Homeಅಂಕಣಗಳುಪರಿಘ 2: ಕಾಲಕ್ಕೆ ತಕ್ಕಂತೆ ನೆಡೆಯಬೇಕು; ಬಿಡುವಿನ ಸಮಯ ಸದ್ಬಳಕೆಯಾಗಬೇಕು

ಪರಿಘ 2: ಕಾಲಕ್ಕೆ ತಕ್ಕಂತೆ ನೆಡೆಯಬೇಕು; ಬಿಡುವಿನ ಸಮಯ ಸದ್ಬಳಕೆಯಾಗಬೇಕು

- Advertisement -
- Advertisement -

ಕಾಲದ ಆರಂಭ ಬಿಂದು ಹಾಗೂ ಕಾಲದ ಅಂತಿಮ ಕ್ಷಣ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಕ್ರಿಸ್ತ ಪೂರ್ವದ ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಕಥೆಯನ್ನು ನಾವು ಮಹಾಭಾರತ, ರಾಮಾಯಣ ಇತ್ಯಾದಿ ಗ್ರಂಥಗಳ ಮೂಲಕ ಊಹಿಸಿದ್ದೇವೆ. ಇನ್ನು ಡಾರ್ವಿನ್ ಆದಿಯಾಗಿ ವಿಜ್ಞಾನಿಗಳು ಭೂಮಿಯ ಮೇಲೆ ದೊರೆತ ಪ್ರಾಚೀನ ಪಳಿಯುಳಿಕೆಗಳ ಅಧ್ಯಯನ ಮಾಡಿ ಲಕ್ಷಾವಧಿ ವರ್ಷಗಳ ಹಿಂದಿನ ಕಾಲದ ಕಥೆಯನ್ನು ಊಹಿಸಿದ್ದಾರೆ ಹಾಗೂ ಗ್ರಂಥಗಳ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ. ಇಷ್ಟಾಗಿಯೂ ಇದೆಲ್ಲ ಮಾನವನ ವಿಕಾಸದ ಸುತ್ತ ಹೆಣೆದ ಕಥೆಯೇ ಆಗಿದೆ, ಹೊರತಾಗಿ ಕಾಲದ ಆರಂಭ ಬಿಂದುವನ್ನು ತಿಳಿಸುವ ನಿಖರ ತಥ್ಯಗಳಲ್ಲ. ಆದರೆ ಭೂತಕಾಲವನ್ನು ಕೆದಕುವ ಮನುಷ್ಯನ ಆಸಕ್ತಿ ಮಾತ್ರ ಚೂರೂ ಕುಂದಿಲ್ಲ, ಇಂದಿಗೂ ಅಂತಹ ಪ್ರಯೋಗ, ಪ್ರಯತ್ನಗಳು ನಡೆಯುತ್ತಲೇ ಇವೆ. ಭೂತವಷ್ಟೇ ಅಲ್ಲ ಭವಿಷ್ಯತ್ ಕಾಲವನ್ನು ಅರಿಯುವ ಕುತೂಹಲವೂ ಮನುಷ್ಯನನ್ನು ಸದಾಕಾಲ ಶೋಧಕ್ಕೀಡು ಮಾಡಿದೆ. ಜ್ಯೋತಿಷ್ಯಶಾಸ್ತ್ರಗಳು, ಗ್ರಹ-ನಕ್ಷತ್ರಗಳ ಚಲನೆಯ ಮೂಲಕ ಭವಿಷ್ಯದಲ್ಲಿ ಇರುವ ನಿಗೂಢವನ್ನು ಭೇದಿಸುವ ಪ್ರಯತ್ನ ಮಾಡುತ್ತವೆ. ನಾಸ್ಟ್ರೋಡಾಮಸ್‌ನಿಂದ ಹಿಡಿದು ಹಲವಾರು ವಿದ್ವಾಂಸರು ಭವಿಷ್ಯದ ಅಗೋಚರವನ್ನು ಊಹಿಸುವ, ದಾಖಲಿಸುವ ಯತ್ನ ಮಾಡಿದ್ದೂ ನಮ್ಮ ಮುಂದೆ ಇದೆ. ಭೂತಕಾಲವಾಗಲಿ ಅಥವಾ ಭವಿಷ್ಯತ್ ಕಾಲವಾಗಲಿ ಎರಡೂ ಸದ್ಯ ನಮ್ಮ ಕೈಯಲ್ಲಿ ಇಲ್ಲ. ಆದರೆ ಒಂದರ ಪ್ರಭಾವ ಒಂದರ ಮೇಲೆ ಇದ್ದೇ ಇದೆ. ಭೂತ-ಭವಿಷ್ಯವನ್ನು ಬೇರ್ಪಡಿಸಿ ನೋಡಲಾಗದು. ಈ ಎರಡೂ ಅಂಶಗಳನ್ನು ಜೋಡಿಸುವ ವರ್ತಮಾನ ನಮ್ಮ ಕೈಲಿದೆ. ಅಂದರೆ ಕಾಲಪ್ರವಾಹದ ಸದ್ಯದ ಕ್ಷಣ ಮಾತ್ರ ನಮ್ಮ ಜೊತೆಗಿದೆ, ಆದರೆ ಈ ಕ್ಷಣವೂ ನಮ್ಮ ವಶದಲ್ಲಿದೆ ಎಂದು ಹೇಳುವಂತಿಲ್ಲ. ಭೂತ-ಭವಿಷ್ಯದ ಅದೃಶ್ಯ ಸರಪಳಿಯಲ್ಲಿ ಇದೂ ಕೂಡ ಬಂಧಿತವಾಗಿದೆ. ಹಾಗೆಂದ ಮಾತ್ರಕ್ಕೆ ವರ್ತಮಾನವೆಂಬುದು ಅಸಹಾಯಕವಲ್ಲ. ಅಲ್ಲಿ ನಾವಿನ್ಯಕ್ಕೆ, ಸೃಜನಕ್ಕೆ ಅವಕಾಶ ಇದ್ದೇ ಇದೆ. ಈ ಅವಕಾಶವೇ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. ಇದೆಲ್ಲವೂ ಕಾಲದ ಕೈಚಳಕ.

ಬಹುಶಃ ಮುಂದಿನ ದಿನಗಳಲ್ಲಿ ಕಾಲವನ್ನು ಕೊರೊನಾ ಪೂರ್ವಕಾಲ ಹಾಗೂ ಕೊರೊನಾ ಉತ್ತರಕಾಲ ಎಂದು ವಿಂಗಡಿಸುವ ಸ್ಥಿತಿ ಬರಬಹುದು. ಖಂಡಿತವಾಗಿಯೂ ವರ್ತಮಾನದಲ್ಲಿನ ಕೊರೊನಾ ಮುಂದೆ ಭೂತಕಾಲವಾಗಿ ಎಣಿಸಲ್ಪಟ್ಟರೂ ಅದು ನಮ್ಮ ಮುಂಬರುವ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ಕೊರೊನಾ ಮನುಷ್ಯನ ಸಹಜವರ್ತನೆಗಳ ಮೇಲೆ ನಿರ್ಬಂಧ ಹೇರಿದೆ, ಹಲವಾರು ಹೊಸ ಪಾಠಗಳನ್ನು ಕಲಿಸಿದೆ. ಒಂದೊಮ್ಮೆ ಕಾಲ ನೀಡಿದ ಮುಕ್ತತೆಯನ್ನು ಇಂದು ಅದೇ ಕಾಲವೇ ಕಸಿದುಕೊಂಡಂತಿದೆ. ಪರಿಸ್ಥಿತಿ ಗಂಭೀರವಾಗಿದೆ, ಹಾಗೆಂದು ತೀರ ಹತಾಶಗೊಳ್ಳುವುದಲ್ಲ, ಎಲ್ಲ ದುರಿತಗಳು ಕೊನೆಗೊಂಡಂತೆ ಈ ಕಾಲವೂ ಸರಿಯುತ್ತದೆ. ಕಾಲದ ಬಗ್ಗೆ ಮಾತಾಡುವಾಗ ಎರಡು ರಂಜಕವಾದ ಅಂಶಗಳನ್ನು ನಾವು ಗಮನಿಸಬಹುದು. ನಾವು ನಮ್ಮ ಕೆಲಸ-ಕಾರ್ಯಗಳಲ್ಲಿ ಎಷ್ಟೊಂದು ವ್ಯಸ್ತರಾಗಿರುತ್ತೇವೆ ಅಂದರೆ ನಮಗೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುವುದು, ಸಮಯದ ಉಳಿತಾಯ ಹೇಗೆ ಮಾಡುವುದು ಎಂಬುದೇ ತಿಳಿಯದಾಗುತ್ತದೆ. ಒಮ್ಮೊಮ್ಮೆ ಇದರ ತದ್ವಿರುದ್ಧವಾದ ಸ್ಥಿತಿಯೂ ಉದ್ಭವಿಸುತ್ತದೆ, ಆಗ ಸಮಯವನ್ನು ಹೇಗೆ ಕಳೆಯುವುದು, ಈ ದುರಿತಕಾಲವನ್ನು ಹೇಗೆ ನೂಕುವುದು ಎಂಬ ಪ್ರಶ್ನೆ ಏಳುತ್ತದೆ. ನಾವು ಒಮ್ಮೊಮ್ಮೆ ಸಮಯವನ್ನು ವ್ಯಯಿಸಲೆಂದು ಟಿವ್ಹಿ, ಮೋಬೈಲ್ ಮೊರೆಹೋಗುತ್ತವೆ, ಒಮ್ಮೊಮ್ಮೆ ಟಿವ್ಹಿ, ಮೊಬೈಲ್‌ಗಳ ಬಳಕೆಯೇ ನಮ್ಮ ಕಾಲವನ್ನು, ಸಮಯವನ್ನು ಹಾಳು ಮಾಡುತ್ತದೆ. ಹಾಗೆಂದು ಎಲ್ಲರಿಗೂ ಇದು ಅನ್ವಯಿಸುವುದಿಲ್ಲ. ತಮ್ಮ ಕೆಲಸಗಳನ್ನು ಅವುಗಳ ನಿರ್ದಿಷ್ಠ ಸಮಯಕ್ಕೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಕಾಲಜ್ಞಾನಿಗಳೂ, ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಕುಶಲಕರ್ಮಿಗಳೂ ನಮ್ಮ ನಡುವೆ ಇದ್ದಾರೆ.

ನಾವು ನಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೂ ಪರವಾಗಿಲ್ಲ, ಇತರೆ ಎಲ್ಲರ ಕೆಲಸಗಳು ಮಾತ್ರ ನಮಗೆ ಸರಿಯಾದ ಸಮಯಕ್ಕೆ ಆಗಲೇಬೇಕೆಂಬ ಅಪೇಕ್ಷೆ ಇರುತ್ತದೆ. ರೈಲಿಗಾಗಿ ದಾರಿಕಾಯುತ್ತಿರುವಾಗ ರೈಲು ಎರಡು ತಾಸು ತಡವಾಗಲಿದೆ ಅಂತ ಗೊತ್ತಾದರೆ ನಮಗೆ ಅಸಮಾಧಾನವಾಗುತ್ತದೆ. ಆ ಎರಡು ತಾಸುಗಳನ್ನು ಹೇಗೆ ಕಳೆಯುವುದು ಎಂಬ ಚಿಂತೆ ಶುರುವಾಗುತ್ತದೆ, ಕಾಲಹರಣಕ್ಕೆ ಏನೋ ಒಂದು ಉಪಾಯ ಕಂಡುಕೊಳ್ಳುತ್ತೇವೆ. ಆದರೆ ದಿನಾಲೂ ತಪ್ಪದೆ ಅರ್ಧ ತಾಸು ವ್ಯಾಯಾಮ ಮಾಡುವದು ನಮ್ಮಿಂದ ಆಗುವುದಿಲ್ಲ, ಏಕೆ? ಸಮಯ ಸಿಗುತ್ತಿಲ್ಲ ಎಂಬ ನೆಪ. ಇದೆ ಅಂತ ಅಂದುಕೊಂಡರೆ ಸಮಯ ಇದೆ, ಇಲ್ಲ ಅಂತ ಭಾವಿಸಿದರೆ ಸಮಯ ಇಲ್ಲ. ಮನಸ್ಸಿದ್ದಲ್ಲಿ ಮಾರ್ಗ ಎಂದು ಹೇಳುವುದು ಸುಳ್ಳಲ್ಲ, ತನಗೆ ಇಷ್ಟವಾದ ವಿಷಯವಾಗಿದ್ದರೆ ಮನುಷ್ಯ ಹೇಗೋ ಸಮಯ ಹೊಂದಿಸಿಕೊಳ್ಳುತ್ತಾನೆ, ಬೇಡವಾದ ವಿಷಯ ಇದ್ದರೆ ದಿನವಿಡಿ ಕೆಲಸವಿಲ್ಲದೆ ಬಿದ್ದುಕೊಂಡರೂ ಸಮಯವಿಲ್ಲ ಎಂಬ ನೆಪ ಹೂಡುತ್ತಾನೆ.

ಕೊರೊನಾದ ಈ ಕಾಲದಲ್ಲಿ ನಾವೆಲ್ಲ ಸುಮಾರು ನಾಲ್ಕು ತಿಂಗಳು ಮನೆಯಲ್ಲಿದ್ದೇವೆ. ಕೆಲವು ದಿನ ವರ್ಕ ಫ್ರಮ್ ಹೋಮ್ ಇತ್ತು. ಈಗ ಅದೂ ಇಲ್ಲ. ಈಗ ಬಹುಶಃ ಎಲ್ಲರೂ ಬಿಡುವು ಮಾಡಿಕೊಂಡಿದ್ದಾರೆ ಅಥವಾ ಕಾಲವೇ ಒಂದು ಬ್ರೆಕ್ ನೀಡಿದೆ. ಮನೆಯಲ್ಲಿ ಇದ್ದುಕೊಂಡು ಬಹಳ ದಿನಗಳಿಂದ ಮಾಡಬೇಕು ಎಂದುಕೊಂಡರೂ ಮಾಡಲಾಗದೇ ಉಳಿದಿದ್ದ ಕೆಲಸಗಳನ್ನು ಮಾಡುವ ಅವಕಾಶವಿದು. ಇದನ್ನು ಎಷ್ಟು ಜನ ಸದುಪಯೋಗ ಪಡಿಸಿಕೊಂಡರು? ಕೊರೊನಾದ ಈ ಕಾಲದಲ್ಲಿ ನಾವು ಏನೇನು ಮಾಡಿದೆವು? ಅಂತಹ ಯಾವುದೇ ಕೆಲಸ ಇರದಿದ್ದಾಗಲೂ ನಾವು ನಮ್ಮ ಆಸಕ್ತಿಯ ಹಲವಾರು ವಿಷಯಗಳನ್ನು ಕಲಿತುಕೊಳ್ಳಬಹುದಿತ್ತು, ಹೊಸ ಭಾಷೆಯೊಂದನ್ನು ಕಲಿಯಬಹುದಿತ್ತು, ಫಿಟನೆಸ್ ವೃದ್ಧಿಸಿಕೊಳ್ಳಲು ಮನೆಯಲ್ಲಿಯೇ ಚೆನ್ನಾಗಿ ವ್ಯಾಯಾಮ ಮಾಡಬಹುದಿತ್ತು, ದೇಶವಿದೇಶಗಳ ಇತಿಹಾಸ, ಭೂಗೋಳ ಅರಿಯಬಹುದಿತ್ತು, ಮಹಾನ್ ಲೇಖಕರ ಕೃತಿಗಳನ್ನು ಓದಬಹುದಿತ್ತು, ಬಹಳ ಸಮಯದಿಂದ ಯೋಜಿಸಿದ್ದ ಕಾದಂಬರಿಯೊಂದನ್ನು ಬರೆದು ಮುಗಿಸಬಹುದಿತ್ತು ಎಂಬ ಹಲವು ಅಂಶಗಳ ಪಟ್ಟಿಯೇ ಸಿದ್ಧವಾಗುತ್ತದೆ. ಕುಶಲಕರ್ಮಿಗಳನ್ನು ಹೊರತುಪಡಿಸಿ, ಬಹುಶಃ ನಾವು ಯಾರೂ ಇವೆಲ್ಲವನ್ನು ಮಾಡಲಿಲ್ಲ ಅನಿಸುತ್ತದೆ. ಮೊಬೈಲ್‌ಗೆ ಅಡಿಕ್ಟ್ ಆಗಿರದೇ ಇದ್ದ ಕೆಲವರೂ ಈ ಬಿಡುವಿನ ದಿನಗಳಲ್ಲಿ ಎಂದೂ ಇಲ್ಲದಷ್ಟು ಮೊಬೈಲ್ ಗೆ ಅಂಟಿಕೊಂಡಿದ್ದನ್ನು ಗಮನಿಸಿದ್ದೇನೆ. ಅತ್ಯಂತ ಚುರುಕಾಗಿದ್ದ ಕೆಲವರು ಸೋಮಾರಿಗಳಂತೆ ಹಗಲಿರುಳು ಹಾಸಿಗೆಯಲ್ಲಿ ಹೊರಳಾಡುವುದನ್ನು ನೋಡಿದ್ದೇನೆ. ಬಿಡುವಿನ ಸಮಯ ಅವರಲ್ಲಿನ ಕ್ರಿಯಾಶಕ್ತಿಯನ್ನು ನಾಶ ಮಾಡಿದೆ ಅನಿಸಿತು. ಆದರೆ ಆ ಕ್ರಿಯಾಶಕ್ತಿಯನ್ನು ಪುನಃ ಜಾಗೃತಗೊಳಿಸಬಹುದು, ಮತ್ತೆ ಆಲಸ್ಯ ಕೊಡವಿ ಎದ್ದೇಳಬಹುದು, ಇನ್ನೂ ಮಾಡದೇ ಉಳಿದಿರುವ ಕೆಲಸಗಳನ್ನು ಈಗಲೂ ಪ್ರಾರಂಭಿಸಬಹುದು, ಇನ್ನೂ ಕಾಲ ಮಿಂಚಿಲ್ಲ.

