ಹುಬ್ಬಳ್ಳಿ-ಧಾರವಾಡ ಬಿಜೆಪಿ ಲೋಕಸಭಾ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ವಿರುದ್ಧ ಕ್ಷೇತ್ರದಲ್ಲಿ ಎದ್ದಿರುವ ಅಸಮಾಧಾನ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲೆ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಹಲವು ವೀರಶೈವ ಲಿಂಗಾಯಿತ ಸ್ವಾಮೀಜಿಗಳ ಬಂಡಾಯ ಸಾರಿದ್ದು, ಇದೀಗ ಜೋಷಿ ವಿರುದ್ಧ 12 ಅಂಶಗಳ ಚಾರ್ಜ್ ಶೀಟ್ ಒಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.
ವಾಟ್ಸಾಪ್ ಸಂದೇಶದಲ್ಲಿ ಏನಿದೆ?
‘ಮಿ. ಜೋಷಿ, ಹಳ್ಳಿ ಜನ ದಡ್ಡರಲ್ಲ, ಅವರಿಗೆ ನಿಮ್ಮ ಜಾತಕ ಚೆನ್ನಾಗಿ ಗೊತ್ತಿದೆ. ನಿಮ್ಮ ಜಾತಕ ನಾ ಹೇಳತೀನಿ ಕೇಳ್ರಿ; ಇದೂ ಯಾರಿಗೂ ಗೊತ್ತಿಲ್ಲಾಂತ ತಿಳಿಬೇಡ್ರಿ.. ಎಂದು ಕಟುವಾಗಿ ಟೀಕಿಸಿರುವ ಸಂದೇಶದಲ್ಲಿ, ಜೋಷಿ ತಮ್ಮ ರಾಜಕೀಯ ಜೀವನದಲ್ಲಿ ಈವರೆಗೆ ನಡೆಸಿರುವ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಒಟ್ಟು ಹನ್ನೆರಡು ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಅಮೃತ್ ದೇಸಾಯಿ ಹೆಗಲ ಮೇಲೆ ಬಂದೂಕು ಇಟ್ಟು ಸೀಮಾ ಮಸೂತಿ ಹೊಡೆದ್ರಿ, ನಾಗರಾಜ್ ಚಬ್ಬಿ ಕರ್ಕೊಂಡು ಬಂದು ಶಿವು ಹಿರೇಮಠ್ ಅವರನ್ ನಿತ್ರಾಣ ಮಾಡಿದಿರಿ, ಈರೇಶ್ ಅಂಚಟಗೇರಿನ್ ಚೂ ಬಿಟ್ಟು ಅರವಿಂದ್ ಬೆಲ್ಲದ್ ಹೊಡೆಯಾಕ್ ಪ್ರಯತ್ನ ಪಟ್ರಿ, ಅದೇ ಬೆಲ್ಲದ್ ಬಳಸ್ಕೊಂಡು ಮುನೇನಕೊಪ್ಪನ್ ಹೊಡೆಯಾಕ್ ಟ್ರೈ ಮಾಡಿದ್ರಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ವಿನಯ್ ಕುಲಕರ್ಣಿನ್ ಜೈಲಿಗಟ್ಟಿ, ಜಿಲ್ಲೆಯೊಳಗ ಕಾಲ್ ಇಡದಂಗ್ ಮಾಡಿದ್ರಿ’ ಎಂದು ಆರೋಪ ಮಾಡಿದ್ದಾರೆ.
ಮುಂದುವರಿದು, ‘ಡಾ.ನಾಲವಾಡ್ ಅವರಿಗೆ ಆಸೆ ಹುಟ್ಟಿಸಿ ಹಾವೇರಿಗೆ ಕಳಿಸಿ ಹೈರಾಣ ಮಾಡಿದ್ರಿ, ಡಾ.ನಾಲವಾಡ್ ಹಿಂದೆನೇ ಶರಣು ಅಂಗಡಿನೂ ಚೂ ಬಿಟ್ಟು ಮಜಾ ನೋಡಿದ್ರಿ, ಹೈಕಮಾಂಡ್ ಹೆಗಲ ಮೇಲೆ ಬಂದೂಕು ಇಟ್ಟು ಜಗದೀಶ್ ಶೆಟ್ರಿಗೆ ಟಿಕೆಟ್ ಕೊಡದೇ ಅಸಹ್ಯ ಮಾಡಿದ್ರಿ, ಈಗ ಧಾರವಾಡ ಜಿಲ್ಲೆಯಿಂದಲೇ ಹೊರಗ ಹಾಕಿದ್ರಿ, ಎಂ.ಆರ್.ಪಾಟೀಲ್ ಬಳಸಕೊಂಡು ಚಿಕ್ಕನಗೌಡ್ರನ್ ಮುಗಿಸಿದಿರಿ. ಅನಂತ್ ಕುಮಾರ್ ಕೈ ಹಿಡ್ಕೊಂಡ್ ಮೇಲೆ ಬಂದು ಅವರ್ ಸತ್ ಮೇಲೆ ಅವರ ಕುಟುಂಬದ್ ಬೆನ್ನಾಗ್ ಚೂರಿ ಹಾಕಿದ್ರಿ. ನಿಂಬಣ್ಣವರ್ ವಯಸ್ಸೂ ನೋಡದೇ ಎಲ್ಲಾ ಕಡೆ ಅಸಹ್ಯ ಮಾಡಿದ್ರಿ, ಸಾಯೂತನಕ ಬಿಡಲಿಲ್ಲ. ವಿಜಯ್ ಸಂಕೇಶ್ವರ್ ಕೊಟ್ಟ ಭಿಕ್ಷೆಯಲ್ಲಿ ಎಂಪಿ ಆಗಿ ಅವರ ಬಗ್ಗೆ ತುಚ್ಛವಾಗಿ ಮಾತಾಡಿದ್ರಿ, ಇದೇ ನಿಮ್ಮ ನಿಜವಾದ ಜಾತಕ’ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ವಿರುದ್ಧ ಕ್ಷೇತ್ರದ ಮುಖಂಡರ ಕೋಪ ಇನ್ನೂ ತಣ್ಣಗಾಗಿಲ್ಲ. ಬಹುತೇಕ ಲಿಂಗಾಯತ ಮತ್ತು ಒಬಿಸಿ ಸಮುದಾಯದ ಮಠಾಧಿಶರು ಜೋಷಿ ವಿರುದ್ಧವಾಗಿ ನಿಂತಿದ್ದು, ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ವಾಟ್ಸಾಪ್ ಗುಂಪುಗಳಲ್ಲಿ ಈ ಸಂದೇಶ ಹರಿದಾಡುತ್ತಿರುವುದು ಬಿಜೆಪಿ ಮುಖಂಡರಿಗೆ ಮುಜುಗರ ತಂದಿದೆ.
ಈ ನಡುವೆ ಲಿಂಗಾಯತ ಸಮಾಜದ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿ ಪ್ರಲ್ಹಾದ ಜೋಶಿ ವಿರುದ್ಧ ಸಿಡಿದೆದ್ದಿರುವ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂಬ ಒತ್ತಡ ದಿನೇದಿನೇ ಹೆಚ್ಚಾಗುತ್ತಿದೆ. ಸ್ವಾಮೀಜಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ; ಅಬಕಾರಿ ನೀತಿ ಪ್ರಕರಣ: ಬಿಆರ್ಎಸ್ ನಾಯಕಿ ಕವಿತಾ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಜಾ