ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಬರುತ್ತಿರುವ ರೈತರ ಟ್ರ್ಯಾಕ್ಟರ್ ತಡೆಯುತ್ತಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ರೆ ಅವನ್ನು ನಾವೇ ಬಿಡಿಸಿಕೊಡಲು ಹೋಗ್ತಿವಿ. ಕೇಸ್ ಹಾಕಿದ್ರೆ ಜೈಲ್ ಬರೋ ಚಳುವಳಿ ಮಾಡ್ತಿವಿ ಎಂದು ಅವರು ಘೋಷಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ನೋವು ಹೇಳಿಕೊಳ್ಳುವ ಹಕ್ಕಿದೆ. ಸರ್ಕಾರ ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಮೊನ್ನೆ ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯನ್ನು ಸರ್ಕಾರ ತಡೆದಿತ್ತು. ನಮ್ಮದು ಪಾರ್ಟಿ ಪ್ರತಿಭಟನೆ ಆಗಿತ್ತು. ಆದರೆ ನಾಳೆಯ ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಂತುಕೊಳ್ಳಬೇಕು. ಅವರು ರೈತ ಧ್ವನಿಯಾಗಬೇಕು” ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ. ನೀವು ಎಲ್ಲರಿಗೂ ಒಂದೇ ನ್ಯಾಯ ಕೊಡಿ.
ಸುಪ್ರೀಂ ಕೋರ್ಟ್ ಸಹ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ. ನಾಳೆ ರಜೆ ಇದೆ ಯಾವ ಟ್ರಾಫಿಕ್ ಸಮಸ್ಯೆ ಆಗೋಲ್ಲ. ಅನ್ನದಾತ ಅನ್ನ ಕೊಟ್ಟರೇನೆ ನಾವು ಇರೋದು ಎಂಬುದನ್ನು ಮರೆಯಬೇಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಜಿಲ್ಲೆಗಳಲ್ಲಿ ರೈತರನ್ನು, ಟ್ರ್ಯಾಕ್ಟರ್ಗಳನ್ನು ತಡೆಯುತ್ತಿದ್ದಾರೆ. ವಾಹನಗಳ ಡ್ರೈವರ್ಗಳಿಗೆ ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ರೈತರ ಬೆಂಬಲವಾಗಿ ನಿಂತುಕೊಳ್ಳುತ್ತದೆ. ಎಲ್ಲೇ ಟ್ರ್ಯಾಕ್ಟರ್ ತಡೆದು ಜಪ್ತಿ ಮಾಡಿದರೂ ನಮ್ಮ ಪಕ್ಷದ ಕಾರ್ಯಕರ್ತರು ಅದನ್ನು ಬಿಡಿಸಲು ಹೋಗುತ್ತಾರೆ. ಕೇಸ್ ಹಾಕಿದರೆ ಜೈಲ್ ಭರೋ ಚಳವಳಿ ನಡೆಸುತ್ತಾರೆ ಎಂದು ಡಿಕೆಶಿ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ್ ಮಾತನಾಡಿ, “ನಾಳಿನ ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿಗೆ ನಮ್ಮ ಬೆಂಬಲವಿದೆ. ದೇಶದ ಇತಿಹಾಸದಲ್ಲಿ ಗಣರಾಜ್ಯೋತ್ಸವವನ್ನು ಬಹಳ ಸಂತೋಷದಿಂದ ಆಚರಿಸಲಾಗುತ್ತಿತ್ತು. ಆದ್ರೆ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಗಣತಂತ್ರ ವ್ಯವಸ್ಥೆಗೆ ಧಕ್ಕೆ ಬಂದಿದೆ. ರೈತರ ಅಹವಾಲುಗಳನ್ನು ಸರ್ಕಾರ ಪರಿಗಣಿಸದೇ ಇರೋದು ಶೋಚನೀಯ. ಇಡೀ ದೇಶದ ಎಲ್ಲಾ ಭಾಗದಲ್ಲೂ ರೈತರು ನಾಳೆ ಪ್ರತಿಭಟನೆ ಮಾಡ್ತಿದ್ದಾರೆ. ರೈತರ ಪರವಾಗಿ ನಮ್ಮ ಪಕ್ಷ ಇದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಿಯೇ ತೀರುತ್ತೇವೆ: ರೈತ ಮುಖಂಡರ ಒಕ್ಕೊರಲ ಘೋಷಣೆ