Homeಕರ್ನಾಟಕಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

ಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

- Advertisement -
- Advertisement -

ಜನವಾಹಿನಿಯ ನೆನಪುಗಳು: ಭಾಗ-5

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಕನ್ನಡ ಮುದ್ರಣದ ಹೊಸ ಶಕೆಯನ್ನು ಆರಂಭಿಸಿದ್ದು ಬಾಸೆಲ್ ಮಿಷನ್. ಕನ್ನಡ, ತುಳು ಭಾಷೆಗಳಲ್ಲಿ ಕ್ರೈಸ್ತ ಸ್ತೋತ್ರಗಳು, ಮೊದಲ ಪದಕೋಶಗಳು, ವ್ಯಾಕರಣ ಗ್ರಂಥಗಳು ಮತ್ತು ಮೊದಲ ಕನ್ನಡ ಪತ್ರಿಕೆ ’ಮಂಗಳೂರ ಸಮಾಚಾರ’ವನ್ನು ಪ್ರಕಟಿಸಿದ್ದು ಕೂಡಾ ಬಾಸೆಲ್ ಮಿಷನ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂತದ್ದು. ರೆವರೆಂಡ್ ಕಿಟ್ಟೆಲ್ ಅವರ ಕನ್ನಡ ನಿಘಂಟಿನ ಬಗ್ಗೆ ಗೊತ್ತಿಲ್ಲದವರು ಕಡಿಮೆ.

ಮಂಗಳೂರಿನ ಬಲ್ಮಠದಲ್ಲಿ ಅಶೋಕವರ್ಧನ ಅವರ ’ಅತ್ರಿ ಬುಕ್ ಸೆಂಟರ್’ ಇತ್ತು. ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಅದು ದೇವಾಲಯ. ಈಗದು ’ನವಕರ್ನಾಟಕ’ವಾಗಿದೆ. ಇದರ ಹಿಂಭಾಗದಲ್ಲಿ ಎತ್ತರದ ಕಟ್ಟಡಗಳ ಸಾಲುಗಳ ಹಿಂದೆ ಮೂರು ನಾಲ್ಕು ಕಡೆ ಪ್ರವೇಶ ಇರುವ ಒಂದು ಅತ್ಯಂತ ವಿಶಾಲವಾದ ಬಾಸೆಲ್ ಮಿಷನ್ ಕಂಪೌಂಡ್ ಇದೆ ಎಂದು ಅನೇಕರಿಗೆ ತಲೆಗೇ ಹೋಗದು. ಅನೇಕ ಶಿಕ್ಷಣ ಸಂಸ್ಥೆಗಳು ಅಲ್ಲಿ ಕಾರ್ಯಾಚರಿಸುತ್ತಿವೆ. ಕನ್ನಡದ ಮಟ್ಟಿಗೆ ಐತಿಹಾಸಿಕವಾದ ಕೆಲವು ಸಭಾಂಗಣಗಳಲ್ಲಿ ಒಂದರಲ್ಲಿ ’ಜನವಾಹಿನಿ’ಯ ಸಂದರ್ಶನ ಮತ್ತು ತರಬೇತಿ ಪ್ರಕ್ರಿಯೆ ನಡೆಯಿತೆಂಬುದು ವಿಶೇಷ.

