ಬಿಹಾರದ ಶಿಕ್ಷಣ ಇಲಾಖೆಯು ಸಾಮಾನ್ಯ ಶಾಲೆಗಳಿಗೆ ಮತ್ತು ಉರ್ದು ಶಾಲೆಗಳಿಗೆ 2024ರ ಪ್ರತ್ಯೇಕ ರಜಾದಿನದ ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಿದೆ. ಈ ಕ್ರಮವು ಬಿಹಾರದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಕ್ಯಾಲೆಂಡರ್ ಬಗ್ಗೆ ವ್ಯಾಪಕವಾಗಿ ಸುಳ್ಳು ಮಾಹಿತಿಗಳನ್ನು ಹರಡಲಾಗಿದೆ.
ಬಿಹಾರದ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದ ಕ್ಯಾಲೆಂಡರ್ನ್ನು ಹಿಂದುತ್ವ ಗುಂಪುಗಳು ವಿರೋಧಿಸಿದ್ದು, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಅನುಕೂಲಕ್ಕೆ ಅನುಗುಣವಾಗಿ ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.
ರಾಮ ನವಮಿ, ಮಹಾವೀರ ಜಯಂತಿ, ಸಾಮ್ರಾಟ್ ಅಶೋಕ್ ಜಯಂತಿ, ಮತ್ತು ವೀರ್ ಕುನ್ವರ್ ಸಿಂಗ್ ಜಯಂತಿಯಂತಹ ಹಬ್ಬಗಳು ಬೇಸಿಗೆ ರಜೆಯ ಸಮಯದಲ್ಲಿ ಅಂದರೆ ಏಪ್ರಿಲ್ 15 ರಿಂದ ಮೇ 15ರ ನಡುವೆ ಇರುತ್ತದೆ. ಈ ಹಬ್ಬಗಳನ್ನು ಕ್ಯಾಲೆಂಡರ್ನಲ್ಲಿ ಸೇರಿಸಲಾಗಿಲ್ಲ.
ಎ.10, 11, 12 ರಂದು ಈದ್-ಉಲ್-ಫಿತರ್, ಜೂ.18,19,20ರಂದು ಈದ್-ಉಲ್-ಝೋಹಾ ಮತ್ತು ಮುಹರ್ರಂ ಹಬ್ಬಗಳಿಗೆ ರಜೆಯನ್ನು ಕ್ಯಾಲೆಂಡರ್ನಲ್ಲಿ ಉಲ್ಲೇಖಿಸಲಾಗಿದೆ.
ಶಿಕ್ಷಣ ಇಲಾಖೆಯು ರಜೆಯ ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಿದ ನಂತರ ಸಾಮಾಜಿಕ ಮಾದ್ಯಮಗಳಲ್ಲಿ ವಿಶೇಷವಾಗಿ ಫೇಸ್ಬುಕ್ನಲ್ಲಿ ಸರ್ಕಾರವು ಹಿಂದೂ ಹಬ್ಬಗಳಿಗೆ ಸಂಬಂಧಿಸಿದ ರಜಾದಿನಗಳನ್ನು ಕಡಿಮೆಗೊಳಿಸಿ ಮುಸ್ಲಿಮರಿಗೆ ರಜಾದಿನಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ಹಲವರು ಸುಳ್ಳು ಪೋಸ್ಟ್ಗಳನ್ನು ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮುಸ್ಲಿಮರನ್ನು ಸಮಾಧಾನಗೊಳಿಸಲು ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಡಿಸಿಎಂ ತೇಜಸ್ವಿ ಯಾದವ್ ಅವರ ತಂತ್ರವಾಗಿದೆ ಎಂದು ಹಲವಾರು ಸಾಮಾಜಿಕ ಮಾದ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ.
ಪಾಟ್ನಾ ಮೂಲದ ಹಿಂದಿ ಪತ್ರಿಕೆಗಳು ಸಹ ಇದೇ ರೀತಿ ವರದಿಯನ್ನು ಮಾಡಿದ್ದು, ಮುಸ್ಲಿಮರ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಲಾಗಿದೆ ಮತ್ತು ಹಿಂದೂಗಳಿಗೆ ರಜೆಯನ್ನು ಕಡಿಮೆ ಮಾಡಲಾಗಿದೆ ಎಂದು ವರದಿ ಮಾಡಿದೆ. ಪತ್ರಿಕೆಯೊಂದು ಒಂದು ತನ್ನ ವರದಿಯಲ್ಲಿ ಶಿವರಾತ್ರಿ, ರಾಮ ನವಮಿ, ಜನ್ಮಾಷ್ಠಮಿಗೆ ರಜೆಗಳಿಲ್ಲ. ಈದ್, ಮೊಹರಂಗೆ ಹೆಚ್ಚಿನ ರಜಾದಿನಗಳನ್ನು ನೀಡಲಾಗಿದೆ ಎಂದು ವರದಿ ಮಾಡಿದೆ.
