ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ನಾಮಪತ್ರವನ್ನು ರದ್ದುಗೊಳಿಸಲು ಉದ್ದೇಶಪೂರ್ವಕ ಪಿತೂರಿ ನಡೆದಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ; ವ್ಯವಸ್ಥೆಯಲ್ಲಿರುವ ದೋಷಗಳ ವಿರುದ್ಧ. ನನ್ನ ಸ್ವಂತ ಕ್ಷೇತ್ರದಲ್ಲೇ ನನ್ನ ವಿರುದ್ಧ ಎರಡು ಸುಳ್ಳು ಅಫಿಡವಿಟ್ ಗಳನ್ನು ಸಲ್ಲಿಸಿ ನಾಮಪತ್ರವನ್ನು ರದ್ದುಗೊಳಿಸಲು ಯತ್ನಿಸಿದರು. ಅವರು ಯಶಸ್ವಿಯಾಗಲಿಲ್ಲ, ಆದರೆ ಹಲವು ಬಾರಿ ಪ್ರಯತ್ನಿಸಿದರು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನನ್ನನ್ನೇ ಸ್ಪರ್ಧಿಸದಂತೆ ತಡೆಯಲು ಪ್ರಯತ್ನಿಸಿದ್ದರೆ, ಸಾಮಾನ್ಯ ಜನರಿಗೆ ಏನು ಮಾಡಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಪರಿಶೀಲನೆ ವೇಳೆ ಕೆಲವು ಗೊಂದಲಗಳು ಎದುರಾಗಿತ್ತು. ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ ಪತ್ನಿ ಹಾಗೂ ಸೂಚಕರಾದ ಇಸ್ಮತ್ ಹಕೀಮ್ ಅವರ ಹೆಸರಿನ ವ್ಯತ್ಯಾಸದ ಬಗ್ಗೆ ಪ್ರಶ್ನೆ ಎತ್ತಲಾಗಿತ್ತು. ಅವರು ವಿವಾಹಕ್ಕೂ ಮೊದಲು ‘ಇಸ್ಮತ್ ಅರಾ’ ಎಂಬ ಹೆಸರನ್ನು ಬಳಸುತ್ತಿದ್ದರು. ನಂತರ ದಾಖಲೆಗಳಲ್ಲಿ ‘ಇಸ್ಮತ್ ಹಕೀಮ್’ ಎಂದು ಬದಲಾಯಿಸಲಾಗಿತ್ತು. ಪರಿಶೀಲನೆ ವೇಳೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಈ ಗೊಂದಲ ನಿವಾರಣೆಯಾಯಿತು ಎಂದು ವರದಿಯಾಗಿದೆ.
“ಇಂತಹ ವಿಷಯಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತವೆ. ಆದರೆ, ಇಲ್ಲಿ ಸೂಚಕರನ್ನು ಸುಮಾರು ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು. ಇದರಿಂದ ಅನುಮಾನ ಉಂಟಾಯಿತು” ಎಂದು ಟಿಎಂಸಿ ಸದಸ್ಯರೊಬ್ಬರು ಹೇಳಿದ್ದಾರೆ.
ವರದಿಗಳ ಪ್ರಕಾರ, ಇನ್ನೊಂದು ಗೊಂದಲ, ಸುಮಾರು ಎರಡು ದಶಕಗಳ ಹಿಂದೆ ಬಹಿರಂಗಪಡಿಸದ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಪುರಾವೆಗಳು ಇರಲಿಲ್ಲ ಎಂದು ಪಕ್ಷದ ಕಾರ್ಯಕಾರಿಣಿ ಸ್ಪಷ್ಟಪಡಿಸಿದ್ದಾರೆ. ಆ ವಿಭಾಗವನ್ನು ‘ಅನ್ವಯಿಸುವುದಿಲ್ಲ’ ಎಂದು ಗುರುತಿಸಲಾಗಿತ್ತು.
ಮೂರನೇ ಗೊಂದಲವು ಮತಪತ್ರದ ವ್ಯವಸ್ಥೆಗೆ (ಬ್ಯಾಲೆಟ್ ಲಾಜಿಸ್ಟಿಕ್ಸ್) ಸಂಬಂಧಿಸಿದ್ದಾಗಿತ್ತು. ಆರಂಭದಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದ ಕಾರಣ, ಬ್ಯಾನರ್ಜಿಯವರ ಹೆಸರು ಎರಡನೇ ಇವಿಎಂ ಯಂತ್ರಕ್ಕೆ ಹೋಗುವ ಸಾಧ್ಯತೆಯಿತ್ತು, ಏಕೆಂದರೆ ಒಂದು ಯಂತ್ರವು ಕೇವಲ 16 ಹೆಸರುಗಳನ್ನು ಮಾತ್ರ ಪ್ರದರ್ಶಿಸಬಲ್ಲದು. ಇದಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಕ್ಷೇಪ ವ್ಯಕ್ತಪಡಿಸಿತು. ಈ ಬಗ್ಗೆ ಮಾತನಾಡಿದ ಪಕ್ಷದ ಪದಾಧಿಕಾರಿಯೊಬ್ಬರು, “ಒಬ್ಬ ಹಾಲಿ ಮುಖ್ಯಮಂತ್ರಿಯ ಹೆಸರನ್ನು ಎರಡನೇ ಇವಿಎಂ ಯಂತ್ರಕ್ಕೆ ತಳ್ಳಲು ಸಾಧ್ಯವಿಲ್ಲ, ಇದು ಮತದಾರರಲ್ಲಿ ಗೊಂದಲ ಉಂಟುಮಾಡುತ್ತಿತ್ತು” ಎಂದಿದ್ದಾರೆ. ನಂತರ ನಾಲ್ಕು ನಾಮಪತ್ರಗಳು ರದ್ದಾದವು, ಇದರಿಂದಾಗಿ ಒಂದಕ್ಕಿಂತ ಹೆಚ್ಚು ಯಂತ್ರಗಳನ್ನು ಬಳಸುವ ಅಗತ್ಯವಿಲ್ಲದಂತಾಯಿತು ಎಂದು ವರದಿಯಾಗಿದೆ.


