Homeಕರ್ನಾಟಕಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಉತ್ಸವದಲ್ಲಿ ಪ್ರದರ್ಶನವಾಗುವ ಐದು ನಾಟಕಗಳ ಪರಿಚಯ ಇಲ್ಲಿದೆ

- Advertisement -
- Advertisement -

ಮೈಸೂರು: ನಿರಂತರ ಫೌಂಡೇಶನ್ ಆಯೋಜಿಸುತ್ತಾ ಬರುತ್ತಿರುವ ಪ್ರತಿಷ್ಟಿತ ‘ನಿರಂತರ ರಂಗ ಉತ್ಸವ’ ಈ ಬಾರಿ ಜನವರಿ 25ರಿಂದ ಜ.29ರವರೆಗೆ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ ಏಳು ಗಂಟೆಗೆ ಒಂದೊಂದು ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಜ.25ರಂದು ಸಂಜೆ 6.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ನಿರಂತರ ಸಂಸ್ಥೆಯ ಪ್ರಸಾದ್ ಕುಂದೂರು ಪಾಲ್ಗೊಳ್ಳಲಿದ್ದಾರೆ.

ಜ.26ರಂದು ಪ್ರಜಾವಾಣಿ ಮೈಸೂರು ಬ್ಯುರೋ ಸಂಪಾದಕರಾದ ಕೆ.ನರಸಿಂಹಮೂರ್ತಿ, ಜ.27ರಂದು ಶಿಕ್ಷಣತಜ್ಞ ನಾ.ದಿವಾಕರ್‌, ಹಿರಿಯ ರಂಗಕರ್ಮಿ ಇಂದಿರಾ ನಾಯರ್‌, ಜ.28ರಂದು ಡಾ.ಡಿ.ಬಿ.ನಟೇಶ್‌, ಬೆಂಗಳೂರು ಹಸಿರು ಫೌಂಡೇಷನ್‌ನ ಹೊನ್ಗಳ್ಳಿ ಗಂಗಾಧರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜ.29ರಂದು ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಕವಿ ಆರಿಫ್ ರಾಜ್‌, ಬಿಬಿಎಂಪಿ ವಿಶೇಷ ಆಯುಕ್ತ, ಮಂತ್ರಿಮಂತ್ರಿಯವರ ಕಾರ್ಯದರ್ಶಿ ಜಯರಾಮ್ ರಾಯಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ನಿರಂತರ ಸಂಸ್ಥೆಯ ಶ್ರೀನಿವಾಸ್ ಪಾಲಹಳ್ಳಿ ಹಾಜರಿರುವರು.

ಪ್ರದರ್ಶನವಾಗುವ ನಾಟಕಗಳ ವಿವರ

ಜನವರಿ 25
ನಾಟಕ: ಶಾಂತಕವಿಗಳ ವಿಶ್ರಾಂತಿ
ತಂಡ: ಗೊಂಬೆಮನೆ, ಧಾರವಾಡ
ರಚನೆ & ನಿರ್ದೇಶನ: ಪ್ರಕಾಶ್ ಗರುಡ

ನಾಟಕದ ಬಗ್ಗೆ: ಇದು ಕನ್ನಡದ ಆದ್ಯ ನಾಟಕಕಾರ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ ಜೀವನ-ಸಾಧನೆಗಳ ಕುರಿತಾದ ನಾಟಕ. ಹೆಸರೇ ಸೂಚಿಸುವಂತೆ ಶಾಂತಕವಿಗಳು ಉರ್ಫ್ ಸಕ್ಕರಿ ಬಾಳಾಚಾರ್ಯರೇ ಇದರ ಕೇಂದ್ರ ಪಾತ್ರ. ಐತಿಹಾಸಿಕ ವಿವರಗಳನ್ನು ಒಳಗೊಂಡಿರುವುದರಿಂದ ಇದನ್ನು ದಾಖಲಾತೀ ನಾಟಿಕೆ ಎಂದು ಕರೆಯಲಾಗಿದೆ. ನಾಟಿಕಾ ಎಂಬ ಪದದ ಪ್ರಯೋಗವು ಭರತಮುನಿಯ ನಾಟ್ಯಶಾಸ್ತ್ರ (ಅಧ್ಯಾಯ 20)ದಲ್ಲಿಯೂ ಮತ್ತು ಧನಂಜಯನ ದಶರೂಪಕ (ಪ್ರಕಾಶ- 3)ದಲ್ಲಿಯೂ ಕಂಡುಬರುತ್ತದೆ. ಈ ನಾಟಕ ಶಾಂತಕವಿಗಳ ಕನ್ನಡತ್ವದ ಶೋಧನೆಗಾಗಿ ಹೊಸ ರಂಗಭೂಮಿಯನ್ನು ಕಟ್ಟಲು ಅವರು ಪಟ್ಟಶ್ರಮ ಎದುರಿಸಿದ ಬಿಕ್ಕಟ್ಟುಗಳನ್ನು ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಪ್ರಸ್ತುತ ಪ್ರಯೋಗದಲ್ಲಿ ಪ್ರಯತ್ನಿಸಲಾಗಿದೆ.

***

ಜನವರಿ 26
ನಾಟಕ: ವಾರಸುದಾರಾ
ರಚನೆ: ಜಯರಾಂ ರಾಯಪುರ
ತಂಡ: ನಿರಂತರ, ಮೈಸೂರು
ನಿ: ಪ್ರಸಾದ್ ಕುಂದೂರು

ನಾಟಕದ ಬಗ್ಗೆ: ಹಿಂದೂಸ್ತಾನದ ಚರಿತ್ರೆಯಲ್ಲಿ ಮೊಘಲ್ ಸಾಮ್ರಾಜ್ಯದ ಇತಿಹಾಸ ಎಂದೂ ಮರೆಯಲಾಗದ ಅಧ್ಯಾಯ. ಟರ್ಕಿಯಿಂದ ಬಂದ ತೈಮೂರ್ ವಂಶಸ್ಥರಾದರೂ, ಈ ಭಾರತೀಯ ನೆಲದ ಸಂಸ್ಕೃತಿ-ಸಂಘರ್ಷಗಳನ್ನು, ಭಾವೈಕ್ಯತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ, ಬೃಹತ್ ಸಾಮ್ರಾಜ್ಯದ ಒಡೆತನ ಹೊಂದಿದ್ದ ಮೊಘಲರು, ಮೌರ್ಯರ ನಂತರ ಅಖಂಡ ಹಿಂದೂಸ್ತಾನವನ್ನು ಆಳಿದವರು. ಸರ್ವ ಧರ್ಮಗಳ ಗೌರವಿಸಿ ಪೊರೆಯುವ ಅಕ್ಬರ್‌ನ ಧಾರ್ಮಿಕ ಮತ್ತು ರಾಜಕೀಯ ಚಿಂತನೆಗಳು ಶಹಜಹಾನ್ ಮತ್ತು ಅವನ ಅತ್ಯಂತ ಪ್ರೀತಿಯ ಹಿರಿಯ ಮಗ ದಾರಶಿಕೋನ ಮರಣದಲ್ಲಿ ಪರ್ಯಾವಸನಗೊಳ್ಳುತ್ತದೆ. ಶಹಜಹಾನನ ನಾಲ್ಕು ಮಕ್ಕಳಾದ ದಾರಶಿಕೋ, ಮುರಾದ್, ಶೂಜ, ಜೌರಂಗಜೇಬನಿಗೆ ಮೊಘಲ್ ಹಾಗೂ ಹಿಂದುಸ್ತಾನದ ಬಾದಶಹ ಆಗಬೇಕಾದರೆ ತಮ್ಮ ಅಣ್ಣತಮ್ಮಂದಿರನ್ನೇ ಕೊಂದು ಗಾದಿ ಹಿಡಿಯಬೇಕು. ಇಲ್ಲವಾದರೆ ಪ್ರಾಣ ಕಳೆದುಕೊಂಡು ಪಟ್ಟ ಏರುವವನಿಗೆ ಮೆಟ್ಟಿಲಾಗಬೇಕು. ಹೀಗೆ ತೈಮೂರ್ ವಂಶವಳಿಯ ಈ ರಾಜಕೀಯ ದುರಂತದ ಚರಿತ್ರೆಯೊಳಗೆ ಯಾರು ಶಹಜಹಾನನ ನಂತರ ಮಯೂರ ಸಿಂಹಾಸನದ ಮೇಲೆ ಕೂತು ಅಖಂಡ ಹಿಂದೂಸ್ತಾನವನ್ನು ಆಳಲು ಯೋಗ್ಯರೋ ಎಂದು ಯುದ್ಧವೇ ನಿರ್ಧರಿಸಬೇಕಾಗುತ್ತದೆ. ಇಂತಹ ಮೊಘಲ್ ಸುಲ್ತಾನತ್ತಿಗಾಗಿ ನಡೆದ ರೋಚಕ ಕಾಳಗದ ಕಥನವೇ “ವಾರಸುದಾರಾ”.

****

ಜನವರಿ 27
ನಾಟಕ: ನವಿಲು ಪುರಾಣ
ರಚನೆ: ಪ್ರೊ.ಕೆ.ಈ.ರಾಧಾಕೃಷ್ಣ
ತಂಡ: ಅನೇಕ, ಬೆಂಗಳೂರುನಿ: ಸುರೇಶ್ ಆನಗಳ್ಳಿ

ನಾಟಕದ ಬಗ್ಗೆ: ಮಹಾನ್ ಉರ್ದು ಲೇಖಕ ಇನ್ತಿಜಾರ್ ಹುಸೇನರ ಕತೆಯಿಂದ ಪ್ರೇರಿತವಾದ ‘ನವಿಲು ಪುರಾಣ’ವನ್ನು ಕನ್ನಡದಲ್ಲಿ ಕಥಾರೂಪಕವಾಗಿ ರಚಿಸಿದವರು- ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲವಾಗಿರುವ ಪ್ರೊ.ಕೆ.ಈ.ರಾಧಾಕೃಷ್ಣ ಅವರು. ರಂಗ ಪ್ರದರ್ಶನಕ್ಕೆ ಪರಿಕಲ್ಪಿಸಿ ಅಳವಡಿಸಿದವರು ಮತ್ತು ನಿರ್ದೇಶಿಸಿದವರು, ನಾಡಿನ ಶ್ರೇಷ್ಠ ರಂಗತಪಸ್ವಿ ಸುರೇಶ್ ಅನಗಳ್ಳಿಯವರು.

ವಿನಾಶಕಾರಿ ಯುದ್ಧದ ಪರಿಣಾಮವಾಗಿ ನೆಲೆ ಕಳೆದುಕೊಂಡು ನಿರಾಶ್ರಿತವಾದ ನವಿಲು – ಈ ನಾಟಕದ ಕೇಂದ್ರ ರೂಪಕ. ಈ ರೂಪಕದ ಸುತ್ತ – ಪುರಾಣ, ಇತಿಹಾಸ, ವರ್ತಮಾನ ಕಾಲಘಟ್ಟಗಳ ಹಲವಾರು ಘಟನೆಗಳು ಬಿಚ್ಚಿಕೊಳ್ಳುತ್ತವೆ. ಯುದ್ಧವೆಂದರೆ ಪರರ ನೆಲವನ್ನು, ಸಂಪತ್ತನ್ನು ಕಸಿದುಕೊಳ್ಳುವ ದುಷ್ಟರ ಹುನ್ನಾರವೇ ತಾನೇ? ಬಲಾಢ್ಯರು ಸೃಷ್ಟಿಸುವ ಇಂತಹ ಯುದ್ಧೋನ್ಮಾದ ಹಾಗೂ ಅದರ ಪರಿಣಾಮವಾಗಿ ದುರ್ಬಲರು ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗುವ ಧಾರುಣ ವಿದ್ಯಮಾನಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತದೆ- ಸ್ವತ: ತನ್ನ ನೆಲವನ್ನೇ ಕಳೆದುಕೊಂಡ ನವಿಲು! ನವಿಲು ಪುರಾಣವು ಯುದ್ಧದ ಪರಿಣಾಮವಾಗಿ ನೆಲವಿಹೀನರಾಗುವ ನಾಗರಿಕರ ಸಂಕಟದ ಕಥೆ ಮಾತ್ರವಲ್ಲ; ಸಕಲ ಜೀವ ಸಂಕುಲವನ್ನು ಒಳಗೊಂಡ ಪರಿಸರ ವಿನಾಶದ ಕಥೆಯೂ ಹೌದು. ಹಿಂದೊಮ್ಮೆ ತಿಳಿನೀರ ಕೊಳದಲ್ಲಿ ವಿಹರಿಸುತ್ತಿದ್ದ ರಾಜಹಂಸವು ಇಂದು ಬಡಕಲು ಬಾತುಕೋಳಿಯಾಗಿ ರೂಪಾಂತರಗೊಂಡ ವಿಷಾದದ ಎಳೆಯೂ ಈ ನಾಟಕದ ಕಥಾ ನೇಯ್ಗೆಯಲ್ಲಿದೆ.

