ಉತ್ತರ ಪ್ರದೇಶದಲ್ಲಿ ರಾಜೀನಾಮೆ ಪರ್ವ ಮುಂದುವರೆದಿರುವ ಬೆನ್ನಲ್ಲೇ ಮುಂಬರುವ ವಿಧಾನಸಭಾ ಚುನಾವಣೆಯ ಸೀಟುಗಳಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಬಿಜೆಪಿಯ ಮಿತ್ರಪಕ್ಷಗಳು ಪ್ರಯತ್ನಿಸುತ್ತಿವೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮಿತ್ರಪಕ್ಷಗಳಾದ ಅನುಪ್ರಿಯಾ ಪಟೇಲ್ ನೇತೃತ್ವದ ಅಪ್ನಾ ದಳ (ಎಸ್) ಮತ್ತು ಸಂಜಯ್ ನಿಶಾದ್ ನೇತೃತ್ವದ ನಿಶಾದ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟು ನೀಡಬೇಕು ಎಂದು ಪ್ರಸ್ತಾವನೆ ನೀಡಿವೆ.
ಪ್ರಧಾನಿ ಮೋದಿ ಸಂಪುಟದ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಬಿಜೆಪಿ ನಾಯಕ ಸಂಜಯ್ ನಿಶಾದ್ ತಮ್ಮ ಪುತ್ರ ಸಂತ ಕಬೀರ್ ನಗರದ ಬಿಜೆಪಿ ಸಂಸದ ಪ್ರವೀಣ್ ನಿಶಾದ್ ಅವರೊಂದಿಗೆ ಬುಧವಾರ ಸಂಜೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ಯುಪಿ ಬಿಜೆಪಿಗೆ ಮತ್ತೊಂದು ಆಘಾತ: ಮತ್ತೊಬ್ಬ ಒಬಿಸಿ ನಾಯಕ ಮುಖೇಶ್ ವರ್ಮಾ ರಾಜೀನಾಮೆ
ಸಚಿವೆ ಅನುಪ್ರಿಯಾ ಪಟೇಲ್ ಈ ಬಾರಿ ಮತ್ತೆ ಹನ್ನೆರಡು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅವುಗಳಲ್ಲಿ ತಮ್ಮ ಪಕ್ಷದ ಪ್ರಭಾವವಿರುವ ಪೂರ್ವ ಯುಪಿಯಿಂದ ಅರ್ಧದಷ್ಟು ಮತ್ತು ಬುಂದೇಲ್ಖಂಡ್ ಪ್ರದೇಶಗಳಿಗೆ ನೀಡಬೇಕು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಗಮನಿಸಬೇಕಾದದ್ದು, 2017 ರ ವಿಧಾನಸಭಾ ಚುನಾವಣೆಯಲ್ಲಿ ಬುಂದೇಲ್ಖಂಡ್ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಜೊತೆಗೆ 2019ರ ಲೋಕಸಭೆ ಚುನಾವಣೆಯಲ್ಲೂ ಪಕ್ಷವು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿತ್ತು.
“ಈಗ ಅಪ್ನಾ ದಳ (ಎಸ್) ಬೇಡಿಕೆಗೆ ಬಿಜೆಪಿ ಒಪ್ಪಿಗೆ ನೀಡಿದರೇ, ಈ ಬುಂದೇಲ್ಖಂಡ್ ಪ್ರದೇಶದಲ್ಲಿ ಇರುವ ತಮ್ಮದೆ ಹಾಲಿ ಶಾಸಕರಿಗೆ ಹೇಗೆ ಅವಕಾಶ ಕಲ್ಪಿಸುತ್ತದೆ” ಎಂದು ಹಿರಿಯ ರಾಜಕೀಯ ವಿಮರ್ಶಕ ಜೆಪಿ ಶುಕ್ಲಾ ಪ್ರಶ್ನಿಸುತ್ತಾರೆ.
ಇತ್ತ, ನಿಶಾದ್ ಪಕ್ಷ, ರಾಮ್ ದಾಸ್ ಅಠಾವಾಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ಜನತಾ ದಳ (ಯು) ಸೇರಿದಂತೆ ಇತರ NDA ಮಿತ್ರ ಪಕ್ಷಗಳು ಸಹ ಬಿಜೆಪಿ ಮೇಲೆ ಸೀಟು ಹಂಚಿಕೆ ವಿಚಾರವಾಗಿ ಒತ್ತಡವನ್ನು ಹೆಚ್ಚಿಸುತ್ತಿವೆ.
ಇದನ್ನೂ ಓದಿ: ಗೋವಾ BJPಗೆ ಭಾರಿ ಮುಖಭಂಗ: ಒಂದೇ ದಿನದಲ್ಲಿ ಇಬ್ಬರು ಶಾಸಕರು ರಾಜೀನಾಮೆ!
2017 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಅಪ್ನಾ ದಳ (ಎಸ್) ಗೆ 11 ಸ್ಥಾನಗಳನ್ನು ನೀಡಿತ್ತು. ಇವುಗಳ ಹೊರತಾಗಿ, ಅವಧ್ ಪ್ರದೇಶದಾದ್ಯಂತ ಅಪ್ನಾ ದಳವು ಸುಮಾರು ಹನ್ನೆರಡು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. “ಪ್ರತಿಯೊಂದು ಪಕ್ಷವೂ ತನ್ನ ರೆಕ್ಕೆಗಳನ್ನು ಚಾಚಲು ಬಯಸುತ್ತದೆ. ನಮ್ಮ ಬೇಡಿಕೆಯನ್ನು ಬಿಜೆಪಿ ಮುಂದೆ ಇಟ್ಟಿದ್ದೇವೆ. ಈಗ ಚೆಂಡು ಅವರ ಅಂಗಳದಲ್ಲಿದೆ” ಎಂದು ಅನುಪ್ರಿಯಾ ಅವರ ಪತಿ ಮತ್ತು ಅಪ್ನಾ ದಳ (ಎಸ್) ಕಾರ್ಯಾಧ್ಯಕ್ಷ ಆಶಿಶ್ ಪಟೇಲ್ ಹೇಳಿದ್ದಾರೆ.
ಇನ್ನು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಎರಡಂಕಿಯ ಸೀಟುಗಳನ್ನು ಕೇಳಿದ್ದಾರೆ. “ನಾವು ನಮ್ಮ ಬೇಡಿಕೆಯನ್ನು ಬಿಜೆಪಿಗೆ ರವಾನಿಸಿದ್ದೇವೆ. ನಾವು ಎರಡಂಕಿಯಲ್ಲಿ ಸೀಟುಗಳನ್ನು ಪಡೆಯುತ್ತೇವೆ ಎಂದು ನಂಬಿದ್ದೇವೆ. ಸೀಟು ಹಂಚಿಕೆಯು ಒಂದೆರೆಡು ದಿನದಲ್ಲಿ ಅಂತಿಮಗೊಳ್ಳಲಿದೆ ಎಂದು ನನಗೆ ವಿಶ್ವಾಸವಿದೆ” ಎಂದಿದ್ದಾರೆ.
ಅಠಾವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕನಿಷ್ಠ 10 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜನತಾ ದಳ (ಯು) 3 ರಿಂದ 4 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ.