ದಾವಣಗೆರೆ: ಏ.26ರಂದು ನಡೆಯಲಿರುವ ಸಂವಿಧಾನ ಸಂರಕ್ಷಕರ ಸಮಾವೇಶದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ. ಅಂದು ದಾವಣಗೆರೆಯಲ್ಲಿ ನಾಡಿನ ಎಲ್ಲಾ ಹೋರಾಟಗಾರರ ದಂಡು ಅಣಿನೆರೆಯಲಿದ್ದು, ನಗರವು ದೇಶದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲಿದೆ. ಅಂದಿನ ಸಂವಿಧಾನ ಸಂರಕ್ಷಕರ ಸಮಾವೇಶದ ಬಹಿರಂಗ ಸಭೆಯನ್ನು ನಾಡೋಜ ಬರಗೂರು ರಾಮಚಂದ್ರಪ್ಪನವರು ಉದ್ಘಾಟಿಸಲಿದ್ದಾರೆ ಎಂದು ಸಮಾವೇಶದ ಕೇಂದ್ರ ಸಂಚಾಲಕ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಪ್ರಸಿದ್ಧ ಚಿತ್ರ ನಟ ಪ್ರಕಾಶ್ ರಾಜ್, ಗುಜರಾತಿನ ಶಾಸಕ ಹಾಗೂಹೋರಾಟಗಾರ ಜಿಗ್ನೇಶ್ ಮೇವಾನಿ, ಪ್ರಖರ ಚಿಂತಕರಾದ ಪರಕಾಲ ಪ್ರಭಾಕರ್, ಮುಸ್ಲಿಂ ಸಮುದಾಯದ ರಾಷ್ಟ್ರೀಯ ನಾಯಕರಾದ ಮೊಹಮ್ಮದ್ ಸಲೀಂ, ಸಂಯುಕ್ತ ಕಿಸಾನ್ ಮೋರ್ಚಾದ ಡಾ.ಸುನೀಲಮ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ, ರೈತ ಚಳವಳಿಯ ಮುಂದಾಳುಗಳಾದ ಹೆಚ್.ಆರ್.ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ದಲಿತ ಚಳವಳಿಯ ಹಿರಿಯ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಕ್ರೈಸ್ತ ಸಮುದಾಯದ ಮುಖಂಡರಾದ ಫಾ.ವೀರೇಸ್ ಮೋರೆಸ್, ಫಾ.ಜೆರಾಲ್ಡ್, ಮಾನವ ಬಂಧುತ್ವ ವೇದಿಕೆಯ ಎ.ಬಿ.ರಾಮಚಂದ್ರಪ್ಪ, ರವಿ ನಾಯ್ಕರ್, ಜನಪರ ಚಿಂತಕ-ಹೋರಾಟಗಾರ ಪಾಟೀಲ್ ಇನ್ನು ಮುಂತಾದ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕೆ ಯುವಕ ಯುವತಿಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಮಾವೇಶದ ಮತ್ತೊಂದು ಮುಖ್ಯ ವಿಚಾರವಾಗಿದೆ. ವಾಡಿಯಿಂದ ದಾವಣಗೆರೆ ತನಕ 20 ಜಿಲ್ಲೆಗಳ ಮೂಲಕ ಹಾಗೂ 2000 ಕಿ.ಮೀ. ಉದ್ದದ ದಾರಿಯನ್ನು ಕ್ರಮಿಸುತ್ತಾ ಬೈಕುಗಳಲ್ಲಿ ಯುವಯಾನ ನಡೆಯುತ್ತಿದೆ. ಅದು ನಾಳೆ (ಏ.25) ಸಂಜೆ ದಾವಣಗೆರೆ ತಲುಪಲಿದ್ದು, ಅಲ್ಲಿಯೂ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತವು ಅಪಾಯಕಾರಿ ಹಂತಕ್ಕೆ ತಲುಪಿದೆ. ಸಂವಿಧಾನದ ಆಶಯ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕನಸಿನ ಭಾರತವನ್ನು ರಕ್ಷಿಸಿಕೊಳ್ಳುವ ತುರ್ತು ಎದುರಾಗಿದೆ. ಹೀಗಾಗಿ, ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಪ್ರಯತ್ನ ಜ.26ರಿಂದ ಶುರುವಾಗಿದೆ. 3 ತಿಂಗಳ ಅವಧಿಯಲ್ಲಿ 10 ಸಾವಿರ ಜನರನ್ನು ತಲುಪಿದ್ದು, ಈ ಎಲ್ಲರೂ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ ಈ ಪ್ರಯತ್ನ ಮಾಡುತ್ತಿದ್ದೇವೆ. ರೈತ, ದಲಿತ, ಕನ್ನಡ ಪರ ಸಂಘಟನೆಗಳು, ಅಲ್ಪಸಂಖ್ಯಾತ ಸಮುದಾಯಗಳು ಇದಕ್ಕೆ ಕೈಜೋಡಿಸಿವೆ. ಯಾವ ರಾಜಕೀಯ ಪಕ್ಷವೂ ಸಂವಿಧಾನ ಉಳಿಸಿಕೊಳ್ಳುವ ಆಸಕ್ತಿ ತೋರಿಲ್ಲ. ಸಂವಿಧಾನ ರಕ್ಷಣೆ ಮಾಡಿಕೊಳ್ಳುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮೇಲಿದೆ. ಸಂವಿಧಾನ ಉಳಿದರೆ ದೇಶ ಹಾಗೂ ಜನರು ಉಳಿಯುತ್ತಾರೆ ಎಂದು ಅಶೋಕ್ ತಿಳಿಸಿದರು.
ಹೊಸ ಸಂದರ್ಭವು ಹೊಸದಿಟ್ಟ ಹೆಜ್ಜೆಯನ್ನು ನಾಗರೀಕರಾದ ನಮ್ಮೆಲ್ಲರಿಂದ ಅಪೇಕ್ಷಿಸುತ್ತಿದೆ. ಈ ದೇಶವನ್ನು ಈ ಬಲಾಢ್ಯ ಪಕ್ಷಗಳು ರಕ್ಷಿಸುತ್ತವೆ ಎಂದು ಕಾಯುತ್ತಾ ಕೂರಲು ಸಾಧ್ಯವಿಲ್ಲ. ನಾಗರೀಕರಾದ ನಾವೇ ಒಂದು ಪ್ರಬಲ ಸಾಮಾಜಿಕ ಶಕ್ತಿಯಾಗಿ ರೂಪಗೊಳ್ಳಬೇಕಿದೆ. ಸಾಮಾಜಿಕ ಸ್ವಾಸ್ಥವನ್ನು ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ ನಾಗರೀಕ ಶಕ್ತಿಯಾಗಿ ತಳಮಟ್ಟದಿಂದ ದೇಶಮಟ್ಟದ ತನಕ ನಮ್ಮನ್ನು ನಾವು ಕಟ್ಟಿಕೊಳ್ಳಬೇಕಾಗಿದೆ. ಒಟ್ಟಾರೆಯಾಗಿ ರಾಜ್ಯದ ನಾಗರೀಕ ಸಮಾಜ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಜ್ಜಾಗುತ್ತಿದೆ. ನೀತಿಬದ್ದ ನಾಗರೀಕ ಶಕ್ತಿಯನ್ನು ತಳಮಟ್ಟದ ತನಕ ಕಟ್ಟುವ, ಕೇಂದ್ರ ಸರಕಾರದ ನೀತಿಗಳ ವಿರುದ್ಧ ಜನಾಂದೋಲನವನ್ನು ರೂಪಿಸುವ, ರಾಜ್ಯ ಸರಕಾರ ಕೊಟ್ಟ ಮಾತು ಈಡೇರಿಸುವಂತೆ ಪಟ್ಟು ಹಿಡಿದು ಹೋರಾಡುವ ಧೃಡ ಸಂಕಲ್ಪವನ್ನು ಈ ಸಮಾವೇಶದಲ್ಲಿ ತೊಡಲಿದೆ. ನಾಡಿನ ಎಲ್ಲಾ ದೇಶಪ್ರೇಮಿ ಬಂಧುಗಳನ್ನು ಈ ಸಮಾವೇಶಕ್ಕೆ ಆದರಭಿಮಾನಗಳ ಜೊತೆ ದಾವಣಗೆರೆಗೆ ಆಹ್ವಾನಿಸುತ್ತಿದ್ದೇವೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇದೊಂದು ರೀತಿಯಲ್ಲಿ “ಸಂವಿಧಾನ ಹಬ್ಬ’’. ತಪ್ಪದೇ ಹಬ್ಬಕ್ಕೆ ಬನ್ನಿ ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲ ಅನೀಶ್ ಪಾಷ, ಜಬೀನಾ ಖಾನಂ, ಪವಿತ್ರಾ ಮುಂತಾದವರು ಹಾಜರಿದ್ದರು.


