Homeಮುಖಪುಟಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ : ಪಿ.ಮಹಮದ್

ಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ : ಪಿ.ಮಹಮದ್

- Advertisement -
- Advertisement -

ದಕ್ಷಿಣ ಕನ್ನಡದ ಪಿ.ಮಹಮ್ಮದ್ ಭಾರತದ ಇಂದಿನ ಪ್ರಮುಖ ಕಾರ್ಟೂನಿಸ್ಟ್‍ಗಳಲ್ಲಿ ಒಬ್ಬರು. ಜನವಾಹಿನಿಯಲ್ಲಿ ಅವರ ಕಾರ್ಟೂನ್‍ಗಳನ್ನು ನೋಡಿ ಓದುಗರು ಅಚ್ಚರಿಗೊಂಡರು. ಕಾರ್ಟೂನ್‍ಗಳಿಗೇ ವಿಶಿಷ್ಟವಾದ ಮೊನಚು ವ್ಯಂಗ್ಯ ಹಾಗೂ ಗೆರೆಗಳ ಆಟದ ಜೊತೆಗೆ ಸ್ಪಷ್ಟ ರಾಜಕೀಯ, ಸಾಮಾಜಿಕ ನಿಲುವು ಮಹಮ್ಮದ್‍ರವರ ವಿಶೇಷತೆ. ಕಲಾವಿದರಿಗೆ ಇರಬೇಕಾದ ಸ್ವಾತಂತ್ರ್ಯದ ಕುರಿತೂ ಅವರದು ಕಟು ನಿಲುವು. ಪ್ರಜಾವಾಣಿ, ವಿಜಯಕರ್ನಾಟಕಗಳಲ್ಲಿ ಕೆಲಸ ಮಾಡಿದ ನಂತರ ಈಗ ಸಂಪೂರ್ಣ ಸ್ವತಂತ್ರರು. ಆಂದೋಲನ, ವಾರ್ತಾಭಾರತಿ ಪತ್ರಿಕೆಗಳ ಜೊತೆಗೆ ಫೇಸ್‍ಬುಕ್‍ನ ಲಕ್ಷಾಂತರ ಓದುಗರು ನಿತ್ಯ ಅವರ ಕಾರ್ಟೂನ್‍ಗೆ ಕಾಯುತ್ತಾರೆ.

ನಾವು ಬದುಕುತ್ತಿರುವ ಕಾಲ ಅನೇಕ ವಿರೋಧಾಭಾಸಗಳಿಂದ ಕೂಡಿದೆ. ಈಗ ಅಭಿವ್ಯಕ್ತಿಸಲು ಮಾಧ್ಯಮಗಳ ಕೊರತೆಯಿಲ್ಲ. ಕೈಯಲ್ಲಿ ಮೊಬೈಲ್ ಇದ್ದರಾಯ್ತು – ನಮ್ಮ ಅನಿಸಿಕೆ – ಅಭಿಪ್ರಾಯಗಳನ್ನು ಜಗತ್ತಿನ ಯಾವ ಮೂಲೆಗೂ ತಲುಪಿಸಬಹುದು. ಆದರೆ ಅದೇ ಸಾಧನವನ್ನು ಟ್ರಾಲ್‍ಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಿಕ್ಕೂ ಬಳಸಲಾಗುತ್ತದೆ. ಗುಸುಗುಸು, ವದಂತಿ, ಚಾಡಿ ಮಾತುಗಳು ಇಂಟರ್ನೆಟ್ ಮಾಧ್ಯಮದ ಮೂಲಕ ಬಹುಮುಖ್ಯ ಅಭಿಪ್ರಾಯ ಎಂಬಂತೆ ಬಿತ್ತರಗೊಳ್ಳುತ್ತಿವೆ. ಬರೀ ವಾಟ್ಸಾಪ್ ಫಾರ್ವರ್ಡ್‍ಗಳನ್ನಷ್ಟೇ ನೋಡುವ ಮತ್ತು ಅವುಗಳನ್ನು ನಂಬುವ ದೊಡ್ಡದೊಂದು ಜನವರ್ಗ ಸೃಷ್ಟಿಯಾಗಿದ್ದು ಅವರು ಚುನಾವಣೆಗಳಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದಾಗಿ ಏನೆಲ್ಲಾ ಆಗಬಹುದು ಎಂಬುದನ್ನೂ ನೋಡುತ್ತಾ ಇದ್ದೇವೆ.

