Homeಮುಖಪುಟಹಿಜಾಬ್ ಕುರಿತ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ

ಹಿಜಾಬ್ ಕುರಿತ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ

ಹಿಜಾಬ್ ಧರಿಸುವ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯದಂತೆ ಈ ತೀರ್ಪು ತಡೆಯುತ್ತದೆ ಎಂದು ಹೇಳಿದೆ

- Advertisement -
- Advertisement -

ಹಿಜಾಬ್ ಕುರಿತಂತೆ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಬೇಕು ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸಿದ್ದು, ಇದು ಹಿಜಾಬ್ ಧರಿಸುವ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯದಂತೆ ತಡೆಯುತ್ತದೆ ಎಂದು ಹೇಳಿದೆ. ಈ ಬಗ್ಗೆ ಮಹಿಳಾ ಸಂಘಟನೆಗಳು ಬಹಿರಂಗ ಮನವಿ ಪತ್ರವನ್ನು ಬರೆದಿದ್ದು, ಇದಕ್ಕೆ ಸಹಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

“ರಾಜ್ಯ ಹೈಕೋರ್ಟ್‌ ತೀರ್ಪು ಕಾಲೇಜುಗಳ ಅಭಿವೃದ್ಧಿ ಸಮಿತಿಗಳು ಸಮವಸ್ತ್ರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಗುರುತಿಸುತ್ತದೆ. ಕರ್ನಾಟಕದಲ್ಲಿಯೇ, ಅನೇಕ ಕಾಲೇಜುಗಳು ಸಮವಸ್ತ್ರದ ಜೊತೆಗೆ ಹಿಜಾಬ್‌ಗಳನ್ನು ಧರಿಸಬಹುದೆಂದು ಹೇಳಿವೆ. ಅಂತೆಯೇ ಸಿಖ್ ಹುಡುಗರು ಮತ್ತು ಪುರುಷರು ಪೇಟವನ್ನು ಧರಿಸುವಂತೆ, ಹಿಂದೂಗಳು ಬಿಂದಿ, ತಿಲಕ, ದಾರ, ಸಿಂಧೂರ ಇತ್ಯಾದಿಗಳನ್ನು ಧರಿಸುವಂತೆಯೇ ಹುಡುಗಿಯರು ಮತ್ತು ಮಹಿಳೆಯರಿಗೆ ಸಮವಸ್ತ್ರದೊಂದಿಗೆ ಹಿಜಾಬ್‌ಗಳನ್ನು ಧರಿಸಲು ಅವಕಾಶ ನೀಡಬೇಕು” ಎಂದು ಮಹಿಳಾ ಸಂಘಟನೆಗಳು ರಾಜ್ಯದ ಎಲ್ಲಾ ಕಾಲೇಜುಗಳ ಅಭಿವೃದ್ಧಿ ಸಮಿತಿಗಳಿಗೆ ಮನವಿ ಮಾಡಿವೆ.

ಇದನ್ನೂ ಓದಿ: ಹಿಜಾಬ್ ತೀರ್ಪು ವಿರೋಧಿಸಿ ಪ್ರತಿಭಟನೆ ಆರಂಭಿಸಿದ ಚೆನ್ನೈನ ವಿದ್ಯಾರ್ಥಿಗಳು

ರಾಜ್ಯದ ಯಾವುದೆ ಕಾಲೇಜು ಈ ಹಿಂದೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ನಿಯಮವನ್ನು ಹೊಂದಿರಲಿಲ್ಲ ಎಂಬುದನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೆನಪಿಸಿರುವ ಮಹಿಳಾ ಸಂಘಟನೆಗಳು, “ವಾಸ್ತವವಾಗಿ ಒಂದು ಕಾಲೇಜಿನ ನಿಯಮ ಪುಸ್ತಕದಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದ ಬಣ್ಣಕ್ಕೆ ಅನುಗುಣವಾಗಿ ಹಿಜಾಬ್‌ಗಳನ್ನು ಧರಿಸಬಹುದು ಎಂದು ನಿರ್ದಿಷ್ಟಪಡಿಸಿತ್ತು. ಆದ್ದರಿಂದ ಹಿಜಾಬ್‌ ಧರಿಸುವ ಹುಡಿಗಿಯರು ಸಮವಸ್ತ್ರವನ್ನು ಧಿಕ್ಕರಿಸಲಿಲ್ಲ” ಎಂದು ಹೇಳಿವೆ.

