Homeಕರ್ನಾಟಕಉಡುಪಿ: ಹಿಜಾಬ್‌ ತೀರ್ಪಿನ ಬಳಿಕ 400ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ತರಗತಿಯಿಂದ ಹೊರಕ್ಕೆ!

ಉಡುಪಿ: ಹಿಜಾಬ್‌ ತೀರ್ಪಿನ ಬಳಿಕ 400ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ತರಗತಿಯಿಂದ ಹೊರಕ್ಕೆ!

ಹಿಜಾಬ್‌ ನಿಷೇಧ ಎತ್ತಿ ಹಿಡಿದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಮುಸ್ಲಿಂ ವಿದ್ಯಾರ್ಥಿನಿಯರು, ಪೋಷಕರು ಎದುರಿಸುತ್ತಿರುವ ಆತಂಕವನ್ನು ‘ದಿ ನ್ಯೂಸ್‌ ಮಿನಿಟ್‌’ ಗ್ರೌಂಡ್ ರಿಪೋರ್ಟ್ ಮಾಡಿದೆ. ಉಡುಪಿ ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿ ವಿಷಮಯವಾಗುತ್ತಿದೆ.

- Advertisement -
- Advertisement -

(ಹಿಜಾಬ್‌ ನಿಷೇಧ ಎತ್ತಿ ಹಿಡಿದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಮುಸ್ಲಿಂ ವಿದ್ಯಾರ್ಥಿನಿಯರು, ಪೋಷಕರು ಎದುರಿಸುತ್ತಿರುವ ಆತಂಕವನ್ನು ‘ದಿ ನ್ಯೂಸ್‌ ಮಿನಿಟ್‌’ ಗ್ರೌಂಡ್ ರಿಪೋರ್ಟ್ ಮಾಡಿದೆ. ಉಡುಪಿ ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿ ವಿಷಮಯವಾಗುತ್ತಿದೆ.)

ಮಧ್ಯಾಹ್ನ 12 ಗಂಟೆ. ತನ್ನ ಕಾಲೇಜು ಗೇಟ್‌ಗಳ ಮುಂದೆ ನಿಂತ ಅಫ್ಸಾನಾಳ ನೆತ್ತಿಯ ಮೇಲೆ ಉರಿ ಸೂರ್ಯನ ಜ್ವಾಲೆ. ಹೀಗಾಗಲೇ ತರಗತಿಯ ಮೂರನೇ ಅವಧಿ ಮುಗಿದಿದೆ. ಕಿಟಕಿಯ ಮೂಲಕ ಅಫ್ಸಾನಾ ತನ್ನ ಸಹಪಾಠಿಗಳ ಮುಖಗಳನ್ನು ನೋಡುತ್ತಾಳೆ. ಆದರೆ 20ರ ಹರೆಯದ ಅಫ್ಸಾನಾ ಪಿಯಾಜಿ ಮತ್ತು ಆಕೆಯ ನಾಲ್ವರು ಗೆಳತಿಯರು ಹೊರಗಿನಿಂದ ಮಾತ್ರ ತರಗತಿಯನ್ನು ನೋಡುವಂತಾಗಿದೆ. “ಹೊರಗೆ ಹೋಗಿ, ಕಾಲೇಜಿನಲ್ಲಿರುವ ಇತರರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿ ಎಂದು ಪ್ರಾಂಶುಪಾಲರು ಹೇಳಿದರು” ಎಂದು ಅಫ್ಸಾನಾ ಬೇಸರ ವ್ಯಕ್ತಪಡಿಸುತ್ತಾರೆ. ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ಕಾಲೇಜು ಅನುಮತಿಸದ ಕಾರಣ  ಅಪ್ಸಾನಾ ಒಂದು ತಿಂಗಳಿನಿಂದ ತನ್ನ ತರಗತಿಯಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ.

