Homeಅಂಕಣಗಳುಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

- Advertisement -
- Advertisement -

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ ಆಪಾದನೆಯನ್ನು ಮಾನ್ಯ ಪ್ರಧಾನಮಂತ್ರಿಗಳು ಸಾಬೀತುಮಾಡಿಕೊಂಡೇ ಬಂದಿದ್ದಾರೆ. ಅತಿ ಹೆಚ್ಚು ಪ್ರಚಾರ ಮಾಡಲಾಗಿದ್ದ ಪ್ರಧಾನಿ ಅವರ ಯುಎಸ್‌ಎ ಪ್ರವಾಸದ ಕಾರ್ಯಕಲಾಪಗಳಲ್ಲಿ, ಆ ದೇಶದ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ನಡೆಸಲಿದ್ದ ಪತ್ರಿಕಾಗೋಷ್ಠಿ ಪ್ರವಾಸಕ್ಕಿಂತಲೂ ಸ್ವಲ್ಪ ಹೆಚ್ಚು ಪ್ರಚಾರ ಪಡೆದುಕೊಂಡಿದ್ದೇನೋ ನಿಜ. ಕೇವಲ ಎರಡು ಪ್ರಶ್ನೆಗಳಿಗೆ ಸೀಮಿತವಾಗಿದ್ದ ಆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಎರಡೂ ರಾಷ್ಟ್ರಗಳ ಮುಖಂಡರು ಉತ್ತರಿಸಿದ್ದು, ಎರಡೂ ದೇಶಗಳಲ್ಲಿ ಇನ್ನೇನು ಬರಲಿರುವ ಚುನಾವಣೆಗಳಿಗೆ ಭಾಷಣ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿತ್ತು. ಭಾರತದ ಪ್ರಧಾನಿಯವರಿಗೆ ಪ್ರೆಸ್ ಕಾನ್ಫರೆನ್ಸ್ ಎಂಬುದು ಬ್ರಹ್ಮಾಂಡದಲ್ಲಿ ನಡೆಯುವ ವಿರಳ ಘಟನೆಯಂತಾಗಿರುವ ಸಮಯದಲ್ಲಿ, ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ಪರಿಸರ-ಹವಾಮಾನ ಇವೆಲ್ಲವೂ ನಮ್ಮ ಸಂಸ್ಕೃತಿ ಎಂಬಿತ್ಯಾದಿಯಾಗಿ ಎಂದಿನಂತೆ ಯಾವುದೇ ಅಂಕಿಅಂಶಗಳ ಆಧಾರವಿಲ್ಲದೆ ಅವರು ಕೊಚ್ಚಿಕೊಂಡಿದ್ದಾರೆ. ಫಾಲೋ-ಅಪ್ ಪ್ರಶ್ನೆಗೆ ಅವಕಾಶವೂ ಇಲ್ಲದಂತೆ ’ಫಿಕ್ಸ್’ ಮಾಡಿಕೊಂಡಿದ್ದ ಪ್ರೆಸ್ ಕಾನ್ಫರೆನ್ಸ್‌ನಲ್ಲಿನ ಮಾತುಗಳಿಗೆ ಯಾವ ಆತ್ಮಸಾಕ್ಷಿಯ ಅವಶ್ಯಕತೆಯೂ ಇರುವುದಿಲ್ಲ. ಅದರಂತೆಯೇ ಇಬ್ಬರೂ ಮುಖಂಡರು ನಡೆದುಕೊಂಡಿದ್ದಾರೆ. ಕನಿಷ್ಠ ಪಕ್ಷ ಬೈಡೆನ್ ನಡೆಯನ್ನು ಬೂಟಾಟಿಕೆ ಎಂದು ಅಲ್ಲಿನ ಮಾಧ್ಯಮಗಳು (ಸ್ವತಂತ್ರ, ಸಣ್ಣವು, ದೊಡ್ಡವು ಮತ್ತು ಮುಖ್ಯವಾಹಿನಿಗಳು ಸೇರಿದಂತೆ) ಬಣ್ಣಿಸುವುದಕ್ಕೆ ಸಾಧ್ಯವಾದಷ್ಟು ಅಲ್ಲಿ ಖಂಡಿತಾ ಪ್ರಜಾಪ್ರಭುತ್ವ ಉಳಿದಿದೆ! ಇಲ್ಲಿ ಮೋದಿಯವರನ್ನು ಟೀಕಿಸಿದ ಮೇನ್‌ಸ್ಟ್ರೀಮ್ ಮಾಧ್ಯಮಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಆ ಮಟ್ಟಿಗೆ ತೋರಿಕೆಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಕೂಡ ಇಲ್ಲಿನ ಪ್ರಭುತ್ವ ಎಫರ್ಟ್ ಹಾಕಿರುವಂತೆ ಕಾಣುವುದಿಲ್ಲ.

ಪ್ರಜಾಪ್ರಭುತ್ವದ ತೋರಿಕೆಯೂ ಇಲ್ಲ ಎಂಬುವುದಕ್ಕೆ ಕ್ಲಾಸಿಕ್ ಉದಾಹರಣೆಯೆಂಬಂತೆ ಮೋದಿಯವರನ್ನು ಅಂದು ಪ್ರಶ್ನಿಸಿದ ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ಪತ್ರಕರ್ತೆಯ ಮೇಲೆ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ಪ್ರಾರಂಭವಾಗಿತ್ತು. ದಾಳಿ ನಡೆಸುತ್ತಿದ್ದವರು ಯಾರೋ ’ಫ್ರಿಂಜ್’ಗಳಲ್ಲ; (2022ರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮ ಪ್ರವಾದಿ ಮೊಹಮದ್ ಅವರ ಮೇಲೆ ಅನುಚಿತ ಪ್ರತಿಕ್ರಿಯೆಗಳನ್ನು ನೀಡಿದ್ದರು. ಮಧ್ಯಪ್ರಾಚ್ಯದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಇದನ್ನು ವಿರೋಧಿಸಿ ಆರ್ಥಿಕ ನಿರ್ಬಂಧದ ಬೆದರಿಕೆ ಹಾಕಿದ ಮೇಲೆ ಬಿಜೆಪಿ ಅವರನ್ನು ಫ್ರಿಂಜ್ ಎಂದು ಬಗೆದು ತನ್ನನ್ನು ನೂಪುರ್ ಅವರ ಹೇಳಿಕೆಯಿಂದ ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸಿತ್ತು. ಇಂತಹ ಸಂದರ್ಭ ಈಗ ಡಬ್ಲ್ಯುಎಸ್‌ಜೆ ಪತ್ರಕರ್ತೆಯ ಮೇಲೆ ಪ್ರತಿಕ್ರಿಯಿಸುವ ವ್ಯಕ್ತಿಗೆ ಮುಂದೆಂದಾದರೂ ಬರಬಹುದಾದರೂ, ಸದ್ಯಕ್ಕೆ ಆತ ಬಿಜೆಪಿಯಲ್ಲಿ ಪ್ರಭಾವಿ) ಆತ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ. “ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ’ರಕ್ಷಣೆ’ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಬೇಕಂತಲೇ ಕೇಳಿದ ಪೂರ್ವನಿರ್ಧರಿತ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ಹೊಡೆದುಹಾಕಿದರು. ಅವರ ಪ್ರತಿಕ್ರಿಯೆಯಲ್ಲಿ ಅವರು ಮುಸ್ಲಿಮರ ಹೆಸರನ್ನಾಗಲೀ ಅಥವಾ ಇನ್ಯಾವುದೇ ಹೆಸರನ್ನು ಎತ್ತಲಿಲ್ಲ, ಸಂವಿಧಾನದ ಬಗ್ಗೆ, ಅರ್ಹತೆಯ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸಂಪನ್ಮೂಲಗಳನ್ನು ಪಡೆಯುವ ಪ್ರವೇಶಾವಕಾಶ ಮತ್ತು ಜಾತಿ, ಗುಂಪು, ಮತ ಅಥವಾ ಭೌಗೋಳಿಕತೆಯ ಮೇಲೆ ಯಾವುದೇ ತಾರತಮ್ಯ ಮಾಡದಿರುವುದರ ಬಗ್ಗೆ ಮಾತನಾಡಿದರು… ಅಂತಹುದೇ ಪ್ರಶ್ನೆಗೆ ಅಧ್ಯಕ್ಷ ಬೈಡೆನ್ ಅವರ ತಣ್ಣಗಿನ ಪ್ರತಿಕ್ರಿಯ ಬಳಿಕ ಇದು ಟೂಲ್‌ಕಿಟ್ ಗ್ಯಾಂಗ್‌ಗೆ ಕೊಟ್ಟ ಮತ್ತೊಂದು ಹೊಡೆತವಾಗಿತ್ತು” ಎಂದು ಮಾಳವಿಯ ಟ್ವೀಟ್ ಮಾಡಿದರು. ’ಮೋಟಿವೇಟೆಡ್’, ’ಟೂಲ್‌ಕಿಟ್’ ಎಂಬ ಪದಗಳನ್ನು ಬಳಸುವ ಮೂಲಕ ತಮ್ಮ ಟ್ರೋಲ್ ಪಡೆಯನ್ನು ಪ್ರಚೋದಿಸಿ ಉದ್ರೇಕಗೊಳಿಸಿದ್ದರು. ಅಲ್ಲಿಂದ ಪ್ರಾರಂಭವಾಯಿತು ನೋಡಿ, ಬಿಜೆಪಿ ಐಟಿ ಸೇನೆ ಡಬ್ಲ್ಯುಎಸ್‌ಜೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ವಿರುದ್ಧ ಸೆಟೆದು ನಿಂತಿತು. ಆಕೆ ಪಾಕಿಸ್ತಾನಿ, ಇಸ್ಲಾಮಿಸ್ಟ್, ಹಿಂದೂ ವಿರೋಧಿ ಮುಂತಾಗಿ ಟ್ರಾಲಿಂಗ್ ಶುರುಹಚ್ಚಿಕೊಂಡಿತು. ಈ ಆನ್‌ಲೈನ್ ಅಟ್ಯಾಕ್ ಯಾವ ಹಂತಕ್ಕೆ ಬೆಳೆಯಿತೆಂದರೆ, ಇದಕ್ಕೆ ವೈಟ್‌ಹೌಸ್ ಪ್ರತಿಕ್ರಿಯೆ ನೀಡಬೇಕಾಗಿ ಬಂತು. ಯುಎಸ್‌ನ ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಂವಹನ ವಿಭಾಗದ ಮುಖ್ಯಸ್ಥ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, “ದೌರ್ಜನ್ಯದ ಬಗೆಗಿನ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದನ್ನು ಒಪ್ಪಲು ಅಸಾಧ್ಯ, ಯಾವುದೇ ಸನ್ನಿವೇಶದಲ್ಲಿ, ಎಲ್ಲೇ ಆಗಲಿ, ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಕಳೆದ ವಾರ ಸ್ಟೇಟ್ (ಅಮೆರಿಕ) ಭೇಟಿಯ ವೇಳೆ ಪ್ರದರ್ಶಿಸಲಾಗಿದ್ದ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಇದು ಅನೈತಿಕವಾಗಿದೆ” ಎಂದಿದ್ದಾರೆ. ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಕೂಡ ತನ್ನ ಉದ್ಯೋಗಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರಕಟಣೆ ನೀಡಿತು. ಸಬ್ರಿನಾ ಸಿದ್ದಿಕಿ ತಾನು ಮತ್ತು ತನ್ನ ತಂದೆ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಬೆಂಬಲಿಸಿ ಟಿವಿ ನೋಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿಕೊಂಡರು ಕೂಡ!

ಇದನ್ನೂ ಓದಿ: ಮೋದಿಗೆ ಪ್ರಶ್ನೆ ಮಾಡಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ನಿಂದನೆ; ಅಮೆರಿಕ ಶ್ವೇತಭವನದಿಂದ ಖಂಡನೆ

ಈಗ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರ ಹೆಸರಿನಲ್ಲಿ ಇರುವ ’ಸಿದ್ದಿಕಿ’ ಭಾರತದಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯ ಮತ್ತೊಂದು ಪ್ರಕರಣವನ್ನು ನೆನಪಿಸದೆ ಇರದು. ಉತ್ತರಪ್ರದೇಶದ ಹಾತ್ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ರೇಪ್ ಮತ್ತು ಕೊಲೆ ಘಟನೆಯನ್ನು ವರದಿ ಮಾಡಲು ಸಿದ್ದಿಕ್ ಕಪ್ಪನ್ ಕೇರಳದಿಂದ ಬಂದಿದ್ದರು. ಅವರ ಜೊತೆಗೆ ಆತಿಕುರ್ ರಹಮಾನ್ ಮತ್ತು ವಿದ್ಯಾರ್ಥಿ ಮಸೂದ್ ಅಹ್ಮದ್ ಇದ್ದರು. ಅತ್ತ ಒಂದು ಕಡೆ ಕುಟುಂಬಸ್ಥರಿಗೂ ಶವವನ್ನು ನೀಡದೆ 19 ವರ್ಷದ ಆ ಸಂತ್ರಸ್ತ ಯುವತಿಯ ಶವವನ್ನು ಆತುರಾತುರದಲ್ಲಿ ಪೊಲೀಸರು ಸುಟ್ಟುಹಾಕುತ್ತಿದ್ದರೆ ಮತ್ತೊಂದು ಕಡೆ ಸಿದ್ದಿಕ್, ರಹಮಾನ್, ಅಹ್ಮದ್‌ರ ಮೇಲೆ ಪೊಲೀಸರು ’ಫಿಲ್ಮಿ’ ರೀತಿಯಲ್ಲಿ ಆರೋಪಗಳನ್ನು ಹೊರಿಸಿ ಯುಎಪಿಎ ಜಡಿದು ಬಂಧಿಸುತ್ತಿದ್ದರು. ಅಷ್ಟು ಸಾಲದೆಂಬಂತೆ ಅವರನ್ನು ಕರೆತಂದಿದ್ದ ಟ್ಯಾಕ್ಸಿ ಚಾಲಕ ಮೊಹಮ್ಮದ್ ಆಲಂ ಅವರ ಮೇಲೆಯೂ ಯುಎಪಿಎ ಹಾಕಿ ಬಂಧಿಸಿದ್ದರು. ಆಲಂ ಮತ್ತು ಸಿದ್ದಿಕಿ ಕ್ರಮವಾಗಿ 27 ಮತ್ತು 28 ತಿಂಗಳುಗಳ ಕಾಲ ಜೈಲಿನಲ್ಲಿದ್ದು 2022ರಲ್ಲಿ ಜಾಮೀನು ಪಡೆದರೆ ರಹಮಾನ ಅವರು 32 ತಿಂಗಳು ಕಾಲ ಜೈಲಿನಲ್ಲಿದ್ದು 23 ಜೂನ್ 2023ರಂದು ಜಾಮೀನು ಪಡೆದು ಹೊರಬಂದಿದ್ದಾರೆ. ಮಸೂದ್ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಜಾಮೀನಿನ ಮೇಲೆ ಕೆಲವೇ ದಿನಗಳ ಹಿಂದೆ ಹೊರಬಂದ ರಹಮಾನ್ ಅವರು “ಮುಸ್ಲಿಮರಾಗಿದ್ದಕ್ಕೆ ನಮ್ಮನ್ನು ಶಿಕ್ಷಿಸಲಾಯಿತು. ಜೈಲಿನಲ್ಲಿ ನನ್ನ ಆತ್ಮಬಲವನ್ನು ಮುರಿಯಲು ಎಲ್ಲಾ ತಂತ್ರಗಳನ್ನು ಅವರು ಬಳಸಿದರು, ಆದರೆ ಆ ಕೆಲಸದಲ್ಲಿ ಅವರು ಸೋತರು. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ. ಇನ್ನೂ ಹೆಚ್ಚೇನು ಅವರು ಮಾಡಬಲ್ಲರು? ನಿಮ್ಮನ್ನು ಜೈಲಿಗೆ ಹಾಕಿದ ಮೇಲೆ ಭಯ ಕಾಣೆಯಾಗಿಬಿಡುತ್ತದೆ” ಎಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಈ ಸ್ಥಿತಿಯನ್ನು ಎದುರಿಸುತ್ತಿರುವಾಗ ಯುಎಸ್‌ಎನಲ್ಲಿ ಪತ್ರಕರ್ತೆಯಾಗಿರುವ ಸಬ್ರಿನಾ ಸಿದ್ದಿಕಿ ಸಾಪೇಕ್ಷವಾಗಿ ಸ್ವಲ್ಪ ಹೆಚ್ಚು ಸೇಫ್ ಎನ್ನಬಹುದೇನೋ!

ಇದ್ರಿಸ್ ಪಾಷಾ

ದೊಡ್ಡದೊಡ್ಡ ಕಾರ್ಪೊರೇಟ್ ಧಣಿಗಳನ್ನು ಭೇಟಿ ಮಾಡಿ, ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿ (ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿ ಮೂವರು ಅಮೆರಿಕ ಲಾಮೇಕರ್‌ಗಳು ಇದರಿಂದ ದೂರವುಳಿದಿದ್ದರು), ಬೈಡೆನ್ ಅವರ ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಂಡು ಯುಎಸ್‌ಎ ಪ್ರವಾಸ ಮುಗಿಸಿ ಈಜಿಪ್ಟ್ ಪ್ರವಾಸ ಶುರುಮಾಡುವ ಹೊತ್ತಿಗೆ ಜೂನ್ 26ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋರಕ್ಷಣೆಯ ಹೆಸರಿನ ಕೊಲೆಗಡುಕರು ಇಬ್ಬರು ಮುಸಲ್ಮಾನರ ಮೇಲೆ ದೊಣ್ಣೆ ಮತ್ತು ಸ್ಟೀಲ್ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಅಫನ್ ಅನ್ಸಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರೆ, ನಾಸಿರ್ ಖುರೇಶಿ ತೀವ್ರ ಗಾಯಗಳಿಗೆ ತುತ್ತಾಗಿದ್ದಾರೆ. ಇದಕ್ಕೆ ಎರಡು ವಾರಗಳ ಹಿಂದೆಯಷ್ಟೇ ಜೂನ್ 8ರಂದು ನಾಸಿಕ್‌ನಲ್ಲಿಯೇ ಗೋರಕ್ಷಕರ ದಾಳಿಗೆ ಕೊಲೆಯಾಗಿದ್ದರು ಎನ್ನಲಾಗಿದ್ದ ಲುಕ್‌ಮನ್ ಅನ್ಸಾರಿ ಅವರ ಮೃತದೇಹ ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ ಕರ್ನಾಟಕದ ರಾಮನಗರದಲ್ಲಿ ಇದ್ರಿಸ್ ಪಾಷಾ ಎಂಬುವವರನ್ನು ಗೋರಕ್ಷಣೆಯ ಹೆಸರನಲ್ಲಿ ಕೊಲೆಗೈಯ್ಯಲಾಗಿತ್ತು. ಇದ್ರಿಸ್ ಪಾಷಾ ಮತ್ತು ಸಹಚರರು ಅಧಿಕೃತ ರಶೀದಿಯೊಂದಿಗೇ ದನಗಳನ್ನು ಸಾಗಣೆ ಮಾಡುತ್ತಿದಾರೂ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಗೋಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಇತರ ಐವರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಕೊಲೆ ಆರೋಪಿಗಳು ಜಾಮೀನು ಪಡೆದು ರೋಷಾವೇಷದ ಮಾತುಗಳನ್ನಾಡುವುದರಲ್ಲಿ ನಿರತರಾಗಿದ್ದಾರೆ!

ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದೇಶದ ಬಹುಸಂಖ್ಯಾತರು ಸವಾರಿ ನಡೆಸುತ್ತ್ತಿರುವುದಕ್ಕೆ ಬಹುಶಃ ದಿನಾಲು ನೂರಾರು ಉದಾಹರಣೆಗಳು ಸಿಕ್ಕಾವು.

ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಮೋದಿ ಆಡಳಿತದ ಸರ್ಕಾರ ಕಾರಣವಲ್ಲವೇ? ಮೋದಿಯವರ ಪಕ್ಷ ಬಿಜೆಪಿ ಕಾರಣವಲ್ಲವೇ? ಬಿಜೆಪಿಯ ತಾತ್ವಿಕ ಪೋಷಕ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಕಾರಣವಲ್ಲವೇ? ಇದನ್ನು ತಡೆಯಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡುವುದರ ಬದಲು ಪ್ರಜಾಪ್ರಭುತ್ವ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬ ಒಣಮಾತು ಇದ್ರಿಸ್ ಪಾಷಾನ ಜೀವವನ್ನು ವಾಪಸ್ ತಂದುಕೊಡುತ್ತದೆಯೇ? ಅವರ ಕುಟುಂಬದ ಸಂಕಟವನ್ನು ಕಡಿಮೆ ಮಾಡುತ್ತದೆಯೇ?

