Homeಮುಖಪುಟ"ಉಚ್ಛಿಷ್ಟ" ಸೇತುರಾಮ್‌ರವರ ಮಾತಿನ ಮಹಲಿನ ಕೀಳು ಅಭಿರುಚಿಯ ನಾಟಕ...

“ಉಚ್ಛಿಷ್ಟ” ಸೇತುರಾಮ್‌ರವರ ಮಾತಿನ ಮಹಲಿನ ಕೀಳು ಅಭಿರುಚಿಯ ನಾಟಕ…

"ಉಚ್ಛಿಷ್ಟ"ದ ಮೂಲಕ ತನ್ನ ಮುಖಕ್ಕೆ ತಾನೆ ಉಗಿದುಕೊಂಡ ಸೇತುರಾಮ್...

- Advertisement -
- Advertisement -

ನಿನ್ನೇ ರವೀಂದ್ರ ಕಲಾಕ್ಷೇತ್ರದಲ್ಲಿ ಸೇತುರಾಮ್ ಅವರ ಉಚ್ಛಿಷ್ಟ ನಾಟಕ ಪ್ರದರ್ಶನಗೊಂಡಿತು. ಮೊದಲೆಲ್ಲ ಅವರ ಮಂಥನ ದಾರಾವಾಹಿ ಕಂತುಗಳನ್ನು ಹುಡುಕಿ ಹುಡುಕಿ ನೋಡಿದ್ದ ನಮಗೆ ಈ ನಾಟಕ ನೋಡಿದ ಮೇಲೆ ಅವರು ತಲುಪಿರುವ ದುರ್ಗಮ್ಯವನ್ನು ನೋಡಿ ಅಯ್ಯೋ ಅನ್ನಿಸುವುದಂತೂ ಸುಳ್ಳಲ್ಲ. ಈ ನಾಟಕದಲ್ಲಿ  ತಮ್ಮ ಚತುರ ಮತ್ತು ಮೋಹಕ ಸಂಭಾಷಣೆಯ ಮೂಲಕ ಸೇತುರಾಮ್ ಅವರು ಒಂದೇ ಕಲ್ಲಿನಲ್ಲಿ ತಮಗಾಗದ ಎರಡು ತಾತ್ವಿಕತೆಯವರಿಗೆ ಟಾಂಗ್ ಕೊಡಲು ಈ ರಂಗಭೂಮಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಂದು ಸ್ತ್ರಿವಾದಿ ಚಿಂತನೆಯ ಮಹಿಳೆಯರನ್ನು, ಮತ್ತೊಂದು ವೈಚಾರಿಕ ಪ್ರಗತಿಪರ ಸಾಹಿತಿಗಳನ್ನು. ಇವರಿಬ್ಬರನ್ನು ಹಿಗ್ಗಾಮುಗ್ಗಾ ವಿಡಂಬಿಸಲು ಹೋಗಿ ತಮ್ಮ ವಿಕೃತ ಮನಸ್ಥಿತಿಯನ್ನು ಹೊರಹಾಕಿದ್ದಾರೆ.

ಇಲ್ಲಿನ ಮುಖ್ಯಪಾತ್ರಧಾರಿಯಾದ 70 ವರ್ಷದ ವೃದ್ಧ ವೈಚಾರಿಕ ಸಾಹಿತಿಯನ್ನಂತೂ ಕನಿಷ್ಠ ಪ್ರಾಮಾಣಿಕತೆ ಇಲ್ಲದ ಸ್ವಾರ್ಥವೇ ತುಂಬಿದವರಂತೆ ತೋರಿಸಿದ್ದಾರೆ. ಈ ಸಾಹಿತಿ ಸದಾ ಒಂದಿಲ್ಲ ಒಂದು ಪ್ರಶಸ್ತಿಗೆ, ಅವಕಾಶಕ್ಕಾಗಿ ಹಪಹಪಿಸುತ್ತಿರುತ್ತಾನೆ. ತಾನು ಸತ್ತ ಮೇಲೆ ತನ್ನ ಸಾಹಿತ್ಯ ನಿರಂತರವಾಗಿಸಲು, ತನ್ನ ಹೆಸರಲ್ಲಿ ಪ್ರತಿಷ್ಠಾನ ಆಗಬೇಕು, ದತ್ತಿ ಪ್ರಶಸ್ತಿ ಸ್ಥಾಪನೆಯಾಗಬೇಕು, ರಾಜ್ಯಾದ್ಯಂತ ವಿಚಾರಸಂಕಿರಣಗಳು ನಡೆಯಬೇಕೆಂದು ತನ್ನ ಶಿಷ್ಯವೃಂಧದ ಮೂಲಕ ಲಾಬಿ ಮಾಡಿಸುತ್ತಿರುತ್ತಾನೆ. ಮನೆಯಲ್ಲಿ ಹೆಂಡತಿ ಇದ್ದರೂ ಕಚ್ಚೆಹರುಕ ಸ್ವಭಾವದವನಾದ ಆತ ತನ್ನ ಸಾಹಿತ್ಯ ಮೆಚ್ಚಿ ಬರುವ ಗಂಡ ಬಿಟ್ಟವಳಿಗೆ ಸಹಾಯ ಮಾಡುವ ನೆಪದಲ್ಲಿ, ಹೊಸ ಬದುಕು ಕಲ್ಪಿಸಿದೆನೆಂಬ ಭ್ರಮೆಯಲ್ಲಿ ಅವಳೊಂದಿಗೆ ಸಂಸಾರ ಮಾಡುತ್ತಾನೆ. ಅವಳ ಹೆಸರಲ್ಲಿ ತಾನೆ ಪುಸ್ತಕಗಳನ್ನು ಬರೆದು 500  ಪ್ರತಿ ಪ್ರಕಟಿಸಿ, ಲೈಬ್ರರಿಗೆ ಕಳಿಸಿ, ಉಳಿದವುಗಳನ್ನು ಪ್ರಶಸ್ತಿಗಾಗಿ ಕಳಿಸಿ, ಅಲ್ಲೂ ಪ್ರಭಾವ ಬೀರಿ ಪ್ರಶಸ್ತಿ ಕೊಡಿಸಿ, ಅವಳನ್ನು ಶ್ರೇಷ್ಠ ಲೇಖಕಿಯನ್ನಾಗಿ ಮಾಡುತ್ತಾನೆ.

ಸ್ವಾರ್ಥವೇ ತುಂಬಿರುವ ಇಂಥ ಸಾಹಿತಿ ಅದ್ಯಾವ ಲೋಕದಲ್ಲಿ ಬದುಕಿದ್ದಾರೋ, ಗೊತ್ತಿಲ್ಲ. ಪ್ರಶಸ್ತಿಯ ಹಪಾಹಪಿ, ವಸೂಲಿಬಾಜಿ ಮಾಡುವುದು, “ಬಕೇಟ್” ಹಿಡಿಯುವುದು ಕೆಲ ಬುದ್ಧಿ ಸಾಹಿತಿಗಳಿಗೆ ಇದ್ದೇ ಇರುತ್ತದೆ, ನಿಜ. ಅದು ಎಲ್ಲಾ ಧಾರೆಯ ಸಾಹಿತಿಗಳಿಗೂ ಇದೇ ಹೊರತು ಕೇವಲ ಒಂದು ವರ್ಗಕ್ಕಲ್ಲ. ಆದರೆ, ವಯಸ್ಸಾದಂತೆ ಸಾಹಿತಿ ಮಾಗುತ್ತಾ ಪ್ರಬುದ್ಧನಾಗುತ್ತಾನೆ. ದಾರ್ಶನಿಕನಾಗುತ್ತಾನೆ. ಕೀರ್ತಿಯ, ಪ್ರಶಸ್ತಿಯ ನಿರರ್ಥಕತೆ ಅರ್ಥವಾಗತೊಡಗಿದಂತೆ ಅವೆಲ್ಲದಕ್ಕಿಂತಲೂ ಬದುಕು ದೊಡ್ಡದು ಎನ್ನುವ ಸತ್ಯದ ಅರಿವಾಗಿ ಇಡೀ ಸಮಾಜಕ್ಕೆ ಪೊರೆಯುವ ತಾಯ್ತನ ಅವನಲ್ಲಿ ಹರಳುಗಟ್ಟತೊಡಗುತ್ತದೆ. ಆದರೆ, ವಯಸ್ಸಾದಂತೆ ತನ್ನ ಕೀರ್ತಿ ಶನಿಯ ಪ್ರತಿಮೆಯನ್ನು ತಾನೆ ತಯಾರಿಸಿಕೊಳ್ಳುವ, ಕನಿಷ್ಠ ಪ್ರಾಮಾಣಿಕತೆಯೂ ಇಲ್ಲದ, ಈ ನಾಟಕದಲ್ಲಿನ ಸಾಹಿತಿಯನ್ನು ಸೇತುರಾಮ್ ಅವರು ಅದೆಲ್ಲಿಂದ ಹುಡುಕಿ ತಂದಿದ್ದಾರೋ ಅವರಿಗೆ ಗೊತ್ತು.

ಇನ್ನು ಈ ಸಾಹಿತಿಯನ್ನು ನಂಬಿ ಬಂದಿರುವ ಆ ಹೆಣ್ಣುಮಗಳು ಕೂಡ ಕಿರುಕುಳ ಕೊಡುವ ಗಂಡನನ್ನು ಕುಕ್ಕರಿನ ಹಿಡಿಕೆಯಿಂದ ತಲೆಗೆ ಹೊಡೆದು ಮನೆ ಬಿಟ್ಟು ಓಡಿಸಿದವಳು.  ಆಮೇಲೆ ಬಂದು ಈ ಸಾಹಿತಿಯ ಆಶ್ರಯ ಪಡೆಯುತ್ತಾಳೆ. ಆದರೆ, ಲೋಕವೆಲ್ಲ  ತನ್ನ ಕಡೆ ಬೊಟ್ಟು ಮಾಡಿ ಹಾದರಗಿತ್ತಿ ಅಂತಿದೆ ಅನ್ನೋ ಗುಮಾನಿ ಸದಾ ಇವಳಿಗೆ. ತನ್ನದು ಹಾದರ ಎಂದು ಕರೆಯುವ ಈ ಸಮಾಜ ಮತ್ತು ಉಳಿದೆಲ್ಲ ಸ್ತ್ರೀಯರು ಹೇಗೆಲ್ಲ ಹಾದರ ಮಾಡ್ತಿದ್ದಾರೆ ಎಂದು ಆಗಾಗ ಸಿಡುಕುತ್ತಾ ಸಮರ್ಥಿಸಿಕೊಳ್ಳುತ್ತಾಳೆ. ಆಶ್ರಯ, ಮನೆ, ಹೆಸರು, ಕೀರ್ತಿಗಾಗಿ ಮಾತ್ರ ಈ ಮುದುಕನನ್ನು ಸಹಿಸಿಕೊಂಡಿದ್ದೇನೆ ಎಂದು ಬಾಯ್ಬಿಟ್ಟೆ ಹೇಳುತ್ತಿರುತ್ತಾಳೆ. ಮುಪ್ಪಿನ ಕಾಲದಲ್ಲಿ ಆ ಮುದುಕನ ವಿಸರ್ಜನೆಗಳೆಲ್ಲ ಹೇಗಪ್ಪ ಸ್ವಚ್ಚಗೊಳಿಸುವುದು ಎಂದು ಆಗಾಗ ಹಲಬುತ್ತಿರುತ್ತಾಳೆ.

ತಾಯಿ ಮಗಳ ನಡುವೆ ನಡೆಯುವ ಒಂದು ಸಂಭಾಷಣೆಯಂತೂ ಇಡೀ ಸ್ತ್ರೀಕುಲಕ್ಕೆ ಮಾಡುವ ಅವಮಾನದಂತಿದೆ. ಗಂಡನನ್ನು ಮನೆಬಿಟ್ಟು ಓಡಿಸಿರುವ ನೀನು, ಅವನ ಪಿಂಡವಾದ ನನ್ನನ್ನೇಕೆ ಸಾಕಿ ಸಲುಹಿದೆ ಎಂದು ಮಗಳು ಪ್ರಶ್ನಿಸುತ್ತಾಳೆ. ಆಗ ತಾಯಿ, “ನೀನು ಬೇಸರ ಮಾಡಿಕೊಳ್ಳುವುದಿಲ್ಲವೆಂದರೆ ಸತ್ಯ ಹೇಳುತ್ತೇನೆ ಕೇಳು. ಗರ್ಭದಲ್ಲಿದ್ದ ನಿನ್ನ ಮೇಲೆ ನನಗೆ ಯಾವ ಮೋಹವೂ ಇರಲಿಲ್ಲ. ನಿನ್ನನ್ನು ತೆಗೆಸಿಬಿಟ್ಟರೆ ನನ್ನ ಜೀವಕ್ಕೆ ಅಪಾಯ ಎಂಬ ಭಯದಿಂದ ತೆಗೆಸಿಲಿಲ್ಲ” ಎನ್ನುತ್ತಾಳೆ. ಹೊಟ್ಟೆಯಲ್ಲಿದ್ದ ಚೊಚ್ಚಲ ಗರ್ಭದ ಕುರಿತು ಎಂಥ ಕ್ರೂರಿ ಮಹಿಳೆಯಾದರೂ ಹೀಗೆ ಹೇಳಲಿಕ್ಕಿಲ್ಲ. ತಾಯ್ತನದ ಸಂಭ್ರಮವೇ ಅಂಥದ್ದು.  ಸೇತುರಾಮ್ ಅವರ ನಾಟಕದಲ್ಲಿನ ಹೆಣ್ಣುಮಗಳು ಮಾತ್ರ ಹೀಗೆ ಹೇಳಬಲ್ಲಳೇನೋ.

ನಾಟಕದ ಕೊನೆಯಲ್ಲಿ ಆ ಮುದಿ ಸಾಹಿತಿಯನ್ನು ಬಿಟ್ಟು ಹೋಗುವ ಮೂಲಕ, ಒಂಚೂರು ಮಹಿಳೆಯರ ಸ್ವಾತಂತ್ರ್ಯದ ಕಡೆ ವಾಲಿದಂತೆ ಅಷ್ಟೊತ್ತಿಗಾಗಲೇ ಸ್ತ್ರೀಕುಲದ ಮಾನವೆಲ್ಲ ಹರಾಜಾಗ್ತಿರದೆ ಅನ್ನೋದನ್ನ ಮರೆಯುವಂತಿಲ್ಲ.

