ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಬೆಂಬಲಿಗರು, ವಸತಿ ಸಚಿವ ವಿ ಸೋಮಣ್ಣ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಜೋರಾಗಿ ಜೈಕಾರದ ಘೋಷಣೆಗಳನ್ನು ಕೂಗಿ ಸಚಿವರನ್ನು ಮುಜುಗರಕ್ಕೊಳಪಡಿಸಿದ ಘಟನೆ ಮಂಗಳವಾರ ಮೈಸೂರಿನಲ್ಲಿ ನಡೆದಿದೆ.
ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈವಿ ರವಿಶಂಕರ್ ಪರವಾಗಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯನ್ನು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಚಿವ ಸೋಮಣ್ಣ ಅವರ ಜೊತೆಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ಬಿವೈ ವಿಜಯೇಂದ್ರ ಅವರೂ ಉಪಸ್ಥಿತರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಸಭೆಯಲ್ಲಿ ಸೋಮಣ್ಣ ಅವರು ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿಯವರನ್ನು ಹೊಗಳಿ ಭಾಷಣ ಮಾಡುತ್ತಿದ್ದರು. ಈ ವೇಳೆ ವಿಜಯೇಂದ್ರ ಅಭಿಮಾನಿಗಳು ‘ವಿಜಯೇಂದ್ರ ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ವಿಜಯೇಂದ್ರ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಸೋಮಣ್ಣ ಅವರು, ವಿಜಯೇಂದ್ರರಿಗೆ ಎಂಎಲ್ಸಿ ಚುನಾವಣೆಗೆ ಟಿಕೆಟ್ ಸಿಗುವ ಅವಕಾಶ ಕೈ ತಪ್ಪಿದ್ದರೂ ಖಂಡಿತಾ ಅವರಿಗೆ ಉತ್ತಮ ಸ್ಥಾನ ನೀಡಲಾಗುವುದು ಎಂದು ಜನರನ್ನು ಸಮಾಧಾನ ಪಡಿಸಿದ್ದಾರೆ.
ಆದರೆ ಅಲ್ಲಿ ನೆರೆದಿದ್ದ ಹಲವರು ಸೋಮಣ್ಣ ಅವರೇ ವಿಜಯೇಂದ್ರ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಕುಪಿತಗೊಂಡ ಸೋಮಣ್ಣ, ‘‘ವಿಜಯೇಂದ್ರ ಅವರನ್ನು ಬಲಿಪಶು ಮಾಡಬೇಡಿ. ಗೆಲುವಿನ ಹೋರಾಟದಲ್ಲಿ ಒಗ್ಗಟ್ಟಾಗಬೇಕಾದ ಸಮಯವಿದು. ಯಾರನ್ನೂ ಶ್ರೇಷ್ಠರು ಅಥವಾ ಕೀಳಾಗಿ ಕಾಣಬಾರದು, ಪ್ರತಿಯೊಬ್ಬರಿಗೂ ಅವರದ್ದೇ ಆದ ಕೊಡುಗೆ ಇರುತ್ತದೆ” ಎಂದು ಹೇಳಿದ್ದಾರೆ.
“ನಾನು ಕೂಡ ಐದಾರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಗೌರವ ಕೊಡುವುದನ್ನು ಕಲಿಯಿರಿ. 40 ವರ್ಷ ರಾಜಕೀಯ ಮಾಡಿದ್ದೇನೆ. ಎಲ್ಲ ಆಟಗಳನ್ನು ನೋಡಿದ್ದೇನೆ. ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ. ಕೆಂಪೇಗೌಡರ ಊರಲ್ಲಿ ಐದು ಬಾರಿ ಶಾಸಕನಾಗಿದ್ದೇನೆ. ಸ್ವತಂತ್ರವಾಗಿಯೂ ಗೆದ್ದಿದ್ದೇನೆ” ಎಂದು ಸೋಮಣ್ಣ ಅವರು ಹೇಳಿದ್ದಾರೆ.
ಈ ವೇಳೆ ಪಟ್ಟುಬಿಡದ ಬೆಂಬಲಿಗರು ಮಾತಿನ ಚಕಮಕಿ ಮುಂದುವರೆಸಿದ್ದರಿಂದ ಮಧ್ಯ ಪ್ರವೇಶಿಸಿದ ವಿಜಯೇಂದ್ರ ಅವರು, ಸಮಾಧಾನದಿಂದ ವರ್ತಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್-ಇದು ತಮಿಳುನಾಡೂ ಅಲ್ಲ, ಧ್ವಜ ಬಿಜೆಪಿಯದ್ದೂ ಅಲ್ಲ; ಎಡಿಟ್ ಚಿತ್ರ ಹಂಚಿದ ಸಿಟಿ ರವಿ
“ಬಿಜೆಪಿಯಲ್ಲಿ ನನಗೆ ಯಾವುದೇ ಸ್ಥಾನಮಾನಗಳನ್ನೂ ನೀಡದೆ ಕಡೆಗಣಿಸಲಾಗಿದೆ ಎನ್ನುವುದು ತಪ್ಪು ಕಲ್ಪನೆ. ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಗೆಲ್ಲಲು ಹೋರಾಟ ನಡೆಸುವುದು ನನ್ನ ಗುರಿಯಾಗಿದೆ” ಎಂದು ಬಿವೈ ವಿಜಯೇಂದ್ರ ಅಲ್ಲಿ ತಿಳಿಸಿದ್ದಾರೆ.
ಲಿಂಗಾಯತ ಮತ್ತು ವೀರಶೈವ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ವಿಜಯೇಂದ್ರ ಮತ್ತು ಸೋಮಣ್ಣ ವೇದಿಕೆ ಹಂಚಿಕೊಂಡಿದ್ದರು. ಆದರೆ ಅವರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ವದಂತಿಗಳು ಹರಡುತ್ತಿವೆ.