ಸಿದ್ದು ಬಿದ್ದುಬಿದ್ದು ನಕ್ಕ ಪರಿಗೆ ಎದುರಿದ್ದವರು ದಂಗುಬಡಿದು ಹೋದರಂತಲ್ಲಾ. ನಕ್ಕ ವ್ಯಕ್ತಿಯೇ ಕಾರಣ ಹೇಳಲೆಂದು ಜನ ಕಾಯ್ದ ನಂತರ ಬಾಯಿಬಿಟ್ಟ ಸಿದ್ದು “ಅಲ್ಲಾ ನಾನು ಕ್ಷೇತ್ರ ಹುಡಕ್ಕೊಂಡು ತಿರುಗ್ತಿನಿ, ನನಗೆ ಕ್ಷೇತ್ರವೇ ಇಲ್ಲ ಅಂತ ಆಡಿಕೊಳ್ಳುತ್ತಿದ್ದ ಈಶ್ವರಪ್ಪನಿಗೆ ಈಗ ಕ್ಷೇತ್ರನೂ ಇಲ್ಲ ಟಿಕೇಟೂ ಇಲ್ದಂಗಾಯ್ತು” ಅಂತ ಮತ್ತೆಮತ್ತೆ ನಕ್ಕರಂತಲ್ಲಾ. ಆಗ ಈಶ್ವರಪ್ಪನ ಮುಖ ನೆನಪಿಸಕೊಂಡವರಿಗೆ, ಈಶ್ವರಪ್ಪನ ಮುಖ ಅಡ್ವಾನಿ ಮುಖದಂತಾಗಿರುವುದು ಜ್ಞಾಪಕಕ್ಕೆ ಬಂದು, ಅದೇ ತರಹ ಸೋಮಣ್ಣನ ಮುಖವು ಆಗಿರುವುದನ್ನು ಕಂಡರಂತಲ್ಲಾ. ಸೋಮಣ್ಣನನ್ನ ಹಿಡಿದು ಸಿದ್ದು ಎದುರು ಹಾಕಲು ಕಾರಣ ಕೇಳಿದರೆ, ಸೋಮಣ್ಣ ವಸತಿ ಖಾತೆಯಿಂದ ಭಾರಿ ಲಾಭ ಮಾಡಿದ್ದು ಅದನ್ನೆಲ್ಲಾ ಸಿದ್ದು ಎದುರು ಸುರಿದು ಗೆದ್ದು ಬರಬೇಕೆಂದು ಆಜ್ಞಾಪಿಸಿದ್ದಾರಂತಲ್ಲಾ. ಇದೇನೆ ಆದರೂ ಕರ್ನಾಟಕದ ಬಿಜೆಪಿಯನ್ನ ಹೈಜಾಕ್ ಮಾಡಿರುವ ಬ್ರಾಹ್ಮಣರು 12 ಜನ ಸ್ವಜಾತಿ ಜನರಿಗೆ ಟಿಕೆಟ್ ಕೊಟ್ಟಿರುವುದಲ್ಲದೆ, 12 ಜನ ಮಹಿಳೆಯರಿಗೂ ಕೊಟ್ಟು ಗೆದ್ದು ಬಂದ ನಂತರ ಮುಂದೆ ಪ್ರಹಲ್ಲಾದ ಜೋಶಿಗೆ ಜೈ ಅನ್ನಬೇಕಂತಲ್ಲಾ, ಥೂತ್ತೇರಿ.
