ಕವಿತೆ ಓದಿದ್ದಕ್ಕೆ ಮತ್ತು ಪ್ರಕಟಿಸಿದ್ದಕ್ಕೆ ನಿನ್ನೆ ಗಂಗಾವತಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಸಿರಾಜ್ ಬಿಸರಳ್ಳಿ, ರಾಜಭಕ್ಷಿಯವರಿಗೆ ಕೋರ್ಟ್ ಜಾಮೀನು ನೀಡಿದೆ.
ಕೊಪ್ಪಳದ ಆನೆಗೊಂದಿ ಉತ್ಸವದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದಕ್ಕಾಗಿ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಹಾಗೂ ಕನ್ನಡ ನೆಟ್ ಸಂಪಾದಕರಾದ ರಾಜಭಕ್ಷಿಯವರನ್ನು ನಿನ್ನೆ ಗಂಗಾವತಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಆ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಕವಿತೆಗೆ ಜೈಲುವಾಸವಾಗಿತ್ತು.
ಕವಿತೆಯ ಆರೋಪಿಗಳ ಪರ ವಕೀಲರಾದ ಆರ್ ಜಗನ್ನಾಥ್ ಜಾಮೀನು ದೊರಕಿರುವ ವಿಷಯವನ್ನು ಖಚಿತಪಡಿಸಿದ್ದು, ಇನ್ನ ಒಂದು ಗಂಟೆಯಲ್ಲಿ ಇಬ್ಬರೂ ಬಿಡುಗಡೆಯಾಗಲಿದ್ದಾರೆ ಎಂದು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಕವಿತೆ, ಕಾದಂಬರಿ ಥರದ ಸೃಜನಶೀಲ ಸಾಹಿತ್ಯವನ್ನು ಅಭಿವ್ಯಕ್ತಪಡಿಸುವುದು ಸಾಂವಿಧಾನಿಕವಾಗಿ ದಕ್ಕಿರುವ ಹಕ್ಕಾಗಿದೆ. ಅದು ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಹಾಗಾಗಿ ಕವಿತೆ ಓದಿದ್ದಕ್ಕೆ ಕ್ರಿಮಿನಲ್ ಕೇಸು ಹಾಕಿದ್ದೇ ತಪ್ಪು ಎಂದು ಅವರು ಹೇಳಿದ್ದಾರೆ.
ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದರು. ಇದನ್ನೇ ದೇಶದ್ರೋಹವೆಂದು ಕರೆದು ಬಿಜೆಪಿಯು ದೂರು ನೀಡಿದ್ದರು. ಅದರ ಆಧಾರದಲ್ಲಿ ಖೈ.ನಂ. 23/2020 ರಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 5045052 ರಡಿಯಲ್ಲಿ ಪ್ರಕರಣ ದಾಖಲಾಗಿತ್ತು.