ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ.
ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ ಘೋರ್ಪಡೆ ಅವರು ಆಪ್ಟೆಯ ನಾಮನಿರ್ದೇಶನದ ಕುರಿತು ದೃಢಪಡಿಸಿದ್ದಾರೆ. ಒಟ್ಟು ಐವರು ನಾಮನಿರ್ದೇಶಿತ ಸದಸ್ಯರಲ್ಲಿ ತುಷಾರ್ ಆಪ್ಟೆ ಕೂಡ ಒಬ್ಬ. ನಾಮನಿರ್ದೇಶನ ಪೂರ್ಣಗೊಂಡ ನಂತರ ಅವರನ್ನು ಮುನ್ಸಿಪಲ್ ಕೌನ್ಸಿಲ್ಗೆ ಸ್ವಾಗತಿಸಲಾಗಿದೆ. ಆಪ್ಟೆ ಜೊತೆಗೆ ಇಬ್ಬರು ಶಿವಸೇನೆಯಿಂದ ಮತ್ತು ಒಬ್ಬರನ್ನು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದಿಂದ (ಎನ್ಸಿಪಿ) ನಾಮನಿರ್ದೇಶನ ಮಾಡಲಾಗಿದೆ.
ಲೈಂಗಿಕ ದೌರ್ಜನ್ಯ ನಡೆದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಆಪ್ಟೆ ವಿರುದ್ಧ, ಅಪರಾಧವನ್ನು ವರದಿ ಮಾಡಲು ವಿಫಲವಾದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೂರು ದಾಖಲಿಸದಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 21(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ನಡೆದ 44 ದಿನಗಳ ನಂತರ ಆಪ್ಟೆ ಅವರನ್ನು ಬಂಧಿಸಲಾಗಿತ್ತು ಮತ್ತು 48 ಗಂಟೆಗಳಲ್ಲಿ ಜಾಮೀನು ನೀಡಲಾಗಿತ್ತು. ಪ್ರಕರಣವು ಪ್ರಸ್ತುತ ವಿಚಾರಣೆಯ ಹಂತದಲ್ಲಿದೆ.
ಮುನ್ಸಿಪಲ್ ಕೌನ್ಸಿಲ್ಗೆ ಆಪ್ಟೆಯ ನಾಮನಿರ್ದೇಶನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಕೌನ್ಸಿಲರ್ ರಾಜನ್ ಘೋರ್ಪಡೆ, ಆಪ್ಟೆ ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಪದಾಧಿಕಾರಿ ಎಂದು ಹೇಳಿದ್ದಾರೆ.
“ಆಪ್ಟೆ ಅವರನ್ನು ಆರೋಪಿ ಎಂದು ಹೆಸರಿಸಲಾಗಿದ್ದರೂ, ಅವರ ಮೇಲಿನ ಅಪರಾಧ ಸಾಬೀತಾಗಿಲ್ಲ. ಪ್ರಕರಣದ ಪ್ರಮುಖ ಆರೋಪಿಗೆ ಈಗಾಗಲೇ ಶಿಕ್ಷೆಯಾಗಿದೆ. ಆಪ್ಟೆ ಪಕ್ಷಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡಿದವರು ಮತ್ತು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೊಡುಗೆ ನೀಡಿದವರು. ಆದ್ದರಿಂದ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ” ಎಂದು ಘೋರ್ಪಡೆ ತಿಳಿಸಿದ್ದಾರೆ.
ಆಪ್ಟೆ ಕಾರ್ಯದರ್ಶಿಯಾಗಿದ್ದ ಶಾಲೆಯ ಆವರಣದಲ್ಲಿ ಅಕ್ಷಯ್ ಶಿಂಧೆ ಎಂಬಾತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ವಿರುದ್ದ ಪೋಷಕರು ಮತ್ತು ನಾಗರಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು.
ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯ ಶೌಚಾಲಯದೊಳಗೆ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಮುಖ ಆರೋಪಿ ಅಕ್ಷಯ್ ಶಿಂಧೆ (24) ಅನ್ನು ಆಗಸ್ಟ್ 2024ರಲ್ಲಿ ಬಂಧಿಸಲಾಯಿಗಿತ್ತು.
ಸೆಪ್ಟೆಂಬರ್ 23ರಂದು, ನವಿ ಮುಂಬೈನ ತಲೋಜಾ ಜೈಲಿನಿಂದ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸ್ ಎನ್ಕೌಂಟರ್ನಲ್ಲಿ ಆತನ ಸಾವನ್ನಪ್ಪಿದ್ದಾನೆ. ಅಕ್ಷಯ್ ವ್ಯಾನ್ನಲ್ಲಿದ್ದ ಒಬ್ಬ ಪೊಲೀಸ್ ಅಧಿಕಾರಿಯ ಬಂದೂಕನ್ನು ಕಸಿದುಕೊಂಡು ಗುಂಡು ಹಾರಿಸಿದ್ದ. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಎಂದು ಹೇಳಲಾಗಿದೆ. ಆರೋಪಿಯ ವಿರುದ್ಧ ಪತ್ನಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆತನನ್ನು ಕರೆದೊಯ್ಯಲಾಗುತ್ತಿತ್ತು.