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತದಲ್ಲಿ ಕುಸಿಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಮುಖಂಡರು ಒಬಾಮಾ ಹೆಸರನ್ನೂ ಆಡಿಕೊಂಡು ಟ್ರಾಲ್ ಮಾಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟೀಕೆಯನ್ನು ಒಂದು ಹಂತ ಮುಂದಕ್ಕೆ ತೆಗೆದುಕೊಂಡುಹೋಗಿ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಿನ ಅಮೆರಿಕ ದಾಳಿಯನ್ನು ನಿಲ್ಲಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು. ಬೇರೆ ರಾಷ್ಟ್ರಗಳ ಜನರ ಮೇಲಿನ ಮಾನವ ಹಕ್ಕುಗಳ ಹರಣದ ವಿಷಯದಲ್ಲಿ ಯುಎಸ್‌ಎ ದಾಖಲೆ ಭಯಾನಕವಾಗಿರುವುದು ನಿಜ. ಅದು ಬರಾಕ್ ಒಬಾಮಾ ಅವರ ಕಾಲಕ್ಕೂ ದಯನೀಯವಾಗಿತ್ತು ಎಂಬುದನ್ನು ಹಲವರು ಗುರುತಿಸಿದ್ದಾರೆ.

ಬರಾಕ್ ಒಬಾಮಾ

ಆದರೆ ಇದು ಭಾರತದಂತಹ ದೇಶಕ್ಕೆ ಮಾದರಿಯಾಗಬಾರದಲ್ಲವೇ? ಪ್ರಜಾಪ್ರಭುತ್ವ ನರನಾಡಿಗಳಲ್ಲ ಹರಿಯುವ ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಲಿಂಚಿಂಗ್‌ಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇಕೆ?

ಮತ್ತೊಮ್ಮೆ ಆ ವಿರಳಾತಿ ವಿರಳ ಪತ್ರಿಕಾ ಗೋಷ್ಠಿಯಲ್ಲಿ ಸಬ್ರಿನಾ ಸಿದ್ದಿಕಿ ಕೇಳಿದ ಆ ಪ್ರಶ್ನೆಯನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಉಚಿತವಾದೀತು: “ಪ್ರಧಾನ ಮಂತ್ರಿಯವರೇ, ಭಾರತ ಬಹಳ ಕಾಲದಿಂದಲೂ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾ ಬಂದಿದೆ, ಆದರೆ ಹಲವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವೆಸಗಿರುವ ಮತ್ತು ವಿರೋಧಿಗಳ ಸದ್ದಡಗಿಸಿರುವ ಬಗ್ಗೆ ಮಾತಾಡುವ ಹಲವು ಮಾನವ ಹಕ್ಕುಗಳ ಸಂಘಟನೆಗಳಿವೆ. ಶ್ವೇತ ಭವನದ ಪೂರ್ವ ಕೊಠಡಿಯಲ್ಲಿ ಈಗ ನೀವು ನಿಂತಿರುವಾಗ, ಎಲ್ಲಿ ವಿಶ್ವದ ಹಲವು ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಭರವಸೆಗಳನ್ನು ನೀಡಿದ್ದಾರೋ ಅಲ್ಲಿ, ನಿಮ್ಮ ದೇಶದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ಸರ್ಕಾರ ಮತ್ತು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ?

ಈ ಪ್ರಶ್ನೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಳ್ಳುವ ಯಾವ ಉತ್ತರವನ್ನಾದರೂ ನೀಡಿ ನುಣುಚಿಕೊಳ್ಳಬಹುದು. ಆದರೆ ದಿನನಿತ್ಯ ಇಲ್ಲಿ ನಡೆಯುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಮೆಜಾರಿಟೇರಿಯನ್ ಭಾವನೆ ಭಾರತದಲ್ಲಿ ನೆಲೆಸಿರುವುದಕ್ಕೆ ಸಾಕ್ಷ್ಯ ನುಡಿಯುತ್ತಿರುತ್ತವೆ. ಅಪರೂಪದ ಪತ್ರಿಕಾಗೋಷ್ಠಿಯ ಈ ಪ್ರಶ್ನೆ ಇನ್ನಷ್ಟು ದಿನ ಕಾಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...