ದೇಶದಲ್ಲಿ ಈಗಲೂ ಚಾಲ್ತಿಯಲ್ಲಿರುವ ಜಾತಿ ತಾರತಮ್ಯದ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಕೌನಾ ಗ್ರಾಮ ಪಂಚಾಯತ್ನ ಠಾಕೂರ್ ಬಹುಸಂಖ್ಯಾತ ಪ್ರದೇಶದಲ್ಲಿ ಮೊದಲ ದಲಿತ ಮಹಿಳಾ ಸರಪಂಚರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ವರದಿಯಾಗಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆಕೆಯನ್ನು ರಾಷ್ಟ್ರಧ್ವಜಾರೋಹಣ ಮಾಡದಂತೆ ತಡೆದಾಗ ಈ ವಿಷಯ ಸ್ವಲ್ಪ ತಡವಾಗಿಯಾದರೂ ಬೆಳಕಿಗೆ ಬಂದಿದೆ.
ದಲಿತ ಸಮುದಾಯಕ್ಕೆ ಸೇರಿದ ಮಹಿಳಾ ಸರಪಂಚ್ ಶ್ರದ್ಧಾ ಸಿಂಗ್ ಅವರು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಪತ್ರ ಬರೆದಿದ್ದು, “ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮ ಪಂಚಾಯಿತಿಯಲ್ಲಿ ಧ್ವಜಾರೋಹಣ ಸಮಾರಂಭವನ್ನು ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಧ್ವಜಾರೋಹಣವನ್ನು ಸರಪಂಚರು ನೆರವೇರಿಸಬೇಕಿತ್ತು. ಆದೇಶದ ಬಗ್ಗೆ ಪಂಚಾಯತ್ ಕಾರ್ಯದರ್ಶಿ ವಿಜಯ್ ಪ್ರತಾಪ್ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಪಂಚಾಯತ್ ಆವರಣಕ್ಕೆ ಬರುವಷ್ಟರಲ್ಲಿ ಉಪ ಸರಪಂಚ್ ಧರ್ಮೇಂದ್ರ ಸಿಂಗ್ ಅವರು ಧ್ವಜಾರೋಹಣ ಮಾಡಿದ್ದರು” ಎಂದು ಹೇಳಿದ್ದಾರೆ.
ಈ ಘಟನೆಯು ಕೇವಲ ಮಹಿಳೆ ಎಂಬ ಕಾರಣಕ್ಕಾಗಿ ಅಲ್ಲ. ಆದರೆ, ಉದ್ದೇಶಪೂರ್ವಕವಾಗಿದೆ. ಏಕೆಂದರೆ, ತಾನು ದಲಿತ ಸಮುದಾಯಕ್ಕೆ ಸೇರಿದವಳು. ಇದು ನನ್ನ ವಿರುದ್ಧದ ಪಿತೂರಿ ಮತ್ತು ಅವಮಾನಕ್ಕೆ ಸ್ಪಷ್ಟ ಉದಾಹರಣೆ ಎಂದು ಸರ್ಪಂಚ್ ಶ್ರದ್ಧಾ ಸಿಂಗ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿಯ ‘ದಿ ಮೂಕ್ನಾಯಕ್’ ಮಾಧ್ಯಮ ಸಂಸ್ಥೆ ಪ್ರತಿನಿಯೊಂದಿಗೆ ಮಾತನಾಡಿರುವ 28 ವರ್ಷದ ಸರಪಂಚ ಶ್ರದ್ಧಾ ಸಿಂಗ್, “ಆಗಸ್ಟ್ 17 ರಂದು ಗ್ರಾಮ ಸಭೆಯ ಸಮಯದಲ್ಲಿ ಮತ್ತೆ ಅವಮಾನಕ್ಕೊಳಗಾಗಿದ್ದೇನೆ” ಎಂದು ಹೇಳಿದ್ದಾರೆ. “ಸಭೆಯಲ್ಲಿ ನಾನು ಅವರ ಬಳಿ ಕುರ್ಚಿ ಕೇಳಿದಾಗ, ಉಪ ಸರಪಂಚ್ ಮತ್ತು ಕಾರ್ಯದರ್ಶಿ ಇಬ್ಬರೂ ಅದನ್ನು ನಿರಾಕರಿಸಿದರು. ‘ನಿಮಗೆ ಕುರ್ಚಿ ಬೇಕಾದರೆ, ಅದನ್ನು ಮನೆಯಿಂದ ತನ್ನಿ; ಇಲ್ಲದಿದ್ದರೆ, ನೆಲದ ಮೇಲೆ ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ ಎಂದರು” ಎಂದು ವಿವರಿಸಿದ್ದಾರೆ.
ತನ್ನನ್ನು ಹೀಗೆ ನಡೆಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂದು ಶ್ರದ್ಧಾ ತಿಳಿಸಿದ್ದಾರೆ. ದಲಿತ ಮಹಿಳೆಯಾಗಿ ನಾನು ಯಾವಾಗಲೂ ಅವಮಾನ ಮತ್ತು ತಾರತಮ್ಯವನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಆಕೆ ಹಳ್ಳಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಪ್ರಯತ್ನಿಸಿದಾಗ, ದಾರಿಯಲ್ಲಿ ಉದ್ದೇಶಪೂರ್ವಕವಾಗಿ ಅಡೆತಡೆಗಳನ್ನು ಹಾಕಲಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶ್ರದ್ಧಾ ಅವರು ಜುಲೈ 2022 ರಲ್ಲಿ ಈ ಗ್ರಾಮದ ಸರಪಂಚ್ ಆಗಿ ಆಯ್ಕೆಯಾದರು. ಗ್ರಾಮದಲ್ಲಿ ಸರಿಸುಮಾರು 1,600 ಮತದಾರರಿದ್ದಾರೆ. ಅವರಲ್ಲಿ ಶೇ.50 ರಷ್ಟು ಜನ ಠಾಕೂರ್ ಸಮುದಾಯದವರು; ಉಳಿದವರು ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರು. ಅವರು ಚುನಾವಣೆಯಲ್ಲಿ 58 ಮತಗಳ ಕಡಿಮೆ ಅಂತರದಿಂದ ಗೆದ್ದರು. ಆಕೆಯ ಗೆಲುವಿನಿಂದ ಕುಪಿತಗೊಂಡಿರುವ ಪ್ರಬಲ ಜಾತಿ ಜನರು ಗಲಾಟೆ ಸೃಷ್ಟಿಸಲು ಮತ್ತು ಇತರರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಶ್ರದ್ಧಾ ಹೇಳಿದರು. ಆದಾಗ್ಯೂ, ಎಸ್ಡಿಎಂ ಮತ್ತು ಡಿಎಂ ಮಧ್ಯಸ್ಥಿಕೆಯ ನಂತರ ಈ ವಿವಾದ ಬೂದಿ ಮುಚ್ಚಿದ ಕೆಂಡಂದಂತಿದೆ.
“ಅವರು ನಡೆಸುತ್ತಿರುವ ವರ್ತನೆಯಿಂದ ತುಂಬಾ ನೋವಾಗಿದೆ. ಆದರೆ, ನಾನು ಬಿಟ್ಟುಕೊಡಲ್ಲ. ಈ ತಾರತಮ್ಯ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ನನ್ನ ಪಂಚಾಯತ್ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಹೋರಾಡುತ್ತೇನೆ” ಎಂದು ಸರಪಂಚೆ ಶ್ರದ್ಧಾ ಪ್ರತಿಜ್ಞೆ ಮಾಡಿದರು.
ಜಿಲ್ಲಾಧಿಕಾರಿ, ಮಧ್ಯಪ್ರದೇಶದ ಸರಪಂಚ ಸಂಘ ಮತ್ತು ಪಂಚಾಯತ್ ರಾಜ್ ಕೌನ್ಸಿಲ್ಗೂ ಶ್ರದ್ಧಾ ದೂರು ಸಲ್ಲಿಸಿದ್ದಾರೆ. ಸೆಪ್ಟೆಂಬರ್ 5 ರಂದು ಭೋಪಾಲ್ನಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ. ಅಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಅವರು ಶಿಸ್ತು ಕ್ರಮ ಮತ್ತು ಜಾತಿ ಆಧಾರಿತ ತಾರತಮ್ಯದಲ್ಲಿ ತೊಡಗಿರುವ ಅಧಿಕಾರಿಗಳನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಾರೆ.
ಈ ವಿಚಾರದಲ್ಲಿ ರಾಜ್ಯ ಸರ್ಕಾರ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಮತ್ತು ದಲಿತ ಮಹಿಳಾ ಸರಪಂಚ್ ಅವರಿಗೆ ಸರಿಯಾದ ಗೌರವ ಮತ್ತು ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿ – ಭಾರತ್ ಏಕತಾ ಮಿಷನ್ನ ವಕೀಲ ವಿಜಯಕುಮಾರ್ ಆಜಾದ್, ಸಂಘಟನೆಯಿಂದ ಈ ಘಟನೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಮತ್ತು ಮನವಿ ಪತ್ರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ; ಗಾಜಾದಲ್ಲಿ ಪತ್ರಕರ್ತರ ಹತ್ಯೆ: ಇಸ್ರೇಲ್ ಜೊತೆಗಿನ ಸಹಕಾರ ಒಪ್ಪಂದ ಅಮಾನತಿಗೆ ಮಾಧ್ಯಮ ಹಕ್ಕುಗಳ ಸಂಘಟನೆಗಳಿಂದ ಒತ್ತಾಯ