ಹೀಗೆ ಮೂರೆ ಪಾತ್ರಗಳನ್ನಿಟ್ಟುಕೊಂಡು ಬರೀ ಮಾತು, ಮಾತು, ಮಾತುಗಳಿಂದಲೇ ಒಂದೂವರೆ ಗಂಟೆಯವರೆಗೂ ನಿರ್ದೇಶಕರು ನಾಟಕ ಓಡಿಸುತ್ತಾರೆ. ವರ್ಷಿಣಿ ಮತ್ತು ಅಕ್ಷತಾ ತಮಗೆ ಒಪ್ಪಿಸಿದ ಡೈಲಾಗ್ ಗಳನ್ನು ಅಚ್ಚುಕಟ್ಟಾಗಿ ಒಪ್ಪಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಹಿರಿಯ ಸಾಹಿತಿಯ ಪಾತ್ರಕ್ಕೆ ಸೇತುರಾಮ್ ಅವರು ಸಹ ಈ ಇಳಿ ವಯಸ್ಸಿನಲ್ಲೂ ನ್ಯಾಯ ಒದಗಿಸಿದ್ದನ್ನು ಮೆಚ್ಚಲೇಬೇಕು. ಆದರೆ, ಸಂಗೀತ, ಬೆಳಕು, ಮೇಕಪ್, ವಸ್ತ್ರ ವಿನ್ಯಾಸ ಇತ್ಯಾದಿ ರಂಗ ಸಾಧ್ಯತೆಗಳು ಇಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ.  ಬೇರೆ ಬ್ಯಾನರಿನ ನಾಟಕಗಳನ್ನು ನೋಡಿದ ಪ್ರೇಕ್ಷಕರಿಗೆ ಈ ಮಾತಿನ ಮಹಲಿನ ನಾಟಕ ಖಂಡಿತ ಬೋರು ಹೊಡೆಸಬಹುದೇನೋ, ಆದ್ರೂ ಈ ನಾಟಕಕ್ಕೆ 200, 150 ಮತ್ತೂ 100 ರೂ.ಗಳ ಟಿಕೇಟ್ ಗಳನ್ನಿಟ್ಟು, ಅತಿ ಕಡಿಮೆ ದುಡ್ಡು ನೀಡಿದವರನ್ನು ಮೇಲಿನ ಬಾಲ್ಕಿನಿಗೆ (ಕೆಳಗಡೆ ಸಾಕಷ್ಟು ಆಸನಗಳು ಖಾಲಿಯಿದ್ದರೂ) ಕಳಿಸುವ ಮೂಲಕ ನಾನು ಗೊತ್ತಿರುವ ಮಟ್ಟಿಗೆ ರಂಗಭೂಮಿಯಲ್ಲಿ ಮೊದಲ ಬಾರಿಗೆ ಪ್ರೇಕ್ಷಕರನ್ನು ವಿಂಗಡಿಸಿದ್ದು ಮೊದಲಿಗೆ ಕಂಡು ಬಂತು.

ಇನ್ನೊಂದು ಮಾತು ಹೇಳಲೇಬೇಕು. ಸೇತುರಾಮ್ ಅವರ ಮೊದಲಿನ, ಗತಿ, ಅತೀತ, ನಾಟಕಗಳನ್ನು ನೋಡಿದವರಿಗಂತೂ ಈ ನಾಟಕದಲ್ಲಿ ಯಾವ ವಿಶೇಷವೂ ಸಿಗುವುದಿಲ್ಲ. ಅವವೇ ಡೈಲಾಗ್ ಗಳು ಈ ನಾಟಕದಲ್ಲೂ ರಿಪೀಟ್‌ ಆಗಿವೆ. ಉದಾಹರಣೆಗೆ “ಅತೀತ”ದಲ್ಲಿ ಬರುವ ಲಾಯರ್ ಪಾತ್ರ ಈ ನಾಟಕದಲ್ಲಿ ವಿಚಾರವಾದಿ ಸಾಹಿತಿಯಾಗಿದ್ದಾನಷ್ಟೇ. ಅಲ್ಲಿ ಲಾಯರ್ ಕೈ ಕೆಳಗೆ ಬರುವ ಯುವ ವಕೀಲೆ ಇಲ್ಲಿ ಗಂಡ ಬಿಟ್ಟ ಮಹಿಳೆಯಾಗಿದ್ದಾಳೆ. ಅಲ್ಲಿ ಲಾಯರ್ ಮಾತಾಡುವ  ಬಹುತೇಕ ಮಾತುಗಳನ್ನು ಇಲ್ಲಿ ಸಾಹಿತಿ ಮಾತನಾಡುತ್ತಾನೆ ಅಷ್ಟೆ.

ಉಚ್ಛಿಷ್ಟ ಎಂದರೆ ಇನ್ನೊಬ್ಬರು ತಿಂದುಬಿಟ್ಟ ಎಂಜಲು ಅಂಥ ಅರ್ಥ. ಗಂಡ ಬಿಟ್ಟ ಹೆಣ್ಣು ಎಷ್ಟೇ ಆದರೂ ಎಂಜಲು ಎಂದು ಹೇಳಲು ಈ ಹೆಸರಿಟ್ಟಿರಬಹುದು. ಇದನ್ನು ಇನ್ನೊಂದು ಅರ್ಥದಲ್ಲಿ ಅರ್ಥೈಸಬಹುದು. ಭೈರಪ್ಪನವರ ಹೇಳಿಬಿಟ್ಟಿರುವ ಈ ವಿಚಾರಗಳನ್ನೇ ಈ ನಾಟಕವೂ ಹೇಳುತ್ತಿರುವುದರಿಂದ ಇದನ್ನು ಅವರ ಉಚ್ಛಿಷ್ಟ ಎನ್ನಬಹುದೇನೋ. ಕವಲು ಕಾದಂಬರಿಯ ಪಾತ್ರಗಳ ಆತ್ಮ ಇಲ್ಲೂ ಕೂಡ ಜೀವನದುದ್ದಕ್ಕೂ ಮಾಡಬಾರದೆಲ್ಲವನ್ನು ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ ಹುಯಿಲಿಡುತ್ತಿವೆ ಎನ್ನಿಸಿತು.

ಒಟ್ನಲ್ಲಿ ಈ ನಾಟಕ ತನ್ನ ಪಾಡಿಗೆ ತಾನು ಹುಟ್ಟಿಕೊಂಡ ನಾಟಕವಲ್ಲ, ತಮಗೆ ಆಗಿಬಾರದ ತಾತ್ವಿಕತೆಯನ್ನು ವಿರೋಧಿಸಲು ಕಷ್ಟಪಟ್ಟು ಆಕರ್ಷಕ ಸಂಭಾಷಣೆಗಳ ಮೂಲಕ ಕಟ್ಟಿಸಿಕೊಂಡ ನಾಟಕವಿದು. ಧಾರಾವಾಹಿ ನಿರ್ದೇಶಕರಾಗಿ, ಕಥೆಗಾರರಾಗಿ ಹೆಸರು ಮಾಡಿದ್ದ ಹಿರಿಯ ಬರಹಗಾರರಾದ ಸೇತುರಾಮ್ ಅವರು ಈ ನಾಟಕಗಳ ಮೂಲಕ ವಿಚಾರವಾದಿ ಸಾಹಿತಿಗಳಿಗೆ ಟಾಂಗ್ ಕೊಡಲು ಹೋಗಿ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಒಬ್ಬ ಸಾಹಿತಿಯಾಗಿ ತಮ್ಮ ಮುಖಕ್ಕೆ ತಾವೇ ಉಗಿದುಕೊಳ್ಳುತ್ತಿದ್ದಾರೆ. ಎಂದೆನಿಸಿದ್ದಂತೂ ಸುಳ್ಳಲ್ಲ. ಮುಂದಿನ ನಾಟಕಗಳಲ್ಲಿ ಹಾಗಾಗದಿರಲಿ ಅಂತ ಹಾರೈಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹನಮಂತ ಹಾಲಿಗೇರಿ ಅವರಿಗೆ, ವಿಮರ್ಶಕರಿಗೆ ಜೀವನಾನುಭವ ಇರಬೇಕು ಅನ್ನುತ್ತಾರೆ. ಈ ನಾಟಕದ ಕುರಿತು ನೀವು ಹೇಳಿದ ಇದೊಂದು ಮಾತು ನಿಮಗೆ ಜೀವನಾನುಭವದ ಕೊರತೆ ಇದೆ ಎನ್ನುವುದನ್ನು ಪ್ರಕಟಪಡಿಸುತ್ತದೆ ಮತ್ತು ಕೊನೆ ಪಕ್ಷ ಹೀಗೂ ಇರಬಹುದೇ ಅನ್ನುವ ಬೆರಗಾದರೂ ನಿಮಗೆ ಇರಬೇಕಾಗಿತ್ತಲ್ಲವೇ ಎನ್ನಿಸುತ್ತದೆ.ಇಡೀ ಸ್ತ್ರೀ ಕುಲಕ್ಕೆ ಮಾನ ಯಾವುದು ಅವಮಾನ ಯಾವುದು ಎನ್ನುವುದನ್ನು ನೀವು ಒಂದು ಮಾತಿನ ಮೂಲಕ ನಿರ್ಧರಿಸುವಿರೇ?! ಮುಕ್ತ ಮನಸ್ಸು ಇಲ್ಲದಿದ್ದರೆ ಕಲೆಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. – (ತಾಯಿ ಮಗಳ ನಡುವೆ ನಡೆಯುವ ಒಂದು ಸಂಭಾಷಣೆಯಂತೂ ಇಡೀ ಸ್ತ್ರೀಕುಲಕ್ಕೆ ಮಾಡುವ ಅವಮಾನದಂತಿದೆ……”ತಾಯಿ, “ನೀನು ಬೇಸರ ಮಾಡಿಕೊಳ್ಳುವುದಿಲ್ಲವೆಂದರೆ ಸತ್ಯ ಹೇಳುತ್ತೇನೆ ಕೇಳು. ಗರ್ಭದಲ್ಲಿದ್ದ ನಿನ್ನ ಮೇಲೆ ನನಗೆ ಯಾವ ಮೋಹವೂ ಇರಲಿಲ್ಲ. ನಿನ್ನನ್ನು ತೆಗೆಸಿಬಿಟ್ಟರೆ ನನ್ನ ಜೀವಕ್ಕೆ ಅಪಾಯ ಎಂಬ ಭಯದಿಂದ ತೆಗೆಸಿಲಿಲ್ಲ” ಎನ್ನುತ್ತಾಳೆ. ಹೊಟ್ಟೆಯಲ್ಲಿದ್ದ ಚೊಚ್ಚಲ ಗರ್ಭದ ಕುರಿತು ಎಂಥ ಕ್ರೂರಿ ಮಹಿಳೆಯಾದರೂ ಹೀಗೆ ಹೇಳಲಿಕ್ಕಿಲ್ಲ. ತಾಯ್ತನದ ಸಂಭ್ರಮವೇ ಅಂಥದ್ದು.”)

