ಇಸ್ರೇಲ್ ಸಂಸತ್ ನೆಸೆಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಗುರುವಾರ (ಫೆ.26) ತೀವ್ರವಾಗಿ ಟೀಕಿಸಿದ್ದು, ಇದು ಅವರ ಆತಿಥೇಯರಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ‘ನಿರ್ಲಜ್ಜ ಸಮರ್ಥನೆ’ ಎಂದಿದೆ.
ಇಸ್ರೇಲ್ ರಾಷ್ಟ್ರದ ರಚನೆಯ ಬಗ್ಗೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹೊಂದಿದ್ದ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಕಾಂಗ್ರೆಸ್, ಈ ಸಂಬಂಧ ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಅವರೊಂದಿಗೆ ನೆಹರೂ ನಡೆಸಿದ್ದ ಪತ್ರವ್ಯವಹಾರವನ್ನೂ ಕೂಡ ನೆನಪಿಸಿದೆ.
ಬುಧವಾರ (ಫೆ.25) ನೆಸೆಟ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಗಾಝಾ ಶಾಂತಿ ಉಪಕ್ರಮವು ಈ ಪ್ರದೇಶದಲ್ಲಿ ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯತ್ತ ಸಾಗುವ ಒಂದು ಹಾದಿಯಾಗಿದೆ ಎಂದು ಹೇಳಿದ್ದಾರೆ. ಇಸ್ರೇಲ್ನೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ ಮೋದಿ, ಭಯೋತ್ಪಾದನೆಯ ವಿರುದ್ಧದ ಭಾರತದ ದೃಢ ನಿಲುವನ್ನು ಒತ್ತಿ ಹೇಳಿದ್ದಾರೆ.
“2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರಿಗಾಗಿ ಮತ್ತು ಜೀವನವನ್ನೇ ಕಳೆದುಕೊಂಡು ಕಂಗಾಲಾದ ಪ್ರತಿ ಕುಟುಂಬಕ್ಕಾಗಿ ಭಾರತದ ಜನರ ಪರವಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದ್ದಾರೆ.
“ನಾವು ನಿಮ್ಮ ನೋವನ್ನು ಅನುಭವಿಸುತ್ತಿದ್ದೇವೆ. ನಾವು ನಿಮ್ಮ ದುಃಖದಲ್ಲಿ ಭಾಗಿಗಳಾಗಿದ್ದೇವೆ. ಭಾರತವು ಇಸ್ರೇಲ್ ಜೊತೆಗೆ ಈ ಕ್ಷಣದಲ್ಲಿ ಮತ್ತು ಮುಂದೆಯೂ ಪೂರ್ಣ ದೃಢತೆಯೊಂದಿಗೆ ಮತ್ತು ನಂಬಿಕೆಯೊಂದಿಗೆ ನಿಲ್ಲುತ್ತದೆ. ಯಾವುದೇ ಕಾರಣವೂ ನಾಗರಿಕರ ಹತ್ಯೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಯಾವುದೂ ಭಯೋತ್ಪಾದನೆಯನ್ನು ಸಮರ್ಥಿಸಲಾರದು” ಎಂದು ಹೇಳಿದ್ದಾರೆ.
ಮೋದಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗದ ಉಸ್ತುವಾರಿ) ಜೈರಾಮ್ ರಮೇಶ್ ಅವರು ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ.
“ನಿನ್ನೆ ನೆಸೆಟ್ನಲ್ಲಿ ಮಾಡಿದ ಭಾಷಣವು ತಮ್ಮ ಆತಿಥೇಯರ ನಿರ್ಲಜ್ಜ ಸಮರ್ಥನೆಯಾಗಿತ್ತು. ಅದರಲ್ಲಿ ಪ್ರಧಾನಿ ಮೋದಿ ಅವರು ತಾವು ಜನಿಸಿದ ದಿನದಂದೇ ಭಾರತವು ಇಸ್ರೇಲ್ ಎಂಬ ಹೊಸ ರಾಷ್ಟ್ರವನ್ನು ಅಂಗೀಕರಿಸಿತು ಎಂಬ ವಿಷಯದ ಕಡೆಗೆ ಗಮನ ಸೆಳೆದಿದ್ದಾರೆ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿ ಜೈರಾಮ್ ರಮೇಶ್ ಅವರು, ಇಸ್ರೇಲ್ ರಚನೆಯ ವಿಷಯದ ಕುರಿತು ಐನ್ಸ್ಟೈನ್ಗೆ ನೆಹರೂ ನೀಡಿದ್ದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ್ದಾರೆ. ನವೆಂಬರ್ 5,1949 ರಂದು ಪ್ರಿನ್ಸ್ಟನ್ನಲ್ಲಿರುವ ಐನ್ಸ್ಟೈನ್ ಅವರ ಮನೆಯಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದರು ಎಂದು ಗಮನ ಸೆಳೆದಿದ್ದಾರೆ. ನವೆಂಬರ್ 1952ರಲ್ಲಿ ಇಸ್ರೇಲ್ನ ಅಧ್ಯಕ್ಷರಾಗುವ ಪ್ರಸ್ತಾಪವನ್ನು ಐನ್ಸ್ಟೈನ್ ನಿರಾಕರಿಸಿದ್ದನ್ನು ಮತ್ತು ಏಪ್ರಿಲ್ 1955ರಲ್ಲಿ ತಮ್ಮ ನಿಧನಕ್ಕೆ ಸ್ವಲ್ಪ ಮೊದಲು ಪರಮಾಣು ಶಸ್ತ್ರಾಸ್ತ್ರಗಳ ಕುರಿತು ನೆಹರೂ ಅವರೊಂದಿಗೆ ಪತ್ರವ್ಯವಹಾರ ನಡೆಸಿದ್ದನ್ನು ಸಹ ಜೈರಾಮ್ ರಮೇಶ್ ನೆನಪಿಸಿದ್ದಾರೆ.


