ಅಕ್ಟೋಬರ್ 21 ರಂದು ಮುಂದಿನ ವಿಚಾರಣೆಯವರೆಗೆ ಮುಂಬೈನ ಆರೆಯಲ್ಲಿ ಮರಗಳನ್ನು ಕತ್ತರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ..
ನಾಲ್ಕು ದಿನಗಳ ಹಿಂದಷ್ಟೇ ಮುಂಬೈ ಹೈಕೋರ್ಟ್ ಪರಿಸರವಾದಿಗಳು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಮಾಡಿ ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ವಿಚಾರಣೆ ಬಾಕಿ ಇತ್ತು.
ಕಾನೂನು ವಿದ್ಯಾರ್ಥಿಗಳ ಗುಂಪೊಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಾದವನ್ನು ಆಲಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೨೧ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಹೇಳಿದ್ದು ಮರಗಳ ಕಡಿಯುವಿಕೆಗೆ ತಡೆಯೊಡ್ಡಿದೆ.
ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಾಮಗಾರಿಗೆ ಅಗತ್ಯವಿರುವಷ್ಟು ಮರಗಳನ್ನು ಈಗಾಗಲೇ ಕಡಿಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆನಂತರ ನ್ಯಾಯಾಲಯವು ಪ್ರಕರಣವನ್ನು ಹಸಿರು ಪೀಠಕ್ಕೆ ವರ್ಗಾಯಿಸಿದೆ.
ಇದು ಪರಿಸರ ಪ್ರೇಮಿನಗಳು ನಡೆಸಿದ ಹೋರಾಟಕ್ಕೆ ದೊಡ್ಡ ಜಯವಾಗಿದೆ. ಮೊನ್ನೆಯಷ್ಟೇ ಆರೇ ಮರಗಳನ್ನು ಕಡಿಯಬಾರದೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಹಲವರನ್ನು ಬಂಧಿಸಿ ನಿನ್ನೆ ಬಿಡುಗಡೆ ಮಾಡಲಾಗಿತ್ತು. ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಪರಿಸರ ಪ್ರೇಮಿಗಳಲ್ಲಿ ನೆಮ್ಮದಿ ಮೂಡಿಸಿದೆ.