ನವಿಲು ಪುರಾಣ ಪ್ರಯೋಗ ವಿನ್ಯಾಸದ ಕುರಿತು: ಈ ನಾಟಕದಲ್ಲಿ ರಂಗಭೂಮಿಗೆ ವಿಶಿಷ್ಟವಾದ ನಾಟಕೀಯ ಸಂಭಾಷಣೆಯ ಬದಲಿಗೆ, ಸಣ್ಣ ಕಥಾ ಸಾಹಿತ್ಯ ಪ್ರಕಾರದಲ್ಲಿ ಬಳಕೆಯಾಗುವ ಕಥನ ನಿರೂಪಣಾ ಶೈಲಿಗೆ ಒತ್ತು ಕೊಡಲಾಗಿದೆ. ಅಂದರೆ, ನಟನು ತಾನು ನಿರ್ವಹಿಸಬೇಕಾದ ಕ್ರಿಯೆಗಳನ್ನು ಪಾತ್ರದ ಹೊರ ನಿಂತು ನಿರೂಪಿಸಲಾಗುತ್ತದೆ ಹಾಗೂ ಮರುಕ್ಷಣವೇ ಪಾತ್ರವಾಗಿ ಮಾರ್ಪಟ್ಟು ಪಾತ್ರದ ಸಂಭಾಷಣೆಯನ್ನು ಹೇಳುತ್ತಾನೆ. ಈ ರೀತಿ ಏಕಕಾಲದಲ್ಲೇ ನಟ-ಪಾತ್ರ ದ್ವಂದ್ವ ಪ್ರಸ್ತುತಿಯ ಜೊತೆಗೆ ಸಾಕ್ಷ ಚಿತ್ರಗಳ ನೈಜ ಬಿಂಬಗಳ ತುಣುಕು; ಸಮೂಹ ನಟನೆಯ ನಾಟಕೀಯತೆ; ಅತಿ- ವಾಸ್ತವತೆಗಳ ಬೃಹತ್ ಬೊಂಬೆಗಳ ಆಟ – ಇತ್ಯಾದಿ ಹಲವು ಮಾಧ್ಯಮಗಳ ಮಿಶ್ರಣದ ಪಾಕವನ್ನು ನವಿಲು ಪುರಾಣದ ದೃಷ್ಟಾಂಶಗಳಲ್ಲಿ ಪ್ರಯೋಗಿಸಲಾಗಿದೆ.