“ಹಿಂದೂ ಬಲಪಂಥೀಯ ಗುಂಪುಗಳು ಹಿಜಾಬ್‌ಗಳನ್ನು ನಿಷೇಧಿಸಿ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿದೆ. ಶಾಲಾ ಕಾಲೇಜುಗಳನ್ನು ಬೆದರಿಸುವುದನ್ನು ಇಲ್ಲವಾಗಿಸಲು ಕರ್ನಾಟಕ ಹೈಕೋರ್ಟ್‌ಗೆ ಇದು ಒಂದು ಅವಕಾಶವಾಗಿತ್ತು. ಆದರೆ ಹಾಗೆ ಮಾಡಲು ಅದು ವಿಫಲವಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಅಪಾಯಕ್ಕೆ ಸಿಲುಕಿಸಿದೆ” ಎಂದು ಪತ್ರವು ಹೇಳಿದೆ.

ಕರ್ನಾಟಕ ಹೈಕೋರ್ಟಿನ ಆದೇಶಕ್ಕೆ ತಕ್ಷಣ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿರುವ ಮಹಿಳಾ ಸಂಘಟನೆಗಳು, “ಹೈಕೋರ್ಟ್‌ನ ಈ ಆದೇಶವು ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ, ಘನತೆ ಮತ್ತು ಶಿಕ್ಷಣದ ಹಕ್ಕಿನ ಮೇಲೆ ದೂರಗಾಮಿ ಋಣಾತ್ಮಕ ಪರಿಣಾಮ ಬೀರುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ಹಿಜಾಬ್‌ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪು ಒಂದು ಧರ್ಮವನ್ನು ಗುರಿಯಾಗಿಸಿದೆ: ಅಸಾದುದ್ದೀನ್ ಓವೈಸಿ ಆಕ್ರೋಶ

ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲದೆ ಮುಸ್ಲಿಂ ಮಹಿಳಾ ಶಿಕ್ಷಕರಿಗೆ ಶಾಲಾ/ಕಾಲೇಜು ಮೈದಾನಕ್ಕೆ ಪ್ರವೇಶಿಸುವುದನ್ನು ತಡೆದಿತ್ತು ಎಂದು ಹೇಳಿರುವ ಮಹಿಳಾ ಸಂಘಟನೆಗಳು, “ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಷರತ್ತಾಗಿ ಶಾಲಾ/ಕಾಲೇಜು ಗೇಟ್‌ಗಳಲ್ಲಿ ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ಕಿತ್ತೆಸೆಯಬೇಕೆಂದು ಒತ್ತಾಯಿಸುವ ಮೂಲಕ ಮುಸ್ಲಿಂ ಹುಡುಗಿಯರು ಮತ್ತು ಮಹಿಳೆಯರನ್ನು ಸಾರ್ವಜನಿಕವಾಗಿ ಅವಮಾನಿಸಲು ಈ ಆದೇಶವು ನೆಪವಾಯಿತು” ಎಂದು ಹೇಳಿವೆ.

“ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಆದೇಶದ ಪರಿಣಾಮವಾಗಿ ತರಗತಿಗಳು ಮತ್ತು ಪರೀಕ್ಷೆಗಳನ್ನು ಸಹ ಕಳೆದುಕೊಳ್ಳಬೇಕಾಯಿತು. ಕೆಲವು ಮುಸ್ಲಿಮ್ ಮಹಿಳೆಯರು ಹಿಜಾಬ್‌ ಕಿತ್ತೆಸೆಯಲು ಒತ್ತಾಯಿಸಿದ ಅವಮಾನವನ್ನು ಪ್ರತಿಭಟಿಸಿ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. ಅಲ್ಲದೆ, ಕರ್ನಾಟಕದ ಆದೇಶವು ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕ್ಯಾಂಪಸ್‌ಗಳಿಗೆ ಪ್ರವೇಶಿಸುವುದನ್ನು ನಿಷೇಧಿಸುವಂತೆ ದೇಶದಾದ್ಯಂತದ ಶಿಕ್ಷಣ ಅಧಿಕಾರಿಗಳಿಗೆ ಉತ್ತೇಜನ ನೀಡಿದೆ. ಇದಲ್ಲದೆ, ಹಿಜಾಬ್ ಧರಿಸಿದ ಮಹಿಳೆಯರಿಗೆ ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ಸಹ ಕಿರುಕುಳ ನೀಡಿದ ಉದಾಹರಣೆಗಳಿವೆ” ಎಂದು ಹೇಳಿರುವ ಮಹಿಳಾ ಸಂಘಟನೆಳು ಉದಾಹರಣೆಯಾಗಿ ಬಿಹಾರದ ಬ್ಯಾಂಕ್‌ನಲ್ಲಿ ನಡೆದ ಘಟನೆಯನ್ನು ನೀಡಿದೆ.

ಆದ್ದರಿಂದ ಹಿಜಾಬ್ ಧರಿಸಿರುವ ಮುಸ್ಲಿಂ ಹುಡುಗಿಯರು ಮತ್ತು ಮಹಿಳೆಯರನ್ನು ತಾರತಮ್ಯ, ಬಹಿಷ್ಕಾರ, ಸಾರ್ವಜನಿಕವಾಗಿ ಅವಮಾನ ಮತ್ತು ಕಿರುಕುಳದ ಯಾವುದೇ ಘೋರ ನಿದರ್ಶನಗಳಿಂದ ರಕ್ಷಿಸಲು, ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವಲ್ಲಿ ವಿಳಂಬ ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಮಹಿಳಾ ಸಂಘಟನೆಗಳು ಮನವಿ ಮಾಡಿವೆ.

ಇದನ್ನೂ ಓದಿ: ಹಿಜಾಬ್ ತೀರ್ಪು: ಸುಪ್ರೀಂಕೋರ್ಟ್ ಮೆಟ್ಟಿಲೇರಲಿರುವ ವಿದ್ಯಾರ್ಥಿನಿಯರು

ಇಷ್ಟೆ ಅಲ್ಲದೆ ಕರ್ನಾಟಕ ಹೈಕೋರ್ಟ್ ತೀರ್ಪಿನ ತರ್ಕವು ತಪ್ಪುದಾರಿಗೆಳೆಯುತ್ತದೆ ಎಂದು ಹೇಳಿರುವ ಮಹಿಳಾ ಸಂಘಟನೆಗಳು, ತೀರ್ಪಿನ ಅನೇಕ ಅಂಶಗಳು ತೃಪ್ತಿಕರವಾಗಿಲ್ಲ ಎಂದು ಅವುಗಳನ್ನು ಪಟ್ಟಿ ಮಾಡಿವೆ.