ಪ್ರಾಥಮಿಕ ಶಾಲೆಗಳಲ್ಲಿಯೇ ಸತ್ಯಮೇವ ಜಯತೆ ಎಂದು ಪಾಠ ಕೇಳುತ್ತಾ ಬಂದಿದ್ದೇನೆ. ಆದರೆ ಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ. ಮೊದಲೆಲ್ಲ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವವರನ್ನು ನೋಡಿದ್ದೆವು. ಈಗ ಸತ್ಯದ ತಲೆಯನ್ನೇ ಹಾರಿಸಿ ಸುಳ್ಳು ಹೇಳಲಾಗುತ್ತಿದೆ.

ವೃತ್ತಿಪರ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಿರುವ ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದರೆ ಏನು ಎಂದು ನನ್ನ ವೃತ್ತಿಜೀವನದ ಮೂವ್ವತ್ತು ವರ್ಷಗಳಲ್ಲಿ ಚೆನ್ನಾಗಿ ಮನದಟ್ಟಾಗಿದೆ. ಶಾ ಬಾನು ವಿವಾದ, ಬಾಬರಿ ಮಸೀದಿ ಧ್ವಂಸ ಸಂದರ್ಭಗಳಲ್ಲಿ ನಾನು ರಚಿಸಿದ ಕಾರ್ಟೂನುಗಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಎದುರಿಸಿದ್ದೇನೆ. ಆದರೆ ಅವುಗಳಿಂದ ನಾನು ಮತ್ತು ನನ್ನಂಥ ಕಾರ್ಟೂನಿಸ್ಟರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಶಕ್ತಿಗೆ ಏನೂ ತೊಂದರೆಯಾಗಿರಲಿಲ್ಲ. 2002ರ ಗುಜರಾತ್ ನರಮೇಧ ನಡೆದಾಗಲೂ ನಾವು ನಮ್ಮ ಮಾಧ್ಯಮವನ್ನು ಬಳಸಿಕೊಂಡು ಆ ಘಟನೆಗಳ ಬಗ್ಗೆ ಓದುಗರಿಗೆ ತಿಳಿಸಬೇಕಾದ್ದನ್ನು ತಿಳಿಸಿದ್ದೆವು.

ಆದರೆ 2014ರ ನಂತರದ ಸನ್ನಿವೇಶ ಸಂಪೂರ್ಣ ಭಿನ್ನವಾಗಿದೆ. ಒಂದು ನಿರ್ದಿಷ್ಟ ರಾಜಕೀಯ ನಾಯಕನ ವಿರುದ್ಧವಾದ ಕಾರ್ಟೂನ್ ರಚಿಸಿದರೆ ರಚಿಸಿದಾತನ ವಿರುದ್ಧ ‘ಟ್ರೋಲ್’ ಕಾಲಾಳುಗಳು ಮುಗಿಬೀಳುತ್ತಾರೆ. ಆತಂಕದ ವಿಷಯವೆಂದರೆ ಈ ಟ್ರೋಲ್‍ಗಳನ್ನು ದುಡ್ಡುಕೊಟ್ಟು ಈ ಉದ್ದೇಶಕ್ಕಾಗಿಯೇ ಇಟ್ಟುಕೊಳ್ಳಲಾಗುತ್ತದೆಯಂತೆ! ಇಂಥದಕ್ಕೆ ಮಣಿಯದವರ ಕುಟುಂಬ ಸದಸ್ಯರ ಮೇಲೇ ದೈಹಿಕ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತದೆ. ಇವುಗಳನ್ನೆಲ್ಲ ಎದುರಿಸಿಯೂ ತಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾರೆ ಎಂದು ಹೇಳಲು ಸಾಕಷ್ಟು ಗಟ್ಟಿಯಾದ ಗುಂಡಿಗೆಯೇ ಬೇಕು. ಆದರೆ ಇಂಥ ಗುಂಡಿಗೆಯವರಿದ್ದರೂ ಅವರಿಗೆ ಮುಕ್ತವಾದ ಕೆಲಸ ಮಾಡಲು ಅವಕಾಶ ನೀಡಬೇಕಾದ ಮಾಧ್ಯಮ ಸಂಸ್ಥೆಗಳಿಗೇ ಧೈರ್ಯದ ಕೊರತೆಯಿರುತ್ತದೆ. ಕಾರ್ಪೊರೇಟ್ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಸರಕಾರವನ್ನು ಎದುರುಹಾಕಿಕೊಳ್ಳಲು ಯಾರೂ ತಯಾರಿಲ್ಲ.

