Homeಕರ್ನಾಟಕಪ್ರೊ.ಮುಝಫ್ಫರ್ ಅಸ್ಸಾದಿ ನಿಧನ: ಗೆಳೆಯನ ಕುರಿತು ರಹಮತ್ ತರೀಕೆರೆ....

ಪ್ರೊ.ಮುಝಫ್ಫರ್ ಅಸ್ಸಾದಿ ನಿಧನ: ಗೆಳೆಯನ ಕುರಿತು ರಹಮತ್ ತರೀಕೆರೆ….

- Advertisement -
- Advertisement -

ಏನೂ ತೋಚುತ್ತಿಲ್ಲ.
ಇಂದು ಮುಂಜಾನೆ ಬೆಳಕನ್ನು ಹರಿಯಲು ಬಿಡದಂತೆ ಆವರಿಸಿದ ತಣ್ಣನೆಯ ಕಾವಳ, ಗೆಳೆಯನ ಸಾವಿನ ಘೋರಸುದ್ದಿಯಾಗಿ ಹೀಗೆ ತನುಮನವನ್ನು ಆವರಿಸುತ್ತದೆ ಎಂದು ಊಹಿಸಿರಲಿಲ್ಲ..‌ ಪ್ರೀತಿಯ ಗೆಳೆಯ ಕಾಣದ ಲೋಕಕ್ಕೆ ಇಷ್ಟು ಬೇಗ ತೆರಳುವನೆಂದು, ಆತನಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾಗುವುದು ಎಂದು ಊಹಿಸಿರಲಿಲ್ಲ. ಹೋಗಿ ಬಾ ಮಿತ್ರ, ಅಲ್ಬಿದಾ..

ಅಸ್ಸಾದಿಯವರು ನಿವೃತ್ತರಾದಾಗ ಬರೆದಿದ್ದ ಈ ಬರೆಹವನ್ನು ಹಂಚಿಕೊಂಡಿರುವೆ.

ಭಾರತದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಹಲವಾರು ಮಾದರಿಯವರಿದ್ದಾರೆ. ಒಂದು: ಸಂಶೋಧನೆ ಮತ್ತು ಪಾಠಪ್ರವಚನಗಳಿಂದ ತಪ್ಪಿಸಿಕೊಂಡು, ವಿಶ್ವವಿದ್ಯಾನಿಲಯ ಇಲ್ಲವೆ ಸರ್ಕಾರದ ಬೇರೆಬೇರೆ ಅಧಿಕಾರ ಸ್ಥಾನಗಳಲ್ಲಿ ಇಡೀ ವೃತ್ತಿಜೀವನ ಮುಗಿಸುವವರು. ಎರಡು: ಒಳ್ಳೆಯ ಅಧ್ಯಾಪಕರಾಗಿರುತ್ತಾರೆ. ಆದರೆ ಸಂಶೋಧನೆ ಅಥವಾ ಬರವಣಿಗೆಯ ಕಲೆ ಇರುವುದಿಲ್ಲ. ಮೂರು: ಅತ್ಯುತ್ತಮ ಬೋಧನೆಯ ಜತೆ ಸಂಶೋಧನೆಯನ್ನೂ ಮಾಡುವವರು. ಇವರಲ್ಲಿ ಕೆಲವರ ಸಂಶೋಧನೆಯು ಸಂಶೋಧಕ ಸಮುದಾಯ ಸ್ತರವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಸೃಷ್ಟಿಯಾಗುತ್ತದೆ. ಅದಕ್ಕೆ ಸಾಮಾನ್ಯ ಓದುಗರ ಜತೆ ನೇರ ಸಂಬಂಧ ಇರುವುದಿಲ್ಲ. ನಾಲ್ಕು: ಏಕಕಾಲಕ್ಕೆ ಬೋಧನೆ ಸಂಶೋಧನೆ ಮತ್ತು ಸಮಾಜ ಬದಲಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರು. ಇವರು ತಮ್ಮ ಸಂಶೋಧನೆಯ ಫಲಿತವನ್ನು ಸಾರ್ವಜನಿಕ ಉಪನ್ಯಾಸಗಳ ಅಥವಾ ಜನಪ್ರಿಯ ಬರಹಗಳ ಮೂಲಕ ಸಾಮಾನ್ಯ ಓದುಗರಿಗೆ ಸರಳವಾದ ಭಾಷೆಯಲ್ಲಿ ಹಂಚಿಕೊಳ್ಳುವವರು; ಅದನ್ನು ನಾಡಿನ ಸಾಮಾಜಿಕ ರಾಜಕೀಯ ಚಳವಳಿಗಳಲ್ಲಿಯೂ ತೊಡಗಿಸುವವರು. ಆ ಜ್ಞಾನವು ಸರ್ಕಾರದ ನೀತಿನಿರೂಪಣೆಯಲ್ಲಿ ಉಪಯೋಗವಾಗುವಂತೆ ಮಾಡುವವರು, ವಿದ್ವತ್ತಿನ ಈ ಮಾದರಿಯನ್ನು ಜ್ಞಾನದ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ ಎನ್ನಬಹುದು.

