Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಸ್ವಾತಂತ್ರ್ಯ, ಸಮಾನತೆ : ಪ್ರೊ. ಜಿ.ಎಚ್.ನಾಯಕರ ಲೇಖನ

ಮೀಸಲಾತಿ ಸ್ವಾತಂತ್ರ್ಯ, ಸಮಾನತೆ : ಪ್ರೊ. ಜಿ.ಎಚ್.ನಾಯಕರ ಲೇಖನ

- Advertisement -
- Advertisement -
ಕಣ್ಣಗಾಯಕ್ಕೊಂದು ಕನ್ನಡಿ
ಸರಣಿ ಸಂಪಾದಕರು: ವಿಕಾಸ್ ಆರ್.ಮೌರ್ಯ

1980ರಲ್ಲಿ ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಹೋರಾಟವು ಉಗ್ರಸ್ವರೂಪ ತಾಳಿದಾಗ ಬೆಂಗಳೂರಿನ ಲಾಲ್‍ಬಾಗ್ ಗಾಜಿನ ಮನೆಯಂಗಳದಲ್ಲಿ ದಲಿತ ಸಂಘರ್ಷ ಸಮಿತಿಯವರು ಮೀಸಲಾತಿ ಪರವಾಗಿ ಅಖಿಲ ಭಾರತ ಮಟ್ಟದ ಸಮ್ಮೇಳನವನ್ನು 1981ರ ಏಪ್ರಿಲ್ 18,19 ರಂದು ಹಮ್ಮಿಕೊಂಡಿದ್ದರು. ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಾಡಿನ ಖ್ಯಾತ ಚಿಂತಕರಾದ ಪ್ರೊ. ಜಿ.ಎಚ್.ನಾಯಕರವರು ಆಡಿದ ಅಧ್ಯಕ್ಷೀಯ ಭಾಷಣದ ಕೆಲವು ಮುಖ್ಯಾಂಶಗಳೇ ಈ ಲೇಖನ. ಮೀಸಲಾತಿಯನ್ನು ಅರ್ಹತೆ ಮತ್ತು ಪ್ರತಿಭೆಯೆಂಬ ಭ್ರಮೆಗಳಿಂದ ವಿರೋಧಿಸುವವರಿಗೆ ಪ್ರೊಫೆಸರ್‍ರವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಜೊತೆಗೆ ಹಿಂದುಳಿದ ಜಾತಿಗಳಿಗೊಂದು ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಪ್ರಜಾಪ್ರಭುತ್ವ ರಾಜ್ಯ ಪದ್ಧತಿ ಜಾರಿಗೆ ಬಂದಾಗ ಒಂದು ಬಗೆಯ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಜಾಪ್ರಭುತ್ವ ಹುಟ್ಟಿಸಿದ ಆಸೆಗಳಿಗೂ ನಮ್ಮ ದೇಶದ ಚರಿತ್ರೆ ಬೆಳೆದುಬಂದ ರೀತಿಗೂ ತಕ್ಕ ಹೊಂದಾಣಿಕೆ ಇರಲಿಲ್ಲ. ಅಗತ್ಯವಾದ ಹೊಂದಾಣಿಕೆ ಉಂಟಾಗುವಂತೆ ಮಾಡುವುದಕ್ಕೆ ಬೇಕಾದ ಪ್ರಾಮಾಣಿಕ ಪ್ರಯತ್ನವಾಗಲಿ, ವಿವೇಕಯುತವಾದ ನಡವಳಿಕೆಯಾಗಲಿ ನಮ್ಮ ಸರಕಾರದಲ್ಲಾಗಲಿ ಅದನ್ನು ನಡೆಸುವ ರಾಜಕಾರಣಿಗಳಲ್ಲಾಗಲಿ ಇಷ್ಟು ಕಾಲವಾದರೂ ಕಂಡುಬಂದಿಲ್ಲ. ಹಾಗಾಗಿ ದೇಶದಲ್ಲಿ ವಿಷಮ ಸ್ಥಿತಿ ಬಹುತೇಕ ಎಲ್ಲ ರಂಗಗಳಲ್ಲಿಯೂ ನಿರ್ಮಾಣವಾಗಿದೆ.

ಕೆಲವು ಅಸಂಬದ್ಧಗಳು ಇನ್ನೂ ಉಳಿದುಕೊಂಡಿವೆಯಾದರೂ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಗಳ ಮೌಲ್ಯಗಳನ್ನು ಆಧರಿಸಿಯೇ ನಮ್ಮ ಸಂವಿಧಾನ, ಕಾನೂನುಗಳು ಬಹುಪಾಲು ರೂಪಿತವಾದವು. ಆದರೆ ಈ ಮೌಲ್ಯಗಳು ಜನತೆಯ ದಿನನಿತ್ಯದ ಬದುಕಿನಲ್ಲಿ ಎಷ್ಟರಮಟ್ಟಿಗೆ, ಹೇಗೆ ಅನುಷ್ಠಾನಕ್ಕೆ ಬಂದವು? ಆ ಮೌಲ್ಯಗಳೆಲ್ಲ ಬಹುಪಾಲು ಜನಕ್ಕೆ ಅದರಲ್ಲೂ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಶತಶತಮಾನಗಳಿಂದ ಮನುಷ್ಯಮಾತ್ರರೆಂಬ ಗಣನೆ ಗೌರವಕ್ಕೂ ಪಾತ್ರರಾಗದಂತೆ ಈ ದೇಶದಲ್ಲಿ ಬದುಕಬೇಕಾಗಿ ಬಂದ, ನಿತ್ಯನರಕಗಳೆಂಬಂತೆ ಮೇಲುಜಾತಿಯವರ ಅಮಾನುಷ ದಬ್ಬಾಳಿಕೆಗೆ ಬಲಿಪಶುಗಳಾಗಿ ನೊಂದು ಬೆಂದು ಬಸವಳಿದಿದ್ದ, ಈಗಲೂ ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವ ನಿಮ್ನವರ್ಗ, ನಿಮ್ನ ಜಾತಿಗಳವರಿಗೆ ಕನಸಾಗಿಯೇ ಉಳಿದಿದೆ ಎಂಬುದು ಕಣ್ಣಿದ್ದವರಿಗೆ ಕಾಣಿಸುವಂತಿದೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ- ಇವು ಈ ದಲಿತರಿಗೆ ಚೆಂದದ ಮಾತುಗಳಾಗಿ ಕಾಣಿಸುತ್ತಲಿವೆಯೇ ಹೊರತು ಅನುಭವದ ಸಂಗತಿಗಳಾಗಿಲ್ಲ.

ಸಂವಿಧಾನ ರಚಿಸುವವರಿಗೆ, ಕಾನೂನು ಮಾಡುವವರಿಗೆ ಈ ಪರಿಸ್ಥಿತಿಯ ತಿಳಿವಳಿಕೆ ಇದ್ದದ್ದರಿಂದಲೇ ನಿಮ್ನವರ್ಗ, ನಿಮ್ನ ಜಾತಿಯವರೂ ಇತರ ಮೇಲುವರ್ಗ, ಮೇಲುಜಾತಿಯವರ ಸರಿಸಮಕ್ಕೆ ಬರುವುದಕ್ಕೆ ಅನುಕೂಲವಾಗಬಹುದಾದಂಥ ಕಾನೂನುಗಳನ್ನು ಮಾಡಿದರು. ಮೀಸಲಾತಿಯ ಸೌಲಭ್ಯವೂ ಅಂಥ ಉದ್ದೇಶದಿಂದಲೇ ದಲಿತರಿಗೆ ದೊರೆಯುವಂತಾಯಿತು. ಇಂಥ ಸೌಲಭ್ಯ ಇಂತಿಷ್ಟು ವರ್ಷಗಳವರೆಗೆ ಇರಬೇಕು ಎಂದು ನಮೂದಿಸಲಾಗಿತ್ತು ಎಂಬುದೂ ನಿಜ. ಆ ನಿಗದಿಯಾದ ಕಾಲಾವಧಿ ಮುಗಿದರೂ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ನಿರೀಕ್ಷಿತ ಬದಲಾವಣೆ ಕಾಣದೇ ಇರುವುದರಿಂದ ಈ ಸೌಲಭ್ಯವನ್ನು ಇನ್ನೂ ಕೆಲವು ಕಾಲ ಮುಂದುವರೆಸುವುದು ಸೂಕ್ತ ಎಂದು ಸರಕಾರ ಮತ್ತು ಜನತೆಯ ಪ್ರತಿನಿಧಿಗಳು ಭಾವಿಸಿ ಅದಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಂಡರು.

ನಿಮ್ನ ಜಾತಿ, ನಿಮ್ನ ವರ್ಗಗಳವರಿಗೆ ಇರುವ ಮೀಸಲಾತಿಯನ್ನು ವಿರೋಧಿಸುವವರು ಮುಂದಿಡುವ ವಾದದ ವೈಖರಿ ಹೀಗಿದೆ: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಯ ಹಕ್ಕನ್ನು ನಮ್ಮ ಸಂವಿಧಾನ ಎಲ್ಲ ಜಾತಿಮತಗಳವರಿಗೂ ಕೊಟ್ಟಿದೆ. ಅದಕ್ಕೆ ಅನುಗುಣವಾಗಿ ಕಾನೂನುಗಳನ್ನು ಮಾಡಿದ್ದಾಗಿದೆ. ಆದ್ದರಿಂದ ವ್ಯಕ್ತಿ ಸ್ವಾತಂತ್ರ್ಯ ಸಮಾನತೆಗೆ ಚ್ಯುತಿ ಬಾರದಂತೆ ದೇಶದ ಪ್ರಜೆಗಳನ್ನೆಲ್ಲ ನಡೆಸಿಕೊಳ್ಳಬೇಕಾದದ್ದು ರಾಷ್ಟ್ರಧರ್ಮವಾಗಬೇಕು. ಇರುವ ಅವಕಾಶಗಳನ್ನು ಸಮಾನವಾದ ನೆಲೆಯಲ್ಲಿ ನಿಂತು ಸ್ಪರ್ಧಿಸಿ ಪಡೆದುಕೊಳ್ಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರಬೇಕು. ಅದರಲ್ಲಿ ಮೀಸಲಾತಿ ಗೀಸಲಾತಿ ಎಂವ ತಾರತಮ್ಯ ತೋರಿಸಬಾರದು. ಅದರಿಂದ ಹೆಚ್ಚಿನ ಅರ್ಹತೆ, ಪ್ರತಿಭೆ ಇರುವವರಿಗೆ ಅನ್ಯಾಯವಾಗುತ್ತದೆ. ಜಾತಿಜಾತಿಗಳಲ್ಲಿ ತಾರತಮ್ಯ ಉಳಿಸಿದಂತಾಗುತ್ತದೆ. ಜಾತ್ಯತೀತ ತತ್ವಕ್ಕೆ ಪೆಟ್ಟು ಬೀಳುತ್ತದೆ ಇತ್ಯಾದಿ..

ಇಂಥಾ ವಾದ ಮೇಲುನೋಟಕ್ಕೆ ಸರಿ ಎಂದು ಅನಿಸಿಬಿಡುತ್ತದೆ. ತತ್ವದ ನೆಲೆಯಲ್ಲಿಯೇ ನೋಡೋವಾಗ ಅದಕ್ಕೆ ಹೊಂದಿಕೊಳ್ಳುವಂತಹ ತರ್ಕದ ನೆಲೆಯಲ್ಲಿಯೇ ನೋಡಿದಾಗ ಅವರ ವಾದ ಸರಿಯಾಗಿಯೇ ಇದೆ ಎಂಬ ಭ್ರಮೆ ಹುಟ್ಟಿಸಿಬಿಡುವಂತಿದೆ. ಆದರೆ, ಈ ತತ್ವ ಈ ತರ್ಕದ ಹಿಂದೆ ಸ್ವಾರ್ಥಪರ ದೃಷ್ಟಿಯಿದೆ, ಕುತಂತ್ರದ ಮನೋವೃತ್ತಿ ಇದೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಗುಣಮಟ್ಟ, ಪ್ರತಿಬೆ ಮುಂತಾದವುಗಳ ಬಗ್ಗೆ ಅವರಿಗೆ ನಿಜವಾದ ಕಳಕಳಿ ಇಲ್ಲ, ತಮ್ಮ ಹಿತಾಸಕ್ತಿ, ತಮ್ಮ ಜಾತಿ ಮತಗಳ ಹಿತಾಸಕ್ತಿಗಳಿಗಿಂತ ದೇಶದ ಒಗ್ಗಟ್ಟಿನ ಹಿತದ ಬಗ್ಗೆ ನಮ್ಮಲ್ಲಿ ಯೋಚಿಸುವವರೇ ಕಡಿಮೆ ಎಂದು ಡಾ. ಲೋಹಿಯಾರವರು ಹೇಳುತ್ತಿದ್ದ ಮಾತು ಇವರಿಗೆ ಚನ್ನಾಗಿ ಅನ್ವಯಿಸುತ್ತದೆ.

ಮೀಸಲಾತಿಯಿಂದ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಗುಣಮಟ್ಟ, ಪ್ರತಿಭೆ ಕಡಿಮೆಯಾಗಿಬಿಡುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಗುಣಮಟ್ಟದ ಪ್ರಶ್ನೆಯನ್ನು ಬೇರೆ ರೀತಿಯಿಂದ ನೋಡಬೇಕು. ದೇಶದ ಜನಸಂಖ್ಯೆಯ ಸುಮಾರು ಐದರಲ್ಲಿ ಒಂದು ಭಾಗದಷ್ಟಿರುವ ದಲಿತರಿಗೆ ಶತಶತಮಾನಗಳ ಕಾಲದಿಂದ ವಿದ್ಯಾಭ್ಯಾಸದ ಸೌಲಭ್ಯವನ್ನು ಅಲ್ಲಗಳೆಯುತ್ತ ಬಂದ ಚರಿತ್ರೆ ನಮ್ಮದು. ಅವರು ಇರುವ ಇಂದಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿ ಮಕ್ಕಳಿಗೆ ತಾವಾಗಿ ವಿದ್ಯಾಭ್ಯಾಸ ಸಾಧ್ಯತೆ ಇಲ್ಲವೇ ಇಲ್ಲ. ಸರಕಾರವೇ ವಿಶೇಷ ಸೌಲಭ್ಯ, ವಿದ್ಯಾರ್ಥಿವೇತನ ಕೊಟ್ಟರೆ ಮಾತ್ರ ಅವರ ಮಕ್ಕಳು ವಿದ್ಯಾಭ್ಯಾಸ ಮಾಡುವುದಕ್ಕೆ ಸಾಧ್ಯ. ಇಲ್ಲವಾದರೆ ದಿನನಿತ್ಯದ ಹಿಟ್ಟಿಗೆ ದಿನವಿಡೀ ದುಡಿದರೂ ಹೊಟ್ಟೆ ತುಂಬಿಸಿಕೊಳ್ಳಲಾರದ ಇವರು, ಎಂದೆಂದೂ ವಿದ್ಯಾಭ್ಯಾಸದ ಅವಕಾಶವನ್ನೇ ಪಡೆದಿರದ, ಆ ಮೂಲಕ ವಿದ್ಯಾಭ್ಯಾಸದ ಮಹತ್ವವನ್ನೇ ಅರಿಯದ ಇವರು, ತಾವಾಗಿ ತಮ್ಮ ಮಕ್ಕಳನ್ನು ಓದಿಸುವ ಸ್ಥಿತಿ ಇಲ್ಲ. ಸರಕಾರ ವಿಶೇಷ ಸೌಲಭ್ಯ ಅವಕಾಶಗಳನ್ನು ನೀಡದಿದ್ದಲ್ಲಿ ಆ ಜನ ಅವಿದ್ಯಾವಂತರಾಗಿ ಆರ್ಥಿಕವಾಗಿ ಬಡವರಾಗಿ ಸಾಮಾಜಿಕವಾಗಿ ನಿಕೃಷ್ಟರಾಗಿಯೇ ಉಳಿಯುವಂತಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳೆಂದು ಹೇಳುವ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಗಳು ಈ ದೇಶದಲ್ಲಿ ಯಾವ ಕಾಲಕ್ಕೂ ಅವರಿಗೆ ದಕ್ಕದಂತಾಗುತ್ತದೆ. ಸ್ವಾತಂತ್ರ್ಯ ಸಮಾನತೆಗಳ ಹೆಸರಿನಲ್ಲಿ ಮೀಸಲಾತಿಗಳನ್ನು ವಿರೋಧಿಸುವವರು ಇದಕ್ಕೇನನ್ನುತ್ತಾರೆ? ದಲಿತರಿಗೆ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಬೇಕಾಗಿಯೇ ಇಲ್ಲ. ಅವರು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಉಳಿದ ಜಾತಿ ಮತಗಳವರ ಮಟ್ಟಕ್ಕೆ ಬರುವ ಅಗತ್ಯವೇ ಇಲ್ಲವೆಂಬಂತೆ ಅಮಾನುಷವಾದವನ್ನು ಅವರು ಮುಂದಿಡುತ್ತಾರೆಯೇ? ದೇಶದಲ್ಲಿ ಐದರಲ್ಲಿ ಒಂದರಷ್ಟು ಜನಸಂಖ್ಯೆ ಇರುವ ದಲಿತರು ಅಜ್ಞಾನದಲ್ಲಿ ದಾರಿದ್ರ್ಯದಲ್ಲಿ ಉಳಿಯುವುದಾದರೆ ವಿದ್ಯಾಭ್ಯಾಸ, ಸರಕಾರಿ ನೌಕರಿಗಳಲ್ಲಿ ಗುಣಮಟ್ಟಕ್ಕೆ ಧಕ್ಕೆಯಾಗಲಾರದೆಂದು ವಾದಿಸುವವರು ಇಡೀ ದೇಶವನ್ನೇ ಒಂದು ಘಟಕವನ್ನಾಗಿಟ್ಟುಕೊಂಡು ನೋಡಬೇಕು. ಆಗ ನಮ್ಮ ದೇಶದ ಗುಣಮಟ್ಟ, ಪ್ರಜಾಪ್ರಭುತ್ವ ರಾಷ್ಟ್ರದ ಒಟ್ಟು ಜನತೆಯ ಗುಣಮಟ್ಟ ತೀರ ಕೆಳದರ್ಜೆಯದಾಗಿಯೇ ಉಳಿಯುತ್ತದೆ ಎಂಬುದು ಗೊತ್ತಾಗುತ್ತದೆ. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಸಮಾನಾವಕಾಶಗಳನ್ನು ಪಡೆಯುವ ಅವಕಾಶ ಎಂದಾದರೂ ಇದ್ದಿರಬಹುದಾದ ಪ್ರಜಾಪ್ರಭುತ್ವ ರಾಜ್ಯ ಪದ್ಧತಿಯೇ ಅರ್ಥಹೀನವಾಗಿಯೋ ಇಲ್ಲವೆ ಸಂಪೂರ್ಣವಾಗಿ ಇಲ್ಲವಾಗಿಯೋ ಹೋಗಬಹುದು. ಇದನ್ನು ಮೀಸಲಾತಿ ವಿರೋಧಿಗಳು ಅರಿಯಬೇಕು.

ಇನ್ನು ಪ್ರತಿಭೆಯ ಮಾತು. ದಲಿತರಿಗಿರುವ ಮೀಸಲಾತಿ ಪ್ರಮಾಣ ಶೇ. 18 ಇದೆ. ಅವರ ಜನಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಅಷ್ಟು ಪ್ರಮಾಣ ಅವರಿಗೆ ಹೆಚ್ಚಿನದ್ದಲ್ಲ. ಅವರಿಗೆ ಹಾಗೆ ಮೀಸಲಾತಿ ಸೌಲಭ್ಯವಿಲ್ಲದೆ ಇದ್ದರೆ ಏನಾಗುತ್ತಿತ್ತು ಎಂಬುದು ಪ್ರಶ್ನೆ. ದಲಿತರಿಗಿರುವ ಮೀಸಲಾತಿಯನ್ನು ಕಳೆದರೆ ಉಳಿದಂತೆ ಶೇ.80ರಷ್ಟು ಅವಕಾಶಗಳು ಶಾಲಾ ಕಾಲೇಜುಗಳ ಪ್ರವೇಶಕ್ಕೆ ಸರಕಾರಿ ನೌಕರಿಗಳಿಗೆ ಸಂಬಂಧಿಸಿದಂತೆ ಇವೆ. ಅಲ್ಲಿ ನಿಜವಾದ ಪ್ರತಿಭೆ ಒಂದನ್ನೇ ಪ್ರಮಾಣವಾಗಿಟ್ಟುಕೊಂಡು ಸೀಟುಗಳನ್ನು ನೀಡಲಾಗುತ್ತಿದೆಯೇ? ಹಾಗೆ ನೀಡಿದ್ದಾದರೆ ಶೇ. 80ರಷ್ಟು ಪ್ರತಿಭಾಶಾಲಿಗಳಿಗೆ ಅವಕಾಶ ಸಿಕ್ಕಿಯೇ ಸಿಕ್ಕಂತಾಗುತ್ತದೆ. ಮೀಸಲಾತಿ ಸೌಲಭ್ಯದಿಂದಾಗಿ ಸೀಟುಗಳನ್ನು ನೌಕರಿಗಳನ್ನು ಪಡೆದು ಬರುವವರೆಲ್ಲ ಈ ಶೇ.80 ಜನರಿಗಿಂತ ಕಡಿಮೆ ಪ್ರತಿಭಾವಂತರೆ ಎಂದು ಹೇಳುವಂತಿಲ್ಲ. ಈ ಪ್ರತಿಭೆಯ ವಾದವನ್ನು ಮುಂದಿಡುವವರಿಗೆ ನಿಜವಾಗಿ ಪ್ರತಿಭೆಯ ಬಗ್ಗೆ ಕಳಕಳಿ ಇದ್ದದ್ದಾದರೆ ಅವರು ಮೊದಲು ಚಳವಳಿ ಹೂಡಬೇಕಾದದ್ದು ದಲಿತರಿಗಿರುವ ಮೀಸಲಾತಿ ಸೌಲಭ್ಯದ ವಿರುದ್ಧವಾಗಿಯಲ್ಲ. ಉಳಿದ ಶೇ. 80ರಲ್ಲಿ ಪ್ರತಿಭೆಗೆ ಪ್ರಾಮುಖ್ಯ ದೊರೆಯುವಂತೆ ಆಂದೋಲನ ಸಂಘಟಿಸಬೇಕು. ಈಗ ಮೀಸಲಾತಿಯ ಸೌಲಭ್ಯ ದಲಿತರಿಗೆ ಮಾತ್ರವಿಲ್ಲ. ಹಿಂದುಳಿದ ಜಾತಿ, ಮತ, ಪಂಗಡಗಳಿಗೂ ಅಂದರೆ ಕೆಲವು ಸವರ್ಣೀಯ ಪಂಗಡಗಳಿಗು ಕೆಲ ಪ್ರಮಾಣದ ಮೀಸಲಾತಿ ಸೌಲಭ್ಯವಿದೆ. ದಲಿತರ ಮೀಸಲಾತಿ ಸೌಲಭ್ಯವನ್ನು ವಿರೋಧಿಸಿ ಚಳವಳಿ ಮಾಡುತ್ತಿರುವವರು ಸವರ್ಣಿಯರು, ಹಿಂದುಳಿದ ಜಾತಿ, ಮತ, ಪಂಗಡಗಳಿಂದು ಘೋಷಿತವಾದ ಜನರಿಗೆ ಇರುವ ಮೀಸಲಾತಿ ಸೌಲಭ್ಯವನ್ನು ಏಕೆ ಈಗಲೇ ವಿರೋಧಿಸುತ್ತಿಲ್ಲ?

ಇಲ್ಲಿ ಕುತಂತ್ರವಿದೆ. ಮೊದಲ ಹಂತದಲ್ಲಿ ಇತರೆ ಹಿಂದುಳಿದ ಜಾತಿ, ಮತ, ಪಂಗಡಗಳವರ ಬೆಂಬಲವನ್ನು ದೊರಕಿಸಿಕೊಂಡು ದಲಿತರಿಗಿರುವ ಮೀಸಲಾತಿಯನ್ನು ವಿರೋಧಿಸಿ ಗೆದ್ದರೆ ಎರಡನೆಯ ಹಂತದಲ್ಲಿ ದಲಿತರ ಮೀಸಲಾತಿ ರದ್ಧತಿಯ ಪೂರ್ವನಿದರ್ಶನವನ್ನು ಮುಂದೆ ಮಾಡಿ ಹಿಂದುಳಿದ ಜಾತಿಗಳವರಿಗಿರುವ ಮೀಸಲಾತಿ ಸೌಲಭ್ಯವನ್ನು ಪ್ರಶ್ನಿಸಬಹುದು. ಅದರ ವಿರುದ್ಧವೂ ಚಳವಳಿ ಹೂಡಬಹುದು. ಆಗ ದಲಿತರ ಮೀಸಲಾತಿ ಸೌಲಭ್ಯದ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದ ಹಿಂದುಳಿದ ಜಾತಿ ಪಂಗಡಗಳವರಿಗೆ ತಮ್ಮ ವಿರುದ್ಧ ನಡೆಯಬಹುದಾದ ಚಳವಳಿಯನ್ನು ವಿರೋಧಿಸುವ ನೈತಿಕ ಹಕ್ಕು ಇಲ್ಲದಂತಾಗಿ ಇಂಗು ತಿಂದ ಮಂಗನಂತಾಗಬೇಕಾದೀತು. ಆದ್ದರಿಂದ ಹಿಂದುಳಿದ ಜಾತಿ ಪಂಗಡಗಳಿಗೆ ಸೇರಿದ್ದು ಕೆಲವು ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿರುವ ದಲಿತೇತರ ಸವರ್ಣಿಯರು ದಲಿತರ ಮೀಸಲಾತಿ ವಿರುದ್ಧ ಗುಣಮಟ್ಟ, ಪ್ರತಿಭೆ ಹೆಸರಿನಲ್ಲಿ ನಡೆಯುತ್ತಿರುವ ವಾದ, ಆ ವಾದದಿಂದ ಪ್ರೇರಿತವಾದ ಚಳವಳಿ ತಮ್ಮ ವಿರುದ್ಧವೂ ತಿರುಗೀತು ಎಂಬ ಕಟುಸತ್ಯವನ್ನು ಮುಂದಾಗಿ ಅರಿತುಕೊಳ್ಳಬೇಕಾದ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...