ಕಳೆದ ವಾರ ಕರ್ನಾಟಕ ಹೈಕೋರ್ಟ್, ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ. ಈ ನಿರ್ಧಾರದಿಂದ ಅಫ್ಸಾನಾ ಇಕ್ಕಟ್ಟಿಗೆ ಸಿಲುಕಿದ್ದಾರೆ. “ಯಾವುದಾದರೊಂದು ಪರಿಹಾರ ಇದ್ದೇ ಇರುತ್ತದೆ ಎಂದು ನಾನು ಕಾಲೇಜಿಗೆ ಬಂದಿದ್ದೇನೆ” ಎಂಬುದು ಅಫ್ಸಾನಾ ನುಡಿ. “ನಾವು ನಮ್ಮ ಸೆಮಿಸ್ಟರ್ ಪರೀಕ್ಷೆಯ ಶುಲ್ಕ (ರೂ 730) ಪಾವತಿಸಿದ್ದೇವೆ. ಈ ಶೈಕ್ಷಣಿಕ ವರ್ಷವನ್ನು ಪೂರೈಸಲು ಪ್ರಾಂಶುಪಾಲರು ನಮಗೆ ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇವೆ” ಎನ್ನುತ್ತಾರೆ ಅಫ್ಸಾನಾ.

ಮೂರು ವರ್ಷಗಳ ಹಿಂದೆ ಅಫ್ಸಾನಾ ಅವರು ಉಡುಪಿಯ ಸರ್ಕಾರಿ ಅನುದಾನಿತ ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸೇರಿದರು. ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ವಿಷಯವನ್ನು ಆಯ್ಕೆ ಮಾಡಿಕೊಂಡರು. ಅಫ್ಸಾನಾ ಈಗ ತನ್ನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಮತ್ತು ತನ್ನ ಮುಂದಿನ ವೃತ್ತಿಜೀವನದ ನಡೆಯನ್ನು ಯೋಜಿಸಬೇಕು.

ಇದನ್ನೂ ಓದಿರಿ: ಹಿಜಾಬ್‌ ತೀರ್ಪು ನೀಡಿದ ನ್ಯಾಯಮೂರ್ತಿಗೆ ಕೊಲೆ ಬೆದರಿಕೆ ಆರೋಪ; ಪ್ರಕರಣ ದಾಖಲು

“ಪದವಿಯ ನಂತರ ನಾನು ಕೌಪ್‌ನ ಸರ್ಕಾರಿ ಕಾಲೇಜಿನಲ್ಲಿ ಸೋಷಿಯಲ್‌ ವರ್ಕ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಬಯಸುತ್ತೇನೆ” ಎನ್ನುವ ಅಫ್ಸಾನಾ, “ಆದರೆ ಈಗ ನನ್ನ ಕನಸು ನನಸಾಗುವ ನಂಬಿಕೆ ಇಲ್ಲ. ನಾನು ಹಿಜಾಬ್ ಅನ್ನು ಧರಿಸಲು ಬಯಸುತ್ತೇನೆ. ಏಕೆಂದರೆ ಅದು ನನ್ನ ನಂಬಿಕೆಯ ಭಾಗವಾಗಿದೆ. ಆದರೆ ನಾನು ಹಿಜಾಬ್ ಧರಿಸಿದರೆ ನನ್ನ ಅಂತಿಮ ಪರೀಕ್ಷೆಗಳನ್ನು ಬರೆಯಲು ಅವಕಾಶ ದೊರಕುವುದಿಲ್ಲ” ಎನ್ನುತ್ತಾರೆ.

