Homeಅಂಕಣಗಳುಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

ಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

- Advertisement -
- Advertisement -
  1. ಗಡಿ

ಛೇ!
ಇದು ಬರೀ ಒಂದು ಗೆರೆ ಕಣೋ
ಯಾರೋ ಸಿಟ್ಟಲ್ಲಿ ಗೀಚಿದ್ದಾರೆ ಅಷ್ಟೆ.
ಬಾ, ಬಾ ಈ ಗೆರೆಯನ್ನೇ
centre line ಮಾಡಿ ಕಬಡ್ಡಿ ಆಡೋಣ.

ನನ್ನ ಏರಿಯಾಗೆ ಬಾ, ಬಂದು
ಒಂದು ಆವಾಜ್ ಹಾಕು.
ನನ್ನ ಮೇಲೆ ಕೈ ಬೀಸು, ಮುಟ್ಟಿ
ಹಿಂದಿರುಗು ನೋಡೋಣ.

ನಾನೂ ಬಿಡೋದಿಲ್ಲ
ನಿನ್ನ ಮೇಲೆ ಬೀಳುತ್ತೇನೆ
ಕಟ್ಟಿಹಾಕುತ್ತೇನೆ ವಾಪಸ್ಸು ಹೋಗದಂತೆ.

ನನ್ನ ಪಾಳಿ ಈಗ,
ನಿನ್ನ ಏರಿಯಾಕ್ಕೆ ನಾನು
ಹು ತು ತೂ ಅನ್ನುತ್ತ ಆಕ್ರಮಣ ಮಾಡಿದಾಗ
ಸಾಧ್ಯವಾದರೆ ನನ್ನ ಹಿಡಿ
ಬಿಡಬೇಡ ವಾಪಸ್ಸು ಗಡಿ ದಾಟಲು.

ಇದು ಬರೀ ಒಂದು ಗೆರೆ ಕಣೋ
ಹಾಗೇ ಇರಲಿ ಬಿಡು
ಯಾರೋ ಸಿಟ್ಟಿನಿಂದ ಗೀಚಿದ್ದಾರೆ
ಅಷ್ಟೇ.

ಗುಲ್ಜಾರ್
ಖ್ಯಾತ ಉರ್ದು ಕವಿ – ಸಿನಿಮಾ ಸಾಹಿತಿ

*****

2. ಕಣ್ಣುಗಳಿಗೆ ವೀಸಾ ಬೇಕಿಲ್ಲ

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.
ಕಣ್ಮುಚ್ಚಿ
ಹಾರಿಬಿಡುತ್ತೇನೆ ಪ್ರತಿದಿನ
ಗಡಿಗಳ ಮಿತಿಯನ್ನು,
ಭೇಟಿಯಾಗಲು
ಮೆಹದೀ ಹಸನ್‌ನನ್ನು!

ಪೆಟ್ಟಾಗಿದೆಯಂತೆ ಅವನ ದನಿಗೇನೋ
ಕುಳಿತುಬಿಟ್ಟಿದೆಯಂತೆ ಗಜಲ್
ಅವನೆದುರು ಮೂಕವಾಗಿ
ತುಟಿ ಕಂಪಿಸುತ್ತ
ಪುಟಗಳ ನಡುವಿನ ಹೂವು
ಒಣಗಿಹೋಗಿದೆಯೆಂದರೆ
ಗೆಳೆಯ ’ಫರಾಜ್’ ಕೂಡ
ಇನ್ನಿಲ್ಲ ಎಂದೇ ಅರ್ಥ.
ಬಹುಶಃ ಇನ್ನು ಕನಸುಗಳಲ್ಲೇ
ನಮ್ಮ ಭೇಟಿ.

ಕಣ್ಮುಚ್ಚಿಕೊಂಡು ದಾಟಿಬಿಡುತ್ತೇನೆ
ಗಡಿಗಳ ಮಿತಿಯನ್ನು ಮೇಲಿಂದ ಮೇಲೆ.

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.

ಗುಲ್ಜಾರ್
ಖ್ಯಾತ ಉರ್ದು ಕವಿ- ಸಿನಿಮಾ ಸಾಹಿತಿ

*****

3. ಕಲಾವಿದನ ಸಂಕಟ

ಹಿಂದುಸ್ತಾನ್ ಜಿಂದಾಬಾದ್
ಪಾಕಿಸ್ತಾನ್ ಜಿಂದಾಬಾದ್
ಎಂದು ಕೂಗುತ್ತ, ಚೀರುತ್ತ ಸಾಗಿರುವ
ಘೋಷಣೆಗಳ ನಡುವೆ
ಬೇಕಾದಷ್ಟು ಪ್ರಶ್ನೆಗಳಿದ್ದವು.

ಯಾವುದನ್ನ ನನ್ನ ದೇಶ ಅಂತ ಹೇಳಲಿ?
ಜನ ಯಾಕೆ ಹೀಗೆ ಒಬ್ಬರಾದ ಮೇಲೊಬ್ಬರು ಸಾಯುತ್ತಿದ್ದಾರೆ?

