Homeಅಂಕಣಗಳುಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಧರ್ಮೋನ್ಮಾದದ ದುರಂತವು ಎಲ್ಲ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ.

- Advertisement -
- Advertisement -

ರಾಷ್ಟ್ರೀಯತೆ ಎನ್ನುವುದು ಬಹು ದೊಡ್ಡ ಅಪಾಯವಾಗಬಹುದು. ‘ಒಬ್ಬ ವ್ಯಕ್ತಿ ತಾನು ಪ್ರಬಲನಾಗಲು ಎಂತಹ ಅನೈತಿಕ ಕೆಲಸಗಳನ್ನು ಮಾಡಬಲ್ಲನೋ ಹಾಗೆ ಒಂದು ಸಮುದಾಯ ತಾನು ಪ್ರಬಲವಾಗಲು ಅನೈತಿಕವಾಗಿ ವರ್ತಿಸಬಲ್ಲದು’ ಎಂದಿದ್ದರು ರವೀಂದ್ರನಾಥ ಠಾಗೋರ್.

ನನ್ನ ದೇಶದಲ್ಲೀಗ ರಾಷ್ಟ್ರೀಯತೆಯ ಹೆಸರಿನಲ್ಲಿ ಮತೀಯ ಉನ್ಮಾದ ಹೆಚ್ಚುತ್ತಿದೆ. ರಾಷ್ಟ್ರ ಮತ್ತು ಧರ್ಮಗಳನ್ನು ಒಂದಾಗಿಸುವ ಪ್ರಯತ್ನದಲ್ಲಿ ಬಹುತ್ವದ ಬೇರು ಕತ್ತರಿಸಲಾಗುತ್ತಿದೆ. ಗಾಂಧೀಜಿ ತಮ್ಮ ಹಿಂದ್ ಸ್ವರಾಜ್‍ನಲ್ಲಿ ಯಾವ ಧರ್ಮಾಧಾರಿತ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರೋ ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹರಡಲು ಯತ್ನಿಸುತ್ತಿದೆ. ಒಂದೇ ಧರ್ಮವಿದ್ದರೆ ಒಂದು ರಾಷ್ಟ್ರ ಎನ್ನುವುದು ಸರಿಯಾದದ್ದಲ್ಲ, ಪ್ರತಿಯೊಂದು ಪ್ರಬಲ ಧರ್ಮವೂ ಪ್ರತ್ಯೇಕ ರಾಷ್ಟ್ರದ ತುಡಿತ ಹೊಂದಿದರೆ ಮುಂದೇನು? ಎಂದು ಪ್ರಶ್ನಿಸಿದ್ದರು. ಧರ್ಮ ಬೇರೆಯಿದೆ ಎಂದ ಕ್ಷಣ ಯಾರೂ ವೈರಿಗಳಾಗುವುದಿಲ್ಲ ಎಂದಿದ್ದರು.

ಗಾಂಧೀ ಹತ್ಯೆ ವಾರಸುದಾರರು ಗಾಂಧೀ ಸಾಮರಸ್ಯದ ಚಿಂತನೆಯ ಹತ್ಯಾರರಾಗಿ ಬೆಳೆಯತೊಡಗಿದರು. ಭಾರತಮಾತೆಯ ಜಾಗದಲ್ಲೀಗ ಶ್ರೀರಾಮ ಬಂದು ಕೂತಿದ್ದಾನೆ. ಪ್ರಭುತ್ವದ ಸಂಗೋಪನೆಗಾಗಿ ಎದುರಾದ ಬಿಕ್ಕಟ್ಟುಗಳನ್ನು ನಿವಾರಿಸಲು ಚಾರಿತ್ರಿಕ ತಪ್ಪುಗಳನ್ನು ಮಾಡಿದ್ದ ಶ್ರೀರಾಮ ಆ ನಂತರದಲ್ಲಿ ತನ್ನ ಕೃತ್ಯಗಳಿಗಾಗಿ ಪರಿತಪಿಸಿದವನು. ಮರಣ ಮುಖದಲ್ಲಿದ್ದ ವಾಲಿಯ ಎದುರು ಮೊಣಕಾಲೂರಿ ತಪ್ಪೊಪ್ಪಿಕೊಂಡವನು. ಆ ಶ್ರೀರಾಮನನ್ನು ಕರೆತಂದು ಇತ್ತೀಚೆಗೆ ಜೈಶ್ರೀರಾಮ್ ಘೋಷಣೆ ಕೂಗದ ಕಾರಣಕ್ಕೆ ಹಲ್ಲೆಗೀಡಾಗಿ ಶವವಾಗಿದ್ದ ಮಗನ ಪಕ್ಕ ಶೂನ್ಯ ದಿಟ್ಟಿಸುತ್ತಾ ಕೂತಿದ್ದ ಅಪ್ಪನ ಎದುರು ತಂದು ನಿಲ್ಲಿಸಬೇಕು. ಈ ತಂದೆಯ ದಿಗ್ಭ್ರಾಂತ ದೈನ್ಯಕ್ಕೆ ಶ್ರೀರಾಮ ಏನೆನ್ನಬಹುದು? ಖಂಡಿತ, ಮಗನ ಅಗಲಿಕೆಯ ನೋವಿನ ತೀವ್ರತೆಯನ್ನು ತಾಳದೆ ಮರಣಿಸಿದ ಅಪ್ಪ ದಶರಥನ ಕಣ್ಣಾಳದಲ್ಲಿ ಹೆಪ್ಪುಗಟ್ಟಿದ ಮಮತೆಯ ಸೆಳೆಯನ್ನವನಿಲ್ಲಿ ಕಾಣುತ್ತಿದ್ದನು. ಕರುಣಾಳು ರಾಘವನಿಗೆ ಖಂಡಿತ ಆ ಕಾಣ್ಕಿಯಿತ್ತು.

ಧರ್ಮೋನ್ಮಾದದ ದುರಂತವು ಎಲ್ಲೋ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಘೋಷಣೆ ಕೂಗಿಲ್ಲದ ಕಾರಣಕ್ಕೆ ಜಾರ್ಖಂಡ್‍ನಲ್ಲಿ ಯುವಕನ ಹತ್ಯೆಯಾಗಿದೆ. ಜಾರ್ಖಂಡ್‍ನ ಮುಸ್ಲಿಂ ಶಾಸಕರೊಬ್ಬರಿಗೆ ಈ ಘೋಷಣೆ ಕೂಗಲು ಒತ್ತಾಯಿಸುವ ವಿಡಿಯೋ ವೈರಲ್ ಆಗಿದೆ. ಕಲ್ಕತ್ತದಲ್ಲಿ ಶಿಕ್ಷಕರೊಬ್ಬರನ್ನು ರೈಲು ಪ್ರಯಾಣದಲ್ಲಿ ಹೀಗೆ ಪೀಡಿಸಲಾಗಿದೆ. ವರದಿಯಾಗಿರುವ ಘಟನೆಗಳನ್ನು ಗಮನಿಸಿದರೆ ದೇಶವೀಗ ಕುದಿಯುತ್ತಿದೆ. ದೇವರು ಧರ್ಮ ಎಂಬ ಜೀವಪ್ರೇಮದ ಸಂಕೇತಗಳನ್ನು ದ್ವೇಷದ ಕಾರಣವಾಗಿ ಬದಲಿಸುವುದು ಎಂದರೆ ಜೀವಪೋಷಕ ಜಲವನ್ನು ವಿನಾಶಕ್ಕೆ ಉದ್ದೀಪಿಸಿದಂತೆ.

ಈ ಉನ್ಮತ್ತತೆ ಎಳೆಎಳೆಯ ಯುವಕರ ಬೆನ್ನಿನ ಮೇಲೆ ‘. . . . .ಹುಲಿ ಮುಟ್ಟಿದರೆ ಬಲಿ’ ಎಂಬ ಹಿಂಸಾಶಾಸನವಾಗಿ ರಾರಾಜಿಸುತ್ತಿದೆ. ಇಂತಹ ಸಂದರ್ಭಗಳನ್ನು ತಹಬಂದಿಗೆ ತರಬೇಕಾದ ನಿಷ್ಠುರ ಕಾನೂನು ರಕ್ಷಣೆಯೂ ಕಾಣುತ್ತಿಲ್ಲ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ 15 ವರ್ಷದ ಬಾಲಕ ಇದೇ ಹಿಂಸೆಯಿಂದ ಆಸ್ಪತ್ರೆ ಸೇರಿ ಪೊಲೀಸರು ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಾಲಕನ ಮಾತುಗಳು ಆಸ್ಪತ್ರೆಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಪೊಲೀಸರು ‘ಬಾಲಕ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಅವನೂ ಅವನ ತಾಯಿಯೂ ಒತ್ತಡಕ್ಕೆ ಮಣಿಯುತ್ತಿದ್ದಾರೆ’ ಎನ್ನುತ್ತಿದ್ದಾರೆ. ಪೊಲೀಸರ ಈ ಪಕ್ಷಪಾತ ವರ್ತನೆಯ ಕಾರಣಗಳು ಸ್ಪಷ್ಟ. ಅವರು ಆರೋಪಿಗಳ ರಕ್ಷಕರಾಗಿರುವ ಪ್ರಭುತ್ವದ ಪರವಾಗಿರಲು ಯತ್ನಿಸುತ್ತಾರೆ. ಇಂತಹ ಘಟನೆಗಳು ಯಾವ ದೇಶದ ಆಂತರಿಕ ವಿಕಾಸಕ್ಕೂ ತಕ್ಕುದಲ್ಲ. ಆದರೇನು? ಪ್ರಜಾಪ್ರಭುತ್ವವನ್ನೇ ಆರಾಣೆ-ಬಾರಾಣೆಗೆ ಮಾರಿಕೊಳ್ಳಲು ನಿಂತ ಮೇಲೆ ಅದರ ಘನತೆಯ ಮಾತೇನು?