  • ತೀರ್ಪು ಹಿಜಾಬ್‌ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಲ್ಲ ಎಂದು ವಾದಿಸುತ್ತದೆ. ಆದರೆ ತೀರ್ಪು ಪ್ರಮುಖ ಸಮಸ್ಯೆಗಳನ್ನು ತೃಪ್ತಿಕರವಾಗಿ ಪರಿಹರಿಸಲು ವಿಫಲವಾಗಿದೆ. ಮುಸ್ಲಿಂ ಹುಡುಗಿ ಹಿಜಾಬ್ ಧರಿಸಿದ್ದಕ್ಕೆ ಶಿಕ್ಷಣವನ್ನು ಕಳೆದುಕೊಳ್ಳುವ ಆಯ್ಕೆ ನೀಡುವುದು ತಾರತಮ್ಯ ಮತ್ತು ಅಸಂವಿಧಾನಿಕವಲ್ಲವೇ
  • ತೀರ್ಪು ಡಾ. ಅಂಬೇಡ್ಕರ್ ಅವರ ಬರಹಗಳಿಂದ ‘ಪರ್ದಾದಂತಹ ಕಡ್ಡಾಯ ವ್ಯವಸ್ಥೆ’ ಹೇಗೆ ಮುಸ್ಲಿಂ ಮಹಿಳೆಯರ ಪ್ರತ್ಯೇಕತೆಗೆ ಕಾರಣವಾಗುತ್ತದೆ ಮತ್ತು ಹಿಜಾಬ್‌, ಮುಸುಕು ಇತ್ಯಾದಿಗಳನ್ನು ಧರಿಸುವುದು ವಿಮೋಚನೆ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಶಿಕ್ಷಣದ ಪ್ರವೇಶವನ್ನು ಪ್ರತಿಬಂಧಿಸುತ್ತದೆ ಎಂದು ವಾದಿಸಲು ಉಲ್ಲೇಖಿಸುತ್ತದೆ.
    ಇದು ಡಾ. ಅಂಬೇಡ್ಕರ್ ಅವರ ಅವಲೋಕನಗಳ ಆಘಾತಕಾರಿ ವಿರೂಪವಾಗಿದೆ. ಅಂಬೇಡ್ಕರ್ ಅವರು ಈ ಮಾತುಗಳನ್ನು ಯಾವುದೇ ಬಟ್ಟೆಯ ಬಗ್ಗೆ ಹೇಳಿಲ್ಲ. ಅಂಬೇಡ್ಕರ್ ಅವರು ಹೆಣ್ಣುಮಕ್ಕಳು ಮತ್ತು ಮಹಿಳೆಯರು ಸಾರ್ವಜನಿಕ ಹೊರಾಂಗಣದಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯುವ ಕಡ್ಡಾಯ ಪರ್ದಾ ವ್ಯವಸ್ಥೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸುತ್ತಾರೆ. ಅವರು ಈ ಹೇಳಿಕೆ, ಬಲವಂತವಾಗಿ ಪ್ರತ್ಯೇಕವಾಗಿ ಇರುವಂತಹ ವ್ಯವಸ್ಥೆ ಶಿಕ್ಷಣವನ್ನು ಪ್ರವೇಶಿಸದಂತೆ ಮತ್ತು “ಹೊರಾಂಗಣ ಚಟುವಟಿಕೆಯಿಂದ” ಮಹಿಳೆಯರನ್ನು ತಡೆಯುತ್ತದೆ ಎಂದು ತಿಳಿಸುತ್ತದೆ. ಹೈಕೋರ್ಟ್ ಆದೇಶ ಸೂಚಿಸುವಂತೆ, ಮುಸ್ಲಿಮ್ ಹುಡುಗಿ ಸ್ವಯಂಪ್ರೇರಣೆಯಿಂದ ಹಿಜಾಬ್‌ ಧರಿಸಿ ಶಿಕ್ಷಣ ಪಡೆಯಲು ಬಂದರೆ ಅದನ್ನು ತಡೆಯಬೇಕು ಎಂದು ಅಂಬೇಡ್ಕರ್‌ ಅವರು ಸೂಚಿಸಿಲ್ಲ. ಹೀಗಾಗಿ ಈ ತೀರ್ಪು ಪ್ರತ್ಯೇಕ ಮುಸ್ಲಿಂ ಶಾಲೆ-ಕಾಲೇಜಿನಲ್ಲಿ ಓದುವಂತೆ, ಇಲ್ಲವೆಂದರೆ ಮನೆಯೊಳಗೆ ಇರುವಂತೆ ಒತ್ತಾಯಿಸುತ್ತದೆ!
  •  ಈ ತೀರ್ಪು ಸಾಂವಿಧಾನದ ‘ಧಾರ್ಮಿಕ ಸ್ವಾತಂತ್ರ್ಯದ ಹಕ್ಕು’ ಎಲ್ಲಾ ಧಾರ್ಮಿಕ ಆಚರಣೆಗಳನ್ನು ರಕ್ಷಿಸುವುದಿಲ್ಲ ಎಂದು ಪ್ರತಿಪಾದಿಸಲು ಭಾರತೀಯ ಯುವ ವಕೀಲರ ಸಂಘ vs ಕೇರಳದ ತೀರ್ಪನ್ನು (ಶಬರಿಮಲೆ ತೀರ್ಪು) ಉಲ್ಲೇಖಿಸುತ್ತಾ ಹಿಜಾಬ್ ಧರಿಸುವ ಆಚರಣೆಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಆದರೆ ದೇವಸ್ಥಾನಗಳಿಗೆ ಮಹಿಳೆಯರ ಪ್ರವೇಶ ನಿಷೇಧದ ವಿರುದ್ಧದ ಶಬರಿಮಲೆ ತೀರ್ಪನ್ನು, ಹಿಜಾಬ್ ಧರಿಸಿರುವ ಹುಡುಗಿಯರು ಶಾಲಾ-ಕಾಲೇಜುಗಳ ಪ್ರವೇಶವನ್ನು ನಿಷೇಧಿಸುವುದಕ್ಕೆ ಸಮರ್ಥಿಸಲು ಹೇಗೆ ಬಳಸಿಕೊಳ್ಳಲು ಸಾಧ್ಯ?!
