Homeಚಳವಳಿಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

ಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

- Advertisement -
- Advertisement -

ಈ ತಿಂಗಳು ಜುಲೈ ಎರಡನೇ ತಾರೀಕು ಕೈರುನ್ನಿಸಾ ತೀರಿಕೊಂಡರು. ಅವರ ಬಗ್ಗೆ ಹೊರಗಿನ ಪಪಂಚಕ್ಕ್ರೆ ಹೆಚ್ಚಿಗೆ ಗೊತ್ತಿಲ್ಲದಿರಬಹುದು. ಆದರೆ ಆಕೆಗೆ ಈ ಪ್ರಪಂಚದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿತ್ತು. ಸೆಕ್ಯುಲರ್ ಜೀವನ ವಿಧಾನದಿಂದ ಹಿಡಿದು ಕ್ರಾಂತಿಕಾರಿ ರಾಜಕೀಯದವರೆಗೆ ಆಕೆ ವಿಶಾಲ ಮೈದಾನವನ್ನು ಕಂಡಿದ್ದರು. ಆ ಮೈದಾನದಲ್ಲಿ ಒಂದಷ್ಟು ದೂರ ಸಾಗಿದ್ದರು.
ಕೈರುನ್ನಿಸಾ ಆಂಧ್ರದ ರಾಯಲಸೀಮಾ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ರಾಯಲಸೀಮ ಫ್ಯಾಕ್ಷನಿಸಂ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಿದೆ. ಆದರೆ ದೇಶಾದ್ಯಂತ ಕೋಮುವಾದಿ ಗಲಭೆಗಳು ನಡೆಯುತ್ತಿದ್ದರೂ ರಾಯಲಸೀಮದಲ್ಲಿ ಈ ಪಿಡುಗಿನ ಪ್ರಭಾವ ಬಹಳ ಕಡಿಮೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರ ನಡುವೆ ನೆಲೆಸಿರುವ ಸಾಮಾಜಿಕ ಸಾಮರಸ್ಯ ಬಹಳ ವಿಶೇಷವಾದುದು. ಕೋಮುವಾದಿ ಗಲಭೆಗಳ ಕೊಚ್ಚಿ ಹೋಗುತ್ತಿರುವ ನಮ್ಮ ದೇಶಕ್ಕೆ ರಾಯಲಸೀಮೆಯ ಅನುಭವದಲ್ಲಿ ಒಂದಷ್ಟು ಪರಿಹಾರ ಕಾಣಬಹುದು. ಕೈರುನ್ನೀಸಾ ಅವರ ವ್ಯಕ್ತಿತ್ವದ ಮೇಲೆ ಈ ಸೀಮೆಯ ಧಾರ್ಮಿಕ ಸಾಮರಸ್ಯದ ಪ್ರಭಾವ ಗಾಡವಾಗಿತ್ತು.
ಆಕೆಯ ತಮ್ಮ ಹೇಳುವ ಪ್ರಕಾರ ಆಕೆ ಚಿಕ್ಕಂದಿನಿಂದಲೂ ರೆಬೆಲ್ ಮನಸ್ಥಿತಿಯ ಹುಡುಗಿ. ತಾನು ಇತರರ ಆಸರೆಯಿಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಆಕೆಯದು. ತನ್ನ ಕೌಟುಂಬಿಕ ಪರಿಸರ ಓದಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ ಅವರು ವಿಶಾಖಪಟ್ಟಣದಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ, ಬೆಂಗಳೂರಿನ ಎಚ್‍ಎಎಲ್‍ನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬುದು ಆಕೆಯ ದೃಡವಾದ ನಿಲುವಾಗಿತ್ತು. ಆಕೆ ನರ್ಸಿಂಗ್ ಕೋರ್ಸ್‍ನಲ್ಲಿದ್ದಾಗಲೇ ಬಾಬಯ್ಯನವರ ಸ್ನೇಹವಾಗಿ, ನಂತರ ಅವರ ಬಾಳ ಸಂಗಾತಿಯೂ ಆದರು. ಬಾಬಯ್ಯನವರಿಗೆ ಚಿಕ್ಕಂದಿನಲ್ಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದಾಗಿ ಕೆಲವು ವರ್ಷಗಳು ಅವರ ಜೀವನ ದಾರವಿಲ್ಲದ ಗಾಳಿಪಟದಂತಾಗಿತ್ತು. ಆದರೆ ಕೈರುನ್ನಿಸಾ ಅವರ ಪರಿಚಯವಾಗಿದ್ದು, ಆಗಲೇ ಆಕೆ ಉದ್ಯೋಗ ಮಾಡುತ್ತಿದ್ದುದರಿಂದ ಬಾಬಯ್ಯನವರ ಉನ್ನತ ವ್ಯಾಸಂಗಕ್ಕೆ ಆಕೆ ಬೆಂಬಲವಾಗಿ ನಿಂತರು.