ನಾವು ಈ ಕಾಲದಲ್ಲಿ ಏನಾದರೂ ಹೊಸದನ್ನು ಮಾಡಲಿ ಬಿಡಲಿ, ಆದರೆ ಮಾಡಲೇ ಬೇಕಾದ ಅಂಶವೊಂದಿದೆ. ಬಹುಶಃ ಮನೆಯ ಸದಸ್ಯರೆಲ್ಲರೂ ಈ ದಿನಗಳಲ್ಲಿ ಒಂದುಗೂಡಿದ್ದಾರೆ. ಹೊಟ್ಟೆಪಾಡಿಗೆಂದು ಬೇರೆ ಬೇರೆ ಊರಲ್ಲಿದ್ದ ಸೋದರರೂ ಮನೆಗೆ ಮರಳಿದ್ದಾರೆ, ಮನೆಗಳು ತುಂಬಿ ತುಳುಕುತ್ತಿವೆ. ಇದು ಕುಟುಂಬದ ಮನಃಶಕ್ತಿಯನ್ನು ವೃದ್ಧಿಸುವ ಕಾಲ, ಸಹೋದರರು, ಬಂಧುಗಳು ಜೊತೆಯಾಗಿದ್ದು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳುವ, ಪ್ರೀತಿಯಿಂದ ನೋಡಿಕೊಳ್ಳುವ, ಸ್ನೇಹ ಹಂಚಿಕೊಳ್ಳುವ ಕಾಲ, ಕೂಡುಕುಟುಂಬದ ಬೇರುಗಳು ಗಟ್ಟಿಯಾಗುವ ಕಾಲ. ಮನೆಯ ಮಕ್ಕಳು ಹಿರಿಯನ್ನು ತಿಳಿದುಕೊಳ್ಳಲು, ಹಿರಿಯರು ಮನೆಯ ಎಲ್ಲ ಮಕ್ಕಳ ಮನಸ್ಸುಗಳನ್ನು ಅರಿತುಕೊಳ್ಳಲು ದೊರಕಿದ ಸುಸಂಧಿಯಿದು. ಕೊರೊನಾ ಕಾಲ ದುರಿತಕಾಲ ಎಂಬುದು ನಿಜ. ಆದರೆ ಈ ಮೂಲಕ ದೊರೆತ ಬಿಡುವಿನಿಂದಾಗಿ ಪರಿವಾರಗಳಲ್ಲಿಯ, ಸೋದರರಲ್ಲಿಯ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುವಂತಿದ್ದರೆ ಇದು ಸುಕಾಲವೇ ಹೌದು.

