ಕೊಲ್ಕತ್ತಾದ ಪೂರ್ವ ಬುರ್ದ್ವಾನ್ನ ಕೇತುಗ್ರಾಮ್ನಲ್ಲಿ ಪತ್ನಿಗೆ ಸರ್ಕಾರಿ ನೌಕರಿ ಸಿಕ್ಕಿದ್ದಕ್ಕೆ ಪತಿಯೇ ಆಕೆಯ ಬಲ ಅಂಗೈಯನ್ನು ಕತ್ತರಿಸಿರುವ ಅಮಾನವೀಯ ಘಟನೆ ನಡೆದಿದೆ.
ಸಂತ್ರಸ್ತೆ ರೇಣು ಖಾತುನ್ ಕಳೆದ ಮೂರು ವರ್ಷಗಳಿಂದ ಸರ್ಕಾರಿ ನೌಕರಿ ಪಡೆಯಲು ತಯಾರಿ ನಡೆಸುತ್ತಿದ್ದರು. ಇದಕ್ಕೆ ಆಕೆಯ ಆರೋಪಿ ಪತಿ ಮತ್ತು ಆತನ ಹೆತ್ತವರು ವಿರೋಧಿಸಿದ್ದರು. ಆದರೂ ಛಲ ಬಿಡದೆ ಸಂತ್ರಸ್ತೆ ಸರ್ಕಾರಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಪಡೆದಿದ್ದರು. ಮುಂದಿನ ವಾರದಿಂದ ಕೆಲಸಕ್ಕೆ ತೆರಳಬೇಕಿದ್ದ ಆಕೆಯ ಬಲ ಅಂಗೈಯನ್ನು ಭಾನುವಾರ ಪತಿ ಕತ್ತರಿಸಿದ್ದಾರೆ.
“ಕಿರಾಣಿ ಅಂಗಡಿ ಮಾಲೀಕನಾಗಿರುವ ಆಕೆಯ ಪತಿ ಮೊಹಮ್ಮದ್ ಮತ್ತು ಆತನ ಮನೆಯವರು ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುವ ರೇಣು ಅವರ ಆಸೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಮೊಹಮ್ಮದ್ ಮತ್ತು ಅವರ ಪೋಷಕರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ” ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಜನಪ್ರಿಯ ಸಿನಿಮಾಗಳ ಗುಣಮಟ್ಟದ ಜೊತೆಗೇ ಪಾತಾಳಕ್ಕೆ ಕುಸಿದ ಸಿನಿಮಾ ಬರೆಹಗಳು
ಮೊಹಮ್ಮದ್ ಮೊದಲು ರೇಣು ಅವರನ್ನು ದಿಂಬಿನಿಂದ ಉಸಿರುಗಟ್ಟುವಂತೆ ಮಾಡಿ ನಂತರ ಆಕೆಯ ಅಂಗೈ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ರೇಣು ಪ್ರಜ್ಞಾಹೀನರಾದ ನಂತರ, ಮೊಹಮ್ಮದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಕತ್ತರಿಸಿದ ಅಂಗೈಯನ್ನು ಮನೆಯಲ್ಲಿ ಅಡಗಿಸಿಟ್ಟಿದ್ದರು. ಆಕೆಗೆ ಪ್ರಜ್ಞೆ ಬಂದು ತನ್ನ ಸ್ಥಿತಿಯನ್ನು ವಿವರಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ನಮ್ಮ ಮಗಳು ಮದುವೆಗೆ ಮೊದಲು ಖಾಸಗಿ ಆರೋಗ್ಯ ಘಟಕದಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಕೆಲಸ ಮಾಡುವ ನಿರ್ಧಾರಕ್ಕೆ ಆಕೆಯ ಪತಿ ಮತ್ತು ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಇತ್ತೀಚೆಗೆ ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ತನ್ನ ಗುರಿ ಸಾಧಿಸಲು ನಮ್ಮ ಮಗಳು ಇಂತಹ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ನಾನು ಊಹಿಸಿರಲಿಲ್ಲ” ಎಂದು ರೇಣು ಅವರ ತಂದೆ ಅಜೀಜುಲ್ ಹಕ್ ನೋವು ಹೊರಹಾಕಿದ್ದಾರೆ.
ಸಂತ್ರಸ್ತೆ ರೇಣು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ನಂತರ ತನ್ನನ್ನು ಬಿಟ್ಟು ಹೋಗಬಹುದು ಎಂಬ ಅನುಮಾನವನ್ನು ಆರೋಪಿ ಮೊಹಮ್ಮದ್ ತನ್ನ ಸ್ನೇಹಿತರ ಬಳಿ ವ್ಯಕ್ತಪಡಿಸಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.
ಇದನ್ನೂ ಓದಿ: ಕಾರ್ಕಳ: ರಸ್ತೆಗೆ ಗೋಡ್ಸೆ ಹೆಸರು; ಬೋರ್ಡ್ ತೆರವು ಮಾಡಿಸಿದ ಕಾಂಗ್ರೆಸ್ ಮುಖಂಡರು