ರಾಜ್ಯ ಸರ್ಕಾರವು ಹಿಂದೂಗಳಿಗಿಂತ ಮುಸ್ಲಿಮರಿಗೆ ಆದ್ಯತೆ ನೀಡುವ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಈ ಬಗ್ಗೆ ಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಮಾತನಾಡಿದ್ದು, ರಜಾದಿನದ ಕ್ಯಾಲೆಂಡರ್ ಮುಸ್ಲಿಂ ಸಮುದಾಯದ ಮತಗಳನ್ನು ಗಳಿಸಲು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸುವ ಪ್ರಯತ್ನವಾಗಿದೆ. ಸರಕಾರ ಇಂತಹ ಕೋಮುವಾದಿ ಉದ್ದೇಶದಿಂದ ಕೆಲಸ ಮಾಡಬಾರದು. ಈ ಕೋಮುವಾದಿ ಉದ್ದೇಶವನ್ನು ಸಹಿಸಲಾಗುವುದಿಲ್ಲ. ಇದು ಪಕ್ಷಕ್ಕೆ ಯಾವುದೇ ಚುನಾವಣಾ ಲಾಭವನ್ನು ತರುವುದಿಲ್ಲ ಎಂದು ಹೇಳಿದ್ದಾರೆ.
ಇದರ ಜೊತೆಗೆ ಹಿಂದೂ ರಜಾದಿನಗಳ ಕಡಿತಗೊಳಿಸಲಾಗಿದೆ ಮತ್ತು ಮುಸ್ಲಿಂ ರಜಾದಿನಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಮಾಡಲಾಗಿದೆ ಎಂದು ಲೇಖನಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲೆಕ್ಕವಿಲ್ಲದಷ್ಟು ಕಂಡು ಬಂದಿದೆ.
ಕೆಲ ಶಾಲಾ ಶಿಕ್ಷಕರು ಈ ಬಗ್ಗೆ ಮಾತನಾಡಿದ್ದು, ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಕೆ. ಪಾಠಕ್ ಅವರು ಕ್ಯಾಂಪಸ್ಗಳಲ್ಲಿ ಕಠಿಣ ನೀತಿಗಳನ್ನು ಜಾರಿಗೊಳಿಸಿದ್ದಾರೆ. ಅವರು ಶಾಲೆಯಲ್ಲಿ ಶಿಕ್ಷಕರ ಇರುವಿಕೆಯ ಅವಧಿಯನ್ನು ಸಂಜೆ 5ರವರೆಗೆ ವಿಸ್ತರಿಸಿದ್ದಾರೆ. ಸಾಫ್ಟ್ವೇರ್ ಮೂಲಕ ಅವರು ಶಿಕ್ಷಕರ ಹಾಜರಾತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದಲ್ಲದೆ ಅವರು ಅನಿರೀಕ್ಷಿತವಾಗಿ ತಪಾಸಣೆ ನಡೆಸಿ ಹೊಸ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ. ಅವರ ಕಟ್ಟುನಿಟ್ಟಿನ ನೀತಿಗಳು ಹಲವಾರು ಶಿಕ್ಷಕರ ಅಮಾನತು ಮತ್ತು ಅವರ ಸಂಬಳದಲ್ಲಿ ಕಡಿತಕ್ಕೆ ಕಾರಣವಾಗಿವೆ. ಇದರಿಂದ ಪಾಠಕ್ ವಿರುದ್ಧ ಹಲವಾರು ಶಿಕ್ಷಕರು ಆಕ್ರೋಶಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಂಜಯ್ ಝಾ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ಹಿಂದೂ ಮತ್ತು ಮುಸ್ಲಿಂ ಹಬ್ಬಗಳ ರಜಾದಿನಗಳ ಸಂಖ್ಯೆಯಲ್ಲಿ ಬದಲಾಗಿಲ್ಲ. 2023ರ ರಜಾದಿನದ ಕ್ಯಾಲೆಂಡರ್ 60 ರಜಾದಿನಗಳನ್ನು ಹೊಂದಿತ್ತು. 2024ರಲ್ಲಿ 60 ರಜೆಗಳಿವೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ರಾಮಮಂದಿರಕ್ಕೆ ಧನಸಹಾಯ ನೀಡಲು ಬಯಸಿದ ನಾಲ್ವರ ಹಂತಕ ಪೇದೆ


