ಬಾಯಾರಿಕೆಗೆ 5 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾಡಾದಲ್ಲಿ ಬಿಸಿ ಮರಳಿನ ದಿಬ್ಬಗಳ ಮಧ್ಯದಲ್ಲಿ ನಡೆದಿದೆ. ಮೃತ ಬಾಲಕಿ ಶವದ ಪಕ್ಕದಲ್ಲೇ ಅಜ್ಜಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ ದೃಶ್ಯ ದೇಶಾದ್ಯಂತ ಜನರ ಮನಕಲಕಿದೆ.
ಮೃತ ಬಾಲಕಿಯನ್ನು ಮಂಜು ಎಂದು, ಅಜ್ಜಿಯನ್ನು ಸುಖಿ ಎಂದು ಎಂದು ಗುರುತಿಸಲಾಗಿದೆ. ನಿರ್ಜಲೀಕರಣದಿಂದಾಗಿ (ಡಿಹೈಡ್ರೇಷನ್) ಮಗುವಿನ ಸಾವು ಸಂಭವಿಸಿದೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ತು ಕಿಲೋಮೀಟರ್ ದೂರದ ಹಳ್ಳಿಯೊಂದರಲ್ಲಿರುವ ತನ್ನ ಅಜ್ಜಿಯ ಸಹೋದರಿಯನ್ನು ಭೇಟಿಯಾಗಲು ಐದು ವರ್ಷದ ಬಾಲಕಿ ತನ್ನ ಅಜ್ಜಿಯೊಂದಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಳು. ತೀವ್ರವಾದ ಬಿಸಿಲಿನ ಶಾಖ ಮತ್ತು ತೀವ್ರತೆ ಕಾರಣದಿಂದ ಅಜ್ಜಿ ಮತ್ತು ಮೊಮ್ಮಗಳು ಸುಸ್ತಾಗಿದ್ದಾರೆ. ಬಾಯಾರಿಕೆ ನೀಗಿಸಲು ಆಗದ ಕಾರಣ ಬಾಲಕಿ ಸಾವಿಗೀಡಾಗಿದ್ದಾಳೆ. ಅಜ್ಜಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಸಂಘದ ನೋಟಿಸ್ ಅಪೂರ್ಣ ಮಾಹಿತಿ ಹೊಂದಿದೆ: ಬಾಬಾ ರಾಮ್ದೇವ್
ಅಜ್ಜಿ ಮತ್ತು ಮೊಮ್ಮಗಳನ್ನು ಕಂಡ ಒಬ್ಬ ಕುರಿಗಾಹಿ ಸ್ಥಳೀಯ ಗ್ರಾಮದ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಅಷ್ಟರಲ್ಲಿ ವೃದ್ಧೆ ಕೂಡ ಪ್ರಜ್ಞೆ ತಪ್ಪಿದ್ದರು. ನಂತರ ಗ್ರಾಮಸ್ಥರು ಬಂದು ನೀರು ಕುಡಿಸಿದಾಗ ಅಜ್ಜಿಗೆ ಸ್ವಲ್ಪ ಪ್ರಜ್ಞೆ ಬಂದಿದೆ.
ಅಜ್ಜಿ ನಿರ್ಜಲೀಕರಣದಿಂದ ಬಳಲುತ್ತಿದ್ದರು ಮತ್ತು ಮಗುವಿನ ಸಾವಿಗೂ ನಿರ್ಜಲೀಕರಣವೇ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅಜ್ಜಿ ಮತ್ತು ಮೊಮ್ಮಗಳು ತಮ್ಮೊಂದಿಗೆ ನೀರನ್ನು ತೆಗೆದುಕೊಂಡು ಹೋಗಿರಲಿಲ್ಲ. ಬಿಸಿಲಿನ ತಾಪಕ್ಕೆ ತೀವ್ರ ಬಾಯಾರಿಕೆಯಾಗಿ ನಿರ್ಜಲೀಕರಣವಾಗಿದೆ’ ಎಂದು ಸ್ಥಳೀಯ ಪೊಲೀಸ್ ಠಾಣೆ ತನಿಖಾಧಿಕಾರಿ ಪದ್ಮರಾಮ್ ರಾಣಾ ಹೇಳಿದರು.
ಸದ್ಯ ವೃದ್ಧೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಆಡಳಿತ ತಿಳಿಸಿದೆ.
“ಮಗುವಿನ ತಾಯಿ ಎರಡನೇ ಮದುವೆಯಾಗಲು ಕೆಲವು ವರ್ಷಗಳ ಹಿಂದೆ ಕುಟುಂಬವನ್ನು ತೊರೆದಿದ್ದರು. ಮಗು ತನ್ನ ಅಜ್ಜಿಯೊಂದಿಗೆ ಏಕಾಂಗಿಯಾಗಿ ವಾಸವಿತ್ತು. ವೃದ್ಧೆ ಸುಖಿ (ಆಹಾರ ಭದ್ರತಾ ಕಾಯ್ದೆ) ಫಲಾನುಭವಿ. ಆದರೆ ಈಗ ಕೆಲವು ತಿಂಗಳುಗಳಿಂದ ಉಚಿತ ಪಡಿತರವನ್ನು ತೆಗೆದುಕೊಂಡಿಲ್ಲ” ಎಂದು ಜಿಲ್ಲಾಧಿಕಾರಿ ನಮ್ರತಾ ಹೇಳಿದ್ದಾರೆ.
ವೃದ್ಧೆ ಕೆಲವೊಮ್ಮೆ ಆಹಾರಕ್ಕಾಗಿ ಬೇಡುತ್ತಿದ್ದರು. ಕೆಲವು ಸಮಯಗಳಲ್ಲಿ ನೆರೆಹೊರೆಯವರು ಆಹಾರ ಒದಗಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷ ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ನಟ, ಹೋರಾಟಗಾರ ಚೇತನ್ ವಿರುದ್ಧ ದೂರು: IStandWithChetanAhimsa ಎಂದ ನೆಟ್ಟಿಗರು