***

ಜನವರಿ 28
ನಾಟಕ: ಮಿಸ್. ಸದಾರಮೆ
ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ
ತಂಡ: ಸಮಷ್ಟಿ, ಬೆಂಗಳೂರು
ನಿ: ಮಂಜುನಾಥ ಎಲ್ ಬಡಿಗೇರ

ನಾಟಕದ ಬಗ್ಗೆ: ಮಿಸ್ ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ವಿರಚಿರ್ತವಾದ ಮೂಲ “ಸದಾರಮಾ ನಾಟಕಂ”ನ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ದವಾಗಿದೆ. ನಂತರ ಇದನ್ನು ಕೆ ವಿ ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಷಕ್ಕೆ ಬದಲಾಯಿಸಿ “ಮಿಸ್ ಸದಾರಮೆ” ಎಂದು ಬಿ ವಿ ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ.

ವರ್ತಕ ಬಂಗಾರ ಶೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ ರಾಜ್ಯ ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ, ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ ಮುಗ್ದೆಯಾದ ಸದಾರಮೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.
ನಾಟಕ ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪೆನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕಥೆಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

****

ಜನವರಿ 29
ನಾಟಕ: ದಕ್ಲಕಥಾ ದೇವಿಕಾವ್ಯ
ತಂಡ: ಜಂಗಮ ಕಲೆಕ್ಟಿವ್, ಬೆಂಗಳೂರು
ರಚನೆ & ನಿರ್ದೇಶನ: ಲಕ್ಷ್ಮಣ ಕೆ.ಪಿ.

ನಾಟಕದ ಬಗ್ಗೆ: ‘ದಕ್ಲ ಕಥಾ ದೇವಿ ಕಾವ್ಯ’ ಕನ್ನಡ ಮಹತ್ವದ ಬರಹಗಾರರು ಮತ್ತು ಕರ್ನಾಟಕ ‘ದಲಿತ ಸಂಘರ್ಷ ಸಮಿತಿ’ಯ ಸ್ಥಾಪಕ ಸದಸ್ಯರು ಆದ ಕೆ.ಬಿ.ಸಿದ್ಧಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗ. ತಳಾತೀತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಭೂಮಿ ಹುಟ್ಟಿದ, ಜೀವ ಹುಟ್ಟಿದ ಕಥನದಿಂದ ಆರಂಭವಾಗುವ ಈ ಪ್ರಯೋಗ, ಈ ಸಮುದಾಯಗಳ ಆಚರಣೆ ನಂಬುಗೆ, ಹಸಿವು, ಬಯಕೆ, ಹಾಡು-ಪಾಡನ್ನು ಬಿಚ್ಚಿಡುತ್ತಾ ಹರಿಯುತ್ತದೆ. ‘ನುಡಿ’ ಎನ್ನುವುದು ಈ ಸಮುದಾಯಗಳಿಗೆ ಮೈಯ್ಯನ್ನು ಬಿಟ್ಟಿರಲಾಗದ ಉಸುರಿದ್ದಂತೆ. ಅರೆ, ತಮಟೆಯಂತಹ ವಾದ್ಯಗಳು ಆ ನುಡಿಬಳ್ಳಿಯ ಕುಡಿಗಳು. ಹೀಗೆ ಅಸ್ಪೃಶ್ಯ ಜಗತ್ತು ನಾದ ಜಗತ್ತು ಕೂಡ ಹೌದು. ಹೀಗಿರುವಾಗ ಶತಮಾನಗಳಿಂದ ದೂರವಿದ್ದ ‘ಅಕ್ಷರ’ವೆಂಬ ಮತ್ತೊಂದು ಅಂಗ ಅಸ್ಪೃಶ್ಯ ಮೈ ಪ್ರಜ್ಞೆಗೆ ತಾಕಿಕೊಂಡಾಗ ಅಲ್ಲಿ ಉಂಟಾಗುವ ಪ್ರೀತಿ, ಹಗೆಯ ಸಂಬಂಧವನ್ನು ಪ್ರಯೋಗ ಎದುರಾಗುತ್ತದೆ. ಹೀಗೆ ‘ಅಸ್ಪೃಶ್ಯತೆ ಮತ್ತು ಅಕ್ಷರದ ಅನುಭವದಿಂದ ದಕ್ಕಿದ ಅರಿವಿನ ಮೂಲಕ ನಮ್ಮಾಳದ ಮನುಷ್ಯನನ್ನು ಎದುರುಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...