2017ರವರೆಗೂ ಪ್ರತಿ ವರ್ಷ ಮಾರ್ಚ್ 08 ಅಥವಾ ಅದರ ಸುತ್ತಾಮುತ್ತಾ ಪಿ.ಲಂಕೇಶ್ರ ಜನ್ಮದಿನದ ನೆನಪಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿತ್ತು. ನಾಡಿನ ಹಿರಿಯ ಚಿಂತಕರು, ಹೋರಾಟಗಾರರು ಮತ್ತು ಸಾಹಿತಿ ಕಲಾವಿದರನ್ನು ಕರೆಸಿ ಇಡೀ ದಿನ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚೆ, ಪುಸ್ತಕ ಬಿಡುಗಡೆ, ಸಿನಿಮಾ ವೀಕ್ಷಣೆ ರೀತಿಯ ಹತ್ತು ಹಲವು ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದವು. ಗೌರಿ ಲಂಕೇಶ್ ಇದರ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು.
ಆದರೆ 2017ರಲ್ಲಿ ಮತಾಂಧ ಶಕ್ತಿಗಳ ಗುಂಡಿಗೆ ಎದೆಯೊಡ್ಡಿ ಗೌರಿ ಅಮ್ಮ ಹುತಾತ್ಮರಾದ ನಂತರ, ಲಂಕೇಶ್ ನೆನಪು ಕಾರ್ಯಕ್ರಮ ನಿಂತುಹೋಯಿತು. ಆದರೆ ಅಪ್ಪನ ಹಾದಿಯಲ್ಲಿಯೇ ನಡೆದ, ಆಕ್ಟಿವಿಸ್ಟ್ ಜರ್ನಲಿಸ್ಟ್ ಆಗಿ ಅಪ್ಪನನ್ನುಮೀರಿಸಿದ ನಮ್ಮ ಗೌರಿ ಅಮ್ಮನನ್ನು ನೆನೆಯುವ ಜವಾಬ್ದಾರಿ ನಮ್ಮ ಮೇಲಿತ್ತು. ಹಾಗಾಗಿ ಅಮ್ಮನ ಜನ್ಮದಿನವಾದ ಜನವರಿ 29ನ್ನು ಕಳೆದ ವರ್ಷದಿಂದ ಗೌರಿದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಜನವರಿ 29ರಂದು ಅಮ್ಮನ ದಿನದಂದು ಅಮ್ಮಿ ಎಂಬ ಭಾವಪೂರ್ಣ ಸಿನಿಮಾ ನೋಡಿದ್ದಲ್ಲದೇ, ಅಮ್ಮಿಯನ್ನೇ ಇದಕ್ಕೆ ಕರೆಸಲಾಗಿತ್ತು.
ಗೌರಿ ಅಮ್ಮ ನಮ್ಮನ್ನೆಲ್ಲಾ ಮಕ್ಕಳೆಂದು ಭಾವಿಸಿ ಪೋಷಿಸಿದವರು. ಮರಿ ಎಂದು ಕರೆದು ಪ್ರೀತಿ ಕೊಟ್ಟವರು. ಹೋರಾಟಗಾರ ಮಕ್ಕಳಿಗಾಗಿ ಹಂಬಲಿಸುತ್ತಿದ್ದ, ಈ ಮಕ್ಕಳು ದೊಡ್ಡ ನಾಯಕರಾಗಿ ದೇಶ ಕಟ್ಟಬೇಕೆಂದು ಪರಿತಪಿಸುತ್ತಿದ್ದ ತಾಯಿಹೃದಯ ಗೌರಿ ಅಮ್ಮ. ದೇಶ ಕಟ್ಟುವ ಮತ್ತು ದೇಶ ಬದಲಿಸುವ ನಾಯಕರು ಹಾಗೂ ವಿದ್ವಾಂಸರನ್ನು ರೂಪಿಸುವ ಜೆಎನ್ಯು ವಿಶ್ವವಿದ್ಯಾಲಯಕ್ಕೆ ಓದಲು ಕಳಿಸಿದ ಮಗ ನಜೀಬ್ನನ್ನು ಕಳೆದುಕೊಂಡ ಅಮ್ಮಿ ನಫೀಸ್ರವರು ಅಂದು ನಮ್ಮ ಕಾರ್ಯಕ್ರಮದಲ್ಲಿದ್ದರು.
