳನ್ನೇ ಈ ನಾಟಕವೂ ಹೇಳುತ್ತಿರುವುದರಿಂದ ಇದನ್ನು ಅವರ ಉಚ್ಛಿಷ್ಟ ಎನ್ನಬಹುದೇನೋ. ಕವಲು ಕಾದಂಬರಿಯ ಪಾತ್ರಗಳ ಆತ್ಮ ಇಲ್ಲೂ ಕೂಡ ಜೀವನದುದ್ದಕ್ಕೂ ಮಾಡಬಾರದೆಲ್ಲವನ್ನು ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ ಹುಯಿಲಿಡುತ್ತಿವೆ ಎನ್ನಿಸಿತು.

ಒಟ್ನಲ್ಲಿ ಈ ನಾಟಕ ತನ್ನ ಪಾಡಿಗೆ ತಾನು ಹುಟ್ಟಿಕೊಂಡ ನಾಟಕವಲ್ಲ, ತಮಗೆ ಆಗಿಬಾರದ ತಾತ್ವಿಕತೆಯನ್ನು ವಿರೋಧಿಸಲು ಕಷ್ಟಪಟ್ಟು ಆಕರ್ಷಕ ಸಂಭಾಷಣೆಗಳ ಮೂಲಕ ಕಟ್ಟಿಸಿಕೊಂಡ ನಾಟಕವಿದು. ಧಾರಾವಾಹಿ ನಿರ್ದೇಶಕರಾಗಿ, ಕಥೆಗಾರರಾಗಿ ಹೆಸರು ಮಾಡಿದ್ದ ಹಿರಿಯ ಬರಹಗಾರರಾದ ಸೇತುರಾಮ್ ಅವರು ಈ ನಾಟಕಗಳ ಮೂಲಕ ವಿಚಾರವಾದಿ ಸಾಹಿತಿಗಳಿಗೆ ಟಾಂಗ್ ಕೊಡಲು ಹೋಗಿ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಒಬ್ಬ ಸಾಹಿತಿಯಾಗಿ ತಮ್ಮ ಮುಖಕ್ಕೆ ತಾವೇ ಉಗಿದುಕೊಳ್ಳುತ್ತಿದ್ದಾರೆ. ಎಂದೆನಿಸಿದ್ದಂತೂ ಸುಳ್ಳಲ್ಲ. ಮುಂದಿನ ನಾಟಕಗಳಲ್ಲಿ ಹಾಗಾಗದಿರಲಿ ಅಂತ ಹಾರೈಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹನಮಂತ ಹಾಲಿಗೇರಿ ಅವರಿಗೆ, ವಿಮರ್ಶಕರಿಗೆ ಜೀವನಾನುಭವ ಇರಬೇಕು ಅನ್ನುತ್ತಾರೆ. ಈ ನಾಟಕದ ಕುರಿತು ನೀವು ಹೇಳಿದ ಇದೊಂದು ಮಾತು ನಿಮಗೆ ಜೀವನಾನುಭವದ ಕೊರತೆ ಇದೆ ಎನ್ನುವುದನ್ನು ಪ್ರಕಟಪಡಿಸುತ್ತದೆ ಮತ್ತು ಕೊನೆ ಪಕ್ಷ ಹೀಗೂ ಇರಬಹುದೇ ಅನ್ನುವ ಬೆರಗಾದರೂ ನಿಮಗೆ ಇರಬೇಕಾಗಿತ್ತಲ್ಲವೇ ಎನ್ನಿಸುತ್ತದೆ.ಇಡೀ ಸ್ತ್ರೀ ಕುಲಕ್ಕೆ ಮಾನ ಯಾವುದು ಅವಮಾನ ಯಾವುದು ಎನ್ನುವುದನ್ನು ನೀವು ಒಂದು ಮಾತಿನ ಮೂಲಕ ನಿರ್ಧರಿಸುವಿರೇ?! ಮುಕ್ತ ಮನಸ್ಸು ಇಲ್ಲದಿದ್ದರೆ ಕಲೆಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. – (ತಾಯಿ ಮಗಳ ನಡುವೆ ನಡೆಯುವ ಒಂದು ಸಂಭಾಷಣೆಯಂತೂ ಇಡೀ ಸ್ತ್ರೀಕುಲಕ್ಕೆ ಮಾಡುವ ಅವಮಾನದಂತಿದೆ……”ತಾಯಿ, “ನೀನು ಬೇಸರ ಮಾಡಿಕೊಳ್ಳುವುದಿಲ್ಲವೆಂದರೆ ಸತ್ಯ ಹೇಳುತ್ತೇನೆ ಕೇಳು. ಗರ್ಭದಲ್ಲಿದ್ದ ನಿನ್ನ ಮೇಲೆ ನನಗೆ ಯಾವ ಮೋಹವೂ ಇರಲಿಲ್ಲ. ನಿನ್ನನ್ನು ತೆಗೆಸಿಬಿಟ್ಟರೆ ನನ್ನ ಜೀವಕ್ಕೆ ಅಪಾಯ ಎಂಬ ಭಯದಿಂದ ತೆಗೆಸಿಲಿಲ್ಲ” ಎನ್ನುತ್ತಾಳೆ. ಹೊಟ್ಟೆಯಲ್ಲಿದ್ದ ಚೊಚ್ಚಲ ಗರ್ಭದ ಕುರಿತು ಎಂಥ ಕ್ರೂರಿ ಮಹಿಳೆಯಾದರೂ ಹೀಗೆ ಹೇಳಲಿಕ್ಕಿಲ್ಲ. ತಾಯ್ತನದ ಸಂಭ್ರಮವೇ ಅಂಥದ್ದು.”)

