ಮಣಿಪುರದ ಕುಕಿ ಪ್ರಾಬಲ್ಯದ ಚುರಾಚಂದ್ಪುರ ಮತ್ತು ಮೈತಿ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಎರಡು ಗುಂಪುಗಳ ನಡುವಿನ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿದ್ದಾರೆ.
ಬಿಜೆಪಿ ಆಡಳಿತವಿರುವ ಮಣಿಪುರದಲ್ಲಿ ಮೇ 3ರಿಂದ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೇ ಇವೆ. ಇಲ್ಲಿಯವರೆಗೆ ಮಣಿಪುರ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ 192ಕ್ಕೆ ಏರಿದೆ.
ಮಂಗಳವಾರ, ಬಿಷ್ಣುಪುರ್ ಜಿಲ್ಲೆಯ ನರಸೇನಾ ಪಕ್ಕದ ಹಳ್ಳಿಗಳಲ್ಲಿ ಗುಂಡಿನ ದಾಳಿ ನಡೆದಿದೆ. ಪರಿಹಾರ ಶಿಬಿರದಲ್ಲಿ ತಂಗಿದ್ದ ಕುಕಿ ಗ್ರಾಮ ರಕ್ಷಣಾ ಸ್ವಯಂಸೇವಕನು ಈ ಬಾಂಬ್ ಸ್ಫೋಟದ ನಂತರ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು 30 ವರ್ಷದ ಜಂಗ್ಮಿನ್ಲುನ್ ಗಂಗ್ಟೆ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ತಿಳಿಸಿದೆ.
ಮತ್ತೋರ್ವ ವ್ಯಕ್ತಿಯನ್ನು ಲೈಬುಜಮ್ ಇನಾವೋ ಎಂದು ಗುರುತಿಸಲಾಗಿದೆ. ಅವರಿಗೆ ಬುಲೆಟ್ ತಾಗಿದ್ದರಿಂದ ಗಾಯಗೊಂಡು ಇಂಫಾಲ್ ಆಸ್ಪತ್ರೆ ಗೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
”ದಾಳಿಯ ವೇಳೆ ಮತ್ತೊಬ್ಬ ವ್ಯಕ್ತಿ ಮೇಲೆ ಗುಂಡು ಹಾರಿಸಲಾಗಿದ್ದು, ಆತನನ್ನು ಇಂಫಾಲ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಗೋಲಿಬಾರ್ ಮತ್ತು ಪ್ರತಿಭಟನಾಕಾರರ ಸಭೆಯ ನಂತರ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು” ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಣಿಪುರ ಪೊಲೀಸರು ಬಿಷ್ಣುಪುರ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಗನ್, 20 ಕಾಟ್ರಿಡ್ಜ್ಗಳು ಮತ್ತು ಏಳು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಲೂಟಿ ಮಾಡಿದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ತಕ್ಷಣವೇ ಪೊಲೀಸರಿಗೆ ಅಥವಾ ಹತ್ತಿರದ ಭದ್ರತಾ ಪಡೆಗಳಿಗೆ ಹಿಂದಿರುಗಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಹಿಂಸಾಚಾರ ಪ್ರಾರಂಭವಾದಾಗಿನಿಂದ, ರಾಜ್ಯದಲ್ಲಿ ಕನಿಷ್ಠ 60,000 ಜನರು ಸ್ಥಳಾಂತರಗೊಂಡಿದ್ದಾರೆ. ಮಹಿಳೆಯರ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ ಮತ್ತು ಕೇಂದ್ರ ಭದ್ರತಾ ಪಡೆಗಳಿದ್ದರೂ ಜನಸಮೂಹವು ಪೊಲೀಸ್ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದೆ ಮತ್ತು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದೆ.