ಉತ್ತರ ಪ್ರದೇಶದ ಫಿರೋಜಬಾದ್ ಜಿಲ್ಲೆಯಲ್ಲಿ ದಯಾಶಂಕರ್ ಗುಪ್ತ ಎಂಬ ಬಿಜೆಪಿ ಮುಖಂಡನನ್ನು ಬೈಕಿನಲ್ಲಿ ಬಂದ ಮೂರು ಜನರ ಗುಂಪು ನಿನ್ನೆ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಅವರ ಕುಟುಂಬ ಶಂಕಿತರೆಂದು ಆರೋಪಿಸಿದ ನಂತರ ಪಕ್ಷದ ಸಹೋದ್ಯೋಗಿ ವೀರೇಶ್ ತೋಮರ್ ಮತ್ತು ಅವನ ಚಿಕ್ಕಪ್ಪಂದಿರಾದ ನರೇಂದ್ರ ತೋಮರ್ ಮತ್ತು ದೇವೇಂದ್ರ ತೋಮರ್ರವರನ್ನು ಪೊಲೀಸರು ಬಂಧಿಸಿದ್ದಾರೆ.
ದಯಾಶಂಕರ್ ಗುಪ್ತ ಮಂಡಲ್ನ ಉಪಾಧ್ಯಕ್ಷನಾಗಿದ್ದು, ನಿನ್ನೆ ರಾತ್ರಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುವ ವೇಳೆ ಸ್ಥಳೀಯ ಮಾರುಕಟ್ಟೆಯ ಬಳಿ ಅವರ ಮೇಲೆ ಹಲ್ಲೆ ನಡೆದಿದೆ. ಆ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ.
ಈ ಕೊಲೆಯ ಪ್ರಮುಖ ಆರೋಪಿಯೆಂದು ಶಂಕಿಸಿರುವ ವೀರೇಶ್ ತೋಮರ್ ಇತ್ತೀಚೆಗೆ ತಾನೆ ಬಿಜೆಪಿ ಸೇರಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. “ಆತ ದಯಾಶಂಕರ್ ವಿರುದ್ಧ ಫೇಸ್ಬುಕ್ನಲ್ಲಿ ಕಿಡಿಕಾರುತ್ತಿದ್ದ. ಆತನ ಚಿಕ್ಕಪ್ಪ ನರೇಂದ್ರ ತೋಮರ್, ಫಿರೋಜಬಾದ್ನ ರತ್ನಗಿರಿಯ ಗ್ರಾಮಪ್ರಧಾನ್ ಹುದ್ದೆಗೆ ದಯಾಶಂಕರ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ. ಈ ಕುರಿತು ಅವರಿಬ್ಬರ ನಡುವೆ ಜಗಳವಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಅಧಿಕಾರಿಗಳ ಎದುರೇ ಗುಂಡು ಹಾರಿಸಿ ಹತ್ಯೆಗೈದ ಬಿಜೆಪಿ ಶಾಸಕನ ಆಪ್ತ!
ನಿನ್ನೆ ರಾತ್ರಿ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ದಯಾಶಂಕರ್ ಕುಟುಂಬ ಮತ್ತು ಗೆಳೆಯರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗ್ರಾ ರಸ್ತೆ ಬಂದ್ ಮಾಡಲು ಮುಂದಾಗಿದ್ದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಕೆಲ ಅಪರಿಚಿತ ವ್ಯಕ್ತಿಗಳು ದಯಾಶಂಕರ್ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ನಾವು ತನಿಖೆ ನಡೆಸುತ್ತೇವೆ. 24 ಗಂಟೆಗಳಲ್ಲಿ ಈ ಕುರಿತು ಸ್ಪಷ್ಟ ಮಾಹಿತಿ ದೊರಕಲಿದೆ. ಆತನ ಕುಟುಂಬದವರ ಹೆಸರಿಸಿದ ಶಂಕಿತರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.
ಇದನ್ನೂ ಓದಿ; ಉತ್ತರಪ್ರದೇಶ: 16 ವರ್ಷದ ದಲಿತ ಯುವತಿಯ ಮೇಲೆ ಅಪ್ರಾಪ್ತ ಸೇರಿ ಇಬ್ಬರಿಂದ ಅತ್ಯಾಚಾರ!