ಡಿ.ಆರ್.ನಾಗರಾಜ್, ಕಾಂಚ ಐಲಯ್ಯ, ಆನಂದ ತೇಲ್ತುಂಬ್ಡೆ, ಗಣೇಶ್ ಎನ್.ದೇವಿ, ಯೋಗೇಂದ್ರ ಯಾದವ್, ವಸು ಮಳಲಿ, ಎ.ನಾರಾಯಣ, ಚಂದ್ರಪೂಜಾರಿ, ಟಿ.ಆರ್. ಚಂದ್ರಶೇಖರ, ಬಿಳಿಮಲೆ, ಮುಜಾಫರ್ ಅಸ್ಸಾದಿ ಮೊದಲಾದವರು ಈ ಮಾದರಿಯವರು. ಪತ್ರಕರ್ತರಲ್ಲಿ ಪಿ.ಸಾಯಿನಾಥ್ ಅವರು ಈ ಮಾದರಿಗೆ ನೆನಪಾಗುತ್ತಾರೆ.

ಅಸ್ಸಾದಿಯವರು ವಿದ್ಯಾರ್ಥಿಸ್ನೇಹಿಯಾದ ಪ್ರಾಧ್ಯಾಪಕರೆಂದು ಕೇಳಿರುವೆ. ಜತೆಗೆ ಅವರು ತಮ್ಮ ಜನೋಪಯೋಗಿ ಸಂಶೋಧನೆ, ಉಪನ್ಯಾಸ ಮತ್ತು ಬರೆಹಗಳಿಂದಾಗಿ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಬದುಕಿನಲ್ಲಿಯೂ ದೊಡ್ಡಸಂಖ್ಯೆಯ ಸಂಗಾತಿಗಳು, ಓದುಗರು, ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಈ ವ್ಯಕ್ತಿತ್ವಕ್ಕೆ ಅವರು ಜೆಎನ್‌ಯುನಲ್ಲಿ ಕಲಿತಿದ್ದು ಕೂಡ ಒಂದು ಕಾರಣವಿರಬಹುದು. ಇದರಿಂದ ಕನ್ನಡಿಗನೊಬ್ಬ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಬಗೆಗಿನ ತಿಳಿವನ್ನು ಹಂಚಿಕೊಳ್ಳುವುದು; ಕರ್ನಾಟಕದ ಹಳ್ಳಿಗಾಡು ಮತ್ತು ಕಾಡುಪ್ರದೇಶಗಳಿಗೆ ಹೋಗಿ ಬುಡಕಟ್ಟು ಜನರೊಂದಿಗೆ ಸಂವಾದ ಮಾಡುವುದು; ಅಲ್ಲಿ ಪಡೆದ ಅನುಭವ ಮತ್ತು ಜ್ಞಾನವನ್ನು ಪ್ರಭುತ್ವದ ನೀತಿನಿರೂಪಣ ಸಭೆಗಳಲ್ಲಿ ಹಂಚಿಕೊಳ್ಳುವುದು ಸಾಧ್ಯವಾಯಿತು.