ನಾವೀಗ ಚಲಾವಣೆಗೆ ತಂದುಕೊಂಡಿರುವುದು ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಇದರಲ್ಲಿ ಪ್ರಜಾಪ್ರಭುತ್ವದ ಆಶಯಗಳು ಕ್ವಚಿತ್ತಾಗಿ ಆಕಸ್ಮಿಕವಾಗಿ ನಡೆಯುತ್ತವೆ. ಬಂಡವಾಳಶಾಹಿ ಹಿತಾಸಕ್ತಿಗಳೇ ಕಾರ್ಯರೂಪದಲ್ಲಿರುತ್ತವೆ. ನಮ್ಮ ಚುನಾವಣೆಗಳು ಬಹುಕೋಟಿ ಹೂಡಿಕೆಯ ಉದ್ಯಮವಾಗಿದೆ. ನಮ್ಮ ಸಂಸತ್ತುಗಳಲ್ಲಿ ಪ್ರವೇಶ ಪಡೆಯುವವರು ಕೋಟ್ಯಾಧಿಪತಿಗಳೂ, ಕ್ರಿಮಿನಲ್ ಹಿನ್ನೆಲೆಯವರೂ ಆಗಿರುವುದನ್ನು ಸಹಜ ಎಂದು ಒಪ್ಪಿಕೊಳ್ಳುತ್ತಿದ್ದೇವೆ. ಬಂಡವಾಳಪರ ರಾಜಕಾರಣ ಉಗ್ರ ಬಲಪಂಥೀಯ ರಾಷ್ಟ್ರೀಯವಾದವನ್ನು ಬೆಳೆಸುತ್ತದೆ. ಸಾದತ್ ಹಸನ್ ಮಾಂಟೋ ಕಥೆ ‘ಕಾರ್ಯಾಚರಣೆ’ ಈ ಮತೀಯ ಉನ್ಮಾದ ಮತ್ತು ಬಂಡವಾಳೋದ್ಯಮದ ಬಿಗಿತವನ್ನು ಹೇಳುತ್ತದೆ. ಈ ಕಥೆ ಹೀಗಿದೆ ‘ರಾತ್ರಿಯೆಲ್ಲ ಆ ಓಣಿ ಬೆಂಕಿಯಲ್ಲಿ ಬೆಂದುಹೋಯಿತು. ಒಂದು ಅಂಗಡಿ ಸುಡದೇ ಉಳಿದಿತ್ತು. ಬೆಳಗ್ಗೆ ಅಂಗಡಿಯ ಮುಂದಿನ ಬೋರ್ಡಿನಲ್ಲಿ ಇಲ್ಲಿ ಮನೆ ರಿಪೇರಿಯ ಸಾಮಗ್ರಿಗಳು ಮಾರಾಟಕ್ಕಿದೆ ಎಂದು ಬರೆದಿತ್ತು.’ ಮತೀಯ ಹಿಂಸೆ ಮತ್ತು ಬಂಡವಾಳದ ಬೆರಕೆಯನ್ನು ಇನ್ನೂ ಸಂಕೀರ್ಣ ರೂಪಕದಲ್ಲಿಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುತ್ತದೆ. ‘ಜೈಶ್ರೀರಾಮ್’ ಘೋಷಣೆಯನ್ನೂ ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ದೇಶದ ಗೃಹಮಂತ್ರಿಗಳು ಹೇಳಲು ಸಾಧ್ಯವಾಗುತ್ತದೆ.