ಹೈಕೋರ್ಟ್ ತೀರ್ಪಿನ ನಂತರ ತಮ್ಮ ಶೈಕ್ಷಣಿಕ ಭವಿಷ್ಯದ ಬಗ್ಗೆ ಯೋಚಿಸುತ್ತಿರುವ ಉಡುಪಿಯ 232 ಪದವಿ ವಿದ್ಯಾರ್ಥಿಗಳಲ್ಲಿ ಅಫ್ಸಾನಾ ಕೂಡ ಒಬ್ಬರು ಎಂದು ಶಿಕ್ಷಣ ಇಲಾಖೆಯ ಮಾಹಿತಿಯಿಂದ ತಿಳಿದುಬರುತ್ತದೆ. ಉಡುಪಿಯ ಮುಸ್ಲಿಂ ಸಂಘಟನೆಗಳ ಒಕ್ಕೂಟವಾದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಕಾರ, ಕನಿಷ್ಠ 183 ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಉಡುಪಿಯ ಪ್ರಿ-ಯೂನಿವರ್ಸಿಟಿ ಕಾಲೇಜುಗಳಲ್ಲಿ ಒಟ್ಟು 12.5% ​​ (1446) ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ.

ಕೆಲವು ವಿದ್ಯಾರ್ಥಿಗಳು, ತಮ್ಮ ಕಾಲೇಜನ್ನು ತೊರೆಯುವ ಆತಂಕದಲ್ಲಿದ್ದಾರೆ. ನ್ಯಾಯಾಲಯವು ಹಿಜಾಬ್ ಮೇಲಿನ ನಿಷೇಧವನ್ನು ಎತ್ತಿಹಿಡಿದ ನಂತರ ಹಿಜಾಬ್ ಅನ್ನು ತೆಗೆದು ತಮ್ಮ ಪರೀಕ್ಷೆಗಳನ್ನು ಬರೆಯಲು ಕೆಲವರು ಯೋಚಿಸುತ್ತಿದ್ದಾರೆ. “ನಾನು ಮೂರನೇ ವರ್ಷದ ವಿದ್ಯಾರ್ಥಿ. ಹಿಜಾಬ್‌ ತೆಗೆಯದಿದ್ದರೆ ಮೂರು ವರ್ಷಗಳ ನನ್ನ ಕೋರ್ಸ್ ವ್ಯರ್ಥವಾಗಬಹುದು” ಎಂದು ಹೆಸರು ಹೇಳಲು ಇಚ್ಛಿಸದ ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ. ಈ ವಿದ್ಯಾರ್ಥಿಯ ಪಕ್ಕದಲ್ಲಿದ್ದ ವಿದ್ಯಾರ್ಥಿನಿ, ಗೆಳತಿ 20 ವರ್ಷದ ಅಫ್ರಾ ಅಜ್ಮಲ್ ಅಸ್ಸಾದಿ ಕಾಲೇಜಿನಿಂದ ಹೊರಗುಳಿಯಲು ಮುಂದಾಗಿದ್ದಾರೆ. “ನಾವು ತರಗತಿಯಲ್ಲಿ ಒಂದೇ ಬೆಂಚ್ ಮೇಲೆ ಕುಳಿತು ನಮ್ಮ ಬಿಡುವಿನ ವೇಳೆಯನ್ನು ಒಟ್ಟಿಗೆ ಕಳೆಯುತ್ತಿದ್ದೆವು. ಆದರೆ ಹಿಜಾಬ್‌ ವಿಚಾರದಲ್ಲಿ ನಾನು ರಾಜಿಯಾಗಲಾರೆ. ನಾನು ಬದಲಿ ಕಾಲೇಜು ಅಥವಾ ಆನ್‌ಲೈನ್ ಕೋರ್ಸ್‌ಗಾಗಿ ಹುಡುಕಾಟ ನಡೆಸಿದ್ದೇನೆ” ಎನ್ನುತ್ತಾರೆ ಅಫ್ರಾ.

ಇದನ್ನೂ ಓದಿರಿ: ಹಿಜಾಬ್‌ ತೀರ್ಪಿನಲ್ಲಿ ಅಗತ್ಯ ಸಂಗತಿಗಳನ್ನು ಬದಿಗಿಟ್ಟ ಹೈಕೋರ್ಟ್: ವಿದ್ಯಾರ್ಥಿ ಸಂಘಟನೆಗಳ ಆಕ್ಷೇಪ

ಹಿಜಾಬ್ ನಿಷೇಧದಿಂದಾಗಿ ಉಡುಪಿಯ ಪೋಷಕರು ತಮ್ಮ ಮಕ್ಕಳನ್ನು ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಿಸಲು ಮುಂದಾಗಿದ್ದಾರೆ. ಶಿಕ್ಷಣದ ಸಲುವಾಗಿ ಕುಟುಂಬಗಳು ಬೇರೆ ಊರಿಗೆ ವಲಸೆ ಹೋಗಲು ಯೋಜಿಸುತ್ತಿವೆ. ಉಡುಪಿಯ ಮಹಾತ್ಮಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜಿನಲ್ಲಿ ಓದುತ್ತಿರುವ ಬಿಎಸ್‌ಸಿ ವಿದ್ಯಾರ್ಥಿಯ ಪೋಷಕರಾದ ಮೊಹಮ್ಮದ್ ಅಲಿ, “ಹಿಜಾಬ್‌ಗೆ ಅನುಮತಿ ಇರುವ ಕಾಲೇಜಿನಲ್ಲಿ ನಮ್ಮ ಮಗಳ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡಲು ನಾವು ಮಂಗಳೂರಿಗೆ ತೆರಳುವ ಬಗ್ಗೆ ಯೋಚಿಸುತ್ತಿದ್ದೇವೆ” ಎನ್ನುತ್ತಾರೆ.

“ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದ ದಿನದಂದು ನಾನು ಟಿವಿ ವೀಕ್ಷಿಸಲು ಹೆದರುತ್ತಿದ್ದೆ. ಆದರೆ ನಾನು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಅನುಸರಿಸುತ್ತಿದ್ದೆ. ಹಿಂದೆ ಯಾವುದೇ ಸಮಸ್ಯೆಯಿಲ್ಲದ ನಮ್ಮಂತಹ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಲಾಗುವುದು ಎಂದು ನಾವು ಆಶಿಸುತ್ತಿದ್ದೆವು” ಎಂದು ವಿದ್ಯಾರ್ಥಿನಿ ಹೇಳುತ್ತಾರೆ.

ಕಾಲೇಜಿನ 58 ವಿದ್ಯಾರ್ಥಿಗಳು ತಮ್ಮ ಕಾಲೇಜು ಪ್ರಾಂಶುಪಾಲರನ್ನು ಭೇಟಿ ಮಾಡಿ ಪರೀಕ್ಷೆಗಾಗಿ ಅನುಮತಿ ಕೋರಿದ್ದಾರೆ. ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. “ನಮ್ಮನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿದರೆ ಮತ್ತು ಮಹಿಳಾ ಶಿಕ್ಷಕಿಯನ್ನು ಇನ್ವಿಜಿಲೇಟರ್ ಆಗಿ ನೇಮಿಸಿದರೆ ನಾವು ಹಿಜಾಬ್ ತೆಗೆದುಹಾಕುವುದಾಗಿ ಹೇಳಿದೆವು. ಈ ವಿನಂತಿಯನ್ನೂ ನಿರಾಕರಿಸಲಾಗಿದೆ” ಎಂದು ಅವರು ಹೇಳುತ್ತಾರೆ.

“ಹಿಜಾಬ್ ಇಲ್ಲದೆ ತರಗತಿಗೆ ಹೋಗುವುದನ್ನು ನಾನು ಊಹಿಸಲು ಸಾಧ್ಯವಿಲ್ಲ” ಎನ್ನುವ ವಿದ್ಯಾರ್ಥಿನಿ ಕುರಾನ್‌ನ ಇಂಗ್ಲಿಷ್ ಅನುವಾದದಲ್ಲಿನ ಎರಡು ಪದ್ಯಗಳನ್ನು ತೋರಿಸುತ್ತಾಳೆ. “ಹಿಜಾಬ್ ಅನ್ನು ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ನಮ್ಮ ನಂಬಿಕೆಯ ಅಗತ್ಯ ಭಾಗವೆಂದು ನಾನು ಪರಿಗಣಿಸುತ್ತೇನೆ” ಎನ್ನುತ್ತಾಳೆ ವಿದ್ಯಾರ್ಥಿನಿ.