ಒಂದು ಬೆಳಿಗ್ಗೆ ಅಲ್ಲಿ ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ನೂರಾರು ವಿದ್ಯಾರ್ಥಿಗಳು ನೆರೆದಿದ್ದರು. ನಾವು ಸಂಪಾದಕೀಯ ಕೋರ್ ಗ್ರೂಪಿಗೆ ಸಂಭ್ರಮ! ನಮ್ಮದೇ ಪಾರುಪತ್ಯ. ನಮ್ಮದೇ ನಾಯಕತ್ವದಲ್ಲಿ ಪತ್ರಿಕಾ ರಂಗದಲ್ಲಿ ಹೊಸದೇನನ್ನಾದರೂ ಮಾಡಲು ಹೊರಟಿದ್ದ ಯುವ ಶಕ್ತಿ! ನಾವು ಅವರನ್ನು ಗಮನಿಸುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾ ಓಡಾಡುತ್ತಿದ್ದೆವು. ವಿದ್ವಾಂಸ ಮತ್ತು ಒಂದು ರೀತಿಯಲ್ಲಿ ಕ್ರಾಂತಿಕಾರಿ ಪಾದ್ರಿ ಎಂದೇ ಗುರುತಿಸಲಾಗುತ್ತಿದ್ದ ವಿಲಿಯಂ ದಸಿಲ್ವಾ ಅವರ ಗಂಭೀರ ವ್ಯಕ್ತಿತ್ವಕ್ಕೆ ನಾವೇ ಒಂದು ರೀತಿಯ ಗೌರವ ತುಂಬಿದ ಭಾವದಿಂದ ಇದ್ದೆವು. ಹೀಗಿರುವಾಗ ಈ ಯುವಜನರು ಭಯಾತಂಕದಿಂದ ಇದ್ದದ್ದರಲ್ಲಿ ಅಚ್ಚರಿಯೇನಿರಲಿಲ್ಲ.

ಒಳಗೆ ಅವರು, ಆಡಳಿತ ನಿರ್ದೇಶಕ ಸ್ಯಾಮ್ಯುಯೆಲ್ ಸಿಕ್ವೇರಾ ಮತ್ತು ಸಂಪಾದಕ ಬಾಲಕೃಷ್ಣ ಗಟ್ಟಿ ಇದ್ದರು. ಆಗ ಮೊದಲು ಒಳಗೆ ನಾವು ಹುರಿದುಂಬಿಸಿ ಕಳಿಸಿದ್ದು ಒಳ್ಳೆಯ ಕ್ರಿಕೆಟಿಗನಾಗಿದ್ದ, ಚಿಕ್ಕ ದೇಹದ ಹುಡುಗ ಗಿರೀಶ್ ಬಜ್ಪೆಯನ್ನು- ಅದೂ ಓಪನಿಂಗ್ ಬ್ಯಾಟ್ಸ್‌ಮನ್ ಎಂದು ಛೇಡಿಸಿ!

ಮೂಲತಃ ಈ ಹುಡುಗ ಪಳಗಿದ್ದುದು ಡಿಟಿಪಿಯಲ್ಲಿ. ಹಿಂದೆ ನಾನು ಕೆಲಸ ಮಾಡುತ್ತಿದ್ದ ’ಕರಾವಳಿ ಅಲೆ’ ಸಂಜೆ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸ್ವಲ್ಪ ಇದ್ದವರು. ಸ್ವಲ್ಪ ಹೊತ್ತಿನಲ್ಲಿ ಅವರು ಹೊರಗೆ ಬಂದು ಬಾಯಗಲ ನಗುತ್ತಾ ಹೆಬ್ಬೆರಳು ಮೇಲೆತ್ತಿದಾಗ ನಮ್ಮಗೆಲ್ಲಾ ಖುಶಿ- ಸಂಪಾದಕೀಯ ವಿಭಾಗದ ಎರಡನೇ ತಂಡದ ಮೊದಲ ಆಯ್ಕೆ ನಡೆದಿತ್ತು. ಕೆಲವರು ಏನಾಯಿತು, ಏನು ಕೇಳಿದರು ಎಂದು ಉಳಿದವರು ವಿಚಾರಿಸುತ್ತಿದ್ದರು.

