Homeಅಂಕಣಗಳುಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

- Advertisement -
- Advertisement -

ಭಾರತ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯಗೊಳ್ಳುವ ಹತ್ತು ತಿಂಗಳ ಮುಂಚೆ 1946ರಲ್ಲಿ ಕರ್ನಾಟಕದಲ್ಲಿ ಒಂದು ಭೀಕರ ದಲಿತರ ಹತ್ಯಾಕಾಂಡವಾಗುತ್ತದೆ. ಈ ಹತ್ಯಾಕಾಂಡ ನಡೆದ ವಲಯದ ಪೊಲೀಸ್ ಸ್ಟೇಷನ್ನಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಖುದ್ದು ಭೇಟಿಕೊಟ್ಟು ಪ್ರಕರಣದ ಬಗ್ಗೆ ವಿಚಾರಿಸಿಕೊಂಡು ಹೋಗಿದ್ದಾರೆ. ಅಂತಹ ಭೀಕರ ಘಟನೆಯನ್ನು ಕರ್ನಾಟಕದ ದಲಿತರೂ ಸಹ ಮರೆತುಬಿಟ್ಟಿದ್ದಾರೆ. ಸಂವಿಧಾನ ಸಭೆಯಲ್ಲಿ ದಲಿತರಿಗೆ ರಕ್ಷಣೆ ಹಾಗೂ ಘನತೆ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ ದಲಿತೇತರರೂ ಸಹ ತಮ್ಮ ಮಾತನ್ನು ಮರೆತುಬಿಟ್ಟಿದ್ದಾರೆ. ಈ ಸಾಸನೂರು ಘಟನೆಯನ್ನು ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರು ’ದಲಿತರ ಬದುಕು-ಮೆಲುಕು’ ಕೃತಿಯಲ್ಲಿ ನಮೂದಿಸಿದ್ದಾರೆ.

ವಿಜಾಪುರ ಜಿಲ್ಲೆಯಲ್ಲಿನ ಬಸವನ ಬಾಗೇವಾಡಿ ತಾಲ್ಲೂಕಿನ ಸಾಸನೂರ ಗ್ರಾಮವು ವಿಜಾಪುರದಿಂದ ಸುಮಾರು 65 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿ ದಲಿತರ ಒಂದು ಜಾತಿಯ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ದೌರ್ಜನ್ಯ ನಡೆಸಿದವರು ರೆಡ್ಡಿ ಜನಾಂಗದವರು. 22ನೇ ಅಕ್ಟೋಬರ್ 1946ರ ಮುಂಜಾನೆಯಂದು ದಲಿತರ ಮೇಲೆ ರೆಡ್ಡಿ ಜನಾಂಗದವರು ದೌರ್ಜನ್ಯವೆಸಗಿದರೆಂದು ದಾಖಲಾಗಿದೆ. ದಲಿತರು ಮೇಲ್ಜಾತಿಯ ರೆಡ್ಡಿಗಳಿಗೆ ಅಣ್ಣಾ, ಅಪ್ಪಾ, ಅವ್ವಾ ಎಂದು ಕರೆಯದೆ ಸ್ವಾಭಿಮಾನದ ಬದುಕು ನಡೆಸುತ್ತಿದ್ದದ್ದೇ ಈ ಘಟನೆ ನಡೆಯಲು ಬಹುಮುಖ್ಯ ಕಾರಣವಾಗಿದೆ. ಇದನ್ನು ಸಹಿಸದ ಮೇಲ್ಜಾತಿಯವರು ದಲಿತರ ಮೇಲೆ ದಬ್ಬಾಳಿಕೆಯನ್ನು ಮಾಡತೊಡಗಿದರು.
ಇದರಿಂದ ಜಗ್ಗದ ದಲಿತರು ದೌರ್ಜನ್ಯಕ್ಕೆ ಎದುರಾಗಿ ತಿರುಗಿಬಿದ್ದರು.

ಆದರೆ ಹೀಗೆ ತಿರುಗಿಬಿದ್ದ ದಲಿತರನ್ನು ವಿರುದ್ಧ ಬೀಳುವ ಅಲ್ಲಿನ ಮೇಲ್ಜಾತಿಗಳ ಜನರು, ತಮ್ಮ ಹೊಲದಲ್ಲಿ ಬೆಳೆದ ದವಸಗಳನ್ನು ರಾಶಿ ಮಾಡಿಕೊಂಡು ಬರುತ್ತಿದ್ದಾಗ ಅವರ ಹಾದಿಯಲ್ಲಿಯೇ ಗಾಡಿಯನ್ನು ನಿಲ್ಲಿಸಿ ತಮಗೆ ಬೇಕಾದಷ್ಟು ಆಹಾರ ಧಾನ್ಯವನ್ನು ದಬ್ಬಾಳಿಕೆಯಿಂದ ದಲಿತರು ಕಸಿದುಕೊಂಡು ಹೋಗುತ್ತಿದ್ದರೆಂದು ಆಪಾದಿಸುತ್ತಾರೆ. ಜೊತೆಗೆ ಆಯುಧ ಪೂಜಾ ಸಂದರ್ಭದಲ್ಲಿ ಎತ್ತುಗಳನ್ನು ಶೃಂಗರಿಸಿ ಊರಿನ ಕೇರಿಗಳಲ್ಲಿ ಮೆರವಣಿಗೆ ಮಾಡಲು ದಲಿತರು ಸಿದ್ಧರಾಗಿದ್ದರು. ಆದರೆ ಈ ಎತ್ತುಗಳ ಮೆರವಣಿಗೆಯನ್ನು ತಡೆಗಟ್ಟುವುದು ಮೇಲ್ಜಾತಿಯವರ ಪ್ರತಿಷ್ಠೆಯ ವಿಷಯವಾಗಿತ್ತು.

ಇದರ ಜೊತೆಜೊತೆಗೆ ನಡೆದ ಮತ್ತೊಂದು ಘಟನೆ ಇದು. ಸಾಸನೂರ ಗ್ರಾಮದ ದಲಿತರಾದ ಹೊನ್ನಪ್ಪ ಸಾಸನೂರ ಮತ್ತು ಯಲ್ಲಪ್ಪ ಸಾಸನೂರ ಎಂಬ ಇಬ್ಬರು ಸಹೋದರರು ಕುಸ್ತಿಪಟುಗಳಾಗಿದ್ದರು. ಈ ಇಬ್ಬರು ಪಕ್ಕದ ತುಂಬಗಿ ಗ್ರಾಮಕ್ಕೆ ಕುಸ್ತಿ ಆಡಲು ಹೋಗಿದ್ದರು. ಅಲ್ಲಿಗೆ ಹೋದಾಗ ಮೇಲ್ಜಾತಿಯವರಿಗೆ ಹೊನ್ನಪ್ಪನ ಕಾಲು ತಾಕಿದ್ದನ್ನು ನೆಪ ಮಾಡಲಾಯಿತು. ಹೊಲೆಯನ ಕಾಲು ತಾಕಿತೆಂದು ತುಂಬಗಿಯ ಮೇಲ್ಜಾತಿಯವರು ಹೊನ್ನಪ್ಪನಿಗೆ ಜೀವ ಹೋಗುವ ಹಾಗೆ ಬಡಿದರು. ಇದರಿಂದ ಜೀವಕ್ಕೆ ಹೆದರಿ ಯಲ್ಲಪ್ಪ ಅಲ್ಲಿಂದ ಓಡಿಹೋದ. ತದನಂತರ ಹೊನ್ನಪ್ಪನಿಗೂ ಎಚ್ಚರವಾಯ್ತು; ಇಬ್ಬರೂ ತಮ್ಮ ಊರಾದ ಸಾಸನೂರಿಗೆ ಬಂದರು.

ಇನ್ನೊಂದು ದಿನ ತುಂಬಗಿಯ ಮೇಲ್ಜಾತಿಯ ಜನರು ಬೀಗರ ಊರಾದ ಸಾಸನೂರಿಗೆ ಬರುವ ಸುದ್ದಿಯನ್ನು ತಿಳಿದು ಹೊನ್ನಪ್ಪ ಮತ್ತು ಯಲ್ಲಪ್ಪ ತಮ್ಮ ಸೇಡನ್ನು ತೀರಿಸಿಕೊಳ್ಳಲು ಡೋಣಿಯಲ್ಲಿ ಕಾದು ಕುಳಿತುಕೊಂಡಿದ್ದರು. ಈ ಸುದ್ದಿಯು ಮೇಲ್ಜಾತಿಯವರಿಗೆ ಗೊತ್ತಾದಾಗ ಎರಡೂ ಗುಂಪುಗಳ ಮಧ್ಯೆ ವೈರತ್ವ ಮತ್ತಷ್ಟು ಉಲ್ಬಣಗೊಂಡಿತು. ಉರಿಯುವ ಬೆಂಕಿಗೆ ತುಪ್ಪ ಹಾಕಿದ ಹಾಗಾಯಿತು ಎಂಬಂತೆ ಮತ್ತಷ್ಟು ವಿಕೋಪಕ್ಕೇರಿತು.

ಇದೇ ಸಮಯದಲ್ಲಿ ಒಬ್ಬ ಮೇಲ್ಜಾತಿಯ ಹೆಣ್ಣುಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಈ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅಲ್ಲಿನ ಜನರು ಹೇಳುವುದೇನೆಂದರೆ, ಅವಳಿಗೆ ದಲಿತ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಬಂಧವಿತ್ತು ಮತ್ತು ಆ ಅನೈತಿಕ ವಿಷಯ ಎಲ್ಲ ಮೇಲ್ಜಾತಿಯವರಿಗೆ ಗೊತ್ತಾಗಿದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳೆಂದು. ಆದರೆ ಇನ್ನೊಂದು ಕಡೆ ಮೇಲ್ಜಾತಿಯವರು ಈ ಸಂಬಂಧಕ್ಕೆ ಬಣ್ಣ ಕೊಟ್ಟು ದಲಿತರು ಮೇಲ್ಜಾತಿಯ ಹೆಣ್ಣುಮಕ್ಕಳನ್ನು ಪೀಡಿಸುವುದು, ಅತ್ಯಾಚಾರವೆಸಗುವುದು, ಅನೈತಿಕ ಚಟುವಟಿಕೆ
ಗಳಿಗೆ ಒತ್ತಾಯ ಮಾಡುವುದು ಮುಂತಾದ ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆಂದು ಹಬ್ಬಿಸಿದರು. ಹಾಗೆಯೇ ಈ ಹೆಣ್ಣುಮಗಳೊಂದಿಗೂ ನಡೆದುಕೊಂಡಿರುವ ಕಾರಣ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಕತೆಕಟ್ಟಿದರು. ಈ ಮೇಲ್ವರ್ಗದವರ ಮಾತನ್ನು ಅಂದಿನ ಘಟನೆಯನ್ನು ನೋಡಿರುವ ಸಂಗಪ್ಪನವರು ತಳ್ಳಿಹಾಕುತ್ತಾರೆ.

ದಲಿತರು ಹೀಗೆ ತಿರುಗಿಬಿದ್ದದ್ದರಿಂದಾಗಿ ಮೇಲ್ಜಾತಿಯ ರೆಡ್ಡಿಗಳು ದಲಿತರ ಮೇಲೆ ಮಾಟ-ಮಂತ್ರಗಳನ್ನು ಮಾಡಿಸಲು ಒಬ್ಬ ಮಾಂತ್ರಿಕನ ಬಳಿ ಹೋದರಂತೆ. ಮಾಟಗಾರನು ದೀಪಾವಳಿ ಬಲಿಪಾಡ್ಯದ ದಿನದಂದು ದಲಿತರನ್ನು ಬಲಿ ತೆಗೆದುಕೊಂಡರೆ ಯಾವ ಸಮಸ್ಯೆಯೂ ನಿಮಗೆ ಬರುವುದಿಲ್ಲ ಎಂದು ಹೇಳಿದನಂತೆ. ಅದರ ಪ್ರಕಾರ ಮೇಲ್ಜಾತಿಯವರು ದಲಿತರನ್ನು ಹೊಡೆಯಲು ತಯಾರಿ ಮಾಡಿಕೊಂಡು ದಾಸಪ್ಪನೆಂಬ ಸವರ್ಣೀಯನನ್ನು ಹೊಲಗೇರಿಯಲ್ಲಿ ಹಾಯ್ದು ಕಸ ಚೆಲ್ಲಲು ಕಳುಹಿಸಿಕೊಟ್ಟರು. ಆಗ ಅಲ್ಲಿನ ದಲಿತರು ದಾಸಪ್ಪನನ್ನು ವಿಚಾರಿಸಲಾಗಿ ಅವನು ಕಸ ಚೆಲ್ಲಲು ಬಂದಿರುವುದಾಗಿ ತಿಳಿಸಿದನು. ’ಹಿಡಕೋರಲೆ ಅವನನ್ನು’ ಅಂದ ತಕ್ಷಣ ಅವನು ಸಾರ್ವಜನಿಕವಾಗಿ ಕೂಗುತ್ತಾ, ’ನನ್ನನ್ನು ಹೊಲೆಯರು ಹೊಡೆದರೆಂದು’ ಹೇಳಿದಾಗ ಮನೆಯ ಮೇಲೆ ನಿಂತ ಸವರ್ಣೀಯರು ಹೊಲೆಯರತ್ತ ಕಲ್ಲುಗಳನ್ನು ಬಿಸಾಡಿದರು. ಅದಕ್ಕೆ ಪ್ರತಿಯಾಗಿ ಹೊಲೆಯರು ಸವರ್ಣೀಯರನ್ನು ಹೊಡೆದು ಊರೊಳಕ್ಕೆ ಓಡಿಸಿದರು. ತದನಂತರ ಹೊಲೆಯರೆಲ್ಲ ಒಟ್ಟಾಗಿ ಒಂದು ಮನೆಯಲ್ಲಿ ಸೇಂದಿಯನ್ನು ಕುಡಿಯುತ್ತಾ ಈ ಜಗಳದ ಕುರಿತು ಮಾತನಾಡುತ್ತಿದ್ದರು. ಇದನ್ನು ಸಾಸನೂರಿನ ವ್ಯಕ್ತಿಯು ನೋಡಿ ರೆಡ್ಡಿ ಜನಾಂಗಕ್ಕೆ ಈ ವಿಷಯವನ್ನು ತಿಳಿಸಿದನು. ಇದನ್ನು ತಿಳಿದ ಊರಿನ ಜನರು ಹೊಲೆಯರ ಕೇರಿಗೆ ಬಂದು, ಅಮಲಿನಲ್ಲಿ ಒಟ್ಟಿಗೆ ಸೇರಿದ್ದ ಹೊಲೆಯರ ಕೋಣೆಯ ಬಾಗಿಲನ್ನು ಹೊರಗಿನಿಂದಲೇ ಮುಚ್ಚಿದರು ಮತ್ತು ಕಿಟಕಿ ಮುಖಾಂತರ ಬೆಂಕಿಯಲ್ಲಿ ಮೆಣಸಿನಕಾಯಿಯನ್ನು ಎಸೆದು ಘಾಟು ಎಬ್ಬಿಸಿ ಆ ಮನೆಗೆ ಬೆಂಕಿಯನ್ನು ಹಚ್ಚಿದರು.

ಇದರಿಂದ ವಿಚಲಿತಗೊಂಡ ದಲಿತರು ಮನೆಯೊಳಗೆ ಚೀರಾಡತೊಡಗಿದ್ದರು. ಜಾಗ ಮಾಡಿಕೊಂಡು ಹೊರಬಂದ ದಲಿತರನ್ನು ಒಬ್ಬೊಬ್ಬರಾಗಿ ಕೊಂದರು. ಹೀಗೆ ಒಟ್ಟು 14 ಜನರಲ್ಲಿ 13 ಜನರನ್ನು ಕಡಿದು ಕೊಂದಿರುವ ಪ್ರಕರಣ ಬಸವನ ಬಾಗೇವಾಡಿ ತಾಲ್ಲೂಕಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಮೇಲ್ಜಾತಿಯ ರೆಡ್ಡಿಗಳಿಗೆ ಹೆದರಿ ಶಾಮೀಲಾದ ದಲಿತರ ಮತ್ತೊಂದು ಜಾತಿಯವರು ಆಸೆ ಆಮಿಷಗಳಿಗೆ ಬಲಿಯಾದರು. ಅವರ ಕುಟುಂಬಗಳ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುವುದಾಗಿ ಸವರ್ಣೀಯರು ತಿಳಿಸಿದಾಗ ಆ ಕೊಲೆಯನ್ನು ತಾವೇ ಮಾಡಿದ್ದೇವೆಂದು ಮತ್ತೊಂದು ದಲಿತ ಜಾತಿಯವರು ತಮ್ಮ ಮೇಲೆ ಹಾಕಿಕೊಂಡರು. ಭಯಗೊಂಡ ಕೊಲೆ ಬೆದರಿಕೆಗೊಳಗಾದ ದಲಿತರು ಊರು ಬಿಟ್ಟು ಬೇರೆಬೇರೆ ಊರುಗಳಿಗೆ ಹೋಗಿ ನೆಲೆಸಿದರು. ಇದರಿಂದಾಗಿ ದೌರ್ಜನ್ಯ ಮಾಡಿದ ಸವರ್ಣೀಯರು ಕುತಂತ್ರದಿಂದ ಪಾರಾದರಲ್ಲದೆ ಈ ಪ್ರಕರಣ ಸಂಬಂಧ ಮತ್ತೊಂದು ದಲಿತ ಜಾತಿಯವರಿಗೆ ಶಿಕ್ಷೆಯಾಯಿತು. ದಲಿತರನ್ನು ಕೊಂದದ್ದಕ್ಕೆ ದಲಿತರೇ ಶಿಕ್ಷೆ ಅನುಭವಿಸುವಂತಾಯಿತು. ಈ ದೌರ್ಜನ್ಯ ಘಟನೆಯ ಸಲುವಾಗಿ ಡಾ. ಅಂಬೇಡ್ಕರ್ ಅವರು ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು ಎಂದು 1946ರ ಬೀಟ್ ಡೈರಿಯಲ್ಲಿ ದಾಖಲಾಗಿದೆ.

