ಕಾಂಗ್ರೆಸ್ ಪಕ್ಷದಲ್ಲಿ ಗುರುತರವಾದ ಬೆಳವಣಿಗೆಗಳಾಗಬೇಕೆಂದು ಒತ್ತಾಯಿಸಿ ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ನಸೀಬ್ ಪಠಾಣ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಪಠಾಣ್, “ನೀವು (ಗುಲಾಂ ನಬಿ) ಮೊದಲ ಬಾರಿ ಚುನಾವಣೆಯಲ್ಲಿ ಸ್ವರ್ಧಿಸಿದಾಗ ನಿಮಗೆ ಕನಿಷ್ಠ 320 ಮತಗಳಷ್ಟೆ ದೊರಕಿದ್ದವೆಂದು ನಿಮಗೆ ಗೊತ್ತು. ನಂತರ ನೀವು ಎಲ್ಲಾ ಕಡೆಗೂ ನಾಮಕರಣಗೊಂಡು ಹೋಗಿದ್ದಿರಿ. ಪಕ್ಷದ ಬಗ್ಗೆ ಈ ರೀತಿ ಮಾತನಾಡುವುದು ಸೂಕ್ತವಲ್ಲ” ಎಂದು ಹೇಳಿದ್ದಾರೆ.
गुलाम नबी आज़ाद को पार्टी से निकालने कि उठी मांग.यूपी विधानपरिषद में कांग्रेस के पूर्व नेता @naseebpathanmlc ने कहा #गुलामनबीआज़ाद को पार्टी से निकाला जाए। इनका कहना है कि जब सोनिया गांधी ने मामला खत्म कर दिया था तो फिर इटरव्यू क्यू दिया।@RahulGandhi@priyankagandhi @INCIndia pic.twitter.com/ngNDJzczkB
— Indiapost News (@IPNews_24) August 28, 2020
ಕಾಂಗ್ರೆಸ್ ನಾಯಕರು ತಮ್ಮ ಪತ್ರದಲ್ಲಿ, ಪೂರ್ಣ ಸಮಯದ ಪರಿಣಾಮಕಾರಿ ನಾಯಕತ್ವಕ್ಕೆ ಕರೆ ನೀಡಿದ್ದಾರೆ. ಪ್ರಾಮಾಣಿಕ ಆತ್ಮಾವಲೋಕನ ಮಾಡುವಂತೆ ಹಾಗೂ ಸಾಮೂಹಿಕ ನಾಯಕತ್ವಕ್ಕೆ, ಅಧಿಕಾರದ ವಿಕೇಂದ್ರೀಕರಣಕ್ಕೆ, ರಾಜ್ಯ ಘಟಕಗಳ ಸಬಲೀಕರಣ ಮತ್ತು ಪ್ರತಿ ಹಂತದಲ್ಲೂ ಸಾಂಸ್ಥಿಕ ಚುನಾವಣೆಗಳು ನಡೆಸುವ ಬಗ್ಗೆ ಸೇರಿದಂತೆ ಹಲವಾರು ಸುಧಾರಣೆಗಳನ್ನು ಬಯಸಿದ್ದರು.
“ಈ ಪತ್ರದಿಂದ ನಮಗೆ ನೋವಾಗಿದೆ, ಇದು ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆಯಲ್ಲಿ ಹೇಳಿದ ನಂತರವೂ, ಗುಲಾಂ ನಬಿ ಅವರು ಮಾಧ್ಯಮಗಳ ಜೊತೆ ಈ ಕುರಿತು ಮಾತನಾಡಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ” ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ನಸೀಬ್ ಪಠಾಣ್ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡ ಹಾರ್ದಿಕ್ ಪಟೇಲ್
ಗುಲಾಮ್ ನಬಿ ಆಜಾದ್ ಅವರಲ್ಲದೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಜಿತಿನ್ ಪ್ರಸಾದ, ಶಶಿ ತರೂರ್ ಸೇರಿದಂತೆ ಹಲವರು ಈ ಭಿನ್ನಮತೀಯ ಪತ್ರಕ್ಕೆ ಸಹಿ ಹಾಕಿದ್ದರು.
ಈ ಪತ್ರದ ಕುರಿತು ಪರ-ವಿರೋಧದ ಚರ್ಚೆಗಳು ದೇಶದಾದ್ಯಂತ ಪ್ರಾರಂಭವಾಗಿದ್ದು, ಪಕ್ಷದೊಳಗಡೆಯೇ ಹಲವರಲ್ಲಿ ಭಿನ್ನಮತವೂ ಏರ್ಪಟ್ಟಿದೆ. ಕೆಲವರು ಪತ್ರ ಬರೆದವರ ಪರವಿದ್ದರೆ, ಮತ್ತೆ ಕೆಲವರು ಪತ್ರ ಬರೆದಿರುವವರನ್ನು ವಿರೋಧಿಸುತ್ತಿದ್ದಾರೆ.
ಭಿನ್ನಮತೀಯ ಪತ್ರ ಬರೆದ ನಾಯಕರು ಬಿಜೆಪಿಯೊಂದಿಗೆ ಸಹಕರಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಮನಮೋಹನ್ ಸಿಂಗ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವರು ಈ ಪತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಪತ್ರವನ್ನು ಬೆಂಬಲಿಸಿದ ಗುಲಾಮ್ ನಬಿ ಆಜಾದ್ ತಾನು ಬಿಜೆಪಿಯೊಂದಿಗೆ ಸಹಕರಿಸಿದ್ದು ಸಾಬೀತಾದರೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದ್ದರು.
ಮಾಜಿ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ರಾಹುಲ್ ಗಾಂಧಿಯವರ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿ, “ನಾವು ಬಿಜೆಪಿಯೊಂದಿಗೆ ಸಹಕರಿಸುತ್ತಿದ್ದೆವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲು ರಾಜಸ್ಥಾನ ಹೈಕೋರ್ಟ್ನಲ್ಲಿ ಯಶಸ್ವಿಯಾಗಿದ್ದೇವೆ. ಮಣಿಪುರದಲ್ಲಿ ಪಕ್ಷವನ್ನು ರಕ್ಷಿಸುತ್ತಿದ್ದೇವೆ. ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿಯ ಪರವಾಗಿ ಹೇಳಿಕೆ ನೀಡಿಲ್ಲ” ಎಂದು ಟ್ವೀಟ್ ಮಾಡಿದ್ದರು.
ಈ ಬೆಳವಣಿಗೆಗಳ ನಂತರ ರಾಹುಲ್ ಗಾಂಧಿಯವರು ಸಿಬಲ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಮಾಧ್ಯಮಗಳ ವರದಿಯನ್ನು ನಂಬಬೇಡಿ ಎಂದು ಮನವಿ ಮಾಡಿದ ನಂತರ ಸಿಬಲ್ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ’ಭಿನ್ನಮತೀಯ’ ಪತ್ರದ ಬಗ್ಗೆ ಭಾರಿ ಚರ್ಚೆ