Homeಅಂಕಣಗಳುಈ ಬಡ ಭಾರತೀಯರು ಸರ್ಕಾರಕ್ಕೆ ಮೊದಲು ಕಾಣಬೇಕಿತ್ತು

ಈ ಬಡ ಭಾರತೀಯರು ಸರ್ಕಾರಕ್ಕೆ ಮೊದಲು ಕಾಣಬೇಕಿತ್ತು

- Advertisement -
- Advertisement -

ಬಡವರಿಗೆ ಕೊಡುವ ರೇಷನ್‍ನಲ್ಲಿ ಪೌಷ್ಟಿಕಾಂಶದ ಕೊರತೆ ಅತ್ಯಧಿಕ. ಆರೋಗ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ತೋರಿಸುತ್ತದೆ. ಆದರೆ ಬಡವರಿಗೆ ನೀಡುವ ಆಹಾರ ಪದಾರ್ಥ ಸತ್ವಹೀನವಾಗಿರುತ್ತವೆ. ಇದರ ಪರಿಣಾಮವಾಗಿ ಬಡವರಲ್ಲಿ ಅಪೌಷ್ಠಿಕತೆಯಿಂದ ನರಳುವ ಮತ್ತು ಸಾಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆದರೆ ಆರೋಗ್ಯ ಇಲಾಖೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಒಬ್ಬ ವಿಧವೆ ಕೂಲಿ ಕಾಸು ಸಿಕ್ಕದೆ ತನ್ನ ತಲೆಗೂದಲನ್ನೆ ಮಾರಿಕೊಂಡಿದ್ದಾಳೆ. ಒಂದು ಬಡಕುಟುಂಬದವರು ಹೊಟ್ಟೆಪಾಡಿಗಾಗಿ ತಮ್ಮ ಮಗುವನ್ನೇ ಮಾರಿಕೊಂಡರು. ಒಂದು ಒಡಸಂಸಾರದ ಒಬ್ಬ 7 ವರ್ಷದ ಹುಡುಗ ಹಸಿವನ್ನು ತಾಳಲಾರದೇ ಮನೆಬಿಟ್ಟು ಓಡಿಹೋಗಿ ಬಸ್‍ಸ್ಟಾಂಡಿನಲ್ಲಿ ಭಿಕ್ಷೆ ಬೇಡುತ್ತಾನೆ. ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಾನೆ. ಅನೇಕ ಗರ್ಭಿಣಿ ಹೆಣ್ಣು ಮಕ್ಕಳು ಆಹಾರದ ಭದ್ರತೆ ಇಲ್ಲದೆ, ಅಪೌಷ್ಟಿಕತೆಯ ಕಾರಣದಿಂದ ಮಕ್ಕಳನ್ನು ಹಡೆದು ಸಾವನ್ನಪುತ್ತಾರೆ. ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಒಮ್ಮೆಗೇ ಸಾಯುತ್ತಾರೆ. ಅನೇಕ ಸಂಸಾರಗಳು ಊರುಬಿಟ್ಟು ಬಂದು ಬೆಂಗಳೂರಿನಲ್ಲಿ ಫುಟ್‍ಪಾತಿನ ಮೇಲೆ ವಾಸಿಸುತ್ತಾರೆ. ರಾತ್ರಿ ಮಲಗುತ್ತಾರೆ. ತಿರುಪೆ ಮಾಡಿ ಜೀವನ ನಿರ್ವಹಿಸುತ್ತಾರೆ. ಹಳ್ಳಿಗಳಲ್ಲಿ ರೈತ ಕಾರ್ಮಿಕರು, ಅನೇಕ ದಿನ ಹೊಟ್ಟೆಗಿಲ್ಲದೆ ಮಲಗುವುದು ಭೂಮಿ ವಸತಿ ವಂಚಿತರಾಗಿ ಬಾಳ್ವೆ ನಡೆಸುತ್ತಿರುವುದೂ ನಡೆದೇ ಇದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳೇ ಸಂದರೂ ಈ ಎಲ್ಲ ಬಡವರಿಗೆ ಮಾಡಲು ಉದ್ಯೋಗವಿಲ್ಲ. ಅವರ ಮಕ್ಕಳಿಗೆ ವಿದ್ಯೆ ಇಲ್ಲ. ಇನ್ನೊಂದು ಚಿತ್ರ ನೋಡಿ. ಭಾರತದಲ್ಲಿ ಲಕ್ಷ ಕೋಟ್ಯಾಧಿಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅಂಬಾನಿ ಅದಾನಿ ಮುಂತಾದ ಕೋಟ್ಯಾಧಿಪತಿಗಳು ಕೋಟಿ ಕೋಟಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸುತ್ತದೆ. ಅವರ ಕೋಟಿ-ಕೋಟಿ ಹಳೆ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ. ಬಡವ ಬಲ್ಲಿದರ ನಡುವಿನ ಕಂದಕ ದೊಡ್ಡದಾಗುತ್ತಿದೆ.

ಕೇಂದ್ರ ಸರ್ಕಾರ ಬಡ ಜನರಿಗಾಗಿ 30 ಯೋಜನೆಗಳನ್ನು ಜಾರಿಗೆ ತಂದಿದೆ. ರಾಷ್ಟೀಯ ಸಾಮಾಜಿಕ ಸೇವೆ ಒದಗಿಸುವ ಸಂಸ್ಥೆಯೂ ಅವುಗಳಲ್ಲಿ ಒಂದು. ಅದು ಸಮಾಜದಲ್ಲಿ ಊಟ, ಉದ್ಯೋಗಗಳಿಂದ ವಂಚಿತರಾಗಿ ಸಾವನ್ನಪ್ಪಲು ಹೊರಟವರನ್ನು ತಡೆಗಟ್ಟುವುದಕ್ಕಾಗಿಯೇ ಈ ಸಂಸ್ಥೆ ಇರುವುದು. ಈ ಯೋಜನೆ ಬಡತನದ ಸೀಮಾರೇಖೆಯ ಕೆಳಗಿರುವರಿಗಾಗಿಯೇ ಸಾಮಾಜಿಕ ಭದ್ರತೆಯ ಯೋಜನೆ. ಈ ಯೋಜನೆಯಡಿಯಲ್ಲಿ 5 ಪ್ರತ್ಯೇಕ ಒಳಿತನ್ನು ಕೋರುವ ಯೋಜನೆಗಳಿವೆ. ಇವುಗಳೆಂದರೆ ಇಂದಿರಾಗಾಂಧಿ ರಾಷ್ಟ್ರೀಯ ಮನೆ ತಪ್ಪಿದವರ ಪಿಂಚಣಿ ಯೋಜನೆ, ಇಂದಿರಾಗಾಂಧಿ ವೃದ್ಧರ ಪಿಂಚಣಿ ಯೋಜನೆ, ಇಂದಿರಾಗಾಂಧಿ ಅಶಕ್ತರ ಪಿಂಚಣಿ ಯೋಜನೆ, ರಾಷ್ಟೀಯ ಫ್ಯಾಮಿಲಿ ಬೆನಿಫಿಟ್ ಸ್ಕೀಂ ಮತ್ತು ಅನ್ನಪೂರ್ಣ ಯೋಜನೆಗಳಿವೆ.

ಭಾರತ ವಿಶ್ವದಲ್ಲೆ ದೊಡ್ಡದಾದ ಆಹಾರ ಭದ್ರತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದಕ್ಕಾಗಿ ವರ್ಷಕ್ಕೆ 1.8 ಲಕ್ಷಕೋಟಿ ವ್ಯಯ ಮಾಡುತ್ತಿದೆ. ಮಹಾತ್ಮಾಗಾಂಧಿ ಗ್ರಾಮೀಣ ರೋಜ್‍ಗಾರ್ ಯೋಜನೆಯ ಉಳಿವಿಗಾಗಿ ದಿನಗೂಲಿ ಒದಗಿಸಲು 2019-20ರಲ್ಲಿ ಭಾರತ ಸರ್ಕಾರ 60000 ಕೋಟಿ ಖರ್ಚು ಮಾಡಿದೆ. ಕೇಂದ್ರದ ಈ ವರ್ಷದ ಸಬ್ಸಿಡಿ ಬಿಲ್ 3.38 ಲಕ್ಷ ಕೋಟಿ ರೂಪಾಯಿಗಳು. ಅಂದರೆ ದಿನಕ್ಕೆ 900 ಕೋಟಿ. ಸಾಮಾಜಿಕ ಸೆಕ್ಟರ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಿಕೊಂಡು ಈ ವರ್ಷ 13.9 ಲಕ್ಷ ಕೋಟಿ ಖರ್ಚುಮಾಡುತ್ತಿವೆ. ಈ ಮೊತ್ತದಲ್ಲಿ ಪ್ರಾಕೃತಿಕ ವಿಕೋಪದಿಂದ ಜನಸಮುದಾಯಕ್ಕಾಗುವ ಹಾನಿಯನ್ನು ತುಂಬಿಕೊಡಲು 5.5 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ಬಡತನದ ಇಂಡೆಕ್ಸ್ 54ರಿಂದ 50ಕ್ಕೆ ಇಳಿದಿದೆ. ಆದರೆ ರಾಷ್ಟೀಯ ಸರಾಸರಿಗಿಂತ ಕಡಿಮೆ ಇರುವ ರಾಜ್ಯಗಳು ಹಿಂದೆ 10 ಇದ್ದದ್ದು ಈಗ 14ಕ್ಕೆ ಏರಿವೆ.

ದೊಡ್ಡ ರಾಜ್ಯಗಳ ಪೈಕಿ 10 ರಾಜ್ಯಗಳು ಬಡತನದ ಸೀಮಾರೇಖೆಯ ತಳಗಿದ್ದು ಅವುಗಳಲ್ಲಿ ಆರಂತೂ ತುಂಬಾ ದುರವಸ್ಥೆಯಲ್ಲಿವೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿರುವುದು ಬಡತನ ನಿವಾರಣಾ ಕಾರ್ಯಾಚರಣೆಯ ಯೋಜನೆ ಅಭಾವದಿಂದಲ್ಲ; ಅವು ಅಪಾರ ಸಂಖ್ಯೆಯಲ್ಲಿವೆ.

ಈ ಸಾಮಾಜಿಕ ಕಾರ್ಯಕ್ರಮಗಳ ಕಾರ್ಯ ಕ್ಷಮತೆಯ ಅಭಾವದಿಂದಾಗಿ ಬಡತನ ಹೆಚ್ಚುತ್ತಿದೆ. ರಾಜ್ಯಗಳ ಆಡಳಿತಗಾರರ ದಕ್ಷತೆಯ ಕೊರತೆಯಿಂದ ಆಡಳಿತದ ಜ್ಞಾನದ ಕೊರತೆಯಿಂದ ಬಡತನ ನಿವಾರಣೆಯ ಕೆಲಸ ಹಿಂದೆ ಬಿದ್ದಿದೆ.

ದೇಶದಲ್ಲಿ ಅನೇಕ ಕಡೆ ಬಡತನ ಹಸಿವು ಕಾಡುತ್ತಿದೆ. ಆಹಾರದ ಅಪೌಷ್ಠಿಕತೆ ಇಡೀ ದೇಶವನ್ನು ಕಾಡುತ್ತಿದೆ. ಭಾರತದಲ್ಲಿ 58.3 ದಶಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ; ಭಾರತದಲ್ಲಿ ಹುಟ್ಟುವ ಮಕ್ಕಳಲ್ಲಿ ಶೇ.40ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ತಾಯಂದಿರಾಗುವ ಒಂದು ಲಕ್ಷ ಮಹಿಳೆಯರಲ್ಲಿ 122 ಹೆಣ್ಣು ಮಕ್ಕಳು ಸಾವಿಗೆ ಗುರಿಯಾಗುತ್ತಾರೆ. ಗರ್ಭಿಣಿಯರಲ್ಲಿ ಅರ್ಧದಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಗರ್ಭಿಣಿಯಲ್ಲಿ ಶೇ.36ರಷ್ಟು ಮಹಿಳೆಯರಿಗೆ ಮಾತ್ರ ತಾಯಿತನದ ಬೆನೆಫಿಟ್ ಸಿಕ್ಕುತ್ತಿದೆ.

ಬಡವರಿಗೆ ಕೊಡುವ ರೇಷನ್‍ನಲ್ಲಿ ಪೌಷ್ಟಿಕಾಂಶದ ಕೊರತೆ ಅತ್ಯಧಿಕ. ಆರೋಗ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ತೋರಿಸುತ್ತದೆ. ಆದರೆ ಬಡವರಿಗೆ ನೀಡುವ ಆಹಾರ ಪದಾರ್ಥ ಸತ್ವಹೀನವಾಗಿರುತ್ತವೆ. ಇದರ ಪರಿಣಾಮವಾಗಿ ಬಡವರಲ್ಲಿ ಅಪೌಷ್ಠಿಕತೆಯಿಂದ ನರಳುವ ಮತ್ತು ಸಾಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆದರೆ ಆರೋಗ್ಯ ಇಲಾಖೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಅದನ್ನು ತಿನ್ನುವ ಇಲಾಖೆ ಹೊರತು ಜನತೆಯ ಒಳಿತಿಗಾಗಿ ಕಾರ್ಯ ನಿರ್ವಹಿಸುವ ಇಲಾಖೆ ಅಲ್ಲ ಎಂದು ಬಗೆದಂತಿದೆ.

ಇವೆಲ್ಲದರ ಅರ್ಥವೇನು? ಬಡತನ ನಿವಾರಣೆಗೆಂದು ಹಲವು ಬಗೆಯ ಯೋಜನೆಗಳನ್ನು ಇದುವರೆಗೆ ಆಳಿದ ವಿವಿಧ ಪಕ್ಷಗಳ ಸರ್ಕಾರಗಳು (ಪ್ರಧಾನವಾಗಿ ಕಾಂಗ್ರೆಸ್ಸು) ತಂದಿದ್ದಾರಾದರೂ, ಆ ನಿಟ್ಟಿನಲ್ಲಿ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಅವೆಲ್ಲವನ್ನೂ ಬಗೆಹರಿಸಿ ಎಂದು 2014ರಲ್ಲಿ ಮತ್ತು 2019ರಲ್ಲಿ ಎರಡೆರಡು ಬಾರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಅವರು ಮಾಡುತ್ತಿರುವುದೇನು? ಈ ಜನರನ್ನು ಬಡತನದ ಕೂಪದಿಂದ ಮೇಲೆತ್ತುವ ಬದಲು, ಜನರನ್ನು ಆತಂಕಕ್ಕೆ ದೂಡುವ ಕ್ರಮಗಳಿಗೆ ಮುಂದಾಗಿದೆ. ನೋಟು ರದ್ದತಿಯಿಂದ ಶುರುವಾಗಿ ಸಿಎಎ, ಎನ್‍ಆರ್‍ಸಿಯವರೆಗೆ ಎಲ್ಲವೂ ದೇಶವನ್ನು ಹಿಂಡುವ ಕ್ರಮಗಳಾಗಿವೆ. ದೇಶವನ್ನಾಳುವವರು ಭಾರತೀಯರ ಕುರಿತು ಕಾಳಜಿ ಇರುವವರೇ ಆಗಿದ್ದರೆ ಮೊದಲು ಬಡ ಭಾರತೀಯರ ಕುರಿತು ಗಮನಹರಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...