ಇದನ್ನೂ ಓದಿರಿ: ಹಿಜಾಬ್ ರಾಜಕೀಯ: ಬಿಜೆಪಿ ಮೇಲೆ ತೆಲಂಗಾಣ ಸಿಎಂ ವಾಗ್ದಾಳಿ

ಆದರೆ ಹಿಜಾಬ್ ಅನ್ನು ಅನುಮತಿಸುವ ಖಾಸಗಿ ಸಂಸ್ಥೆಗಳಿಗೆ ಹೋಗುವುದು ಅಫ್ಸಾನಾ ಅವರಂತಹ ವಿದ್ಯಾರ್ಥಿಗಳಿಗೆ ಒಂದು ಆಯ್ಕೆ ಮಾತ್ರವಲ್ಲ; ಹಿಜಾಬ್ ನಿಷೇಧದ ಜಾರಿಯು ಅವರ ಶಿಕ್ಷಣದ ಅಂತ್ಯವನ್ನು ಸೂಚಿಸುತ್ತದೆ. ಅಫ್ಸಾನಾ ಪೋಷಕರು ದೂರವಾದ್ದರಿಂದ, ಆಕೆಯ ಶಿಕ್ಷಣಕ್ಕೆಂದು ಸರ್ಕಾರಿ ಅನುದಾನಿತ ಕಾಲೇಜಿಗೆ 3,000 ರೂ.ಗಳ ಸಾಧಾರಣ ಕಾಲೇಜು ಶುಲ್ಕವನ್ನು ಆಕೆಯ ಚಿಕ್ಕಪ್ಪ ಪಾವತಿಸಿದರು.

ಕುಂದಾಪುರ, ಬೈಂದೂರು ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲೂ ಇದೇ ಸ್ಥಿತಿ ಇದೆ. ಎರಡೂ ಪಟ್ಟಣಗಳಲ್ಲಿ ಕಳೆದ ವಾರ ಹಲವಾರು ಮುಸ್ಲಿಂ ಹುಡುಗಿಯರು ತಮ್ಮ ತರಗತಿಗಳು ಅಥವಾ ಪರೀಕ್ಷೆಗಳಿಂದ ದೂರ ಉಳಿದಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರು ಹೇಳುತ್ತಾರೆ. ಉದಾಹರಣೆಗೆ ಕುಂದಾಪುರದ ಆರ್‌ಎನ್ ಶೆಟ್ಟಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಕಳೆದ ವಾರ 56 ಮುಸ್ಲಿಂ ಬಾಲಕಿಯರ ಪೈಕಿ ಕೇವಲ ಒಬ್ಬ ವಿದ್ಯಾರ್ಥಿನಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಅದೇ ರೀತಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 16 ಮುಸ್ಲಿಂ ಬಾಲಕಿಯರಲ್ಲಿ ಒಬ್ಬರು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.

2011ರ ಜನಗಣತಿಯ ಪ್ರಕಾರ 11.7 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಕೇವಲ 8.22% ಮುಸ್ಲಿಮರಿದ್ದಾರೆ. ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ, ಮುಸ್ಲಿಂ ಜನಸಂಖ್ಯೆಯು ಉಡುಪಿಗಿಂತ ಸುಮಾರು ಎರಡು ಪಟ್ಟು ಹೆಚ್ಚು (24%). ಉಡುಪಿಗಿಂತ ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲೂ ಇದೇ ಸಮಸ್ಯೆಗಳು ಎದುರಾಗುತ್ತಿವೆ ಎಂದು ಮುಸ್ಲಿಂ ಸಂಘಟನೆಗಳು ಹೇಳುತ್ತಿವೆ.

“ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಮುಸ್ಲಿಂ ವಿದ್ಯಾರ್ಥಿಗಳಿಂದ ಆನ್‌ಲೈನ್ ತರಗತಿಗಾಗಿ ಮನವಿಗಳು ಬಂದಿವೆ” ಎಂದು ಹಿಜಾಬ್ ನಿಷೇಧ ಜಾರಿಯಿಂದ ಪರಿಣಾಮ ಎದುರಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ದಾಖಲಿಸುತ್ತಿರುವ ಉಡುಪಿಯ ಮುಸ್ಲಿಂ ಒಕ್ಕೂಟ ಹೇಳಿದೆ. “ಉಡುಪಿ ಕೇಂದ್ರ ಬಿಂದುವಾಗಿದೆ. ಏಕೆಂದರೆ ಇಲ್ಲಿ ಸಮಸ್ಯೆ ಪ್ರಾರಂಭವಾಯಿತು. ಆದರೆ ಎಲ್ಲಾ ನೆರೆಯ ಜಿಲ್ಲೆಗಳು ಸೇರಿದಂತೆ ಇತರ ಹಲವು ಜಿಲ್ಲೆಗಳಿಂದ ಆನ್‌ಲೈನ್ ತರಗತಿಗಳಿಗಾಗಿ ನಾವು ಕೋರಿಕೆಗಳನ್ನು ಸ್ವೀಕರಿಸಿದ್ದೇವೆ ” ಎಂದು ಒಕೂಟದ ಸದಸ್ಯ ಹಸನ್ ಮಾವೇದ್ ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜೊಂದರಲ್ಲಿ 231 ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಪೂರ್ವಸಿದ್ಧತಾ ಪರೀಕ್ಷೆಯಿಂದ ಹೊರಗುಳಿದ್ದಾರೆ. ಹೋರಾಟ ನಿರತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮುಸ್ಲಿಂ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದಾರೆ.

ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ನೂರಾರು ಕುಟುಂಬಗಳಿಗೆ ವಿಷಮಯ ಪರಿಸ್ಥಿತಿ ಎಂದು ಒಕ್ಕೂಟ ಹೇಳಿದೆ. “ತೀರ್ಪು ಪ್ರಕಟವಾದಾಗಿನಿಂದ, ನಾವು ಪ್ರೀ ಯೂನಿವರ್ಸಿಟಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಏರ್ಪಡಿಸಿದ್ದೇವೆ. ಭವಿಷ್ಯದ ಬಗ್ಗೆ ಆತಂಕಿತರಾಗಿರುವ ಪೋಷಕರು ಕರೆಗಳನ್ನು ಮಾಡುತ್ತಲೇ ಇದ್ದಾರೆ” ಎನ್ನುತ್ತಾರೆ ಹಸನ್.

ವರದಿ ಕೃಪೆ: ದಿ ನ್ಯೂಸ್‌ ಮಿನಿಟ್‌ (ಪ್ರಜ್ವಲ್ ಭಟ್‌)


ಇದನ್ನೂ ಓದಿರಿ: ಹಿಜಾಬ್ ಕುರಿತ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಮೊದಲು ನಿಮ್ಮಗಳ ಮನಸ್ಥಿತಿ ಬದಲಾಯಿಸಿ ಕೊಳ್ಳದಿದ್ದರೆ ನಿಮ್ಮ ನ್ಯೂಸ್ ಜೊತೆಗೆ ನಿಮ್ಮನ್ನು ಹೊರಹಾಕುವ ಸಮಯ ಬರಲಿದೆ ಸಾರ್ವಜನಿಕವಾಗಿ

  2. ಇದೊಂದು ದೇಶದ್ರೋಹಿ ಚಾನೆಲ್ ಅಂತ ಕಾಣುತ್ತಿದೆ ಇದನ್ನು ಮೊದಲು ಬ್ಯಾನ್ ಮಾಡಬೇಕು

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...