ಇದೇ ಸಾಸನೂರಿಗೆ ಸಂಬಂಧಿಸಿದಂತೆ ಇಂತಹ ಹಲವು ಘಟನೆಗಳ ರಹಸ್ಯಗಳೇ ತುಂಬಿಹೋಗಿವೆ. ಸಾಸನೂರಿನಿಂದ ಬೇರೆಡೆಗೆ ಬಂದು ನೆಲೆಸಿರುವ ದಲಿತರು 1930ರ ದಶಕದಲ್ಲಿ ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹದ ಪ್ರಭಾವಕ್ಕೆ ಒಳಗಾಗಿ ಸಾಸನೂರಿನ ದಲಿತರನ್ನೂ ಕೆರೆನೀರು ಮುಟ್ಟುವ ಸಾಹಸಕ್ಕೆ ಕೈ ಹಾಕಿದ್ದರೆಂಬ ಕತೆಯೂ ಇದೆ. ಆ ಘಟನೆಯಲ್ಲಿಯೂ ಮರಗದಮ್ಮ ಜಾತ್ರೆಯಲ್ಲಿ ಮರಗದಮ್ಮನಿಗೆ ಸತ್ಯಾಗ್ರಹ ಮಾಡಿದ ದಲಿತರನ್ನೇ ಬಲಿ ನೀಡಲಾಯಿತೆಂದೂ ಹೇಳಲಾಗುತ್ತದೆ. ಇದರ ಸತ್ಯಾಸತ್ಯತೆಯನ್ನು ಸಂಶೋಧನೆಗಳೇ ಬಯಲುಗೊಳಿಸಬೇಕಿದೆ.

ಅದೇನೇ ಇರಲಿ ಬ್ರಿಟಿಷರಿಂದ ಭಾರತೀಯರಿಗೆ ಸ್ವತಂತ್ರ ಬಂದಿದೆಯಾದರೂ ದಲಿತೇತರ ಮೇಲ್ಜಾತಿಗಳಿಂದ ದಲಿತರಿಗೆ ಸ್ವಾತಂತ್ರ್ಯ ದೊರಕಿಲ್ಲ. ಇದಕ್ಕೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಆಗಬೇಕಿದೆ ಎನಿಸುತ್ತದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಬಿಎಸ್‌ಪಿ ತೀವ್ರ ಆಕ್ರೋಶ, ಕುಟುಂಬಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಆಗ್ರಹ

ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ದಲಿತ ಮುಖಂಡ ಹಾಗೂ ಯುವಕ ಭೂಮಾನಂದ (32) ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ದೇವದುರ್ಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’: ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ದ್ವೇಷ ಭಾಷಣಕ್ಕೆ ವ್ಯಾಪಕ ಆಕ್ರೋಶ

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು...

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...