Homeನ್ಯಾಯ ಪಥರೈತರಿಗೆ ಬೇಕಿರುವುದು ನೀರು, ಬೆಲೆ - ಸಾಲ, ವಿಮೆ

ರೈತರಿಗೆ ಬೇಕಿರುವುದು ನೀರು, ಬೆಲೆ – ಸಾಲ, ವಿಮೆ

- Advertisement -
- Advertisement -

ಈ ಹೊತ್ತಿನ ಸುದ್ದಿ ಏನೆಂದರೆ ದೆಹಲಿ ಹಾಗೂ ಬೆಂಗಳೂರಿನಲ್ಲಿರುವ ಘನ ಸರಕಾರಗಳು ಪ್ರವಾಹಪೀಡಿತ ರೈತರ ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕೋದಕ್ಕಿಂತ `ಪೀಕು ವಿಮೆ’ (ಅಗ್ರಿಕಲ್ಚರ್ ಇನ್ಷುರನ್ಸ್) ನ ಮೊರೆ ಹೊಗತಾರಂತ.

ಇದು ಹೆಂಗ ಅಂದರ, “ಮೂರು ದಿನದಿಂದ ಕೂಳು ಕಂಡಿಲ್ಲ ಯಪ್ಪಾ, ನಮ್ಮ ಗೋಳು ಕಳಿಯೋ ದೊರಿಯೇ” ಅಂತ ರಾಜಾನ್ನ ಕೇಳಾಕ ಹೋದರ, “ನಿಮ್ಮೂರ ಸಾವುಕಾರನ ಮನಿ ಮಗಳ ಲಗ್ನ ಐತಿ, ಅಲ್ಲಿ ಉಣ್ಣು ಹೋಗರಿ” ಅಂದರಂತ, ಹಂಗ. ನಮ್ಮಿಂದ ಗೆದ್ದ ಹೋದ ಸರಕಾರ ಅನ್ನೋದು ತನ್ನ ಜವಾಬುದಾರಿ ನಿಭಾಯಿಸೋದು ಬಿಟ್ಟು ಬ್ಯಾರೆಯವರ ಮ್ಯಾಲೆ ಹಾಕಿದರ ಮಾಡೋದೇನು? ಏನು ಮಾಡಲಿಕ್ಕೆ ಆಗತೆತಿ? ಏನು ಬರತದ ಅದನ್ನ ನೋಡಿಕೋತ ಹೋಗೋದು, ಅಷ್ಟ.

ಕನ್ನಡಮ್ಮನ ಮೆಚ್ಚಿನ ಮಗನಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಅವರು “ರಾಜ್ಯದ ರೈತನಿಗೆ ಬೇಕಾಗಿದ್ದು ಎರಡೇ- ಒಂದು ನೀರು ಮತ್ತೊಂದು ಬೆಲೆ. ಇಷ್ಟು ಸಿಕ್ಕರೆ ಅವನು ಬೇರೆ ಎಲ್ಲ ನೋಡಿಕೊಳ್ಳುತ್ತಾನೆ”, ಅಂತ ಹೇಳುತ್ತಿದ್ದರು. ಈ ಕಾಲದ ಅಗತ್ಯಗಳಿಗೆ ತಕ್ಕಂಗ ಅದಕ್ಕ ನಾವು `ಸುಲಭ ಸಾಲ’ ಹಾಗೂ `ಬೆಳೆ ವಿಮೆ’ ಅಂತ ಸೇರಿಸಿಗೋಬಹುದು.

ಈ ನಾಲ್ಕನ್ನ ರೈತರಿಗೆ ಕೊಡಲಿಕ್ಕೆ ಯಾವುದಾದರೂ ಬಣ್ಣದ, ಝಂಡಾದ, ಘೋಷಣೆಯ, ಪಕ್ಷದ ಸರಕಾರ ಪ್ರಯತ್ನ ಮಾಡ್ಯಾವೇನು? ಅನ್ನುವ ಪ್ರಶ್ನೆಗೆ ಜೋರು ದನಿಯಿಂದ `ಇಲ್ಲ’ ಅನ್ನೋದ ಉತ್ತರ. ಇವಿಷ್ಟರ ಒಳಗ ರಾಜಕಾರಣಿಗಳ ಹೃದಯಕ್ಕ ಹತ್ತಿರವಾಗಿರೋ ವಿಷಯ ಅಂದರ ನೀರು ಕೊಡುವುದು ಅರ್ಥಾತ್ ನೀರಾವರಿ. ಹಿಂಗಾಗಿ ಅದನ್ನ ಕಡೀಕೆ ನೋಡೋಣ. (ರಾಜಕಾರಣಿಗಳಿಗೆ ಹೃದಯ ಅದ ಏನು ಅಂತ ಕೇಳಬ್ಯಾಡಿರಿ, ಅದು ಬ್ಯಾರೆ ವಿಷಯ).

