ಕೇಂದ್ರ ಬಿಜೆಪಿ ಸರ್ಕಾರದ ವಿಪಕ್ಷಗಳ ಸಭೆಗೆ ಬಂದ ವಿವಿಧ ರಾಜಕೀಯ ವ್ಯಕ್ತಿಗಳ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದನ್ನು ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಸೂದೆಗಳ ಪ್ರತಿಗಳನ್ನು ಹರಿದು ಪೀಠದಲ್ಲಿದ್ದ ಉಪಸಭಾಧ್ಯಕ್ಷರ ಮೇಲೆಸೆದು ಕೋಲಾಹಲ ಸೃಷ್ಟಿಸಿದ್ದಾರೆ. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಘರ್ಷಣೆಯ ವಾತಾವರಣ ಸೃಷ್ಟಿಯಾಯಿತು.
ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿರುವ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಆದರೆ ಬಿಜೆಪಿ ಸದಸ್ಯರು ಜೋರಾಗಿ ಘೋಷಣೆ ಕೂಗಲಾರಂಭಿಸಿದರು. ಈ ಗದ್ದಲದ ಮಧ್ಯದಲ್ಲೇ ಐದು ಮಸೂದೆಗಳನ್ನು ಅಂಗೀಕರಿಸಲಾಯಿತು. ಶಂಕಿತ ಉಗ್ರರನ್ನು ಬಂಧಿಸಿರುವ ಕುರಿತು ಗ್ರಹ ಸಚಿವ ಜಿ ಪರಮೇಶ್ವರ ಹೇಳಿಕೆಯನ್ನೂ ನೀಡಿದರು.
ಆ ನಂತರ ಪೀಠದಿಂದ ಸಭಾಧ್ಯಕ್ಷ ಯು.ಟಿ ಖಾದರ್, ಕಲಾಪ ನಡೆಸುವಂತೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸೂಚಿಸಿ ಹೊರನಡೆದರು.
ಉಪ ಸಭಾಧ್ಯಕ್ಷರು ಪೀಠದಲ್ಲಿದ್ದಾಗ ಕಾಂಗ್ರೆಸ್ನ ಪಿ.ಎಂ ನರೇಂದ್ರಸ್ವಾಮಿ ಬಜೆಟ್ ಮೇಲೆ ಚರ್ಚೆ ಆರಂಭಿಸಿದರು. ಕಾಂಗ್ರೆಸ್ ಇಚ್ಛೆಯಂತೆ ಕಲಾಪ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಮಸೂದೆಗಳ ಪ್ರತಿಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದರು. ಪೀಠದಲ್ಲಿದ್ದ ಉಪ ಸಭಾಧ್ಯಕ್ಷರ ಮುಖ, ಮೈ ಮೇಲೂ ಆ ಹರಿದ ಹಾಳೆಗಳು ಬಿದ್ದವು. ಬಿಜೆಪಿ ಸದಸ್ಯರ ವರ್ತನೆಯನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.
ಈ ಸಂದರ್ಭದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಧರಣಿನಿರತ ಬಿಜೆಪಿ ಸದಸ್ಯರನ್ನು ಸದನದಿಂದ ಹೊರ ಹಾಕುವಂತೆ ಉಪ ಸಭಾಧ್ಯಕ್ಷರು ಮಾರ್ಷಲ್ ಗಳಿಗೆ ಸೂಚಿಸಿದರು. ಗದ್ದಲ ಇನ್ನೂ ಜೋರಾಯಿತು. ಬಿಜೆಪಿ ಸದಸ್ಯರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು.
ಮಾರ್ಷಲ್ಗಳ ವಿರುದ್ಧ ಸಚಿವರು ಸೇರಿದಂತೆ ಕಾಂಗ್ರೆಸ್ ಸದಸ್ಯರು ಹರಿಹಾಯ್ದರು. ಉಪ ಸಭಾಧ್ಯಸ್ಥರಿಗೆ ಸರಿಯಾಗಿ ರಕ್ಷಣೆ ಒದಗಿಸದ ಆರೋಪದ ಮೇಲೆ ಮಾರ್ಷಲ್ಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.
ಇದನ್ನೂ ಓದಿ: ವಿಪಕ್ಷಗಳ ಸಭೆಗೆ ಒವೈಸಿಗೆ ಸಿಗದ ಆಹ್ವಾನ: ‘ನಾವು ರಾಜಕೀಯ ಅಸ್ಪೃಶ್ಯರಂತ ಕಂಡಿರಬಹುದು’ ಎಂದ ಪಠಾಣ್