ಅಸ್ಸಾದಿ ಅರಬಸ್ಥಾನದ ಒಂದು ಸಮುದಾಯದ ಹೆಸರು. ಅಸ್ಸಾದಿಯವರ ಪೂರ್ವಜರು ಬಗ್ದಾದು ಕಡೆಯಿಂದ ಭಾರತಕ್ಕೆ ವಲಸೆ ಬಂದು ಕರಾವಳಿ ಸೀಮೆಯಲ್ಲಿ ನೆಲೆ ನಿಂತವರು. ಮುಜಾಫರ್ ಅವರು ಉಡುಪಿ ಸಮೀಪದ ಶಿರ್ವದಲ್ಲಿ ಹುಟ್ಟಿದರು. ಕರ್ನಾಟಕದ ಕರಾವಳಿಯು ಅತಿಹೆಚ್ಚು ಜನಭಾಷೆಗಳು, ಹಲವಾರು ಆದಿವಾಸಿಗಳು, ವಿಭಿನ್ನ ಧರ್ಮಗಳು, ಆಹಾರ ಪದ್ಧತಿಗಳು ಇರುವ ವಿಶಿಷ್ಟ ಪ್ರದೇಶ. ಇದು ದುರದೃಷ್ಟವಶಾತ್ ಏಕರೂಪೀ ಸಂಸ್ಕೃತಿ ಹೇರಿಕೆಯ ಮತ್ತು ಮಹಿಳೆಯರ, ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ದಮನಿಸುವ ಪ್ರಯೋಗಶಾಲೆಯೂ ಆಗಿಬಿಟ್ಟಿದೆ. ಇಂತಹ ಸಾಮಾಜಿಕ ವಾಸ್ತವ ಮತ್ತು ಸೈದ್ಧಾಂತಿಕ ಪ್ರಯೋಗಶಾಲೆಯ ಹಿನ್ನೆಲೆಯ ಪ್ರದೇಶದಿಂದ ಬಂದ ಅಸ್ಸಾದಿ, ಜಿ.ರಾಜಶೇಖರ, ಪುರುಷೋತ್ತಮ ಬಿಳಿಮಲೆ, ಚಂದ್ರಪೂಜಾರಿ, ದಿನೇಶ್ ಅಮಿನ್‌ಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಸಂವರ್ತ ಸಾಹಿಲ್ ಮೊದಲಾದ ಚಿಂತಕರ ಮಾತು ಮತ್ತು ಬರಹಗಳಲ್ಲಿ, ಭಾರತದ ಆತ್ಮದಂತಿರುವ ಬಹುತ್ವ ತತ್ವವು ಪ್ರತಿಪಾದಿತವಾಗಿದೆ. ಈ ತತ್ವಕ್ಕೆ ಮೂಲಭೂತವಾದ ಮತ್ತು ಮತೀಯವಾದ ಎರಡನ್ನೂ ಪ್ರತಿರೋಧಿಸುವ ಶಕ್ತಿಯೂ ಒದಗಿದೆ. ಇದಕ್ಕೆ ಬೇಕಾಗಿ ಅಸ್ಸಾದಿಯವರಿಗೆ ಉರ್ದು, ತುಳು, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಭುತ್ವವಿದೆ. ಈ ಭಾಷಿಕ ಬಹುತ್ವವು ಅವರನ್ನು ಸಾಂಸ್ಕೃತಿಕ ಬಹುತ್ವವನ್ನು ಪ್ರತಿಪಾದಿಸುವಂತೆ ಮಾಡಿದೆ ಕೂಡ. ಅಸ್ಸಾದಿ‌‌ ನಮ್ಮ‌ನಡುವಿನ ಬಹುತ್ವದ ಚಿಂತಕರು.

ಅನೇಕ ಸಲ ಕೋಮುಸೌಹಾರ್ದ ಅಥವಾ ಮತೀಯವಾದ ವಿರೋಧಿಸುವ ಚಿಂತನೆಯು, ಸಮಾಜದಲ್ಲಿ ಆಳವಾಗಿರುವ ವರ್ಗಭೇದ ಮತ್ತು ಸಾಮಾಜಿಕ ತಾರತಮ್ಯದ ಆಯಾಮಗಳನ್ನು ಅರ್ಥ ಮಾಡಿಕೊಳ್ಳದೆ ಇಲ್ಲವೇ ಪರಿಗಣಿಸದೇ ಹೋಗುವ ಸಾಧ್ಯತೆಗಳಿವೆ. ಅಸ್ಸಾದಿಯವರ ಸಂಶೋಧನ ಬರಹ ಮತ್ತು ಉಪನ್ಯಾಸಗಳ ವಿಶೇಷತೆಯೆಂದರೆ, ಅವು ನಮ್ಮ ಸಮಾಜದ ಬಡತನ ಮತ್ತು ಸಾಮಾಜಿಕ ಭೇದಗಳನ್ನು, ಅವುಗಳ ನಡುವಿರುವ ಅಂತಃಸಂಬಂಧವನ್ನು ಮರೆಯುವುದಿಲ್ಲ. ಅವನ್ನು ಎಚ್ಚರಿಕೆಯಿಂದ ಗುರುತಿಸುತ್ತವೆ ಮತ್ತು ವಿಶ್ಲೇಷಿಸುತ್ತವೆ. ಸಮಸ್ಯೆಯಿಂದ ಹೊರಬರುವ ಕಾರ್ಯಸಾಧ್ಯವಾದ ಸಲಹೆ ಸೂಚನೆಗಳ ಮೂಲಕ ಮುಗಿಯುತ್ತವೆ.

ಈ ದೃಷ್ಟಿಯಿಂದ ಮುಸ್ಲಿಮರಲ್ಲಿರುವ ಪಂಗಡ ಅಥವಾ ಜಾತಿಪದ್ಧತಿಯನ್ನು ಕುರಿತ ಅಸ್ಸಾದಿಯವರ ‘ಅಲ್ಪಸಂಖ್ಯಾತರು ಮತ್ತು ಜಾತಿವ್ಯವಸ್ಥೆ’ ಪುಸ್ತಕವು ಅತ್ಯುತ್ತಮ ನಿದರ್ಶನವಾಗಿದೆ. ಈ ಪುಸ್ತಕದಲ್ಲಿರುವ ೪೦೮ ಅಡಿ ಟಿಪ್ಪಣಿಗಳು ಮತ್ತು ಅಲ್ಲಿ ಉಲ್ಲೇಖಗೊಂಡಿರುವ ಕೃತಿಗಳು, ಅಸ್ಸಾದಿಯವರ ವ್ಯಾಪಕವಾದ ಅಧ್ಯಯನದ ಪ್ರತೀಕವಾಗಿವೆ.

