ಪುನೀತ್ ರಾಜಕುಮಾರ್ ಅವರ ಕೊನೆ ಚಿತ್ರ ಜೇಮ್ಸ್ ಅನ್ನು ಚಿತ್ರಮಂದಿರದಿಂದ ತೆಗೆಯಬಾರದು. ಅದನ್ನು ತೆಗೆಯುವಂತೆ ಒತ್ತಡ ಹಾಕುತ್ತಿರುವ ಬಿಜೆಪಿ ಶಾಸಕರ ನಡೆ ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಲಬುರ್ಗಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಅವರು, “ನನಗೆ ಹಲವು ಚಿತ್ರ ಮಂದಿರಗಳ ಮಾಲೀಕರು ಕರೆ ಮಾಡಿದ್ದರು. ಅಪ್ಪು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನನ್ನ ಆತ್ಮೀಯ. ದೇಶದ ಇತಿಹಾಸದಲ್ಲಿ ಅಪಾರ ಜನರಿಂದ ಗೌರವ ಸಂಪಾದಿಸಿದವರು. ಅವರ ಕೊನೆಯ ಚಿತ್ರಕ್ಕೆ ತೊಂದರೆ ನೀಡಲಾಗುತ್ತಿದೆ. ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು. ಆದರೆ ಅದು ಕಾಣುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರಿನ ಬಿಜೆಪಿ ಶಾಸಕರು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆಗೆಯುವಂತೆ ಕರೆ ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಯಾವುದೇ ರೀತಿಯ ಪ್ರಚಾರ ಮಾಡಿಕೊಳ್ಳಲಿ. ಅವರು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಚಿತ್ರಕಥೆ ಮಾಡಿ ಸಿನಿಮಾ ಮಾಡಿದ್ದಾರೆ. ಮಹಾತ್ಮಾಗಾಂಧಿ, ಇಂದಿರಾಗಾಂಧಿ ಹತ್ಯೆಗಿಂತಲೂ ಚಿತ್ರಕಥೆ ಬೇಕಾ? ಅವರು ವಾಸ್ತವಾಂಶ ಬಿಟ್ಟು ಏನು ಮಾಡುತ್ತಾರೋ ಮಾಡಲಿ, ಅದು ಅವರ ಪಕ್ಷದ ಅಜೆಂಡಾ” ಎಂದು ಅವರು ಹೇಳಿದ್ದಾರೆ.
“ಆ ಚಿತ್ರ ತಯಾರಕರನ್ನು ಕರೆದು ಸನ್ಮಾನ ಮಾಡಿ ತೆರಿಗೆ ವಿನಾಯಿತಿ ನೀಡಿದ್ದಾರೆ. ಅದರ ಅಗತ್ಯ ಏನಿತ್ತು? ಅವರು ನಮ್ಮನ್ನು ವಿರೋಧಿಗಳು ಎಂದು ತೋರಿಸಲು ಈ ರೀತಿ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ನಮಗೆ ನೀಡಲಾಗಿರುವ ಹಕ್ಕನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ” ಎಂದು ಡಿಕೆಶಿ ಕಿಡಿ ಕಾರಿದ್ದಾರೆ.
“ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಯಾವುದೇ ಚಿತ್ರಮಂದಿರದಿಂದ ತೆಗೆದುಹಾಕಬಾರದು. ಅವರು ಎಷ್ಟು ದಿನ ನಡೆಸುತ್ತಾರೋ ನಡೆಸಲಿ. ಬಿಜೆಪಿ ಶಾಸಕರ ಈ ನಡೆ ಖಂಡನೀಯ ಶಿವರಾಜಕುಮಾರ್ ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮುಖ್ಯಮಂತ್ರಿಗಳು ಕರೆ ಮಾಡಿಸಿದ್ದರು. ಆದರೂ ಪರವಾಗಿಲ್ಲ. ನಾವು ನಮ್ಮ ನಾಡಿನ ನೀರಿಗಾಗಿ ಹೋರಾಟ ಮಾಡಿದ್ದೇವೆ” ಎಂದು ಅವರು ಹೇಳೀದ್ದಾರೆ.
ಇದನ್ನೂ ಓದಿ: `ಕಾಶ್ಮೀರ್ ಫೈಲ್ಸ್’ಗೆ ತೆರಿಗೆ ವಿನಾಯಿತಿ ನೀಡುವ ಸಿಎಂಗೆ ‘ಜೇಮ್ಸ್’ ನೆನಪಾಗಲಿಲ್ಲವೇ?: ಸಿದ್ದರಾಮಯ್ಯ ಪ್ರಶ್ನೆ