ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಮತ್ತು ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ಸ್ಥಾಪಿಸಲು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಅವರು ಗುರುವಾರ (ಏ.16) ಲೋಕಸಭೆಯಲ್ಲಿ ಮೂರು ವಿಧೇಯಕಗಳನ್ನು ಮಂಡಿಸಿದರು. ಈ ಪ್ರಸ್ತಾವಿತ ಶಾಸನಗಳು ‘ಸಂವಿಧಾನ ವಿರೋಧಿ ಮತ್ತು ‘ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ’ ಎಂದು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.
ಈ ನಡುವೆ ಲೋಕಸಭೆಯ ಸದಸ್ಯ ಬಲವನ್ನು 543ರಿಂದ 850ಕ್ಕೆ ಹೆಚ್ಚಿಸುವ 131ನೇ ಸಂವಿಧಾನ ತಿದ್ದುಪಡಿ ವಿಧೇಯಕ ಮತ್ತು ಮಹಿಳಾ ಮೀಸಲಾತಿ ಜಾರಿಯನ್ನು ತ್ವರಿತಗೊಳಿಸುವ 106ನೇ ತಿದ್ದುಪಡಿ ಕಾಯ್ದೆಯ ತಿದ್ದುಪಡಿ ವಿಧೇಯಕಗಳ ಮಂಡನೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆಯಿತು.
ವಿಧೇಯಕಗಳ ಮಂಡನೆಯ ನಂತರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಮೂರು ವಿಧೇಯಕಗಳ ಮೇಲೆ 15 ರಿಂದ 18 ಗಂಟೆಗಳ ಕಾಲ ಸುದೀರ್ಘ ಚರ್ಚೆಗೆ ಅನುಮತಿ ನೀಡಿದ್ದಾರೆ. ಈ ಚರ್ಚೆಯ ನಂತರ, ಶುಕ್ರವಾರ (ಏ.17) ಸಂಜೆ 4 ಗಂಟೆಗೆ ವಿಧೇಯಕಗಳ ಮೇಲೆ ಅಂತಿಮ ಮತದಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಮಹಿಳಾ ಮೀಸಲಾತಿ ವಿಧೇಯಕಗಳ ಕುರಿತು ಮಾತನಾಡಿ, “ಸರ್ಕಾರ ಈ ತಿದ್ದುಪಡಿಗಳನ್ನು 2023ರಲ್ಲಿಯೇ ವಿಧೇಯಕ ಅಂಗೀಕಾರವಾಗುವಾಗ ಏಕೆ ಸೇರಿಸಲಿಲ್ಲ?” ಎಂದು ಪ್ರಶ್ನಿಸಿದರು. ಪ್ರಸ್ತುತ ತರಲಾಗಿರುವ ಬದಲಾವಣೆಗಳು ‘ಸಂವಿಧಾನ ವಿರೋಧಿ’ ಮತ್ತು “ದೇಶದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವ ಪ್ರಯತ್ನ” ಎಂದು ಅವರು ಕಟುವಾಗಿ ಟೀಕಿಸಿದರು.
“ಈ ವಿಧೇಯಕವು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಈ ವಿಧೇಯಕದ ಹಿಂದಿರುವ ನಿಖರವಾದ ಉದ್ದೇಶವೇನು? ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಗಳು ಈಗಾಗಲೇ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಖಾತರಿಪಡಿಸುವ ವಿಧೇಯಕವನ್ನು ಅಂಗೀಕರಿಸಿವೆ” ಎಂದು ವೇಣುಗೋಪಾಲ್ ಅವರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆ.ಸಿ. ವೇಣುಗೋಪಾಲ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿ, “ವಿಧೇಯಕಗಳನ್ನು ಮಂಡಿಸುವ ಹಂತದಲ್ಲಿ ಅವುಗಳ ಗುಣದೋಷಗಳನ್ನು ಪ್ರಶ್ನಿಸಲು ವೇಣುಗೋಪಾಲ್ ಅವರಿಗೆ ಅಧಿಕಾರವಿಲ್ಲ. ಅವರು ಕೇವಲ ತಾಂತ್ರಿಕ ಆಕ್ಷೇಪಣೆಗಳನ್ನು ಎತ್ತುವುದಕ್ಕೆ ಮಾತ್ರ ಸೀಮಿತರಾಗಿರಬೇಕು. ಮುಂಬರುವ ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರವು ‘ಬಲವಾದ ಉತ್ತರ’ ನೀಡಲಿದೆ ಎಂದು ತಿಳಿಸಿದರು.
ವಿಧೇಯಕಗಳನ್ನು ಮಂಡಿಸುವಲ್ಲಿ ಸರ್ಕಾರ ತೋರುತ್ತಿರುವ ಅವಸರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಶ್ನಿಸಿದರು. “ನಾವು ಮೀಸಲಾತಿಯ ಪರವಾಗಿದ್ದೇವೆ… ಆದರೆ ನೀವು ಜನಗಣತಿ ನಡೆಸಲು ಏಕೆ ಬಯಸುತ್ತಿಲ್ಲ?” ಎಂದು ಅವರು ಕೇಳಿದರು. ಇದೇ ವೇಳೆ, ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಅವರು ಕ್ಷೇತ್ರ ಮರುವಿಂಗಡಣೆಯನ್ನು ಜನಗಣತಿಯಿಂದ ಬೇರ್ಪಡಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು. ಅಲ್ಲದೆ, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೂ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಖಿಲೇಶ್ ಯಾದವ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, 2027ರ ಜನಗಣತಿ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಿದೆ ಮತ್ತು ಈ ಬಾರಿ ಜಾತಿ ಆಧಾರಿತ ಜನಗಣತಿಯನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ ಎಂದರು.
ಕೇಂದ್ರ ಸರ್ಕಾರ ಮಂಡಿಸಿದ ವಿಧೇಯಕಗಳನ್ನು ವಿರೋಧಿಸಿ ಮಾತನಾಡಿದ ಡಿಎಂಕೆ ನಾಯಕ ಟಿ.ಆರ್. ಬಾಲು, “ನಾವು 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಬೆಂಬಲಿಸುತ್ತೇವೆ, ಆದರೆ ಪ್ರಸ್ತುತ ಮಂಡಿಸಲಾಗಿರುವ ವಿಧೇಯಕವು ಕೇವಲ ಕ್ಷೇತ್ರ ಮರುವಿಂಗಡಣೆಯನ್ನು ಗುರಿಯಾಗಿಸಿಕೊಂಡಿದೆ” ಎಂದು ಕಿಡಿಕಾರಿದರು. ಮಹಿಳಾ ಮೀಸಲಾತಿ ಕಾನೂನಿನ ತಿದ್ದುಪಡಿಗಳನ್ನು ವಿರೋಧಿಸಲು ಡಿಎಂಕೆ ಸದಸ್ಯರು ಲೋಕಸಭೆಗೆ ಕಪ್ಪು ಬಣ್ಣದ ಉಡುಪು ಧರಿಸಿ ಬರುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.
ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣಾ ವಿಧೇಯಕವನ್ನು ಮಂಡಿಸುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಗುರುವಾರ ಬೆಳಗ್ಗೆ ಕಪ್ಪು ಬಾವುಟ ಹಾರಿಸಿ, ಪ್ರಸ್ತಾವಿತ ವಿಧೇಯಕದ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.
ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ವಿಧೇಯಕದ ಕರಡಿನ ಪ್ರಕಾರ, 2029ರ ಸಂಸತ್ ಚುನಾವಣೆಗಿಂತ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರುವ ಉದ್ದೇಶದಿಂದ ಲೋಕಸಭೆಯ ಒಟ್ಟು ಸ್ಥಾನಗಳನ್ನು ಪ್ರಸ್ತುತ ಇರುವ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸಲಾಗುತ್ತದೆ. ಈ ಪ್ರಕ್ರಿಯೆಯು 2011ರ ಜನಗಣತಿಯ ಆಧಾರದ ಮೇಲೆ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯ ನಂತರ ಕಾರ್ಯರೂಪಕ್ಕೆ ಬರಲಿದೆ.
ಲೋಕಸಭೆಯಂತೆಯೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿಯೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಕಲ್ಪಿಸಲು ಅನುಕೂಲವಾಗುವಂತೆ ಅಲ್ಲಿನ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.
ಸಂಸತ್ತಿನ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ವಿರೋಧ ಪಕ್ಷಗಳು, ಸಂವಿಧಾನ ತಿದ್ದುಪಡಿ ವಿಧೇಯಕದಲ್ಲಿರುವ ಕ್ಷೇತ್ರ ಮರುವಿಂಗಡಣಾ ನಿಬಂಧನೆಗಳ ವಿರುದ್ಧ ಮಾತ್ರ ಒಗ್ಗಟ್ಟಾಗಿ ಮತ ಚಲಾಯಿಸಲು ನಿರ್ಧರಿಸಿವೆ.