ಇದು ಜಗತ್ತಿನ ಮುಸ್ಲಿಮರೆಲ್ಲ ಒಂದೇ, ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ನಂಬಿರುವ ಮತ್ತು ಪ್ರತಿಪಾದಿಸುವ ಮಹನೀಯರಿಗೆ ಅಷ್ಟೇನು ಪ್ರಿಯವಾದ ಪುಸ್ತಕವಲ್ಲ. ಆದರೆ ಒಬ್ಬ ವಿದ್ವಾಂಸ ತನ್ನ ಸಮುದಾಯಕ್ಕೆ ತನ್ನ ಬೌದ್ಧಿಕತೆಯಿಂದ ಸೇವೆ ಸಲ್ಲಿಸುವ ವಿಧಾನವೆಂದರೆ, ಅದರೊಳಗಿರುವ ವೈರುಧ್ಯಗಳನ್ನು ಕಹಿಸತ್ಯಗಳನ್ನು ಬಹಿರಂಗಪಡಿಸುವುದು; ತನ್ನ ಸಮುದಾಯದೊಳಗಿನ ದಮನಿತ ಸ್ತರ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಸಿಗುವ ದಿಸೆಯಲ್ಲಿ ನೆರವಾಗುವುದು; ಅವರ ನಿಜವಾದ ಎದುರಾಳಿಗಳ ಬಗ್ಗೆ ಎಚ್ಚರವನ್ನು ಕೊಡುವುದು. ಅವರನ್ನು ಕುರಿತು ಪ್ರಭುತ್ವವನ್ನು ಸಂವೇದನಶೀಲಗೊಳಿಸುವುದು; ಈ ಹಿನ್ನೆಲೆಯಲ್ಲಿ ಅಸ್ಸಾದಿಯವರು ಲಿಂಗಾಯತ ಧರ್ಮದ ಸಮಿತಿಯಲ್ಲಿ ಕೆಲಸ ಮಾಡಿದ್ದನ್ನು; ಮೈಸೂರು ಸೀಮೆಯ ಕಾಡುಗಳಲ್ಲಿರುವ ಅದಿವಾಸಿಗಳ ಸ್ಥಳಾಂತರ ಮತ್ತು ಪುನರ್‌ವಸತಿ ಕುರಿತಂತೆ ಉಚ್ಚನ್ಯಾಯಾಲಯವು ನೇಮಿಸಿದ ಸಮಿತಿಯ ಅಧ್ಯಕ್ಷರಾಗಿ ಅವರು ಕೊಟ್ಟ ವರದಿಯನ್ನು; ರೈತರ ಆತ್ಮಹತ್ಯೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ನಡೆಸಿದ ಅಧ್ಯಯನವನ್ನು ಚುನಾವಣೆಗಳಲ್ಲಿ ದಮನಿತ ಸಮುದಾಯಗಳು ಮತದಾನ ಮಾಡುವ ಪ್ರವೃತ್ತಿಯನ್ನು ಕುರಿತ ವಿಶ್ಲೇಷಣೆಗಳನ್ನು ಗಮನಿಸಬಹುದು.

ಕೆಲವು ವರ್ಷಗಳ ಹಿಂದೆ ನಾವು, ಕರ್ನಾಟಕದ ಲೇಖಕರು, ವಕೀಲರು, ಪತ್ರಕರ್ತರು, ಚಳವಳಿಗಾರರು ಸೇರಿಕೊಂಡು ‘ಮುಸ್ಲಿಂ ಚಿಂತಕರ ಚಾವಡಿ’ ಎಂಬ ಸಂಘಟನೆ ಕಟ್ಟಿದೆವು. ಮುಜಾಫರ್ ಅಸ್ಸಾದಿಯವರು ಅದರ ಪ್ರಥಮ ಅಧ್ಯಕ್ಷರಾಗಿ ಮಾಡಿದ ಮೊದಲನೇ ಕಾರ್ಯಕ್ರಮವೆಂದರೆ, ಭಾರತದ ಮುಸ್ಲಿಮರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅವಸ್ಥೆಯ ಬಗ್ಗೆ ಜಸ್ಟೀಸ್ ಸಾಚಾರ್‌ ಅವರು ಕೊಟ್ಟಿರುವ ವರದಿಯ ಮೇಲೆ ಚರ್ಚೆ ಏರ್ಪಡಿಸಿದ್ದು. ಭಾರತದ ಮುಸ್ಲಿಮರಿಗೆ ತುರ್ತು ಅಗತ್ಯ ಇರುವುದು ಮಸೀದಿಗಳಲ್ಲ. ಘನತೆಯಿಂದ ಬದುಕುವ ಆರ್ಥಿಕ ಹಾಗೂ ಸಾಮಾಜಿಕ ಬದುಕು. ರಾಜಕೀಯ ಪ್ರಾತಿನಿಧ್ಯ ಎಂಬುದು ಅವರ ನಂಬಿಕೆ. ಅವರಿಗೆ ಸಾಮಾಜಿಕ ಕ್ರಿಯಾಶೀಲತೆಗೆ ಮತ್ತು ಸಾಮುದಾಯಿಕ ಸಂಘಟನೆಗೆ ತಮ್ಮ ಸಂಶೋಧನೆಯ ಬಲದಿಂದ ಚಿಂತನೆಯ ಚೌಕಟ್ಟು ಕೊಡುವ ವಿಶಿಷ್ಟ ತರಬೇತಿಯಿದೆ. ಚಾರಿತ್ರಿಕ ಅರಿವಿನಿಂದ ಕೂಡಿರುವ ಈ ಚೌಕಟ್ಟಿಗೆ ವರ್ತಮಾನವನ್ನು ಬದಲಿಸುವ ಕಳಕಳಿಯಿದೆ. ಅವರ ಅಧ್ಯಯನಗಳು ಚರಿತ್ರೆ, ಸಮಾಜ ವಿಜ್ಞಾನ, ರಾಜಕೀಯಶಾಸ್ತ್ರ, ಮಾನವಶಾಸ್ತ್ರಗಳ ಬಹುಶಿಸ್ತೀಯ ತಿಳಿವಳಿಕೆಯಿಂದ ರೂಪುಗೊಂಡಿರುವುದೇ ಇದಕ್ಕೆ ಕಾರಣ.

ಅಸ್ಸಾದಿಯವರ ಈ ಬಹುಶಿಸ್ತೀಯ ಮತ್ತು ಜನಪರ ವಿದ್ವತ್ತಿನ ತಾರ್ಕಿಕ ಆಯಾಮವೇ ಅವರು ಪತ್ರಿಕೆಗಳಲ್ಲಿ ಲೇಖನ ಅಂಕಣ ಬರೆಯುವುದು. ಕನ್ನಡದಲ್ಲಿ ಸಾಹಿತ್ಯದ ಹಿನ್ನೆಲೆಯವರಿಗೆ ಹೋಲಿಸಿದರೆ, ಸಮಾಜ ವಿಜ್ಞಾನದ ಹಿನ್ನೆಲೆಯವರು ಕನ್ನಡದಲ್ಲಿ ತಮ್ಮ ತಿಳಿವಳಿಕೆಯನ್ನು ಪತ್ರಿಕೆಗಳಲ್ಲಿ ಹಂಚಿಕೊಳ್ಳುವುದು ಇಲ್ಲವೇ ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಅಸ್ಸಾದಿಯವರು ಇದಕ್ಕೆ ಅಪವಾದ. ಅವರ ಪತ್ರಿಕಾ ಲೇಖನಗಳು ಬಹಳ ಜನಪ್ರಿಯವಾಗಿವೆ. ಅವರ ಅಂಕಣ ಬರೆಹಗಳಿಗೆ ಮಾಧ್ಯಮ ಅಕಾಡೆಮಿಯ ಬಹುಮಾನ ಬಂದಿದ್ದು ಸಹಜವಾಗಿವೆ.

ಜೆಎನ್‌ಯು ಮತ್ತು ಶಿಕಾಗೊ ವಿಶ್ವವಿದ್ಯಾಲಯಗಳಲ್ಲಿ ಕಲಿತ, ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ನಾಲ್ಕು ದಶಕಗಳ ಕಾಲ ಸಹಸ್ರಾರು ವಿದ್ಯಾರ್ಥಿಗಳಿಗೆ ಕಲಿಸಿದ, ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ಕುರಿತ ತಮ್ಮ ಜ್ಞಾನವನ್ನು ಹಂಚಿಕೊಂಡ, ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ತಿಳಿವಳಿಕೆಯನ್ನು ನಾಡಿನ ಓದುಗರಿಗೆ ಅಂಕಣಗಳ ಮೂಲಕ ಉಣಬಡಿಸಿದ ಪ್ರೊ.ಅಸ್ಸಾದಿಯವರು, ಇಂದು (30-8-2023) ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರ ತಿಳಿವಳಿಕೆಯು, ಸಮಾನತೆಯ ಕರ್ನಾಟಕವನ್ನು ಕಟ್ಟಲು ನೆರವಾಗಿದೆ ಮತ್ತು ಮುಂದೆ ಕೂಡ ನೆರವಾಗಲಿದೆ. ‘ಜ್ಞಾನದ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ’ ಎಂದೂ ವಿರಮಿಸುವುದಿಲ್ಲ.

ಹಿರಿಯ ಚಿಂತಕ, ಲೇಖಕ ಪ್ರೊ.ಮುಝಫ್ಫರ್ ಅಸ್ಸಾದಿ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...