ಬಾಬಯ್ಯನವರ ಬಾಲ್ಯದ ಬಗ್ಗೆ ಕೇಳಿದರೆ ಮಕ್ಸಿಂಗಾರ್ಕಿಯವರ ಬಾಲ್ಯ ನೆನಪಾಗುತ್ತದೆ. ಬಹಳ ಸಣ್ಣ ವಯಸ್ಸಿನಲ್ಲೇ ಯಾರದೋ ಮನೆಯಲ್ಲಿ ಏನೇನೋ ಚಾಕರಿ ಮಾಡುತ್ತಾ ಬೆಳೆದರೂ ಗಾರ್ಕಿಯಂತೆಯೇ ಜೀವನವನ್ನು ತೀಕ್ಷ್ಣವಾಗಿ ಅವಲೋಕಿಸುತ್ತಾ ಅವರಲ್ಲಿ ಮಾನವೀಯ ಗುಣಗಳು ಮೈದುಂಬಿವೆ. ಮಾನವೀಯ ಸಂಬಂಧಗಳಿಗೆ ಅಡ್ಡಗೋಡೆಯಾಗಿರುವ ಜಾತಿ, ಧರ್ಮ, ವರ್ಗಗಳನ್ನು ಮೀರುವ ಹಾದಿಯಲ್ಲಿ ಕೈರುನ್ನಿಸಾ ಅವರನ್ನು ವಿವಾಹವಾಗಿದ್ದು ಅತ್ಯಂತ ಸಹಜವಾಗಿತ್ತು. ಇವರದು ಅಂತರ್‍ಧರ್ಮೀಯ ಸೆಕ್ಯುಲರ್ ಮದುವೆ. ಕೈರುನ್ನಿಸಾ ಅವರ ರೆಬೆಲ್ ಸ್ವಭಾವಕ್ಕೂ ಬಾಬಯ್ಯನವರ ಮಾನವೀಯ ಸ್ವಭಾವಕ್ಕೂ ಮಧ್ಯೆ ಏರ್ಪಟ್ಟ ಅನುಬಂಧ ಇದು.
ಈ ಇಬ್ಬರ ದೃಡ ನಿರ್ಧಾರದ ಈ ಮದುವೆ ಅರ್ಧ ಶತಮಾನದ ಹಿಂದೆ ಯಾವುದೇ ವಿವಾದವಿಲ್ಲದೆ, ನಿರಾಡಂಬರವಾಗಿ ನಡೆಯಿತು. ಆಗ ದೇಶದ ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಜಾತಿ ಧರ್ಮಗಳು ಹುಟ್ಟುವ ಮುಂಚಿನಿಂದಲೂ ನಾವೆಲ್ಲರೂ ಮನುಷ್ಯರು ಎಂಬ ಸತ್ಯವನ್ನು ಮನುಷ್ಯರು ಮರೆಯುತ್ತಿದ್ದಾರೆ. ಧರ್ಮ ಎಂಬುದು ಒಂದು ವ್ಯಕ್ತಿಗತ ನಂಬಿಕೆ, ಅದನ್ನು ಮೀರಿ ಧರ್ಮ ಮನುಷ್ಯ ಸಂಬಂಧಗಳ ನಡುವೆ ವಿಷಸರ್ಪವಾಗಿ ಬದಲಾಗಬಾರದು. ಈ ಇಬ್ಬರ ಮದುವೆ ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿ, ಸ್ಪೂರ್ತಿಯಾಗಿ ನಿಲ್ಲಬೇಕು.
ಕೈರುನ್ನಿಸಾ ವೈಯುಕ್ತಿಕವಾಗಿ ತನ್ನ ಧಾರ್ಮಿಕ ನಂಬಿಕೆಯನ್ನು ತೊರೆದುಕೊಳ್ಳಲಿಲ್ಲ. ಪ್ರತಿನಿತ್ಯ ಮನೆಯಲ್ಲೇ ನಮಾಜು ಮಾಡುತ್ತಿದ್ದರು. ತನ್ನ ಉಳಿತಾಯದ ಹಣದಿಂದ ಒಂದು ಮಸೀದಿಗೆ ದೇಣಿಗೆಯನ್ನೂ ಕೊಟ್ಟಿದ್ದರು. ಹಾಗೆಂದು ತನ್ನ ಧಾರ್ಮಿಕ ನಂಬಿಕೆಯನ್ನು ತನ್ನ ಗಂಡನ ಮೇಲಾಗಲಿ, ತನ್ನ ಮೂವರು ಮಕ್ಕಳ ಮೇಲಾಗಲಿ ಹೇರಿಕೆ ಮಾಡುವ ಆಲೋಚನೆ ಎಂದಿಗೂ ಆಕೆಗೆ ಬರಲಿಲ್ಲ. ಒಂದು ಸಂದರ್ಭದಲ್ಲಿ ಆಕೆ ತನ್ನ ಹೆಸರನ್ನು ರಾಧ ಎಂದು ಬದಲಾಯಿಸಿಕೊಳ್ಳಬೇಕು ಅಂದುಕೊಂಡರು. ಆಗಾಗ ಹಣೆ ಮೇಲೆ ಬೊಟ್ಟನ್ನೂ ಇಡುತ್ತಿದ್ದರು. ಆ ಬೊಟ್ಟು ಅಲಂಕಾರಿಕವಾಗಿತ್ತೆ ಹೊರತು ಹಿಂದು ಧಾರ್ಮಿಕ ಸಂಕೇತವೆಂದು ಆಕೆಗೆ ಅನಿಸಲಿಲ್ಲ.
ಬಾಬಯ್ಯ ಕೈರುನ್ನಿಸಾ ಮಧ್ಯೆ ಸ್ನೇಹಭಾವವಿತ್ತು ಅಂದರೆ ಭೀನ್ನಾಭಿಪ್ರಾಯಗಳಿರಲಿಲ್ಲ ಎಂದರ್ಥವಲ್ಲ. ಬಾಬಯ್ಯನವರ ಚಳವಳಿಗಳ ಒಡನಾಟದ ಪರಿಣಾಮವಾಗಿ,
ಅದೆಷ್ಟೋ ಕ್ರಾಂತಿಕಾರಿಗಳು ಬಾಬಯ್ಯ ಕೈರುನ್ನಿಸಾ ಕುಟುಂಬದ ಆಸರೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಕ್ರಾಂತಿಕಾರಿ ರಾಜಕೀಯದ ಸಹವಾಸ ಕೈರುನ್ನಿಸಾ ಅವರಲ್ಲಿ ಸ್ವಲ್ಪಮಟ್ಟಿನ ಅಭದ್ರತೆಯ ಭಾವಕ್ಕೆ ಕಾರಣವಾಗಿತ್ತು. ಇದು ಅವರ ವ್ಯಕ್ತಿಗತ ಸಮಸ್ಯೆಯಾಗಿರಲಿಲ್ಲ; ಸಾಮಾಜಿಕ ಬದಲಾವಣೆಗಾಗಿ ನಡೆಯುವ ರಾಜಿರಹಿತ ಹೋರಾಟಕ್ಕೂ ಕುಟುಂಬ ಸಂಬಂಧಗಳಿಗೂ ನಡುವೆ ಸದಾಕಾಲ ತಿಕ್ಕಾಟ ಇದ್ದೇ ಇರುತ್ತದೆ. ಇಂಥಾ ಸಾಮಾಜಿಕ ವ್ಯವಸ್ಥಾಗತ ಸಮಸ್ಯೆಗಳನ್ನು ಒಂದಲ್ಲಾ ಒಂದು ಕುಟುಂಬ ಎದುರಿಸಲೇಬೇಕಾಗುತ್ತೆ. ಕೈರುನ್ನಿಸಾ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಲೇ ನಮ್ಮೆಲ್ಲರನ್ನೂ ಗೌರವಿಸುತ್ತಿದ್ದರು. ಆಂಧ್ರದ ಪ್ರಸಿದ್ಧ ಮಾನವಹಕ್ಕು ಹೋರಾಟಗಾರ ಪ್ರೊ.ಬಾಲಗೋಪಾಲ್ ಕಾನೂನು ಶಿಕ್ಷಣವನ್ನು ಈ ಮನೆಯಲ್ಲಿದ್ದುಕೊಂಡೇ ಪಡೆದುಕೊಂಡರು. ಹಾಗೆ ನೋಡಿದರೆ ತೆಲುಗುನಾಡಿನ ಬಹುತೇಕ ಖ್ಯಾತನಾಮರಿಗೆ, ಅವರ ಕುಟುಂಬಗಳಿಗೆ ಈ ಮನೆ ಆತ್ಮೀಯ ತಾಣವಾಗಿತ್ತು.
ಅವರ ಮೂರೂ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಮಾಡಿ, ಘನತೆಯ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಕೈರುನ್ನಿಸಾ ಅವರ ಅಪಾರ ಶ್ರಮವಿದೆ. ಹಿರಿ ಮಗಳು ಪ್ರಣವ ದೆಹಲಿಯಲ್ಲಿ ಅಧ್ಯಾಪಕಿಯಾಗಿದ್ದಾಳೆ, ಕಿರಿ ಮಗಳು ಜಗತಿ ವೈದ್ಯೆಯಾಗಿದ್ದು ಹೈದರಾಬಾದ್‍ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಗ ಭಾನುತೇಜ್ ಪತ್ರಕರ್ತರಾಗಿ ಹೆಸರು ಗಳಿಸಿದ್ದಾರೆ. ಇಲ್ಲಿ ಒಂದು ವಿಶೇಷವನ್ನು ಹೇಳಲೇಬೇಕು. ಈ ಮೂವರೂ ಮಕ್ಕಳು ಅಂತರ್‍ಜಾತೀಯ ಮದುವೆಯಾಗಿದ್ದಾರೆ. ಹೀಗೆ ಈ ಕುಟುಂಬ ನಮ್ಮನ್ನು ಆವರಿಸಿರುವ ಜಾತಿ ಧರ್ಮಗಳ ಗೋಡೆಯನ್ನು ಕೆಡವಿಹಾಕಿದೆ.
ಕೈರುನ್ನಿಸಾ ಸೆಕ್ಯುಲರ್ ದೃಷ್ಟಿಕೋನದ ಕಾರಣಕ್ಕಾಗಿಯೇ ಇರಬಹುದು, ತಮ್ಮ ಮಗ ಮತ್ತು ಹೆಣ್ಣು ಮಕ್ಕಳಲ್ಲಿ ಯಾವುದೇ ಬೇಧವಿಲ್ಲದಂತೆ ಸಮಾನವಾಗಿ ನೋಡಿಕೊಂಡರು. ತನ್ನ ಉಳಿತಾಯದ ಹಣವನ್ನು ಮೂವರಿಗೂ ಸಮಾನವಾಗಿ ಹಂಚಿದ್ದರು. ‘ಅಣ್ಣಾ, ನನಗೆ ಹೆಣ್ಣು ಮಕ್ಕಳಾದರೂ, ಗಂಡು ಮಕ್ಕಳಾದರೂ ಒಂದೇ, ಅದಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೇನೆ’ ಅಂತ ಬಹಳ ಹೆಮ್ಮೆಯಿಂದ ಹೇಳಿದ್ದರು. ಆಕೆಯ ಕೊನೆಗಾಲದಲ್ಲಿ ಉಳಿದ ಆಸ್ತಿಪಾಸ್ತಿಯನ್ನು ತಮ್ಮ ಮೊಮ್ಮಕ್ಕಳಿಗೆ ಹಂಚಬೇಕೆಂದು ತೀರ್ಮಾನಿಸಿದ್ದರು. ಇದು ಅವರ ದೂರದೃಷ್ಟಿ ಕೂಡ.
ಕೈರುನ್ನಿಸಾ ಜಾತಿ ಮತ ಬೇಧಗಳನ್ನು ವಿರೋಧಿಸಿದ್ದರೆಂಬುದು ಮಾತ್ರವಲ್ಲ; ಲಿಂಗ ತಾರತಮ್ಯವನ್ನೂ ವಿರೋಧಿಸುತ್ತಿದ್ದರು. ಅದು ಬಾಯಿಮಾತಿನಲ್ಲಿ ಮಾತ್ರವಲ್ಲ. ತಮ್ಮ ನಿಜ ಜೀವನದ ಉದಾಹರಣೆ ಮೂಲಕ. ಮನುಷ್ಯರು ಮನುಷ್ಯರಾಗಿ ಬದಲಾದರೆ ಎಷ್ಟೋ ಸಂಕುಚಿತ ಸಂಬಂಧಗಳನ್ನು ಮೀರಬಹುದೆಂಬ ಸತ್ಯವನ್ನು ಕೈರುನ್ನಿಸಾ ನೋಡಿ ಕಲಿಯಬಹುದು. ತನ್ನ ಅಂತ್ಯಸಂಸ್ಕಾರದ ಬಗ್ಗೆ ಆಕೆ ಕೈಗೊಂಡ ತೀರ್ಮಾನ ಇವೆಲ್ಲವನ್ನೂ ಮೀರಿದ್ದು. ಅವರು ಸ್ವಲ್ಪವೂ ಹಿಂಜರಿಕೆಯಿಲ್ಲದೆ, ತನ್ನ ದೇಹವನ್ನು ತನ್ನದೇ ವೃತ್ತಿಯಾದ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಇದು ಆಕೆಯ ಸೆಕ್ಯುಲರ್ ಪ್ರಪಂಚ ದೃಷ್ಟಿಯ ಪರಾಕಾಷ್ಠೆ.
ಬಾಬಯ್ಯ ಕೈರುನ್ನಿಸಾ ಕುಟಂಬ ಇಂದಿನ ಕೋಮುವಾದಿ ಕಲುಷಿತ ವಾತಾವರಣಕ್ಕೆ ಒಂದು ದಿಟ್ಟ ಪರಿಹಾರ. ಆನರೇ ಚರಿತ್ರೆಯ ನಿರ್ಮಾಪಕರು ಎಂದು ಮಾಕ್ರ್ಸ್ ಹೇಳಿದಂತೆ, ಚರಿತ್ರೆ ನಿರ್ಮಾಣದಲ್ಲಿ ಯಾವುದೇ ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಪಾಲಿಸುವ ಜೀವನದ ಆಚರಣೆಗಳೇ ಸಾಮಾಜಿಕ ಬದಲಾವಣೆಗೆ ಮಾರ್ಗದರ್ಶಿ ಸೂತ್ರಗಳಂತೆ ಕೆಲಸ ಮಾಡುತ್ತವೆ. ಸಾಮಾನ್ಯ ಮನುಷ್ಯರಲ್ಲಿ ಕೆಲವರು ಅಸಾಮಾನ್ಯವಾಗಿ ಜೀವಿಸುತ್ತಾರೆ ಎಂದರೆ ಇದೇ ಅನಿಸುತ್ತೆ.

– ಪ್ರೊ.ಹರಗೋಪಾಲ್
ಕನ್ನಡಕ್ಕೆ : ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...