ಸುಕ್ಮಾ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, 4 ಭದ್ರತಾ ಸಿಬ್ಬಂದಿ ತೀವ್ರ ಗಾಯಗೊಂಡಿದ್ದಾರೆ.
2013ರ ಬ್ಯಾಚ್ನ ರಾಜ್ಯ ಪೊಲೀಸ್ ಸೇವಾ ಅಧಿಕಾರಿ, ಕೊಂಟಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಆಕಾಶ್ ರಾವ್ ಗಿರೆಪುಂಜೆ ಅವರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಗೃಹ ಖಾತೆಯನ್ನೂ ಹೊಂದಿರುವ ರಾಜ್ಯದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.
ಕೊಂಟಾ-ಎರ್ರಾಬೋರ್ ರಸ್ತೆಯ ಡೋಂಡ್ರಾ ಗ್ರಾಮದ ಬಳಿ ಘಟನೆ ಸಂಭವಿಸಿದಾಗ ಎಎಸ್ಪಿ ಮತ್ತು ಇತರ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸುಕ್ಮಾದ ಎಎಸ್ಪಿ ಆಕಾಶ್ ರಾವ್ ಗಿರೆಪುಂಜೆ ಕೊಂಟಾ ಎರ್ರಾಬೋರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಈ ಸ್ಪೋಟ ಸಂಭವಿಸಿದೆ. ಈ ಐಇಡಿ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಜವಾನರು ಕೂಡ ಗಾಯಗೊಂಡಿದ್ದಾರೆ ಮತ್ತು ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೊಂಟಾ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಎಸ್ಪಿ ಆಕಾಶ್ ರಾವ್ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ಇತರ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಬಸ್ತಾರ್ ಐಜಿ ಸುಂದರರಾಜ್ .ಪಿ ಹೇಳಿದರು.
ಈ ಘಟನೆ ಸೋಮವಾರ ಬೆಳಿಗ್ಗೆ 9ರಿಂದ 10 ಗಂಟೆಯ ನಡುವೆ ನಡೆದಿದೆ ಎಂದು ಅವರು ಹೇಳಿದರು. ನಾಳೆ (ಮಂಗಳವಾರ) ನಕ್ಸಲರು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಗಸ್ತು ತಿರುಗುವಿಕೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಎಎಸ್ಪಿ ಆಕಾಶ್ ರಾವ್ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ. ಅವರು ಧೈರ್ಯಶಾಲಿ ಅಧಿಕಾರಿಯಾಗಿದ್ದರು ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದರು ಎಂದು ಉಪ ಮುಖ್ಯಮಂತ್ರಿ ಶರ್ಮಾ ನಾಗ್ಪುರದಲ್ಲಿ ತಿಳಿಸಿದರು.
ನಕ್ಸಲರು ಮತ್ತು ಸರ್ಕಾರದ ನಡುವೆ ಮಾತುಕತೆಗೆ ಪರಿಸ್ಥಿತಿ ಹೇಗೋ ಸೃಷ್ಟಿಯಾದರೆ, ಅದು ಇಂತಹ ಘಟನೆಗಳೊಂದಿಗೆ (ಸ್ಫೋಟವನ್ನು ಉಲ್ಲೇಖಿಸಿ) ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದರು.
ಒಂದೇ ಒಂದು ಗುಂಡನ್ನು ಹಾರಿಸಲು ಬಯಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಅವರು (ನಕ್ಸಲರು) ಮುಖ್ಯವಾಹಿನಿಗೆ ಬರಬೇಕು, ಪುನರ್ವಸತಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಮತ್ತು ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಶರ್ಮಾ ಹೇಳಿದರು.
2025ರಲ್ಲಿ ಛತ್ತೀಸ್ಗಢದಲ್ಲಿ ನಡೆದ ಐಇಡಿ ಘಟನೆಗಳ ಪಟ್ಟಿ
• 30 ಮಾರ್ಚ್: ಬಿಜಾಪುರದಲ್ಲಿ ನಕ್ಸಲ್ ಎನ್ಕೌಂಟರ್ನ ಎರಡನೇ ದಿನದಂದು ಐಇಡಿ ಸ್ಫೋಟದಲ್ಲಿ ಮಹಿಳೆ ಸಾವನ್ನಪ್ಪಿದರು.
• 4 ಏಪ್ರಿಲ್: ನಾರಾಯಣಪುರದಲ್ಲಿ ನಕ್ಸಲರ ಐಇಡಿ ಸ್ಫೋಟಕ್ಕೆ ಒಬ್ಬ ಮೃತಪಟ್ಟು, ಒಬ್ಬ ಗಾಯಗೊಂಡಿದ್ದರು.
• 7 ಏಪ್ರಿಲ್: ಅಬುಜ್ಮದ್ ಕಾಡುಗಳಲ್ಲಿ ಐಇಡಿ ಸ್ಫೋಟದಲ್ಲಿ ಒಬ್ಬ ಗ್ರಾಮಸ್ಥರಿಗೆ ಗಾಯಗೊಂಡಿದ್ದರು.
• 9 ಏಪ್ರಿಲ್: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಜವಾನನು ಗೊಂಡಿದ್ದರು.
• 10 ಏಪ್ರಿಲ್: ಬಿಜಾಪುರದ ಅರಣ್ಯ ರಸ್ತೆಯಲ್ಲಿ ನಕ್ಸಲರು ಇರಿಸಿದ್ದ ಐಇಡಿಯನ್ನು ಯೋಧರು ನಿಷ್ಕ್ರಿಯಗೊಳಿಸಿದರು.
• 13 ಏಪ್ರಿಲ್: ಬಿಜಾಪುರದ ರಾಣಿಬೋಡ್ಲಿ ಕಟ್ಟೂರ್ ರಸ್ತೆಯಲ್ಲಿ 20 ಕೆಜಿ ಐಇಡಿ ನಿಷ್ಕ್ರಿಯಗೊಳಿಸಲಾಗಿದೆ.
• 14 ಏಪ್ರಿಲ್: ಯೋಧರು ಇರಿಸಿದ್ದ 5 ಐಇಡಿಗಳನ್ನು ನಾಶಪಡಿಸಿದ ನಕ್ಸಲರು.
• ಏಪ್ರಿಲ್ 18: ಬಿಜಾಪುರದ ಕೋಬ್ರಾ ಬೆಟಾಲಿಯನ್ನಲ್ಲಿ ಮಾವೋವಾದಿಯೊಬ್ಬನ ಬಂಧನ. ಆತ ಬಿಯರ್ ಬಾಟಲಿಗಳಲ್ಲಿ ತಯಾರಿಸಿದ 8 ಐಇಡಿಗಳ ವಶ.
• ಏಪ್ರಿಲ್ 21: ಬಿಜಾಪುರದಲ್ಲಿ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟದಲ್ಲಿ ಸಿಎಎಫ್ ಜವಾನ್ ಸಾವು.
• ಏಪ್ರಿಲ್ 26: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಡಿಆರ್ಜಿ ಜವಾನನಿಗೆ ಗಾಯ
• ಮೇ 6: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಸಿಆರ್ಪಿಎಫ್ ಅಧಿಕಾರಿಗೆ ಗಾಯ.
• ಮೇ 19: ಗೌರ್ಮುಂಡ್ ಗ್ರಾಮದ ಕಾಡುಗಳಲ್ಲಿ ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್)ದಿಂದ 5 ಕೆಜಿ ತೂಕದ ಎರಡು ಐಇಡಿಗಳ ನಾಶ.
• ಮೇ 30: ಬಿಜಾಪುರದ ಮದ್ದೀದ್ ರಾಷ್ಟ್ರೀಯ ಉದ್ಯಾನವನದಲ್ಲಿ ಐಇಡಿ ಸ್ಫೋಟದಲ್ಲಿ ಮೂವರು ಗ್ರಾಮಸ್ಥರಿಗೆ ಗಾಯ.
• ಮೇ 31: ಗುರ್ಮಕಾ ಮತ್ತು ಖೋಡ್ಪರ್ ಗ್ರಾಮದ ಅರಣ್ಯ ಮಾರ್ಗದಲ್ಲಿ ಭದ್ರತಾ ಪಡೆಗಳಿಂದ 10 ಐಇಡಿಗಳ ನಿಷ್ಕ್ರಿಯ.
ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆಗೆ ವಿರೋಧ: ಲಾಸ್ ಏಂಜಲೀಸ್ನಲ್ಲಿ ತೀವ್ರಗೊಂಡ ಪ್ರತಿಭಟನೆ


