ಬಿಜೆಪಿಯ ಗದ್ದಲ, ಗಲಾಟೆ ಪ್ರತಿಭಟನೆಯ ನಡುವೆ ನಡೆದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ ವಿಶ್ವಾಸಮತ ಯಾಚನೆಯಲ್ಲಿ ಉದ್ಧವ್ ಠಾಕ್ರೆ ಬಹುಮತ ಸಾಧಿಸಿದ್ದು 169 ಶಾಸಕರು ಹೊಸ ಸರ್ಕಾರವನ್ನು ಬೆಂಬಲಿಸಿ ಮತಹಾಕಿದರು.
ಬಿಜೆಪಿಯು ಮೊದಲು ನಿಯಮಾನುಸಾರ ಸ್ಪೀಕರ್ರವರನ್ನು ಆಯ್ಕೆ ಮಾಡಿ ಆನಂತರ ವಿಶ್ವಾಸಮತ ಯಾಚನೆ ನಡೆಯಬೇಕು ಎಂದು ಪಟ್ಟು ಹಿಡಿಯಿತು. ಜೊತೆಗೆ ಗೌಪ್ಯ ಮತದಾನ ನಡೆಯಬೇಕೆಂದು ಸಹ ಒತ್ತಾಯಿಸಿತು.
ಆದರೆ ಇದಕ್ಕೊಪ್ಪದ ಮೈತ್ರಿಕೂಟ ಎನ್ಸಿಪಿಯ ದಿಲೀಪ್ ಪಾಟೀಲ್ರವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿ ವಿಶ್ವಾಸಮತಯಾಚನೆಗೆ ಚಾಲನೆ ನೀಡಿತು. ಆಗ ಬಿಜೆಪಿಯ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮಾತನಾಡಿ ಇದು ಸಂವಿಧಾನಬಾಹಿರ ಎಂದು ಸದನದಿಂದ ಹೊರನಡೆದರು.
ಅದನ್ನು ಲೆಕ್ಕಿಸದೇ ಸ್ಪೀಕರ್ ವಿಶ್ವಾಸಮತ ಎಣಿಕೆ ಶುರು ಮಾಡಿದರು. ತಲೆ ಎಣಿಕೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ 169 ಜನ ಮೈತ್ರಿ ಸರ್ಕಾರವನ್ನು ಬೆಂಬಲಿಸಿದರು. ನಾಲ್ಕು ಜನ ಶಾಸಕರು ತಟಸ್ಟರಾಗುಳಿದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಯಾವುದೇ ಸದನದ ಶಾಸಕರಾಗ ಕಾರಣ ಸದನದಲ್ಲಿ ಹಾಜರಿರಲಿಲ್ಲ.