ತನ್ನ ಸ್ವಂತ ಮಕ್ಕಳ ಜವಾಬ್ದಾರಿಯನ್ನು ಹೊರಲಾಗದ ವ್ಯಕ್ತಿಯು ಪಂಜಾಬ್ ಜನರ ಜವಾಬ್ದಾರಿಯನ್ನು ಹೇಗೆ ಹೊರಲು ಸಾಧ್ಯ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿರುದ್ಧ ಆಕ್ರೋಶ ಹೊರಹಾಕಿರುವ ಪುತ್ರಿ ಸೀರತ್ ಮಾನ್, ‘ಅವರು ತಮ್ಮ ತಾಯಿಯನ್ನು ಮಾನಸಿಕ ಮತ್ತು ದೈಹಿಕವಾಗಿ ನಿಂದಿಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಭಗವಂತ್ ಮಾನ್ ಅವರು ಅವರ ಮಾಜಿ ಪತ್ನಿಯಾದ ನನ್ನ ತಾಯಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಸಾಲದ್ದಕ್ಕೆ ನನ್ನನ್ನು ಮತ್ತು ಸಹೋದರನನ್ನು ನಿರ್ಲಕ್ಷಿಸಿದ್ದಾರೆ. ನನ್ನ ತಮ್ಮನನ್ನು ಸಿಎಂ ನಿವಾಸದಿಂದ ರಾತ್ರೋರಾತ್ರಿ ಹೊರಹಾಕಿದ್ದಾರೆ ಎಂದು ಸಾಲು ಸಾಲು ಆರೋಪ ಮಾಡಿದ್ದಾರೆ.
ಈ ಕುರಿತು ವೀಡಿಯೊ ಬಿಡುಗಡೆ ಮಾಡಿರುವ ಸೀರತ್, ‘ನಾನು ಸೀರತ್ ಕೌರ್ ಮಾನ್. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮಗಳು. ನಾನು ಅವರನ್ನು ಮಿಸ್ಟರ್ ಮಾನ್ ಎಂದೇ ಕರೆಯುತ್ತೇನೆ. ಸಿಎಂ ಸಾಬ್ ಅವರು ಬಹಳ ಹಿಂದೆಯೇ ತಂದೆ ಎಂದು ಕರೆಸಿಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದಾರೆ. ನಾನು ಈ ವಿಡಿಯೋ ಮಾಡುತ್ತಿರುವುದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ’ ಎಂದು ಅವರು ಹೇಳಿದ್ದಾರೆ.
Punjab CM Bhagwant Mann's daughter Seerat Mann releases video accusing father of emotional abuse…claims Mann attends assembly & press conferences drunk. Questions his ability to govern Punjab amid personal turmoil… pic.twitter.com/zM47rwYAn2
— Nabila Jamal (@nabilajamal_) December 10, 2023
‘ನಮ್ಮ ಕಥೆಯೂ ಜಗತ್ತಿನ ಮುಂದೆ ಬರಲಿ ಎಂಬುದಷ್ಟೇ ಈ ವಿಡಿಯೋ ಮಾಡುತ್ತಿರುವ ಹಿಂದಿನ ಕಾರಣ. ಇವತ್ತಿನವರೆಗೂ ಜನ ಕೇಳಿದ್ದೆಲ್ಲವೂ ಸಿಎಂ ಸಾಬ್ ಅವರು ಹೇಳಿದ್ದು ಮಾತ್ರ. ನಾವು ಜಗತ್ತಿನ ಮುಂದೆ ಹೇಳಿ, ಎದುರಿಸಬೇಕಾಗಿದ್ದ ಸಂಗತಿಗಳೆಲ್ಲವೂ ಇದೆ. ಆದರೆ, ನಾವು ಅದನ್ನೆಲ್ಲಾ ವಿವರಿಸಲು ಸಾಧ್ಯವಿಲ್ಲ. ಇಂದಿನವರೆಗೂ, ನನ್ನ ತಾಯಿ ಮೌನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಮಕ್ಕಳಾಗಿ ನಾವು ಮಾತನಾಡಲಿಲ್ಲವೆಂದರೆ ನಮ್ಮ ಮೌನವನ್ನು ದೌರ್ಬಲ್ಯವೆಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ’ ಎಂದಿದ್ದಾರೆ.
‘ಇಷ್ಟು ದಿನದ ನಮ್ಮ ಮೌನದಿಂದಲೇ ಅವರು ಈ ಸ್ಥಾನದಲ್ಲಿ (ಸಿಎಂ) ಕುಳಿತಿದ್ದಾರೆ ಎಂದು ಅವರಿಗೆ ತಿಳಿದಿಲ್ಲ. ತನ್ನ ತಂದೆ ನನ್ನ (23 ವರ್ಷ) ಮತ್ತು ತನ್ನ ಕಿರಿಯ ಸಹೋದರನ (19) ಜವಾಬ್ದಾರಿ ನಿಭಾಯಿಸಿಲ್ಲ. ಕಳೆದ ವರ್ಷ ಸಹೋದರ ಮಾನ್ ಅವರನ್ನು ಭೇಟಿಯಾಗಲು ಎರಡು ಬಾರಿ ಪ್ರಯತ್ನ ನಡೆಸಿದ್ದರು. ಆದರೆ, ಅಲ್ಲಿದ್ದವರು ಸಿಎಂ ಮನೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಹಲವು ಪ್ರಯತ್ನಗಳ ನಂತರ ಅವನನ್ನು ಒಳಗೆ ಬಿಡಲು ಅನುಮತಿಸಲಾಯಿತು. ಆದರೆ, ರಾತ್ರಿಯಲ್ಲಿ ಅಲ್ಲಿ ಉಳಿಯಲು ಅವಕಾಶವಿಲ್ಲ ಎಂಬ ನೆಪದಲ್ಲಿ ಅವನನ್ನು ನಂತರ ಹೊರಹೋಗುವಂತೆ ಹೇಳಲಾಯಿತು’ ಎಂದು ಹೇಳಿದ್ದಾರೆ.
‘ತನ್ನ ಸ್ವಂತ ಮಕ್ಕಳ ಜವಾಬ್ದಾರಿಯನ್ನು ಹೊರಲಾಗದ ವ್ಯಕ್ತಿ, ಪಂಜಾಬ್ ಜನರ ಜವಾಬ್ದಾರಿಯನ್ನು ಹೇಗೆ ಹೊರಲು ಸಾಧ್ಯ’ ಎಂದು ಸೀರತ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ಜಮ್ಮು-ಕಾಶ್ಮೀರ 370ನೇ ವಿಧಿ ರದ್ದು: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂಕೋರ್ಟ್