ವಾಸ್ತವಿಕವಾಗಿ ಒಳಗಿನ ಸಂದರ್ಶನ ಮನಃಶಾಸ್ತ್ರೀಯವಾಗಿ ನಡೆಯುತ್ತಿತ್ತೆಂದು ನಮಗೆ ಗೊತ್ತಿತ್ತು. ಅತ್ಯಂತ ಮೇಲ್ಮಟ್ಟದ ಬುದ್ಧಿವಂತಿಕೆಯ ಸಂದರ್ಶಕರು ಒಣಜ್ಞಾನಕ್ಕಿಂತ, ವಿದ್ಯಾರ್ಹತೆಗಿಂತ, ಅಭ್ಯರ್ಥಿಗಳ ವೈಚಾರಿಕ ನಿಲುವು, ಆಸಕ್ತಿ, ಮನೋಭಾವ, ವೃತ್ತಿನಿಷ್ಟೆ, ಕಲಿಯುವ ಗುಣ ಇತ್ಯಾದಿಗಳನ್ನು ಅಳೆಯುತ್ತಿದ್ದರು. ಬಹುಶಃ ಹೆಚ್ಚಿನ ನಿರ್ಧಾರ ಅಗುತ್ತಿದ್ದುದು ನೀವು ಇತ್ತೀಚೆಗೆ ಓದಿದ ಪುಸ್ತಕಗಳು ಯಾವುವು ಎಂಬ ಪ್ರಶ್ನೆಯಲ್ಲಿ! ಸಿಕ್ವೇರಾ ಮತ್ತು ದಸಿಲ್ವಾ ಇಬ್ಬರೂ ಮಹಾನ್ ಪುಸ್ತಕಗಳ ಸಂಗ್ರಹವನ್ನೇ ಇಟ್ಟುಕೊಂಡಿದ್ದರು. ಈ ಕುರಿತು ಮುಂದೆ ಪ್ರತ್ಯೇಕವಾಗಿ ಬರೆಯುತ್ತೇನೆ.

ಆ ದಿನವೇ ಎಲ್ಲರ ಸಂದರ್ಶನ ಮುಗಿಯಿತು. ಮೊದಲೇ ಒಂದು ರೀತಿಯ ಸೋಸುವಿಕೆ ನಡೆದಿದ್ದುದರಿಂದ ಬಹುತೇಕ ಎಲ್ಲರೂ ಆಯ್ಕೆಯಾಗಿದ್ದರು. ಇವರೆಲ್ಲರೂ ಮುಂದೆ ಹೇಗೆ ಬೆಳೆದರು, ಹೇಗೆ ಕಲಿತರು, ಮುಂದೆ ಏನಾದರು ಇತ್ಯಾದಿಗಳ ಕುರಿತೇ ಮುಂದೆ ಬರೆಯುವೆ.

ಸಂದರ್ಶನ ನಡೆದ ತಕ್ಷಣದಿಂದಲೇ ಪ್ರಾಥಮಿಕ ತರಬೇತಿ ಆರಂಭವಾಯಿತು. ಇದಕ್ಕೇ ಓರಿಯೆಂಟೇಶನ್ ಕ್ಯಾಂಪ್ ಎಂದೇ ಕರೆಯಬಹುದೇನೋ?! ’ಜನವಾಹಿನಿ’ ಅತ್ಯಂತ ಹೆಚ್ಚು ಮಹತ್ವ ಕೊಟ್ಟದ್ದು ಜಾತ್ಯತೀತ, ಪ್ರಜಾಪ್ರಭುತ್ವವಾದಿ ಸಂವಿಧಾನ ಬದ್ಧತೆ, ಜನಸಂಸ್ಕೃತಿಗೆ. ಈ ಕುರಿತು ಪತ್ರಕರ್ತರ ನಿಲುವು ಮತ್ತು ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು ಎಂಬುದೇ ಈ ತರಬೇತಿಯ ಉದ್ದೇಶ. ವಿಲಿಯಂ ದಸಿಲ್ವ ಮತ್ತು ಸಿಕ್ವೇರಾ ಅವರ ಜೊತೆಗೆ, ನಾವು ಕೋರ್ ಗ್ರೂಪಿನವರು ಸೇರಿಕೊಂಡು, ಹೊಸದಾಗಿ ಸೇರಿಕೊಂಡವರ ಕುರಿತು ಚರ್ಚೆ ನಡೆಸುವುದು, ಪ್ರಶ್ನೆಗಳನ್ನು ಎತ್ತುವುದು, ಸಂಶಯಗಳನ್ನು ನಿವಾರಿಸುವುದು ಇತ್ಯಾದಿಗಳ ಮೂಲಕ ಕಲಿಯುವುದು. ಇದೇ ತರಬೇತಿ ವಿಧಾನ. ಆಗ ನಾವು ಮುಟ್ಟದ ವಿಷಯಗಳಿಲ್ಲ. ರಾಜಕೀಯ ತತ್ವಗಳು, ಜಾತ್ಯತೀತತೆ, ಸಾಮಾಜಿಕ ಅಸಮಾನತೆ, ಧಾರ್ಮಿಕತೆ, ನಂಬಿಕೆ ಮತ್ತು ಮೂಢನಂಬಿಕೆ, ಸಾಮಾಜಿಕ ಆರೋಗ್ಯ ಮತ್ತು ಅನಾರೋಗ್ಯ, ಸರಕಾರಿ ಆಡಳಿತ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ, ಜನರ ಸಮಸ್ಯೆಗಳು…ಹೀಗೆ ನಮ್ಮ ಚರ್ಚೆ ಸಾಗುತ್ತಿತ್ತು! ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿಷಯಗಳನ್ನು ಹೀರಿಕೊಂಡರು. ಬಹುಶಃ ಹೀಗೊಂದು ರೀತಿಯ ವಿಶಾಲ ಮತ್ತು ದೀರ್ಘ ತರಬೇತಿ ಕನ್ನಡದ ಯಾವೊಂದು ಪತ್ರಿಕೆಯ ಆರಂಭಕ್ಕೆ ಮುನ್ನ ನಡೆದಿರಲಾರದೇನೋ! ಈ ಕಲಿಯುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಿತು.