ಈ ಪ್ರಶ್ನೆಗಳಿಗೆ ಕೆಲವು ನಿರ್ದಿಷ್ಟ ಉತ್ತರಗಳಿವೆ
ಕೆಲವು ಹಿಂದುಸ್ತಾನಿ ಉತ್ತರಗಳು
ಕೆಲವು ಪಾಕಿಸ್ತಾನಿ ಉತ್ತರಗಳು
ಕೆಲವು ಹಿಂದೂ ಉತ್ತರಗಳು
ಕೆಲವು ಮುಸ್ಲಿಂ ಉತ್ತರಗಳು
ಕೆಲವರು ಉತ್ತರಗಳನ್ನ 1857ರ ಪಾಳುಬಿದ್ದ ಇತಿಹಾಸದಲ್ಲಿ ಹುಡುಕಿದರೆ
ಇನ್ನೂ ಕೆಲವರು ಮೊಘಲ್ ಆಡಳಿತದ ಅವಶೇಷಗಳಲ್ಲಿ.

ಎಲ್ಲ ಹಿಂದೆ ಹೋಗಿ ಹುಡುಕುತ್ತಿದ್ದಾರೆ
ಆದರೆ ಇವತ್ತಿನ ಕೊಲೆಗಾರ
ರಕ್ತ ಮತ್ತು ಚೂರಿಗಳಿಂದ ಭವಿಷ್ಯ ಬರೆಯುತ್ತಿದ್ದಾನೆ

ಈ ಸುದ್ದಿ ಹೇಳುತ್ತ ಹೇಳುತ್ತ
ನಾನು ನಿಮ್ಮ ಕಲ್ಲೇಟುಗಳನ್ನ ಬೇಕಾದರೆ ಸಹಿಸಬಲ್ಲೆ
ಆದರೆ ಹಿಂದೂ-ಮುಸ್ಲಿಂ ದಂಗೆಯಲ್ಲಿ
ಯಾರಾದರೂ ನನ್ನ ತಲೆ ಒಡೆದರೆ
ನನ್ನ ರಕ್ತದ ಪ್ರತಿ ಹನಿಯೂ ಕಣ್ಣೀರಿನಲ್ಲಿ ಕೈ ತೊಳೆಯುತ್ತದೆ.

ನಾನೊಬ್ಬ ಕಲಾವಿದ
ನನಗೆ ದುಷ್ಟ ಗಾಯಗಳು ಮತ್ತು
ಕೊಳಕು ಕಲೆಗಳು ಇಷ್ಟವಿಲ್ಲ.

ಸಾದತ್ ಹಸನ್ ಮಂಟೋ
ಉರ್ದುವಿನಲ್ಲಿ ಬರೆಯುತ್ತಿದ್ದ ಖ್ಯಾತ ಕಥೆಗಾರ

*****

4. ಪ್ರೇಮದ ಪಾತ್ರ

ನಮ್ಮ ಈ ದೇಶದಲ್ಲಿ
ಎಷ್ಟೋ ಶತಮಾನಗಳ ನಂತರ
ನಮಗೆ ಸಾಧ್ಯವಾಗಿದೆ ಉಸಿರಾಡಲು,
ಎಷ್ಟೋ ದಶಕಗಳಾದ ಮೇಲೆ
ಅವಕಾಶ ದೊರೆತಿದೆ ಪ್ರೇಮಿಸಲು,
ಎಷ್ಟೋ ಸಮಯವಾದ ಮೇಲೆ
ಶುರು ಮಾಡಿದ್ದೇವೆ ಓದಲು, ಬರೆಯಲು.

ಈಗ ನಾವು ರೂಪಿಸಬೇಕಾಗಿದೆ
ನಮ್ಮ ಪ್ರೇಮ ಪದ್ಯಗಳಲ್ಲಿ
ಬಂಡಾಯದ ರೂಪಕಗಳನ್ನು

ಪ್ರೇಮ ತಾನೇ ಸ್ವತಃ
ಎದ್ದು ನಿಂತು ವಹಿಸಬೇಕಾಗಿದೆ
ಬಂಡಾಯದ ಪಾತ್ರ.

ಯೋಗೇಶ ಮೈತ್ರೇಯ
ಮರಾಠಿ ಯುವ ಕವಿ ಮತ್ತು ವಿಮರ್ಶಕ

*****

5. ಶಿಕ್ಷೆಯ ಅಗತ್ಯವಿಲ್ಲ

ಇನ್ನೊಬ್ಬರಿಂದ
ನಿಮಗೆ ನೋವಾಗುತ್ತಿದೆಯೆಂದರೆ
ಆ ಇನ್ನೊಬ್ಬರು ತಮ್ಮೊಳಗೆ
ಅನುಭವಿಸುತ್ತಿದ್ದಾರೆ ಆಳವಾದ ಸಂಕಟ,
ಮತ್ತು ಉಕ್ಕಿ ಹರಿಯುತ್ತಿದೆ.
ಅವರ ಈ ನೋವು

ನಿಮ್ಮ ಶಿಕ್ಷೆಯ ಅಗತ್ಯವಿಲ್ಲ ಅವರಿಗೆ
ಬೇಕಾಗಿದೆ ನಿಮ್ಮ ಸಹಾಯ
ಈ ಸಂದೇಶವನ್ನೇ ಅಲ್ಲವೆ
ಅವರು ತಲುಪಿಸಲು ಪ್ರಯತ್ನಿಸುತ್ತಿರುವುದು
ನಿಮಗೆ.

ತಿಚ್ ನ್ಹಾತ್ ಹಾನ್
ಬೌದ್ಧ ಚಿಂತಕ-ಬರಹಗಾರ

*****

6. ಹೃದಯದ ಬಾಗಿಲು

ಯಾರನ್ನ ವೈರಿ ಎಂದು ಗುರುತಿಸಲಿ?
ವೈರಿ ಎಂದಮೇಲೆ ಕೈ ಕೈ ಮಿಲಾಯಿಸಲು ತಕ್ಕವನಾಗಿರಬೇಕು.
ಸೂರ್ಯನ ದಿಕ್ಕಿಗೆ ಹೊರಳಿ ಒಂದೇ ಸವನೇ ನಡೆಯುತ್ತಿದ್ದೇನೆ.
ಈಗ ಪ್ರಶ್ನೆ ಕೇಳುತ್ತಿರುವುದು ಹೃದಯ,
ಉದ್ರಿಕ್ತ ಮನಸ್ಸಲ್ಲ.
ಹೃದಯ ಮತ್ತು ಸೂರ್ಯನ ಅಮ್ಮಂದಿರು
ಖಾಸಾ ಅಕ್ಕ ತಂಗಿಯರು.
ಹೃದಯಕ್ಕೆ ನೋಡುವುದೂ ಗೊತ್ತು
ನೋಡಿದ್ದಕ್ಕೆ ಅರ್ಥ ಹಚ್ಚುವುದೂ ಗೊತ್ತು.
ಹೃದಯ,
ಕಟಕಟ ಎನ್ನುತ್ತಿರುವ ಹಲ್ಲುಗಳ ಸಿಟ್ಟಿನ ಕಥೆಯನ್ನು
ಎಷ್ಟು ಸೂಕ್ಷ್ಮವಾಗಿ
ಅರ್ಥಮಾಡಿಕೊಳ್ಳುತ್ತದೆಯೋ
ಅಷ್ಟೇ ಸೂಕ್ಷ್ಮವಾಗಿ
ಮನದಲ್ಲಿಯೇ ಅಂದುಕೊಂಡ ಹಾರೈಕೆಯನ್ನೂ ಕೇಳಿಸಿಕೊಳ್ಳಬಲ್ಲದು.

ಮನಸ್ಸಿನ ಬಾಗಿಲು
ಹೃದಯದ ಮೂಲಕವೇ ತೆರೆದುಕೊಳ್ಳಬೇಕು,
ಯಾವ ವೈರಿ ಒಳಗೆ ನುಗ್ಗಿದರೂ
ಗೆಳೆಯನಾಗುವ ಅಪಾಯವನ್ನು ದಾಟಿಯೇ
ಮುಂದೆ ಹೋಗಬೇಕು.

ಜಾಯ್ ಹಾಜೊ
ಅಮೆರಿಕನ್ ಕವಿ-ಸಂಗೀತಕಾರ್ತಿ

*****

7. ಭಗವಂತನ ಪವಿತ್ರ ಯೋಜನೆ

ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.

ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.

ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,

ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ

ಶಮ್ಸ್ ತಬ್ರೀಝೀ
12 ನೇ ಶತಮಾನದ ಪರ್ಶಿಯನ್ ಕವಿ

*****

8. ಭಗವಂತನಿಂದ

ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ, ಬೌದ್ಧ
ಎಂದೆಲ್ಲ ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ
ಎಷ್ಟು ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ ಎಂದುಕೊಳ್ಳಲೂ
ಭಯವಾಗುತ್ತದೆ.

ಪ್ರೇಮ ನನ್ನನ್ನು
ಎಷ್ಟು ಅಲುಗಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ, ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.

ಹಾಫಿಜ್
14ನೇ ಶತಮಾನದ ಪರ್ಶಿಯನ್ ಕವಿ

ಚಿದಂಬರ ನರೇಂದ್ರ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಕವಿ-ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಚಿದಂಬರ ಅನುವಾದಿಸಿರುವ ಕವನ ಸಂಕಲನ. ’ಗಾಳಿಕೆನೆ’ ಅವರ ಸ್ವತಂತ್ರ ಕವಿತೆಗಳ ಸಂಕಲನ


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...