ಮೊದಲಿಗೆ ಬೆಲೆ. ಇದು ಜಾಗತಿಕ ಸಮಸ್ಯೆ. ದೇಶದಿಂದ ದೇಶಕ್ಕ ಸಾಮಾನು ಹಾಗೂ ಸೇವೆ ತಡೆ ಇಲ್ಲದ ಓಡಾಡಬಹುದು ಅಂತ ಹೇಳಿದ ಮ್ಯಾಲೆ ಇದು ಹೆಚ್ಚಾತು.

ಅದರಾಗೂನು ನಮ್ಮ ದೇಶದಾಗ ಮನಮೋಹನಾಮಿಕ್ಸ್ ಶುರು ಆದಮ್ಯಾಲೆ ಅಂತೂ ಇದು ಇನ್ನೂ ಹೆಚ್ಚಾಗೇದ. ಒಂದು ಕಡೆ ಸಮಸ್ಯೆ ಆದರ ಇನ್ನೊಂದು ಕಡೆನೂ ಹಬ್ಬೋ ಹಂಗ. ಒಂದು ಕಡೆ ಗಾಯ ಆದರ ಅದರ ರಸಾ ಸೋರಿ ಇನ್ನೊಂದು ಕಡೆ ಹುಣ್ಣು ಆಗತದಲ್ಲಾ ಹಂಗ. ಇವೆಲ್ಲಾ ನಮ್ಮ ಬಡ ಬೋರೇಗೌಡನಿಗೆ ತಿಳಿಯಂಗಿಲ್ಲಾ. ಯಾವ ದೇಶದಾಗ ಚುನಾವಣೆಗೆ ಮುಂಚೆ ಹುದ್ದರಿಗಳು ನಮ್ಮ ಚಿನ್ನೆ ಕೈ, ಹೂವು ಅಲ್ಲ. ನಮ್ಮ ಕೈ ಹುಲ್ಲಿನ ಹೊರೆ ಹೊತ್ತ ನಿಮ್ಮಂತಾ ಮಹಿಳೆ, ಕೈ ಅಲ್ಲಾ, ಅಂತ ಪ್ರತಿ ಐದು ವರ್ಷಕ್ಕೊಮ್ಮೆ ಹೇಳಿ ಕೊಡಬೇಕಾಗತದೋ, ಆ ದೇಶದಾಗ “ದಕ್ಷಿಣ ಅಮೇರಿಕಾದಾಗ ಬಹಳ ಸೋಯಾ ಬೆಳದಿದ್ದಕ್ಕ ನಮ್ಮಲ್ಲಿ ರೇಟು ಬಿದ್ದದ” ಅಂತ ಹೇಳಲಿಕ್ಕೆ ಆಗತದೇನು?

ಬ್ಯಾರೆ ಬ್ಯಾರೆ ದೇಶದಾಗ ಇದಕ್ಕ ಬ್ಯಾರೆ ಬ್ಯಾರೆ ಉತ್ತರ ಕಂಡುಕೊಂಡಾರ. ನಮ್ಮಲಿನೂ ಪ್ರಯತ್ನ ನಡದಾವು. ಆದರ ಅವು ಲಾಟರಿ ಇದ್ದಂಗ. ಬಂದರ ಬಂತು, ಹೋದರ ಹೋತು. ಬೀಜ ಬಿತ್ತೋಕ್ಕಿಂತಾ ಮುಂಚೆ ಬೆಳೀ ಬೆಲೆ ತಿಳಕೊಳ್ಳೋ ಹಂಗ ಏನಾದರೂ ಮಾಡಲಿಕ್ಕೆ ಸಾಧ್ಯ ಆದರ ಅದರಂಥಾದು ಮತ್ತೊಂದಿಲ್ಲ. ಇಡೀ ಜಗತ್ತಿಗೇ ಹೊಸ ತಂತ್ರಜ್ಞಾನ ಕೊಡೋ ಐಟೀ ಘಟಗಳು, ಇಪ್ಪತ್ತು- ಮೂವತ್ತು ಉಪಗ್ರಹ ಒಟ್ಟಿಗೇ ಹಾರಿಸುವ ಇಸ್ರೋ, ಹತ್ತು ಸಾವಿರ ಜನ ನೂರು ವರ್ಷದೊಳಗ ಮಾಡೋ ಲೆಕ್ಕಾ ಒಂದು ಕ್ಷಣದಾಗ ಮಾಡೋ ಸುಪರ್ ಕಂಪ್ಯೂಟರ್ ತಯಾರು ಮಾಡಿದ ನಮ್ಮ ವಿಜ್ಞಾನಿಗಳು ಇದನ್ನ ಮಾಡಲಾರರೇನು? ಇಂತಹ ದೊಡ್ಡ ಪ್ರಶ್ನೆಗೆ ಉತ್ತರವನ್ನ ದೊಡ್ಡ ಸ್ಥಾನದಾಗ ಇರೋರು ತಮಗ ತಾವ ಕೇಳಿಕೊಳ್ಳಬೇಕು.

ಇನ್ನು ಸಾಲ. ಯಾವ ದೇಶದಲ್ಲಿ 8.5 ಲಕ್ಷ ಸಹಕಾರಿ ಸಂಸ್ಥೆಗಳು ಮತ್ತ 2,000 ಕ್ಕೂ ಹೆಚ್ಚು ಬ್ಯಾಂಕುಗಳು ಇದ್ದಾವೋ ಆ ದೇಶದಲ್ಲಿ ಸಾಲ ಸುಲಭವಾಗಿರದೇ ಕಷ್ಟವಾಗಿರಬಾರದಿತ್ತು. ಆದರ ಅದು ಹಂಗಿಲ್ಲ. ಯಾಕ? ಎಲ್ಲೆ ತಪ್ಪ ಐತಿ? ಸಹಕಾರಿಗಳ ರಾಜಕೀಕರಣ ಅಥವಾ ರಾಜಕಾರಣಿಗಳ ಸಹಕಾರೀಕರಣದಿಂದಾಗಿ ತಪ್ಪಾಗೇತಿ ಅಂತ ಕೆಲವರು ವಾದಸಾಕ ಹತ್ಯಾರ. ಹೌದೇನು? ಇದರಿಂದ ರೈತರು ದಲ್ಲಾಳಿಗಳ ಕೈಯೊಳಗ ಸಿಗಲಾರದ ಹಂಗ ಮಾಡಿ, ರೈತರಿಗೆ ಬೆಲೆ ಸಿಗಬಹುದು ಅನ್ನೋ ಉದ್ದೇಶದಿಂದ ಶುರು ಮಾಡಿದ ಭಾರತೀಯ ಸರಕು ವಿನಿಮಯ ಕೇಂದ್ರ (ಕಮಾಡಿಟಿಸ್ ಎಕ್ಸಚೇಂಜ್) ಯಾಕ ಬೇಕಾಗಿದ ಕೆಲಸ ಮಾಡವಲ್ಲತು? ಅದು ಭಾರತದ ಸರ್ವ ದಲ್ಲಾಳಿಗಳ ಶಕ್ತಿ ಕೇಂದ್ರ ಆಗಿಬಿಟ್ಟಿದ್ದು ಹೆಂಗ ಅಂತ ಯಾರರ ವಿಚಾರ ಮಾಡಾಕ ಹತ್ಯಾರೇನು?

ಭಾರತದಿಂದ ಹೋದ ತಜ್ಞರು ಇಡೀ ವಿಶ್ವಕ್ಕೆ ಇಂಥಾ ವಿಷಯಗಳ ಬಗ್ಗೆ ಸಲಹೆ ಕೊಡಲಿಕ್ಕೆ ಹತ್ಯಾರ. ಹಂಗಾರ ನಮಗ ಯಾಕ ಕೊಟ್ಟಿಲ್ಲ? ಅವರು ನಮ್ಮ ದೇಶದಾಗ ಯಾಕ ನಿಲ್ಲವಲ್ಲರು? ಇಲ್ಲೇ ನಿಂತವರು ಯಾಕ ನಮಗೇನೂ ಹೇಳವಲ್ಲರು? ಇದರ ಬಗ್ಗೆ ಸಹ ಚರ್ಚೆ ಆಗಬೇಕಾಗೇದ.

ಇನ್ನು ಬೆಳೆ ವಿಮೆ, ಕೃಷಿ ವಿಮೆ ಅಥವಾ ಪೀಕು ವಿಮೆ. ಬೆಳೆ ವಿಮೆ ಅಂತಿದ್ದದ್ದನ್ನ ಕೇಂದ್ರದ ಅಧಿಕಾರಿಗಳು ಕೃಷಿ ವಿಮೆ ಅಂತ ಮಾಡ್ಯಾರ. ಯಾಕೋ ಗೊತ್ತಿಲ್ಲ. ಹಂಗ ಜನತಾ ಜನಾ ಆರ್ ದನಾ ರಿಗೆ ಗೊತ್ತಾಗದಂಥಾವು ಈ ಸರಕಾರದಾಗ ಭಾಳ ಅವ. ಹೋಗಲಿ ಬಿಡರಿ.

ಖರೆ ಅಂದರೆ ಅದು ಪೀಕು ವಿಮೆ. ಅಂದರ ರೈತರ ಹತ್ತರ ರೊಕ್ಕ ಪೀಕಿ ಆಮ್ಯಾಲೆ ಕೇಳಾಕ ಹೋದರ ತೊಗೋರಿ ಈ ಪೀಪೀ, ಊದರಿ ಪುಂಗಿ ಅಂತ ಕೊಡತಾರಲ್ಲಾ ಅದಕ್ಕ.

ರೈತರ ಕಲ್ಯಾಣ ಆಗಬೇಕು ಅಂತ ಮಾಡಿದ ಈ ಸಂಸ್ಥಾ ರೈತರನ್ನು ಬಿಟ್ಟು ವಿಮಾ ಕಂಪನಿಗಳ ಕಲ್ಯಾಣ ಕ್ಕ ನಿಂತು ಬಿಟ್ಟದ್ದು ಯಾಕ?

ಮೊದಲನೇದಾಗಿ ನೂರರಾಗ ಬರೇ ಮೂವತ್ತು ಮಂದಿ ಅಷ್ಟ ವಿಮಾದಾಗ ಬರತಾರ. ಅದೂ ಅವರು ಶೇಕಡಾ ಒಂದು ರೊಕ್ಕ ಕೊಟ್ಟಿದ್ದರ. ಇಲ್ಲಾ ಸಾಲಾ ತೊಗೊಂಡಿದ್ದರ. ಇನ್ನ ಅದರ ಪರಿಹಾರ ಅವರ ನಷ್ಟ ಭರ್ತಿಗೆ ಸಾಕಾಗಂಗಿಲ್ಲ. ಮುಂದಿನ ಪೀಕಿನ ಖರ್ಚು ಕಳಿಲಿಕ್ಕೆ ಅವರಿಗೆ ಸಾಕಾಗತದ ಅಷ್ಟ. ವಿಮಾ ಕಂಪನಿಗಳು ನೂರು ರೂಪಾಯಿ ರೈತರು ಹಾಗೂ ಸರಕಾರದ ಕಡೆ ಇಸಗೊಂಡು 73 ರೂಪಾಯಿ ರೈತರಿಗೆ ಕೊಟ್ಟಾವು. ಅತ್ಯಂತ ಘೋರ ಬರಗಾಲ, ಪ್ರವಾಹದಾಗ ಸಹ ಅವರು ಕೊಡೋ ಮೊತ್ತ ಹೆಚ್ಚಾಗಿಲ್ಲ. ಇನ್ನ ನಮ್ಮ ಸರಕಾರ ಕಣ್ಣೀರಿನ್ಯಾಗ ಕೈ ತೊಳಕೊಂಡು ಗೋವಾಕ್ಕ ದುಡೀಲಿಕ್ಕೆ ಹೊಂಟಿರೋ ನಮ್ಮ ಉತ್ತರ ಕರ್ನಾಟಕದವರಿಗೆ ಅವರ ಬೆಳೆ ನಷ್ಟ ಪರಿಹಾರ ಮಾಡದೇ ಕಂಪನಿಗಳಿಗೆ ಹೇಳಿದರ ಯಾರನ್ನು ಅನ್ನೋಣು, ಯಾರನ್ನ ಬಿಡೋಣು?

ನೀರಾವರಿಯ ಬಗ್ಗೆ ಹೇಳಿದಷ್ಟೂ ಉಳೀತದ. ಅರವತ್ತರ ದಶಕದಾಗ ಇರೋ ಸಂಪನ್ಮೂಲ ಎಲ್ಲಾ ಡ್ಯಾಮುಗಳಿಗೆ ಹಾಕ್ರಿ. ಒಂದು ಸತೆ ನೀರಾವರಿ ಬಂತೂ ಅಂದರ ರೈತರು ಸುಬಧ್ರರಾಗತಾರ, ನಾಡು ಸುಭಿಕ್ಷ ಆಗತದ, ಬಡತನ ಹೋಗಿರತದ, ನಮ್ಮ ಆದಾಯನೂ ಹೆಚ್ಚು ಆಗತದ, ಇದ್ದ ಸಂಪನ್ಮೂಲ ಬ್ಯಾರೆ ಕಡೆ ಹಾಕಬಹುದು, ಅಂತ ನಮ್ಮ ದೇಶದ ಆರ್ಥಿಕ ತಜ್ಞರು ಹಾಗೂ ಪಂಚವಾರ್ಷಿಕ ಯೋಜನೆಗಳ ಕರ್ತಾರರು ನಿರ್ಧಾರ ಮಾಡಿದರಂತ. ಅದಕ್ಕ ಇತರ ಮೂಲಸೌಕರ್ಯಗಳಿಗಿಂತ ನೀರಾವರಿಗೆ ಹೆಚ್ಚಿನ ಬಜೆಟ್ಟಿನ ಬೆಂಬಲ ಸಿಗ್ತು. ಲಗೂ ನಿರ್ಣಯ ತಗೋಳೋ ಅನುಕೂಲ ಇರಲಿ ಅಂತ ಹೇಳಿ ನೀರಾವರಿ ಇಲಾಖೆ ವಿಕೇಂದ್ರೀಕರಣ ಆಗಲಿಲ್ಲ. ಆದರ 50 ವರ್ಷಗಳ ಅಂಧಾದುಂದಿ ಖರ್ಚಿನ ನಂತರ ಏನಾಗೇದ? ನೀರಾವರಿ ಪ್ರದೇಶ ಕೇವಲ 10 ಶೇಕಡಾ ಹೆಚ್ಚಾಗೇದ. ದೊಡ್ಡ ನೀರಾವರಿ ಯೋಜನೆಗಳಿಂದ ಮುಳುಗಡೆ, ಪ್ರವಾಹ ಮುಂತಾದ ಸಮಸ್ಸೆಗಳು ಹೆಚ್ಚಾಗ್ಯಾವು. ಬಡವರ ಬಸಿದ ಸುಂಕದಿಂದ ಕಟ್ಟಿಡ ಡ್ಯಾಮಿನ್ಯಾಗ ಹೂಳು ಹಾಗೂ ಸ್ಥಳೀಯ ರಾಜಕಾರಣಿ ರಾಜ್ಯ- ರಾಷ್ಟ್ರಮಟ್ಟಕ್ಕೆ ಬೆಳೆದ ರಹಸ್ಯದ ಧೂಳು ಮಾತ್ರ ತುಂಬೇದ. ರೈತರು ಅಭದ್ರರಾಗಿ, ನಾಡು ದುರ್ಭಿಕ್ಷ ವಾಗೇ ಉಳಿದದ.

ಸಾವಿರಾರು ಎಕರೆ ಮುಳುಗಿಸಿ ನೂರಾರು ಎಕರೆಗೆ ನೀರು ಹರಿಸುವ ದೊಡ್ಡ ಯೋಜನೆಗಳ ಮೇಲೆ ಕಣ್ಣು ಹರಿಸದೇ ಜಪಾನು ದೇಶದಂಗ ಕಮ್ಮೀ ಖರ್ಚಿನ ಸಣ್ಣಸಣ್ಣ ಯೋಜನೆಗಳನ್ನ, ಸ್ಥಳೀಯ ರೈತರ ಮೆಹರಬಾನಿಕೆಯೊಳಗ ನೀಟಾಗಿ ಮಾಡಿದ್ದರ ಹಳ್ಳೀ ಆರ್ಥಿಕತೆ ಕುಂಡದಾಗ ಹೂಬೆಳೆಸಿದಂಗ ನೀಟಾಗಿ ಇರ್ತಿತ್ತು. ಮರಿ ಪುಢಾರಿಗಳು ತಿಮಿಂಗಿಲುಗಳಾಗುವ ಸಾಧ್ಯತೆ ಕಮ್ಮಿ ಇರ್ತಿತ್ತು. ಆ ಅವಕಾಶ ಕಳಕೊಂಡೇವಿ ಅನ್ನಸಂಗಿಲ್ಲೇನು, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...