ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ ನಡೆಯಿತು.
ಜಮಾತೆ ಇಸ್ಲಾಂ ಹಿ ಇಂದ್ ಸಂಘಟನೆಯಿಂದ ಹಮ್ಮಿಕೊಂಡಿದ್ದ SIR ವಿರೋಧಿ ಜನಜಾಗೃತಿ ಜಾಥಾ ಸಭೆಯಲ್ಲಿ ರುಖಿಯ್ಯಾ ಜುಮಾ ಮಸೀದಿ ಅಧ್ಯಕ್ಷರಾದ ಶಕೀರ್, ಜಮಾತ್ ಇಸ್ಲಾಂ ಹಿ ಹಿಂದ್ ನ ಉಪಾಧ್ಯಕ್ಷರಾದ ಅಮಾನುಲ್ಲಾ, SIR ವಿರೋಧಿ ಕರ್ನಾಟಕದ ವಿ.ಎಸ್. ಶ್ರೀಧರ್ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಹೇಮಂತ್ ಅವರು ವೇದಿಕೆಯಲ್ಲಿದ್ದರು.

ಜೂನ್ 13ರಂದು ಉಡುಪಿ ಪತ್ರಿಕಾ ಭವನದಲ್ಲಿ ಕರಪತ್ರ ಬಿಡುಗಡೆಗೊಳಿಸುವ ಮೂಲಕ 5ನೇ ಮಾರ್ಗದ ಜಾಥಕ್ಕೆ ಜಾಲನೆ ನೀಡಲಾಗಿತ್ತು.
ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಐಆರ್ ಜನಜಾಗೃತಿ ಜಾಥಾದ ಸಂಚಾಲಕರಾದ ಪ್ರೊ. ವಿ.ಎಸ್. ಶ್ರೀಧರ್, ಕರ್ನಾಟಕದಲ್ಲಿ ಇನ್ನೂ ಸಹ ತುಂಬಾ ಜನರಿಗೆ ಅದರಲ್ಲೂ ಜನ ಸಾಮಾನ್ಯರಿಗೆ ಎಸ್ಐಆರ್ ಕುರಿತು ತಿಳಿದಿಲ್ಲ ಹಾಗಾಗಿ ಜನರನ್ನು ಎಚ್ಚರಿಸುವುದು ಈ ಜಾಥಾದ ಮೊದಲ ಉದ್ದೇಶ, ಹಾಗೇ ಜನಸಾಮಾನ್ಯರಿಗೆ ಎಸ್ಐಆರ್ ನಿಂದ ಹೆಚ್ಚು ತೊಂದರೆಯಾಗದಂತೆ ತಡೆಯಲು ಸರ್ಕಾರಕ್ಕೆ ಮಾತ್ರ ಸಾಧ್ಯವಿದ್ದು, ರಾಜ್ಯ ಸರ್ಕಾರವನ್ನು ಇದಕ್ಕಾಗಿ ಒತ್ತಾಯಿಸುವುದು ಎರಡನೇ ಉದ್ದೇಶ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ‘ಇಲ್ಲಿಯವರೆಗೆ ಪ್ರಜಾಪ್ರಭುತ್ವದಲ್ಲಿ ಜನರು ತಮಗೆ ಬೇಕಾದ ಸರ್ಕಾರಗಳನ್ನು ಆಯ್ಕೆ ಮಾಡುತ್ತಿದ್ದರು, ಆದರೆ ಈಗ ಕೇಂದ್ರ ಸರ್ಕಾರ ಯಾರು ಮತ ಹಾಕಬೇಕು, ಯಾರು ಮತ ಹಾಕಬಾರದು ಎಂಬುದನ್ನು ನಿರ್ಧರಿಸುತ್ತಿದೆ. ಚುನಾವಣಾ ಆಯೋಗ ಇಂದು ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಆರೋಪಿಸಿದರು.

“ಯಾರು ಮತ ಹಾಕಬೇಕು, ಯಾರು ಮತದಾನದ ಹಕ್ಕಿನಿಂದ ವಂಚಿತರಾಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಆದರೂ ಅದು ತನ್ನ ವ್ಯಾಪ್ತಿಗೆ ಮೀರಿದ ಕೆಲಸ ಮಾಡುತ್ತಿದೆ. ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ತಿರುಚುವ ಪ್ರಯತ್ನ ನಡೆಯುತ್ತಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಅನೇಕ ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳು ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಜನರು ಇದನ್ನು ಗಂಭೀರವಾಗಿ ಪರಿಗಣಿಸಿ ವಿರೋಧಿಸಬೇಕು” ಎಂದು ಅವರು ಕರೆನೀಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಸರ್ಕಾರದ ಕರ್ತವ್ಯವಾಗಿದ್ದು, ಚುನಾವಣಾ ಆಯೋಗದ ಕೆಲಸವಲ್ಲ ಎಂದು ಪ್ರತಿಪಾದಿಸಿದ ಅವರು, “ಎಸ್ಐಆರ್ ಎನ್ನುವುದು ಈ ಹಿಂದೆ ಜಾರಿಗೆ ತರಲು ಯತ್ನಿಸಲಾದ ಎನ್ಆರ್ಸಿ ಮತ್ತು ಸಿಎಎ ಪ್ರಕ್ರಿಯೆಗಳ ಮುಂದುವರಿದ ಭಾಗವಾಗಿದೆ. ಇದರ ಪರಿಣಾಮವಾಗಿ ದೇಶದ ಪ್ರಜಾಸತ್ತಾತ್ಮಕ ಸ್ವರೂಪದಲ್ಲಿ ಮೂಲಭೂತ ಬದಲಾವಣೆಗಳು ಸಂಭವಿಸುವ ಅಪಾಯವಿದೆ. ಇದು ಕೇವಲ ಮತದಾರರ ಪಟ್ಟಿ ಪರಿಷ್ಕರಣೆ ಮಾತ್ರವಲ್ಲ; ದೊಡ್ಡ ರಾಜಕೀಯ ಯೋಜನೆಯ ಭಾಗವಾಗಿಯೇ ಇದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಎಚ್ಚರಿಸಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಮತದಾರರಿಂದ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಕೇಳುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದು ಆರೋಪಿಸಿದ ಅವರು ಇದೇ ಕಾರಣಕ್ಕೆ ‘ಎಸ್ಐಆರ್ ಅನ್ನು ರಕ್ತಪಾತವಿಲ್ಲದ ಜನಾಂಗೀಯ ಹತ್ಯೆ’ ಎಂದು ಪರಕಾಲ ಪ್ರಭಾಕರ್ ಅವರು ಕರೆದಿರುವುದನ್ನು ನೆನಪಿಸಿಕೊಂಡರು.
ದೇಶದ ಜನರಿಗೆ ಅದರಲ್ಲೂ ತಳಸಮುದಾಯಗಳಿಗೆ ಮತದಾನದ ಹಕ್ಕನ್ನು ನೀಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದು ದಲಿತರಿಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದರು ಆದರೆ ಇಂದು ಎಸ್ಐಆರ್ ಹೆಸರಿನಲ್ಲಿ ಆ ರಾಜಕೀಯ ಹಕ್ಕನ್ನು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ. ತಳಸಮುದಾಯಗಳಿಗೆ ಸಮಾನವಾದ ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಲಿಲ್ಲ, ಸಿಕ್ಕಿದ್ದ ರಾಜಕೀಯ ಸ್ವಾತಂತ್ರ್ಯಕ್ಕೂ ಧಕ್ಕೆ ಬಂದಿದೆ. ಅಂಬೇಡ್ಕರ್ ಹೇಳಿದ್ದ ಒಂದು ಮತ, ಒಂದು ಮೌಲ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಯುರೋಪಿಯನ್ ಸೇರಿದಂತೆ ಬೇರೆ ದೇಶಗಳಲ್ಲಿ ಮಹಿಳಾ ಮತದಾನಕ್ಕಾಗಿ ನೂರಾರು ವರ್ಷಗಳ ಕಾಲ ಹೋರಾಟ ನಡೆಸಲಾಗಿತ್ತು. ಆದರೆ ಭಾರತದಲ್ಲಿ ಅಂಬೇಡ್ಕರ್ ಅವರು ಅಂತಹ ಹೋರಾಟವೇ ಇಲ್ಲದೇ ಮಹಿಳೆಯರಿಗೆ ಮತದಾನದ ಹಕ್ಕು ನೀಡುವಲ್ಲಿ ಶ್ರಮಿಸಿದ್ದರು, ಆದರೆ ಇಂದು ಎಸ್ಐಆರ್ ನೆಪದಲ್ಲಿ ಮಹಿಳೆಯರ ಆ ಹಕ್ಕನ್ನ ನಿರಾಕರಿಸಲಾಗುತ್ತಿದೆ. ಎಸ್ಐಆರ್ ನಿಂದ ಹೆಚ್ಚು ವಂಚಿತರಾಗುತ್ತಿರುವುದು ಮಹಿಳೆಯರೇ ಆಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಬಾಳ್ವೆ ಉಡುಪಿ ಜಿಲ್ಲಾ ಸಂಚಾಲಕ ಪ್ರೊ ಫಣಿರಾಜ್ ಮಾತನಾಡಿ ಇಂದು ಎಸ್ಐಆರ್ ನೇರ ಪ್ರಭಾವ ಬೀರುತ್ತಿರುವುದು, ದಲಿತ ಮತ್ತು ಅಲೆಮಾರಿ, ಆದಿವಾಸಿ ಸಮುದಾಯಗಳ ಹಕ್ಕಿನ ಮೇಲೆ, ದೇಶದ 70% ಇರುವ ಈ ಜನಸಮುದಾಯಗಳು ನೀಡಲಾಗದ 11-12ರೀತಿಯ ಪತ್ರಗಳನ್ನು ಕೇಳುತ್ತಿದ್ದಾರೆ, ತುಳಿತಕ್ಕೊಳಪಟ್ಟ, ಸಮಾಜದಿಂದ ಕಡೆಗಣಿಸ್ಪಟ್ಟ ಈ ವರ್ಗಗಳಿಗೆ ಈ ದಾಖಲೆಗಳನ್ನು ನೀಡಿ, ತಮ್ಮ ಪೌರತ್ವವನ್ನು ಸಾಭೀತು ಪಡಿಸಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕಡೆಗಣಿಸಲ್ಪಟ್ಟ ಈ ಸಮುದಾಯಗಳಿಗೆ ಎಲ್ಲಾ ಮಾಹಿತಿ ಪತ್ರಗಳನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಹಬಾಳ್ವೆ ಉಡುಪಿ ಜಿಲ್ಲಾ ಸಂಚಾಲಕ ಪ್ರೊ ಫಣಿರಾಜ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಪ್ರಮುಖರಾದ ಶ್ಯಾಮ್ರಾಜ್ ಬಿರ್ತಿ, ಇದ್ರೀಸ್ ಹೂಡೆ, ಶಶಿಧರ್ ಗೊಲ್ಲ, ಅಬ್ದುಲ್ ಅಝೀಝ್ ಉದ್ಯಾವರ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ ಐದು ಮಾರ್ಗಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ. ಜೂನ್ 13ರಿಂದ 18ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಈ ಜನಜಾಗೃತಿ ಜಾಥಾ ಮತದಾರರಲ್ಲಿ ಎಸ್ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಿದೆ. ರಾಜ್ಯದ ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ ಐದು ಮಾರ್ಗಗಳಲ್ಲಿ ಜಾಥಾವನ್ನು ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಮಾರ್ಗ-5ರಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜಾಥಾ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ.
ಮಾರ್ಗ-1ರಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳು,
ಮಾರ್ಗ-2ರಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳು ಒಳಗೊಂಡಿವೆ.
ಮಾರ್ಗ-3ರಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳು,
ಮಾರ್ಗ-4ರಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳು ಸೇರಿವೆ.
ಮಾರ್ಗ-5ರಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜಾಥಾ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ.