ಈ ಮತಾಂಧರು ಮಾನವೀಯತೆ ಇಲ್ಲದವರು ಎಂಬುದಕ್ಕೆ ಉದಾಹರಣೆಯಾಗಿ ನಜೀಬ್ ಪ್ರಕರಣವಿದೆ. ಗೌರಿ ಅಮ್ಮನನ್ನು ಕಳೆದು ಮಕ್ಕಳು ನಾವು ಅಲ್ಲಿ ಕುದಿಯುತ್ತಿದ್ದರೆ, ತನ್ನ ಮಗ ನಜೀಬ್ನನ್ನು ಕಳೆದುಕೊಂಡ ಕಿಚ್ಚು ನಫೀಸಾ ಅಮ್ಮಿಯಲ್ಲಿತ್ತು. ಇದರ ಕುರಿತಾಗಿಯೇ ಪೆಡೆಸ್ಟ್ರಿಯನ್ ಪಿಕ್ಚರ್ಸ್ ನಿರ್ಮಿಸಿರುವ ಅಮ್ಮಿ ಸಾಕ್ಷ್ಯಚಿತ್ರ ಮೊದಲು ಪ್ರದರ್ಶನಗೊಂಡಿತು. ನಜೀಬ್ ಎಂಬ ಅತ್ಯಂತ ಒಳ್ಳೆಯ ಹುಡುಗನ ವ್ಯಕ್ತಿತ್ವ, ಬಿಜೆಪಿ ಸಂಘಪರಿವಾರದ ಎಬಿವಿಪಿಯ ಹೊಲಸು ರಾಜಕೀಯವನ್ನು ಚಿತ್ರ ಬಿಚ್ಚಿಟ್ಟಿತು. ಜಡಗೊಂಡಿರುವ ವ್ಯವಸ್ಥೆಯನ್ನು ಬಡಿದೆಚ್ಚರಿಸಿ ನಜೀಬ್ನನ್ನು ವಾಪಸ್ ತರುವ ಸಂಕಲ್ಪದೊಂದಿಗೆ ಚಿತ್ರ ಮುಕ್ತಾಯವಾಗಿತ್ತು. ಅಮ್ಮನ ದಿನಕ್ಕೆ ಅಮ್ಮಿ ನಮ್ಮೆಲ್ಲರ ಹೋರಾಟದ ಕಿಚ್ಚನ್ನು ಎಚ್ಚರಿಸಿದರು. ಈಗ ಅವರು ತಾಯಿಯ ಮಮತೆ, ಮಗನನ್ನು ಹುಡುಕುತ್ತಿರುವ ದುಃಖತಪ್ತೆಯಾಗಿ ಮಾತ್ರವಲ್ಲದೇ, ಅದರ ಕಾರಣವನ್ನು ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಕಂಡುಕೊಂಡಿರುವ ಒಬ್ಬ ಚಿಂತಕಿಯಾಗಿ ರೂಪುಗೊಂಡಿದ್ದಾರೆ. ಅಷ್ಟು ಖಚಿತವಾಗಿ ಅವರು ಇಡೀ ದೇಶದ ಪರಿಸ್ಥಿತಿಯನ್ನು ವಿಶ್ಲೇಷಣಾತ್ಮಕವಾಗಿ ಮುಂದಿಟ್ಟರು.
ಅಮ್ಮಿ ನಫೀಸಾರವರ ಮಾತುಗಳು ನಮ್ಮೆದೆಯೊಕ್ಕ ಗುಂಡುಗಳಂತಾಗಿದ್ದವು. ಅಷ್ಟು ಸ್ಪಷ್ಟ ಮತ್ತು ಆವೇಗದಲ್ಲಿ ಮಾತಾಡಿದರು. ಅವರ ಧೈರ್ಯಕ್ಕೆ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರೊ. ಬಾಬು ಮ್ಯಾಥ್ಯೂ ಅಭಿನಂದನಾ ಮಾತುಗಳನ್ನಾಡಿದರು.
ಕನ್ನಡ ದಿನಪತ್ರಿಕೆ ವಾರ್ತಾಭಾರತಿಯ ಸಂಪಾದಕರಾದ ಅಬ್ದುಲ್ ಸಲಾಂ ಪುತ್ತಿಗೆಯವರು ಗೌರಿ ನೆನಪಿನ ಉಪನ್ಯಾಸ ನೀಡಿದರು. ಜಾತೀಯತೆ, ಬಂಡವಾಳಶಾಹಿ ಶೋಷಣೆ ಮತ್ತು ಮತಾಂಧತೆಯೇ ಭಾರತದ ಪ್ರಮುಖ ಶತ್ರುಗಳಾಗಿದ್ದು ಇಂದಿನ ಪ್ರಧಾನ ಶತ್ರುಗಳಾಗಿದ್ದು ಇವುಗಳನ್ನು ನಿರ್ಮೂಲನೆ ಮಾಡುವ ಶಪಥ ಮಾಡಬೇಕಾಗಿದೆ ಎಂದರು.
ಅಮ್ಮನ ದಿನದಂದು ಅವರ ಕನಸಿನ ನೂತನ www.naanugauri.com ವೆಬ್ಪೋರ್ಟಲ್ಅನ್ನು ಅವರ ತಂಗಿ ಕವಿತಾ ಲಂಕೇಶ್ ಲೋಕಾರ್ಪಣೆ ಮಾಡಿದರು. ಈ ಮೂಲಕ ಗೌರಿ ಸ್ಮಾರಕ ಟ್ರಸ್ಟ್ ಮುಖಾಂತರ ನಾವೆಲ್ಲರೂ ಒಂದು ಸಣ್ಣ ಗಿಫ್ಟ್ಅನ್ನು ಅಮ್ಮನಿಗೆ ನೀಡುತ್ತಿದ್ದೇವೆ. ನ್ಯಾಯಪಥ ಮುದ್ರಿತ ವಾರಪತ್ರಿಕೆ ಯಥಾಪ್ರಕಾರ ಮುಂದುವರೆಯುತ್ತದೆ. ಜೊತೆಗೆ ಈ ವೆಬ್ ಪೋರ್ಟಲ್ ಪ್ರತಿದಿನವೂ ಸತ್ಯಸುದ್ದಿಗಳನ್ನು ನಿಮ್ಮಲ್ಲಿಗೆ ತಲುಪಿಸುವ ಕೆಲಸ ಮಾಡಲಿದೆ. ಇದಕ್ಕಾಗಿ ನೂರು ಜನ
ಬರಹಗಾರರು ನಮ್ಮೊಡನಿದ್ದಾರೆ.
ನಂತರ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆ ಬರುತ್ತಿದ್ದ ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಅಲ್ಲೆ ಒಂದಷ್ಟು ಹಣ ಸಂಗ್ರಹ ಮಾಡಿ ತಲುಪಿಸಲಾಯಿತು. ಈ ರೀತಿಯಾಗಿ ಅಮ್ಮನ ಹೋರಾಟದ ಸ್ಫೂರ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅಮ್ಮನ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.