ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿಯ ಹಿಂದಿನ ದಿನ ಉತ್ತರಪ್ರದೇಶ ಸರ್ಕಾರವು ಅಲ್ಲಿನ ರೈತರಿಗೆ ‘ವಿಚಿತ್ರ’ ನೋಟಿಸ್ಗಳನ್ನು ನೀಡಿದೆ. ‘ರೈತರು ಶಾಂತಿ ಉಲ್ಲಂಘನೆಯ ಮಾಡುವ ಸಾಧ್ಯತೆ’ ಇರುವುದರಿಂದ, 50 ಸಾವಿರದಿಂದ 10 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ಗಳನ್ನು ಸಲ್ಲಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ “ಶಾಂತಿ ಉಲ್ಲಂಘನೆ” ನೋಟಿಸ್ಗಳನ್ನು ಬಡ ರೈತರಿಗೆ ಹೇಗೆ ನೀಡಲಾಗಿದೆ ಎಂಬುದನ್ನು ಫೆಬ್ರವರಿ 2 ರೊಳಗೆ ವಿವರಿಸಲು ಅಲಹಾಬಾದ್ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿದೆ.
ರಾಜಧಾನಿ ಲಕ್ನೋದಿಂದ 80 ಕಿ.ಮೀ ದೂರದಲ್ಲಿರುವ ಸೀತಾಪುರ ಜಿಲ್ಲೆಯ ಟ್ರಾಕ್ಟರ್ ಮಾಲೀಕತ್ವದ ರೈತರಿಗೆ ಜನವರಿ 19 ರಂದು ನೋಟಿಸ್ ನೀಡಲಾಗಿದೆ. ರೂ 50,000 ದಿಂದ ಗರಿಷ್ಠ ರೂ. 10 ಲಕ್ಷದವರೆಗಿನ ವೈಯಕ್ತಿಕ ಬಾಂಡ್ಗಳನ್ನು ಸಲ್ಲಿಸಲು ಮತ್ತು ಅದೇ ಮೊತ್ತದ ಶ್ಯೂರಿಟಿಗಳನ್ನು ನೀಡಬೇಕು ಎಂದು ನೊಟಿಸ್ನಲ್ಲಿ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ “ರೈತರು ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘಿಸಬಹುದೆಂಬ ಆತಂಕದಲ್ಲಿ’ ಈ ನೋಟಿಸ್ಗಳನ್ನು ನೀಡಲಾಗಿದೆ.
ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಅರುಂಧತಿ ಧುರು ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ಆಲಿಸಿತು. “ರಾಜ್ಯ ಸರ್ಕಾರದ ಅಧಿಕಾರಿಗಳು ಹೊರಡಿಸಿದ ನೋಟಿಸ್ ಆಧಾರ ರಹಿತವಾದುದು ಮಾತ್ರವಲ್ಲದೆ, ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಏಕೆಂದರೆ ಪೊಲೀಸರು ತಮ್ಮ ಮನೆಗಳನ್ನು ಸುತ್ತುವರೆದಿರುವ ಕಾರಣ ರೈತರು ತಮ್ಮ ಮನೆಗಳಿಂದ ಹೊರಬರಲು ಇದು ಅವಕಾಶವನ್ನು ನಿರಾಕರಿಸುತ್ತದೆ’ ಎಂದು ದ್ವಿಸದಸ್ಯ ಪೀಠಕ್ಕೆ ಅರ್ಜಿದಾರರು ದೂರಿದ್ದರು.
‘ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿಗಳ ಮೌಲ್ಯ ತುಂಬ ಜಾಸ್ತಿಯಿದೆ ಮತ್ತು ಬಡ ರೈತರಿಂದ ಅದನ್ನು ಭರಿಸಲು ಸಾಧ್ಯವಿಲ್ಲ, ಅದೂ ಕೇವಲ ಸ್ಥಳೀಯ ಪೊಲೀಸ್ ಸಿಬ್ಬಂದಿಯ ವರದಿಯ ಆಧಾರದ ಮೇಲೆ ಮತ್ತು ರೈತರಿಗೆ ಪ್ರತಿಕ್ರಿಯಿಸಲು ಯಾವುದೇ ಅವಕಾಶವನ್ನು ನೀಡದೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅರ್ಜಿದಾರರು ವಿವರಿಸಿದ್ದರು.
ಉಪ ವಿಭಾಗಾಧಿಕಾರಿ ಜಾರಿ ಮಾಡಿದ್ದ ಅಂತಹ ನೋಟಿಸ್ ಒಂದನ್ನು ಎನ್ಡಿಟಿವಿ ಪರಿಶೀಲಿಸಿದೆ. ಅದರಲ್ಲಿ, “ಕೃಷಿ ಮಸೂದೆಗಳ ವಿರುದ್ಧದ ಪ್ರತಿಭಟನೆಯ ವಿಷಯವಾಗಿ ಜನರ ನಡುವೆ ಆಂತರಿಕ ಸಂಘರ್ಷವಿದೆ, ಉದ್ವಿಗ್ನತೆ ಇದೆ. ಈ ಕಾರಣದಿಂದಾಗಿ, ಶಾಂತಿಯ ಉಲ್ಲಂಘನೆಯಾಗಬಹುದು. ಆದ್ದರಿಂದ, ನೋಟಿಸ್ಗಳ ಮೂಲಕ ಎರಡೂ ಬದಿಗಳನ್ನು ಹತೋಟಿಯಲ್ಲಿಡಲು ಇದು ಅವಶ್ಯಕ. ತಪ್ಪು ಮಾಡಿದರೆ ಬಂಧಿಸಲು ಅವಶ್ಯಕ” ಎಂದು ಬರೆಯಲಾಗಿದೆ.
10 ರೈತರಿಗೆ ಈ ನೋಟಿಸ್ ನೀಡಲಾಗಿದ್ದು, ಎರಡು ದಿನಗಳಲ್ಲಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಲು ಮತ್ತು ವೈಯಕ್ತಿಕ ಬಾಂಡ್ಗಳಿಗೆ ತಾವೇಕೆ ಸಹಿ ಹಾಕುವುದಿಲ್ಲ ಎಂಬುದನ್ನು ವಿವರಿಸುವಂತೆಯೂ ಅದರಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ಮಾಜಿ ಗ್ಯಾಂಗ್ಸ್ಟರ್ ಲಖಾ ಸಿಧಾನಾ – ಜ. 26 ರ ಹಿಂಸಾಚಾರದ ಇನ್ನೊಬ್ಬ ರೂವಾರಿ?