  2. ಇಲ್ಲಿ ನಿರ್ದೇಶಕರು, ಒಂದು ವೇಳೆ ಎಲ್ಲಾ ಸಾಹಿತಿಗಳು, ಎಲ್ಲಾ ಹಣ್ಣು (ತಾಯಂದಿರು) ಮಕ್ಕಳು ಹೀಗೆಯೇ ಎಂದು ಹೇಳಿ(ಸಿ)ದರೆ ನಿಜಕ್ಕೂ ಅದು ತಪ್ಪು. ಆದರೆ ಈ ನಿರ್ದಶಕರು ಹಾಗೆ ಹೇಳಿ(ಸಿ)ರಲಿಕ್ಕಿಲ್ಲ. ಆದರೆ ಈ ಸರಸ್ವತಿಯ ದೇಗುಲದಲ್ಲಿ (ಅತೀ ವಿರಳ) ಇಂತಹವರೂ ಇರುತ್ತಾರೆ, ಇಂತಹವರು ತನ್ನ ಸ್ವಾರ್ಥಕ್ಕಾಗಿ
    ಅಬಲೆಯವರನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ, ಎಂಬುದನ್ನು ಹೇಳಿ(ಸಿ)ದ್ದರೆ ಅದರಲ್ಲಿ ತಪ್ಪೇನಿಲ್ಲ. ಎನ್ನುವುದು ನನ್ನ ಅಭಿಮತ.

LEAVE A REPLY

Please enter your comment!
Please enter your name here

- Advertisment -

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...