ವಿಚಾರಗಳನ್ನು ಹೊಂದುವುದು ಒಂದು ವಿಷಯ. ಅದನ್ನು ಪತ್ರಿಕೆಗೆ ಇಳಿಸುವುದು ಮತ್ತು ಪತ್ರಿಕೆಯನ್ನು ನಡೆಸುವುದು ಬೇರೆಯೇ ವಿಷಯ. ಅದಕ್ಕೆ ತಾಂತ್ರಿಕ ತರಬೇತಿ ಮತ್ತು ಅಪಾರ ಶಿಸ್ತು ಮತ್ತು ಕಾರ್ಯವಿಧಾನಗಳ ತಿಳುವಳಿಕೆ ಬೇಕು. ಅದಕ್ಕಾಗಿ ಪತ್ರಿಕೆಯ ನೂತನ ಕಚೇರಿಗೆ ಬರುವಂತೆ ಎಲ್ಲರಿಗೂ ಹೇಳಲಾಯಿತು. ಪತ್ರಿಕೆ ಹೊರಬರುವ ಮೊದಲೇ ಎಲ್ಲರೂ ಸಂಬಳದ ಪಟ್ಟಿಯಲ್ಲಿ ಸೇರಿದ್ದರು. ಆ ಕುತೂಹಲಕಾರಿ ವಿವರಗಳನ್ನು ಮುಂದೆ ಹೇಳುವೆ!
*****

‘ಜನವಾಹಿನಿ’ ಮತ್ತು ಪುಸ್ತಕ ಪ್ರೇಮ

’ಜನವಾಹಿನಿ’ಯಲ್ಲಿದ್ದ ಅನೇಕರು ಪುಸ್ತಕ ಪ್ರೇಮಿಗಳು. ಅದಕ್ಕಾಗಿಯೇ ಒಂದು ಲೈಬ್ರರಿ ಸ್ಥಾಪಿಸಲಾಯಿತು. ಎನ್.ಎ.ಎಂ. ಇಸ್ಮಾಯಿಲ್ ಅಂತೂ ಆಗ ಅರ್ಧ ಸಂಬಳವನ್ನೇ ವೈಯಕ್ತಿಕವಾಗಿ ಪುಸ್ತಕ ಖರೀದಿಗೇ ಬಳಸುತ್ತಿದ್ದರು. ಎಲ್ಲಾ ಪತ್ರಿಕೆಗಳು ಬರುತ್ತಿದ್ದವು- ಮಂಗಳೂರಿನ ಕಾರ್‌ಸ್ಟ್ರೀಟ್‌ನ ಅಂಗಡಿಯಲ್ಲಿ ಮಾತ್ರ ಸಿಗುತ್ತಿದ್ದ ಟೆಲಿಗ್ರಾಫ್, ಸ್ಟೇಟ್ಸ್‌ಮನ್ ಮುಂತಾದ ಪತ್ರಿಕೆಗಳು ಕೂಡ.