  2. ಇಲ್ಲಿ ನಿರ್ದೇಶಕರು, ಒಂದು ವೇಳೆ ಎಲ್ಲಾ ಸಾಹಿತಿಗಳು, ಎಲ್ಲಾ ಹಣ್ಣು (ತಾಯಂದಿರು) ಮಕ್ಕಳು ಹೀಗೆಯೇ ಎಂದು ಹೇಳಿ(ಸಿ)ದರೆ ನಿಜಕ್ಕೂ ಅದು ತಪ್ಪು. ಆದರೆ ಈ ನಿರ್ದಶಕರು ಹಾಗೆ ಹೇಳಿ(ಸಿ)ರಲಿಕ್ಕಿಲ್ಲ. ಆದರೆ ಈ ಸರಸ್ವತಿಯ ದೇಗುಲದಲ್ಲಿ (ಅತೀ ವಿರಳ) ಇಂತಹವರೂ ಇರುತ್ತಾರೆ, ಇಂತಹವರು ತನ್ನ ಸ್ವಾರ್ಥಕ್ಕಾಗಿ
    ಅಬಲೆಯವರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ, ಎಂಬುದನ್ನು ಹೇಳಿ(ಸಿ)ದ್ದರೆ ಅದರಲ್ಲಿ ತಪ್ಪೇನಿಲ್ಲ. ಎನ್ನುವುದು ನನ್ನ ಅಭಿಮತ.

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...

3ನೇ ಹಂತದ ‘SIR’ ಕರಡು ಮತದಾರರ ಪಟ್ಟಿ ಬಿಡುಗಡೆ: 12 ರಾಜ್ಯಗಳಲ್ಲಿ 1.58 ಕೋಟಿ ಮತದಾರರ ಹೆಸರು ಕೈಬಿಟ್ಟ ಆಯೋಗ, ಇನ್ನು ಕರ್ನಾಟಕ ಬಾಕಿ

3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು...

ದಾರುಲ್ ಉಲೂಮ್ ದಿಯೋಬಂದ್ ಆವರಣದಲ್ಲಿ ಶಿವಲಿಂಗವಿದೆ ಎಂದ ಹಿಂದುತ್ವ ಸಂಘಟನೆ : ಆ.11ರಂದು ಗಂಗಾಜಲ ಅರ್ಪಿಸುವುದಾಗಿ ಘೋಷಣೆ

ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿರುವ ಪ್ರಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಆವರಣದಲ್ಲಿ ಶಿವಲಿಂಗವಿದೆ ಎಂದು ಪ್ರತಿಪಾದಿಸಿರುವ ಹಿಂದೂ ರಕ್ಷಾ ದಳ ಸಂಘಟನೆ, ಆಗಸ್ಟ್ 11 ರಂದು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ...