ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಜನರು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಇಂದು ಅಭಿವೃದ್ಧಿ ಕಾಮಗಾರಿಗಾಗಿ ಆಗ್ರಹಿಸಿ ಮತ್ತು ಶಾಸಕ ಎಸ್.ರಘು ರಾಜೀನಾಮೆಗೆ ಒತ್ತಾಯಿಸಿ ಆಮ್ ಆದ್ಮಿ ಮುಖಂಡರು, ತಿಪ್ಪಸಂದ್ರದ 80 ಅಡಿ ರಸ್ತೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ಬಿಜೆಪಿ ದಬ್ಬಾಳಿಕೆಯ ಆಡಳಿತಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳ ಆಗರವೇ ಇದೆ. ಶಾಸಕರಿಂದ ಯಾವುದೇ ರೀತಿಯ ಪರಿಹಾರಗಳು ಸಿಗುತ್ತಿಲ್ಲ. ಕ್ಷೇತ್ರಕ್ಕೆ ಮೈತ್ರಿ ಸರ್ಕಾರ ನೀಡಿದ್ದ 35 ಕೋಟಿ ಅನುದಾನಕ್ಕೂ ಕತ್ತರಿ ಹಾಕಿ, 27.5 ಕೋಟಿ ರೂ.ಗಳಿಗೆ ಬಿಜೆಪಿ ಸರ್ಕಾರ ಇಳಿಸಿದೆ. ಆದರೂ ಇಲ್ಲಿಯ ಶಾಸಕರಾದ ಎಸ್.ರಘು ಅನುದಾನ ಕಡಿತದ ಬಗ್ಗೆಯೂ ಚಕಾರ ಎತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದು ಬರೋಬ್ಬರಿ ಆರು ತಿಂಗಳುಗಳೇ ಕಳೆದಿವೆ. ತನ್ನದೇ ಪಕ್ಷ ಅಧಿಕಾರದಲ್ಲಿದ್ದರೂ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆರೆ ಒತ್ತುವರಿ, ನೀರಿನ ಸಮಸ್ಯೆ ಸೇರಿದಂತೆ ಹಲವು ಮೂಲ ಸೌಕರ್ಯಗಳ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ ಎಂದು ಆಮ್ ಆದ್ಮಿ ನಾಯಕರು ಆರೋಪಿಸಿದರು.
ಇನ್ನು ಜನಪರ ಕೆಲಸ ಮಾಡದ ನಿಷ್ಪ್ರಯೋಜಕ ಶಾಸಕರು ಕ್ಷೇತ್ರಕ್ಕೆ ಬೇಡವೆಂದು, ಶಾಸಕ ರಘು ರಾಜೀನಾಮೆಗೆ ಒತ್ತಾಯಿಸಿ, ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖಂಡರಾದ ಮೋಹನ್ ದಾಸರಿ, ದರ್ಶನ್ ಜೈನ್, ಜಗದೀಶ್ ಬಾಬು, ನವೀನ್ ಖಾದರ್, ನಸ್ರೀಮಾ, ಕಲೈ ಅರಸನ್ರನ್ನು ಪೊಲೀಸರು ಬಂಧಿಸಿದ್ದಾರೆ.