ದಸಿಲ್ವಾ ಅವರು ಆಗ ಮಂಗಳೂರಿನ ಅರ್ಯಸಮಾಜ ರಸ್ತೆಯಲ್ಲಿ ಒಂದು ಫ್ಲ್ಯಾಟ್ ಹೊಂದಿದ್ದರು. ಅಪರೂಪದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ನೀವು ಯಾವ ಹೊತ್ತಿಗೆ ಬೇಕಾದರೂ ಅಲ್ಲಿಗೆ ಬಂದು ಓದಬಹುದು ಎಂದು ಹೇಳಿದ್ದರು. ಅವರು ಜರ್ಮನಿಗೆ ಹೋದರೂ, ಅವರ ಪುಸ್ತಕಗಳನ್ನು ಓದುವ ಭಾಗ್ಯ ನಮಗೆ ಇರುತ್ತಿತ್ತು.

ಸ್ಯಾಮುಯೆಲ್ ಸಿಕ್ವೇರಾ ಅವರಂತೂ ಹೊಸಹೊಸ ಪುಸ್ತಕಗಳನ್ನು ತಂದು, ಓದಿ ಎಂದು ಅವರಾಗಿಯೇ ನಮ್ಮ ಕೈಗೆ ಕೊಡುತ್ತಿದ್ದರು. ಎಡ್ವರ್ಡ್ ಸೈದ್ ಅವರ ‘ಮೆನ್ಯುಫ್ಯಾಕ್ಚರಿಂಗ್ ಕನ್ಸೆಂಟ್’, ಸ್ಯಾಮುಯೆಲ್ ಪಿ. ಹಂಟಿಂಗ್ಟನ್ ಅವರ ‘ಕ್ಲ್ಯಾಷ್ ಆಫ್ ಸಿವಿಲೈಸೇಷನ್ಸ್’ ಮುಂತಾದ ಮಹತ್ವದ ಪುಸ್ತಕಗಳನ್ನು ನಾನು ಓದಿದ್ದು ‘ಜನವಾಹಿನಿ’ಯಲ್ಲಿರುವಾಗಲೇ!

ಒಂದು ದಿನ ನಾನು ಜೆಫ್ರಿ ಅರ್ಚರ್ ಅವರ ‘ದಿ ಫೋರ್ತ್ ಎಸ್ಟೇಟ್’ ಎಂಬ ಕಾದಂಬರಿಯನ್ನು ಅತ್ರಿ ಬುಕ್ ಸೆಂಟರಿನಲ್ಲಿ ಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕತೆಯದು. ಅದು ನನ್ನ ಕೈಯಲ್ಲಿದ್ದಾಗ ಸಿಕ್ವೇರಾ ಅವರ ಕಣ್ಣಿಗೆ ಬಿತ್ತು. ಎಲ್ಲಿಂದ. ಕೊಂಡದ್ದು ಎಂದೆ! ಈ ಸಂಬಳದಲ್ಲಿ ಯಾಕೆ ನೀವೇ ಹಣಕೊಟ್ಟು ಪುಸ್ತಕ ಕೊಳ್ಳುತ್ತೀರಿ?! ಒಳ್ಳೆಯ ಪುಸ್ತಕ ಇದ್ದರೆ ಕೊಂಡು ಬಿಲ್ ಕೊಡಿ. ಪುಸ್ತಕ ಲೈಬ್ರರಿಯಲ್ಲಿ ಇಡಿ. ಬೇರೆಯವರೂ ಓದಲಿ ಎಂದರು. ಸಂಸ್ಥೆಯಿಂದ ನನಗೆ ಹಣ ಪಾವತಿ ಆಯಿತು!

ಓದುವುದಕ್ಕೆ ನಮಗೆ ಸಿಗುತ್ತಿದ್ದ ಪ್ರೋತ್ಸಾಹಕ್ಕೆ ಇದೊಂದು ಉದಾಹರಣೆ. ನಮಗೆ ಅದೊಂದು ಕಾಲೇಜಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...