ಪರಿಸ್ಥಿತಿ ಹೀಗಿರುವಾಗ ನನ್ನಂಥ ಸ್ಥಳೀಯ ಭಾಷೆಗಳಲ್ಲಿ ಕೆಲಸ ಮಾಡುವ ಕಾರ್ಟೂನಿಸ್ಟರಿಗೆ ಜೀವನ ನಿರ್ವಹಣೆಗಾಗಿ ದುಡಿಯುವುದೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಿಕ್ಕಾಗಿ ದುಡಿಯುವುದೋ ಎನ್ನುವುದು ಅಕ್ಷರಶಃ ಜೀವನ್ಮರಣದ ಪ್ರಶ್ನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಕ್ಷರಶಃ ಜೀವನ್ಮರಣದ ಪ್ರಶ್ನೆ! ನಿಮ್ಮ ಮಾತು ನೂರರಷ್ಟು ನಿಜ. ಆದರೆ, ನಮ್ಮಂಥವರು ನಿಮ್ಮ ವಿಡಂಭನಾತ್ಮಕ ಕಾರ್ಟೂನ್ ಗಳನ್ನು ನೋಡುತ್ತಾ ಬೆಳೆದವರು. ಅನುಸರಿಸಿದವರು. ಎದೆಗುಂದುವ ಹಾಗೆ ಇಲ್ಲ. ನಿಮ್ಮೊಂದಿಗೆ ನಾವುಗಳು ಇದ್ದೇವೆ. ನೀವೇ ಹೇಳಿದ ಹಾಗೆ ಹಿಂದೆಂದಿಗಿಂತಲೂ ನಿಮ್ಮಂಥವರ ಅಗತ್ಯ ಬಹಳವಿದೆ. ಮುಂದುವರೆಸಿ ಸಾರ್…ಸತ್ಯಕ್ಕೆ ತಡವಾಗಿಯಾದರೂ ಗೆಲುವೇ ಇದ್ದೇ ಇರುತ್ತೆ..

  2. ಪಿ.ಮುಹಮ್ಮದ್ ಅವರ ಮಾತುಗಳಲ್ಲಿ ಹುರುಳಿದೆ ,ಇದೆಯಂದು ಎಲ್ಲರಿಗೂ ಗೊತ್ತು ಇದೆ. ಹಾಗೆಂದು ಮಾತು ಆರಂಭಿಸುವವರು ಯಾರು, ಎಂಬುದು ಪ್ರಶ್ನೆ. ಇದಕ್ಕೆ ವ್ಯಂಗ್ಯಚಿತ್ರಗಳೇ ಉತ್ತರಿಸುತ್ತಿದ್ದವು. ಆರ್. ಕೆ..ಲಕ್ಷ್ಮಣ್ರು ನಮ್ಮ ಸೂಪ್ತ ಉತ್ತರಗಳನ್ನು ತಮ್ಮ ವ್ಯಂಗ್ಯಚಿತ್ರಗಳಲ್ಲಿ ಕೊಟ್ಟಂತೆ ಭಾಸವಾಗುತ್ತಿತ್ತು.
    ಇಂದು ಕರ್ನಾಟಕದ ವ್ಯಂಗ್ಯಚಿತ್ರಕಾರರೊಬ್ಬರ ಉದ್ಗಾರಗಳು ಆತಂಕ ತಡಿ ಎಮ್ ನದಾಫ್ ಅಫಜಲಪುರ.

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...