Homeಕರ್ನಾಟಕ'ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ' - ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ಖಂಡಿತವಾಗಿಯೂ ರೈತರ ಹೋರಾಟದ ಬೆಂಬಲಿಗ ನಾನು. ಆದರೆ, ಮಾಧ್ಯಮಗಳು ಈ ರೈತ ಹೋರಾಟವನ್ನು ತಪ್ಪಾಗಿ ಬಿಂಬಿಸಿವೆ. ನಾವೇನಾದರೂ ಈಗ ರೈತ ಹೋರಾಟದ ಪರ, ಕೃಷಿ ಕಾನೂನುಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮ್ಮ ಮೀಸಲಾತಿ ಹೋರಾಟವನ್ನು ಮಾಧ್ಯಮಗಳು ತುಳಿದೇ ಬಿಡುತ್ತವೆ- ಪಂಚಮಸಾಲಿ ಸ್ವಾಮೀಜಿ

- Advertisement -
- Advertisement -

ರಾಜಧಾನಿಗೆ ಪಾದಯಾತ್ರೆ, ರಾಜಧಾನಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ಲಿಂಗಾಯತರ ಒಳಪಂಗಡವಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಡ ಹಾಕಲಾಗಿದೆ.

ಇದರ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಿಂದೆಲ್ಲ ಪ್ರಗತಿಪರ ಚಳುವಳಿಗಳಲ್ಲಿ ಕಾಣಿಸಿಕೊಂಡವರು. ಆದರೆ, ಈಗ ಅವರ ನೇತೃತ್ವದ ಹೋರಾಟ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕುರಿತು ಫೋನಿನಲ್ಲಿ ಸ್ವಾಮೀಜಿ ನಾನುಗೌರಿ.ಕಾಂ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಾನುಗೌರಿ: ರಾಜ್ಯದಲ್ಲಿ ಲಿಂಗಾಯತರು ಬಹುಸಂಖ್ಯಾತರು. ಅದರಲ್ಲಿ ಬಹು ಸಂಖ್ಯಾತರಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡುವುದು ತಪ್ಪಲ್ಲವೆ?

ಸ್ವಾಮೀಜಿ: ಆರ್ಥಿಕವಾಗಿ ಪಂಚಮಸಾಲಿಗಳು ತುಂಬ ತೊಂದರೆಯಲ್ಲಿದ್ದಾರೆ. ಕೃಷಿಯನ್ನೇ ಆಧಾರ ಮಾಡಿಕೊಂಡಿರುವ ಸಮುದಾಯ ಸಂಕಷ್ಟದಲ್ಲಿದೆ. ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಹೀಗಿರುವಾಗ ಹೆಚ್ಚಿನ ಮೀಸಲಾತಿ ಕೇಳಲು ಸಂವಿಧಾನವೇ ಅವಕಾಶ ನೀಡಿದೆ.

ಇದನ್ನೂ ಓದಿ: ಲಿಂಗಾಯತ ಮತಗಳಿಗಾಗಿ ಗುದಮುರಗಿ: ಪಂಚಮಸಾಲಿಗಳು ಪಾರ್ಟಿ ಬದಲಿಸಿದರೆ….?

ನಾನುಗೌರಿ: ನಿಮ್ಮ ಉತ್ತರದಲ್ಲೇ ಹಲವು ಪ್ರಶ್ನೆ ಇವೆ. ಕೃಷಿಕರು-ಕೃಷಿ ಕಾರ್ಮಿಕರೇ ಹೆಚ್ಚಿರುವ ಪಂಚಮಸಾಲಿಗಳ ಹೋರಾಟ ಮುನ್ನಡೆಸುವಾಗ ನೀವು ಸಾಂಕೇತಿಕವಾಗಿ ನೇಗಿಲು ಹಿಡಿದಿದ್ದಿರಿ. ಆದರೆ, ಒಮ್ಮೆಯೂ, ಎಲ್ಲಿಯೂ ನೀವು ಕರಾಳ ಕೃಷಿ ಕಾನೂನುಗಳ ವಿರುದ್ಧ ಮತ್ತು ಪ್ರತಿಭಟಿಸುತ್ತಿರುವ ರೈತರ ಪರ ಒಂದೂ ಹೇಳಿಕೆ ನೀಡಿಲ್ಲವಲ್ಲ?

ಸ್ವಾಮೀಜಿ: ಖಂಡಿತವಾಗಿಯೂ ರೈತರ ಹೋರಾಟದ ಬೆಂಬಲಿಗ ನಾನು. ಆದರೆ, ಮಾಧ್ಯಮಗಳು ಈ ರೈತ ಹೋರಾಟವನ್ನು ತಪ್ಪಾಗಿ ಬಿಂಬಿಸಿವೆ. ನಾವೇನಾದರೂ ಈಗ ರೈತ ಹೋರಾಟದ ಪರ, ಕೃಷಿ ಕಾನೂನುಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮ್ಮ ಮೀಸಲಾತಿ ಹೋರಾಟವನ್ನು ಮಾಧ್ಯಮಗಳು ತುಳಿದೇ ಬಿಡುತ್ತವೆ.

ನಾನುಗೌರಿ: ಬಹುಪಾಲು ಪಂಚಮಸಾಲಿಗಳು ಬಿಜೆಪಿಯ ಬೆಂಬಲಿಗರಾಗಿರುವ ಕಾರಣಕ್ಕೆ ನೀವು ಸಾಫ್ಟ್ ಸ್ಟ್ಯಾಂಡ್ ತಗೊಂಡಿದ್ದೀರಾ ಎಂಬ ಆರೋಪವಿದೆಯಲ್ಲ?

ಸ್ವಾಮೀಜಿ: ಹಾಗೇನೂ ಇಲ್ಲ. ನಮ್ಮ ಬೇಡಿಕೆ ಈಡೇರಬೇಕು ಅಷ್ಟೇ. ಸಮುದಾಯದ ಪಾಲಿಟಿಕಲ್ ಒರಿಯೆಂಟೆಶನ್ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಅನಿಸುತ್ತದೆ.

ನಾನುಗೌರಿ: ಪ್ರತಿಭಟನೆ ಎಂದರೆ, ಅದು ಪ್ರಭುತ್ವದ ವಿರುದ್ಧವೇ ಇರುತ್ತದೆ. ನಿಮ್ಮ ಪ್ರತಿಭಟನೆ-ಹೋರಾಟ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರದ ವಿರುದ್ಧವಾಗಿರುವಾಗ, ನಿಮ್ಮ ಸಭೆ-ಸಮಾವೇಶಗಳಲ್ಲಿ ಸಚಿವರಾದ ನಿರಾಣಿ-ಸಿಸಿ ಪಾಟೀಲರಿಗೇನು ಕೆಲಸ?

ಸ್ವಾಮೀಜಿ: ಅವರು ಜನಾಂಗದ ನಾಯಕರಾಗಿ ಭಾಗವಹಿಸಿದ್ದಾರೆ ಅಷ್ಟೇ…

ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!

ನಾನುಗೌರಿ: ಹಿಂದೆ ನೀವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಇದ್ದಿರಿ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಎಲ್ಲ ಬಡ ಲಿಂಗಾಯತರಿಗೂ ಶೈಕ್ಷಣಿಕ ಮೀಸಲಾತಿ ತನ್ನಿಂದ ತಾನೇ ಸಿಗುತ್ತಿತ್ತು ಅಲ್ಲವೆ?

ಸ್ವಾಮೀಜಿ: 800-900 ವರ್ಷಗಳ ಹಿಂದೆಯೇ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ ಎಂಬುದು ನಮ್ಮ ಬೇಡಿಕೆ. ಆದರೆ, ಸರ್ಕಾರಗಳು ಮತ್ತು ಮಾಧ್ಯಮಗಳು ಇಡೀ ಹೋರಾಟವನ್ನೆ ತಪ್ಪಾಗಿ ಬಿಂಬಿಸಿದವು. ಈಗ ಒಂದು ಜಾತಿಗಾಗಿ ನಾವು ನ್ಯಾಯಬದ್ಧ ಮೀಸಲಾತಿ ಕೇಳುತ್ತಿದ್ದೇವೆ.

ನಾನುಗೌರಿ: ಗೌರಿ ಲಂಕೇಶ್ ಮತ್ತು ಪ್ರೊ ಕಲಬುರ್ಗಿ ಅವರ ಹತ್ಯೆಗಳನ್ನು ನೀವು ತೀವ್ರವಾಗಿ ಖಂಡಿಸಿದವರು. ಅವರನ್ನು ಕೊಂದ ಸಿದ್ದಾಂತಗಳನ್ನೇ ಉಸಿರಾಡುವ ಬಸನಗೌಡ ಪಾಟೀಲ್ ಯತ್ನಾಳರು ನಿಮ್ಮ ಹೋರಾಟದ ರಾಜಕೀಯ ಮುಖವಾಣಿ ಆಗಿದ್ದಾರೆ ಅಲ್ಲವೆ?

ಸ್ವಾಮೀಜಿ: ಗೌರಿ ಮತ್ತು ಕಲಬುರ್ಗಿಯವರ ಬಗ್ಗೆ ನನಗೆ ತುಂಬ ಗೌರವ ಇದೆ. ಸತ್ಯ ಹೇಳುವವರನ್ನು ಎದುರಿಸಲಾಗದ ಹೇಡಿಗಳು ಕೊಲೆಯ ಮಟ್ಟಕ್ಕೆ ಇಳಿದಿದ್ದಾರೆ. ಯತ್ನಾಳ್ ಮುಂಚಿನಿಂದಲೂ ಆರ್‌ಎಸ್‌ಎಸ್ ಸಿದ್ದಾಂತದವರು ಎಂಬುದು ಗೊತ್ತೇ ಇರುವ ವಿಷಯ. ನಮ್ಮ ಸಭೆ-ಸಮಾವೇಶಗಳಲ್ಲಿ ಅವರು ಕೇವಲ ಜನಾಂಗದ ಮುಖಂಡರಾಗಿಯಷ್ಟೇ ಭಾಗವಹಿಸಿದ್ದಾರೆ. ನಾನು ಎಂದಿಗೂ ಕೊಲ್ಲುವ ಸಿದ್ದಾಂತ, ದ್ವೇಷ ಸೃಷ್ಟಿಸುವ ಐಡಿಯಾಲಜಿಯ ವಿರುದ್ಧವೇ ಇದ್ದೇನೆ.

ನಾನುಗೌರಿ: ‘3ಎ’ ಮತ್ತು ‘3ಬಿ’ಯಲ್ಲಿ ಇರುವ ಇತರ ಲಿಂಗಾಯತರ ಬಗ್ಗೆ ತಮಗೆ ಕಾಳಜಿ ಇಲ್ಲವೆ?

ಸ್ವಾಮೀಜಿ: ನಮ್ಮ ಸಮುದಾಯದ ಪರ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇತರ ಲಿಂಗಾಯತರೂ ಹೋರಾಟ ಮಾಡಿದರೆ ಬೆಂಬಲ ನೀಡುತ್ತೇವೆ.

ನಾನುಗೌರಿ: ದೊಡ್ಡ ಸಮುದಾಯವೊಂದು 2ಎ ಹೊಕ್ಕರೆ ಅಲ್ಲಿರುವ ಇತರ ಧ್ವನಿಯಿಲ್ಲದ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ಆಗುತ್ತಲ್ಲ?

ಸ್ವಾಮೀಜಿ: ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ. ಸಂವಿಧಾನದ ಪ್ರಕಾರ ನಮಗೆ ಸಿಗಬೇಕಾದ ಮೀಸಲಾತಿ ಸೌಲಭ್ಯ ನೀಡಲು ಹಲವು ಮಾರ್ಗಗಳಿವೆ.

ಸಂದರ್ಶನ: ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಹಕ್ಕಿಗಾಗಿ ಹೋರಾಡಬಾರದೆ? ಮಸಿ ಬಳಿಯುವುದು ಪ್ರತಿಭಟನೆಯೇ?: ಉಡುಪಿ ಸ್ಬಾಮೀಜಿಯ ಸಮಸ್ಯೆಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...