ಕೊರೊನಾದ ಭಯವನ್ನು ಇಮ್ಮಡಿಗೊಳಿಸುವಲ್ಲಿ ಟಿವ್ಹಿಗಳ ಪಾತ್ರವೇ ಹೆಚ್ಚು ಇದೆ. ಟಿವ್ಹಿಗಳಲ್ಲಿ ಪ್ರಸಾರವಾಗುತ್ತಿರುವ ಹಿಂಸಕ ಸುದ್ದಿಗಳು, ಅಮಾನವೀಯ ದೃಶ್ಯಗಳು ಎಂಥವರ ಮನಸ್ಸನ್ನು ಕಲಕಬಹುದು. ಇನ್ನು ಮನೆಯ ಮಕ್ಕಳು ಇದನ್ನು ಕೊರೊನಾದ ಬಿಡುವಿನ ಕಾಲವೆಂದು ಇಡೀ ದಿನ ಟಿವ್ಹಿಯ ಮುಂದೆ ಕುಳಿತರೆ ಅವರ ಮುಗ್ಧ, ನಿಶ್ಪಾಪ ಮನಸ್ಸುಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮವಾಗಬಹುದು, ಅವರ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗಬಹುದು. ನಾವು ಈ ದಿನಗಳಲ್ಲಿ ಮನೆಯ ಮಕ್ಕಳನ್ನು ಎದುರಿಗೆ ಕೂಡಿಸಿಕೊಂಡು ಅವರಲ್ಲಿನ ಕಲಾಗುಣಗಳನ್ನು ಪ್ರೋತ್ಸಾಹಿಸಬಹುದು, ಅವರಿಗೆ ದಿನಕ್ಕೆ ಒಂದೆರಡು ಕಥೆಗಳನ್ನು ಹೇಳಬಹುದು, ಅವರ ಮೃದುಮನವನ್ನು ಇನ್ನಷ್ಟು ಉಲ್ಲಸಿತಗೊಳಿಸುವ ಚಟುವಟಿಕೆಗಳನ್ನು ಮಾಡಬಹುದು. ಅವರಲ್ಲಿನ ಸೃಜನಶೀಲತೆಯನ್ನು, ಕ್ರಿಯಾಶೀಲತೆಯನ್ನು ಹೆಚ್ಚಿಸುವ ಉಪಾಯಗಳನ್ನು ಮಾಡಬಹುದು. ಇಂದು ಮಕ್ಕಳು ಖಂಡಿತವಾಗಿಯೂ ಶಾಲೆ, ಶಿಕ್ಷಕರು, ಗೆಳೆಯರಿಂದ ಅಗಲಿದ್ದಾರೆ, ಪುನಃ ಎಲ್ಲರನ್ನು ಸೇರುವ ಬಯಕೆ ಅವರಲ್ಲಿ ಖಂಡಿತ ಇರುತ್ತದೆ. ಬೇಗ ಶಾಲೆ ಶುರುವಾಗಬೇಕು ಎಂದು ಅವರು ಬಯಸುತ್ತಾರೆ. ಆದರೆ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಖಂಡಿತವಾಗಿಯೂ ಹಿಂದೆಮುಂದೆ ನೋಡುತ್ತಾರೆ. ಹೀಗೆ ಬದುಕೆಂಬ ವರ್ತಮಾನಕಾಲದ ಜೋಕಾಲಿ ಭೂತಕಾಲ ಹಾಗೂ ಭವಿಷ್ಯಕಾಲ ಎಂಬ ಎರಡು ಹಗ್ಗದ ತುದಿಗಳ ನಡುವೆ ಜೀಕುತ್ತಿದೆ. ಇದು ನಿರಾಶಗೊಳ್ಳುವ ಸಮಯವಲ್ಲ, ಜಾಗೃತೆಯಿಂದ ಮತ್ತೆ ಬದುಕನ್ನು ಕಟ್ಟುವ ಕಾಲ. ಕೊರೊನಾ ತಂದಿಟ್ಟ ಅವಘಢಗಳ ಜೊತೆ ಬದುಕುತ್ತ ಬಾಳು ಸಿಂಗರಿಸುವ ಹೊತ್ತು. ಅದಕ್ಕೆಂದೇ ಚಿ. ಉದಯಶಂಕರ್ ಅವರು ಬರೆದ ಈ ಸಾಲುಗಳು ಸರ್ವಕಾಲಿಕ ಸತ್ಯ ಅನಿಸುತ್ತವೆ. ನಾವು ಕಾಲಕ್ಕೆ ತಕ್ಕಂತೆ ನಡಿಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು.

– ಗಿರೀಶ ಜಕಾಪುರೆ. ಇವರು ಹೊಸತಲೆಮಾರಿನ ಕತೆಗಾರರರು, ಅನುವಾದಕರಾಗಿದ್ದು ಎರಡು ಭಿನ್ನ ಭಾಷೆಯ ಪರಂಪರೆಗಳನ್ನು ಪರಿಚಯಿಸುವ ಮತ್ತು ಬೆಸೆಯುವ ಅಂಕಣಗಳನ್ನು ನೀಡುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಮೈಂದರ್ಗಿಯಲ್ಲಿ ವಾಸವಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...