******
ಕರ್ನಾಟಕದ ರಾಜಕಾರಣ ಶ್ಯಾನೆ ಚಮತ್ಕಾರ ಮತ್ತು ಮನರಂಜನೆಯಿಂದ ಕೂಡಿದೆಯಲ್ಲಾ. ಅಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಂತಿದ್ದ ಸುಮಲತಾರನ್ನ ಶಿವರಾಮೇಗೌಡ “ಈಕೆ ಮಾಯಾಂಗನೆ, ಕರ್ನಾಟಕದ ಜಯಲಲಿತ ಆಯ್ತಿನಿ ಅಂತ ಬಂದವುಳೆ, ಈಕೆಯನ್ನು ಸೋಲಿಸಿ ಕಳಸೋದು ನಮ್ಮ ಧರ್ಮ” ಎಂದಿದ್ದರು. ಹಾಗೆ ಹೇಳಿದ್ದ ಶಿ.ರಾ ಗೌಡ ಈಗ ತಮ್ಮ ಹೆಂಡತಿಗೆ ಬಿಜೆಪಿ ಟಿಕೆಟ್ ಪಡೆದು, ಅಕಾಲದಲ್ಲಿ ಬಿಜೆಪಿ ಸೇರಿಕೊಂಡ ಸುಮಲತಾ ಮನೆಗೆ ಹೋಗಿ ನನ್ನ ಹೆಂಡತಿ ಪರ ಕ್ಯಾನ್ವಾಸು ಮಾಡಿ ಎಂದು ಕರೆದಾಗ, ನನ್ನನ್ನ ಮಾಯಾಂಗನೆ ಅಂದ್ರಲ್ಲ ಶಿವರಾಮೇಗೌಡ್ರೆ ಎಂದು ಸುಮಲತಾ ಮೂದಲಿಸಿದರಂತಲ್ಲಾ. ಆಗ ಶಿ.ರಾ ಗೌಡ “ನಾನು ಆತರ ಅಂದಿದ್ಕೆ ಮೇಡಂ, ಜನ ನನ್ನ ಬಗ್ಗೆ ಸಿಟ್ಟಾಗಿ ನಿಮಗೆ ಓಟಾಕಿ ಗೆಲ್ಲಿಸಿದ್ರು” ಅಂದರಂತಲ್ಲಾ. ಇದರಿಂದ ಖುಷಿಯಾದ ಸುಮಲಾತ ಶಿ.ರಾ ಗೌಡರ ಜೊತೆ ನಾಗಮಂಗಲಕ್ಕೆ ಬಂದು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ್ದನ್ನ ನೋಡಿದ ಜನ ಕಣ್ತುಂಬಿಕೊಂಡರಂತಲ್ಲಾ, ಥೂತ್ತೇರಿ.
****
ಸುಮಲಾತರ ಜೊತೆ ರಾಜಕಾರಣ ಆರಂಭಿಸಿರುವ ಶಿ.ರಾ ಗೌಡರನ್ನು ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ಟೋನ್ ’ಕ್ಯಂಚಾಲೊ ಮಚ್ಚಾಲೊ ಯಂಗವುಲಾ ನಿನ್ ಕನ್ಸ್ಗಳು ಗೋವಿಂದಾ ಜೇಡ್ರಳ್ಳಿ ಯಂಗವುಲಾ ನಿನ್ ಡವ್ಗಳು..’
“ಹಲೋ ಯಾರು?”
“ನಾನು ಸಾರ್ ಯಾಹು.”
“ಯಾವು ಎಲ್ಲಿದ್ದಿರಿ?”
“ಬೆಂಗಳೂರಲ್ಲಿದ್ದಿನಿ ಸಾ.”
“ನಾನು ನಾಗಮಂಗಲದಲ್ಲಿದ್ದಿನಿ, ಕಾರು ಕಳುಸ್ತಿನಿ ಬನ್ನಿ.”
“ಆ ಮ್ಯಾಲೆ ಬತ್ತಿನಿ ಸಾರ್. ಈಗೊಂದೆರಡು ಪ್ರಶ್ನೆ..”
“ಕೇಳಿ, ಸ್ವಲುಪ ತೊಂದ್ರೆಲಿದ್ದಿನಿ. ಡ್ಯಾಮೇಜು ಮಾಡೊತರ ಬರಿಬ್ಯಾಡಿ.”
“ನೀವು ಏನೇಳ್ತಿರಿ ಅದ್ನೆ ಬರಿತಿವಿ ಸಾರ್.”
“ಅದ್ನೆ ಬರ್ಯದಿದ್ರೆ, ಹೇಳಿದ ಮಾತನೆ ಕೇಳೋದಿದ್ರೆ ಹಿಂಗ್ಯಾಕ್ರಿ ಆಗದು? ನಾನೇನೋ ನಂಬಿಕೆಯಿಂದ ಆಡಿದ ಮಾತನ್ನೇ ವ್ಯಾಟ್ಸಾಪಿಗಾಕಿ ಜೆಡಿಎಸ್ನಿಂದ ತಗಿಯಂಗೆ ಮಾಡಿದ್ರು. ಅಂಗಾಗಿ ಯಾರ್ನ ನಂಬದು ಬುಡುದು ಅನ್ನಂಗಾಗ್ಯದೆ.”
“ನೀವು ಮಾದೇಗೌಡ್ರಿಗೆ ಬೈದ ಮಾತು ನಿಜ ಅಲವಾ ಸಾರ್?”
“ನಿಜ ಕಂಡ್ರಿ.”
“ಅವುರು ಮಂಡ್ಯ ಜಿಲ್ಲೆಯ ಧೀಮಂತ ರಾಜಕಾರಣಿ. ಅವುರ ಬಗ್ಗೆ ಹೇಳಿದ್ದು ತಪ್ಪಲವಾ?”
“ಏನು ತಪ್ಪರಿ? ಅವುನು ನನ್ನ ಬಗ್ಗೆ ಅಂಗೇ ನ್ಯಡಕಂಡಾ ಅದ್ಕೆ ಅಂಗಂದೆ.”
“ಆಡಿದ ಮಾತಿಗೆ ಪನಿಸ್ಮೆಂಟಾಯ್ತಲ್ಲ ಬುಡಿ. ಈಗ ಬಿಜೆಪಿ ಟಿಕೆಟ್ ತಗಳದೆ ಹೆಂಡತಿಗೆ ಕೊಡಿಸಿದ್ರಲ್ಲ ಯಾಕೇ?”
“ನಾನ್ಯಾಕೆ ಕೊಡಸನ್ರಿ? ಅವುರೆ ಕೊಟ್ಟವುರೆ ಪಾಪ. ನನ್ನೆಡ್ತಿಗೆ ಇಷ್ಟ ಇರಲಿಲ್ಲ. ಯರಡು ಮೂರು ದಿನ ಅತ್ತಲು.”
“ಯಾಕ್ ಸಾರ್?”
“ಅವುಳಿಗೆ ರಾಜಕಾರಣ ಎಷ್ಟು ರಿಸ್ಕು ಅನ್ನದು ಗೊತ್ತು. ಅಂತ ರಿಸ್ಕು ನನಿಗೆ ಬ್ಯಾಡ, ನಿನ್ನ ರಾಜಕಾರಣವೇ ಸಾಕು ಅಂತ ಹೇಳ್ತಳೆ. ಅದ್ಕೆ ಬಲವಂತವಾಗಿ ಯಳಕಂಡು ತಿರುಗ್ತ ಇದ್ದಿನಿ.”
“ಗೆಲ್ತಿರ ಸಾರ್?”
“ಗೆಲ್ತಿದ್ದೊ ಕಂಡ್ರಿ. ಆ ಫೈಟರ್ ರವಿ ಬ್ಯಾರೆ ನಿಂತವುನೆ.”
“ಅವುನ್ಯಾಕ್ ನಿಂತ ಸಾ?”
“ಆ ಸುರೇಶ್ಗೌಡನ್ನ ತಗಿಬೇಕಂತೆ.”
“ನಿಮ್ಮ ಅಪೇಕ್ಷೆನೂ ಅದೇ ಅಂತಲ್ಲ ಸಾರ್?”
“ಊ ಕಂಡ್ರಿ ಅವುನ್ನ ತಂದಿದ್ದು ನಾನೆಯ. ನನಿಗೆ ಗೂಟ ಮಡಗಿದ. ನಾನಾಡಿದ ಮಾತ ವ್ಯಾಟ್ಸಾಪ್ಗಾಕಿ ನನ್ನನ್ನ ಕೇವಲ ಯರಡು ಮೂರು ಗಂಟೆಲಿ ಜೆಡಿಎಸ್ ನಿಂದ ತಗಿಯಂಗೆ ಮಾಡಿದ. ಅದಕ್ಕೆ ನಾವು ಸೋಲದಕಿಂತ ಅವುನು ಗೆಲ್ಲಬಾರ್ದು.”
“ಸುರೇಶ್ಗೌಡನ್ನ ಸೋಲಿಸದು ಕಷ್ಟ. ಅವುರತ್ರ ಬಾರಿ ದುಡ್ಡದೆ.”
ಇದನ್ನೂ ಓದಿ: ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!
“ಇಲ್ಲಿ ನಮಿಗೂ ಪಾರ್ಟಿ ಕೊಡುತ್ತೆ. ಈ ಬಿಜೆಪಿ ಹೇಳಿಕಳೊ ಅಂತ ಯಾವ ಕ್ಯಲಸನೂ ಮಾಡಿಲ್ಲ. ಅದ್ಕೆ ಓಟರ್ನ ಸೆಳೆಯಕ್ಕೆ ಯಾವ್ಯಾವ ತಂತ್ರ ಬೇಕೋ ಅದನ್ನೆಲ್ಲ ಮಾಡ್ತಾ ಐತೆ. ನಾವೇನು ಹೆದರತಾಯಿಲ್ಲ.”
“ಅಂದಾಜೆಷ್ಟು ಕೊಡಬಹುದು?”
“ಗೆಲ್ಲಕ್ಕೆ ಎಷ್ಟು ಬೇಕು ಅಂತ ಹೇಳ್ತಿವಿ, ಅಷ್ಟು ಕೊಡ್ತರೆ.”
“ಫೈಟರ್ ರವಿನು ಖರ್ಚು ಮಾಡ್ತಾ ಇದಾನಲ್ಲವ?”
“ಅವುನು ಕೊಡ್ತನೆ, ಸುರೇಶ್ಗೌಡನೂ ಕೊಡ್ತನೆ, ಅಷ್ಟೊ ಇಷ್ಟೊ ಚಲುವರಾಯಸ್ವಾಮಿನೂ ಕೊಡ್ತನೆ. ನಾವು ಯಲ್ಲಾರಿಗಿಂತ್ಲೂ ಜಾಸ್ತಿ ಕೊಡ್ತಿವಿ”
“ಕಾರ್ಯಕರ್ತರಿಗೆ ಇನ್ನ ಕೊಟ್ಟಿಲ್ಲವಂತೆ?”
“ಈಗ್ಲೆ ಕೊಟ್ರೆ ಈಸಗಂಡು ಹೋಗಿಬುಡ್ತವೆ. ಅದ್ಕೆ ಕಡೆಲಿ ಕೊಡನ ಅಂತ ಇದ್ದಿವಿ.”
“ಬೇರೆ ಕಡೆ ಹೋದ್ರೆ?”
“ಹಿಡಕಂಡು ಬಂದ ನಾಯಿ ಪರಾರಿ ಆಗಕ್ಕೆ ಟೈಂ ನೋಡ್ತವೆ. ಅಂಗೆ ಹೋಗವೇನಾರ ಇದ್ರೆ ಹೋಗ್ಲಿ. ಕಡೆಲಿ ಉಳಕತ್ತವಲ್ಲ ಅವುಕೆ ಕೊಡನ ಅಂತ ಇದ್ದಿನಿ.”
“ನೀವು ಮದ್ಲಿಂದ ಜಾತಿವಾದಿಯಲ್ಲ, ಕುಟುಂಬವಾದಿನೂ ಅಲ್ಲ. ಆದ್ರು ಬಿಜೆಪಿಲ್ಯಂಗೆ ಇರತಿರಿ?”
“ಇರಬಹುದು. ಅಂತ ಎಸ್ಸೆಂ ಕೃಷ್ಣನೆ ಬಿಜೆಪಿಗೋಗಲಿಲ್ಲವಾ? ಇನ್ನ ಶೆಟ್ಟರ್ಗಿಂತ ಬಿಜೆಪಿ ಮನ್ಸ ಇದ್ದನೆ? ಇವತ್ತು ಸೋನಿಯಾ ರಾಹುಲ್ ಅನ್ನಬೇಕಾಗ್ಯದೆ. ನಮ್ಮದ್ಯಲ್ಲ ಡ್ರಾಮ. ಪಾತ್ರಕ್ಕೆ ತಕ್ಕಂಗೆ ವೇಶ ಹಾಕ್ಕಂಡು ಕುಣಿತಿವಿ. ಸುಸ್ತಾದಾಗ ವೇಶ ಬಿಚ್ಚಿ ಯಸಿತಿವಿ. ನನ್ನ ಶರೀರ ನಿಜವೇ ಹೊರತು ವೇಶ ಸುಳ್ಳು. ಸುಧಾ ಸೋತ್ರು, ಬಿಜೆಪಿಗಳು ನನಿಗೇನಾರ ಅನುಕೂಲ ಮಾಡ್ತರೆ. ಅಂಗಾಗಿ ನಾನೀಗ ಬಿಜೆಪಿ.”
“ಮೋದಿಗೆ ಹಿಗ್ಗಾಮುಗ್ಗ ಬೋದಿದ್ರಿ.”
“ಈಗ ಬೈಯ್ಯಕ್ಕಾಯ್ತದ? ಹೊಗಳಬೇಕೆ ನಮ್ಮಣೆಬರ ಏನು ಮಾಡನ..”
“ಥೂತ್ತೇರಿ”