  • ತೀರ್ಪು ಸಮವಸ್ತ್ರವನ್ನು ‘‘ಏಕರೂಪತೆ” ಯೊಂದಿಗೆ ಸಮೀಕರಿಸುವ ತಪ್ಪನ್ನು ಮಾಡುತ್ತದೆ. ಭಾರತದಲ್ಲಿ, ಶಾಲಾ/ಕಾಲೇಜು ಸಮವಸ್ತ್ರಗಳು ಯಾವಾಗಲೂ ಸಾಮಾಜಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಹೊಂದಿವೆ. ಉದಾಹರಣೆಗೆ ಸಿಖ್ ಹುಡುಗರು ಮತ್ತು ಹುಡುಗಿಯರಿಗೆ ಪೇಟವನ್ನು ಧರಿಸಲು ಅವಕಾಶ ನೀಡುತ್ತದೆ. ಆದ್ದರಿಂದ ಪೇಟಗಳು ಮತ್ತು ಹಿಜಾಬ್‌ಗಳಿಗೆ ಅವಕಾಶ ಕಲ್ಪಿಸುವ ಅಂತಹ ವೈವಿಧ್ಯತೆಯು ಸಮವಸ್ತ್ರದೊಂದಿಗೆ ಭಿನ್ನವಾಗಿರುವುದಿಲ್ಲ. ಬಲವಂತದ ಏಕರೂಪತೆಯು ಎಂದಿಗೂ ಭಾರತೀಯ ಶಾಲೆಗಳು ಮತ್ತು ಕಾಲೇಜುಗಳ ಲಕ್ಷಣವಾಗಿರಲಿಲ್ಲ.
  • ನಾವು ಮೇಲೆ ಸೂಚಿಸಿದಂತೆ, ಬಲವಂತದ ಪ್ರತ್ಯೇಕತೆಯ ಬಗ್ಗೆ ಅಂಬೇಡ್ಕರ್ ಅವರ ಕಾಳಜಿಯನ್ನು ತೀರ್ಪು ತಪ್ಪಾಗಿ ಅನ್ವಯಿಸುತ್ತದೆ. ಹಿಜಾಬ್‌ನ ಆಚರಣೆಯು ಮಹಿಳೆಯರ ವಿರುದ್ಧ ಇದ್ದು, ಆದ್ದರಿಂದ ಅದನ್ನು ಶಾಲಾ-ಕಾಲೇಜುಗಳಲ್ಲಿ ಅನುಮತಿಸಬಾರದು ಎಂದು ಇದು ಸೂಚಿಸುತ್ತದೆ. ಮಹಿಳೆಯರ ಸ್ವಾಯತ್ತತೆ ಮತ್ತು ಒಪ್ಪಿಗೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಈ ತೀರ್ಪು ವಿಫಲವಾಗಿದೆ. ಅದು ಧಾರ್ಮಿಕ ಆಚರಣೆಗಳ ಬಲವಂತದ ಹೇರಿಕೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ವಿಫಲವಾಗಿದೆ. ಸ್ವತಂತ್ರ ಇಚ್ಛೆಯ ಆಧಾರದ ಮೇಲೆ ಕೆಲವು ಆಚರಣೆಗಳನ್ನು ಆಚರಿಸುವುದು ಮಹಿಳೆಯರ ಆಯ್ಕೆ. ಶಬರಿಮಲೆಯ ಸಾದೃಶ್ಯವು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಮಹಿಳೆಯರ ಪ್ರವೇಶ ನಿಷೇಧವು ತಮ್ಮ ಹಕ್ಕುಗಳು ಮತ್ತು ಸಮಾನತೆಯನ್ನು ಉಲ್ಲಂಘಿಸಿರುವುದರಿಂದ ಶಬರಿಮಲೆಗೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದೇವಾಲಯದ ಅಧಿಕಾರಿಗಳ ‘ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ’ ಹೆಸರಿನಲ್ಲಿ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ತಳ್ಳಿಹಾಕಿದ ನ್ಯಾಯಾಲಯ, ಶಬರಿಮಲೆಗೆ ಪ್ರವೇಶಿಸಬಾರದು ಎಂದು ನಂಬಿದ ಮಹಿಳೆಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಪ್ರವೇಶಿಸಲು ಯಾವುದೇ ರೀತಿಯಲ್ಲಿ ಒತ್ತಾಯಿಸಲಿಲ್ಲ. ಅಂತೆಯೇ, ಹಿಜಾಬ್ ಧರಿಸಿದ ಹುಡುಗಿಯರು “ವಿಮೋಚನೆ” ಹೆಸರಿನಲ್ಲಿ ಶಾಲಾ-ಕಾಲೇಜುಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸುವುದು ಅಸಹ್ಯಕರವಾಗಿದೆ.

ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸ್ವಾಯತ್ತತೆಯನ್ನು ಗೌರವಿಸುವುದರಲ್ಲಿ ವಿಮೋಚನೆ ಅಡಗಿದೆಯೇ ಹೊರತು ಧರ್ಮ ಅಥವಾ ಜಾತ್ಯತೀತತೆಯ ಹೆಸರಿನಲ್ಲಿ ಅವರ ಮೇಲೆ ಆಚರಣೆಗಳನ್ನು ಹೇರುವುದರಲ್ಲಿ ಅಲ್ಲ ಎಂದು ತಿಳಿಸಿರುವ ಮಹಿಳಾ ಸಂಘಟನೆಗಳು, “ಶಿಕ್ಷಣ, ಘನತೆ ಮತ್ತು ಸ್ವಾಯತ್ತತೆಯ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿಗಳೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ಪುನರುಚ್ಚರಿಸುತ್ತೇವೆ” ಎಂದು ಹೇಳಿವೆ.

ಪತ್ರಕ್ಕೆ ಹಲವಾರು ಮಹಿಳಾ ಸಂಘಟನೆಗಳು ಮತ್ತು ಅದರ ಪದಾದಿಕಾರಿಗಳು ಸಹಿಹಾಕಿದ್ದಾರೆ.

ಇದನ್ನೂ ಓದಿ: ಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ – ರಾಜೇಂದ್ರ ಚೆನ್ನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...