ವಾಲ್ಮೀಕಿ ಹೇಳುವ ರಾಮಕಥೆಯೊಂದು ಹೀಗಿದೆ. ‘ರಾಮ ಸೀತೆಯರು ವನವಾಸದ ಸೌಖ್ಯದಲ್ಲಿದ್ದ ಕಾಲ. ಅರೆ ಸಂಜೆ ಕಲ್ಲು ಬಂಡೆಯ ಮೇಲೆ ಕುಳಿತು ಹರಟೆ. ರಾಮಧನಸ್ಸು ನೆಲಕ್ಕೆ ಚುಚ್ಚಿತ್ತು. ಎದ್ದು ಹೊರಟು ಬಿಲ್ಲು ಎತ್ತಿದರೆ, ಬಿಲ್ಲಿನ ಮೊನೆಗೆ ಚುಚ್ಚಿದ್ದ ಮಂಡೂಕ ಜಟ್ಟಿಯಾಗಿ ವಿಲಗೂಡುತ್ತಿತ್ತು. ಸೀತೆ ಗಾಬರಿಯಿಂದ ಕೇಳಿದಳಂತೆ ಯಾಕೆ ಸುಮ್ಮನಿದ್ದೆ? ಕೂಗಬಾರದೆ? ಮಂಡೂಕ ವಿಷಾದದಿಂದ ಉಸುರಿತಂತೆ. ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ?’ ಈ ಘಟನೆ ಸೀತೆಗೆ ಅವಳ ಮುಂದಿನ ದಿನಗಳಲ್ಲಿ ಪದೇಪದೇ ನೆನಪಾಗುತ್ತದೆ. ರಾಮನನ್ನು ಪ್ರೀತಿಸಿದ ಭಾರತೀಯ ಮನಸ್ಸೀಗ ಈ ಸ್ಥಿತಿಯಲ್ಲಿಯೇ ಇದೆಯೇ?

ಇದೀಗ ಪ್ರತಿರೋಧವನ್ನು ಉಸುರುವುದೂ ಅಪರಾಧವಾಗಿದೆ. ‘ಜೈರಾಮ್ ಘೋಷಣೆ ಯುದ್ಧದ ಘೋಷಣೆಯಂತೆ ಬಳಕೆಯಾಗುತ್ತಿದೆ. ರಾಮನ ಹೆಸರು ಅಪವಿತ್ರಗೊಳ್ಳುತ್ತಿದೆ’ ಎಂದು ದೇಶದ 49 ಚಿಂತಕರು, ಸೃಜನಶೀಲರು ಪ್ರಧಾನಮಂತ್ರಿಯವರಿಗೊಂದು ಪತ್ರ ಬರೆದರು. ಅದರೀಗ ಅವರ ಕಳಕಳಿಯನ್ನೇ ತಪ್ಪೆಂದು ಸಾಧಿಸುವ ಪ್ರಯತ್ನ ನಡೆಯುತ್ತಿದೆ. 62 ಸೆಲೆಬ್ರಿಟಿಗಳಿಂದ ‘ಈ ಪತ್ರ ದೇಶದ್ರೋಹ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂದು ಮರುಪತ್ರ ಹೋಯಿತು. ಇದರ ಆಧಾರದಿಂದ ಬಿಹಾರದ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಯಿತು. ದೇಶಪ್ರೇಮದ ನಿಜವಾದ ಆಯಾಮವನ್ನು ದ್ರೋಹವೆಂದು ತಿರುಚುವ ಸ್ಥಿತಿಯಿದು.

ಕೇರಳದ ಬಿಜೆಪಿಯವರು ತಮ್ಮ ನಾಡಿನ ಹೆಮ್ಮೆಯಾದ ಪದ್ಮವಿಭೂಷಣ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಆಡೂರರಿಗೆ ಭಾರತ ಬಿಟ್ಟು ಚಂದ್ರಗ್ರಹಕ್ಕೆ ಹೋಗುವಂತೆ ಹೀನಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ನಟ ಕೌಶಿಕ್ ಸೇನರಿಗೆ ಜೀವಬೆದರಿಕೆಯ ಕರೆಗಳು ಬಂದವು. ಏನಾಗುತ್ತಿದೆ ನಮ್ಮ ದೇಶಕ್ಕೆ? ರಾಷ್ಟ್ರಧ್ವಜದ ಕೆಳಗೆ ನಿಂತು ಜನಗಣಮನ ಹಾಡುವಾಗ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಈ ದುರಂತದಲ್ಲಿ ನನ್ನ ಪಾಲೆಷ್ಟು?

ಯಾವ ವ್ಯಕ್ತಿಗೂ ಯಾವ ನೆಪದಿಂದಲೂ ಇನ್ನೊಬ್ಬರ ವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸುವ ಹಕ್ಕಿಲ್ಲ – ಎಂದಿದ್ದರು ಶಿವರಾಮ ಕಾರಂತರು. ಬೇಂದ್ರೆಯವರು ಓರಿಯೆಂಟಲ್ ಹಿಸ್ಟರಿಯ ವಿರುದ್ಧ ಜನಕಥನಕ್ಕೆ ಕಿವಿಗೊಡಿ ಎಂದಿದ್ದರು.
ಭರತಖಂಡ ಬದನಿಕಾಯಿ,
ಭರತಾ ಮಾಡಬ್ಯಾಡ ತಮ್ಮಾ
ಸುರತದ ಕಲಹ ಮೆತ್ತಬ್ಯಾಡ,
ಒಮ್ಮನವಿರದೆ ನಮ್ಮ ನಿಮ್ಮ
ಎಂದು ತಿಳಿಸಿದ್ದರು.

ನವೋದಯದ ಸಾಹಿತ್ಯದಲ್ಲಿ ದೇಶಪ್ರೇಮ ತೊಟ್ಟಿಕ್ಕುತ್ತದೆ. ದೇಶವಿಭಜನೆಯ ಹಿಂಸೆಯಲ್ಲಿ ದೇಶಪ್ರೇಮದ ಬೆಳಕಿನ ಕಿರಣದ ಶೋಧನೆಯಿದೆ. ದೇಶಪ್ರೇಮ ಮತ್ತು ಮತೀಯ ಉನ್ಮಾದಗಳು ಪರಸ್ಪರ ವಿಮುಖವಾದದೆಂಬ ತಿಳಿವಿದ್ದ ಕಾಲವದು. ಆದರೀಗ ದೇಶಪ್ರೇಮವು ಉನ್ಮಾದವನ್ನು ಉದ್ದೀಪಿಸುವ ಸರಕಾಗಿದೆ. ಅದರೊಳಗಿದ್ದ ಮತಧರ್ಮ ಪ್ರೇಮವು ಚರ್ಮಕಿತ್ತು ಹೊರಗಿಣುಕುತ್ತಿದೆ. ರಾಷ್ಟ್ರಭಕ್ತಿ–ರಾಷ್ಟ್ರ ಚಾರಿತ್ರ್ಯದ ವಿಷಯದಲ್ಲಿ ತಪ್ಪು ಕಲಿತು, ತಪ್ಪು ಬೆಳೆಸಿ, ತಪ್ಪು ವಿಜೃಂಭಿಸುತ್ತಿರುವ ವರ್ತಮಾನವಿದು ಕವಿ ಆರ್.ವಿ.ಭಂಡಾರಿಯವರ ‘ಇತಿಹಾಸ’ ಪದ್ಯ ನೆನಪಾಗುತ್ತಿದೆ.
ನೇಗಿಲ ಮೊನೆಯಿಂದ ಇತಿಹಾಸ ಕೊರೆಯಲ್ಪಟ್ಟಿತು
ಕಿರೀಟದ ವಜ್ರದ ಮೊನೆಯಿಂದ ಎಂದು ಕಲಿಸಿದರು
ಗೆಯ್ಮೆಯ ಕೈಯಿಂದ ಇತಿಹಾಸ ನಿರ್ಮಾಣವಾಯಿತು
ಆದರೆ ಪುರೋಹಿತರ ಮಂತ್ರದಿಂದ ಎಂದು ಕಲಿಸಿದರು.
ನಮ್ಮನ್ನು ತಪ್ಪಾಗಿ ಕಲಿಸಿದ ಪಾಠಗಳಿಂದ ಬಿಡುಗಡೆಗೊಂಡು, ನಿಜದ ಬೆಳಕಿನಲ್ಲಿ ಇತಿಹಾಸ -ವರ್ತಮಾನಗಳನ್ನು ಕಾಣುವ, ಸತ್ಯದ ವಿಷದ ಬಟ್ಟಲುಗಳಲ್ಲಿ ನಮ್ಮ ಪಾಲೂ ಇರಲಿ ಎಂದು ಧ್ವಜಕ್ಕೆ ನಮಿಸುವಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...