ಮಂಡ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳು, ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿವೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಮತ್ತು ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ನವೆಂಬರ್ 6 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ವಿಚಿತ್ರ ಮರ್ಯಾದೆಗೇಡು ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 5 ವರ್ಷಗಳ ಹಿಂದೆ ಕಾಣೆಯಾಗಿದ್ದ ಮೇಘನ ಎಂಬ ಹುಡುಗಿಯ ಕೊಲೆಯಾಗಿದೆ ಎಂದು ಆಕೆಯ ತಾಯಿ ಆರೋಪಿಸಿ, ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ವಿಷಯದಲ್ಲಿ ಸೂಕ್ತ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳು ಹೋರಾಟಕ್ಕಿಳಿದಿವೆ.
ಘಟನೆಯ ಹಿನ್ನೆಲೆ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮೇಘನಾ ಎಂಬ ಹುಡುಗಿಯ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಎಂಇಟಿ ಕಾಲೇಜಿನಲ್ಲಿ 2014-15 ರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಸ್ನೇಹಿತರ ಮೂಲಕ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಸವರ್ಣಿಯ ಸಮುದಾಯಕ್ಕೆ ಸೇರಿದ ಟಿ.ಕೆ ಸ್ವಾಮಿ ಎಂಬುವವರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು.
ತದನಂತರ ಅವರಿಬ್ಬರೂ ಮದುವೆಯಾಗಿರುವುದಾಗಿಯೂ, ಆ ಮನೆಯವರಿಗೆ ತನ್ನ ಜಾತಿ ಗೊತ್ತಿರಲಿಲ್ಲ. ಈಗ ಗೊತ್ತಾಗಿ ತನಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ತಾನು ಮನೆಗೆ ಬರುವುದಿಲ್ಲವೆಂದು ಮೇಘನಾ ಆಕೆಯ ತಾಯಿಗೆ ತಿಳಿಸಿ ನಾಪತ್ತೆಯಾಗಿದ್ದಳು. 5 ವರ್ಷದಿಂದ ಯಾವುದೇ ಸಂಪರ್ಕವಿರಲಿಲ್ಲ ಎಂದು ಆಕೆಯ ತಾಯಿ ಹೇಳಿದ್ದರು.
ಆದರೆ ಇತ್ತೀಚೆಗೆ ಅಕ್ಟೋಬರ್ 14 ರಂದು ಮೇಘನಾರವರ ತಾಯಿ ಮನೆ ಸ್ವಚ್ಛಗೊಳಿಸುತ್ತಿರುವಾಗ ಹಳೆಯ ಬೀರುವಿನಲ್ಲಿ ಟಿ.ಕೆ ಸ್ವಾಮಿಯ ವೋಟರ್ ಐಡಿ ಪತ್ತೆಯಾಗಿದೆ. ಅದರ ಆಧಾರದಲ್ಲಿ ತಿರುಮಲಾಪುರಕ್ಕೆ ತೆರಳಿ ವಿಚಾರಿಸಿದರೆ, ನಿಮ್ಮ ಮಗಳನ್ನು ಸ್ವಾಮಿ ಮನೆಯವರು 5 ವರ್ಷಗಳ ಹಿಂದೆಯೇ ಹತ್ಯೆ ಮಾಡಿದ್ದಾರೆ ಸ್ಥಳೀಯರು ಎಂದು ತಿಳಿಸಿದ್ದಾರೆ. ಇದರಿಂದ ಭಯಭೀತಗೊಂಡ ತಾಯಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂತರ ಪೊಲೀಸರು ಹಳೆಯ ಅನುಮಾನಾಸ್ಪದ ಸಾವುಗಳು ಮತ್ತು ಪತ್ತೆಯಾಗದ ಶವಗಳ ದಾಖಲೆ ತೆಗೆದು ಪರಿಶೀಲಿಸಿದಾಗ 2015ರಲ್ಲಿ ಕಾಲುವೆಯಲ್ಲಿ ಪತ್ತೆಯಾಗಿದ್ದ ಶವ ತನ್ನ ಮಗಳು ಎಂದು ಮೇಘನಾ ತಾಯಿಯು ಗುರುತಿಸಿದ್ದಾರೆ. 2015 ರಲ್ಲಿ ಚಿನಕುರಳಿ ಪಕ್ಕದ ಬ್ಯಾಟರಾಯನಪುರ ನಾಲೆಯಲ್ಲಿ ಅಪರಿಚಿತ ಹುಡುಗಿಯ ಶವ ಪತ್ತೆಯಾಗಿದೆ. ಅದನ್ನು ಕೊಲೆ ಎಂದು ಪೊಲೀಸರು ಮಹಜರು ಮಾಡಿದ್ದಾರೆ.
ಹುಡುಗಿ ಮತ್ತು ಹುಡುಗ ಅನ್ಯಜಾತಿಗೆ ಸೇರಿದ್ದರಿಂದ ಹುಡುಗನ ಕುಟುಂಬದವರು ಆಕೆಯನ್ನು ಕೊಂದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯಕ್ಕೆ ಶ್ರೀರಂಗಪಟ್ಟಣ ಡಿವೈಎಸ್ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಈ ನಡುವೆ ಮೃತ ಮೇಘನಾಳ ತಾಯಿಯು ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ, ಬದಲಾಗಿ 5 ವರ್ಷ ಏನು ಮಾಡುತ್ತಿದ್ದೀರಿ? ನಿಮ್ಮ ಮಗಳು ಮದುವೆಯಾಗಿರುವುದಕ್ಕೆ ಸಾಕ್ಷಿ ಏನು? ನಾವು ಆರೋಪಿಗಳನ್ನು ಬಂಧಿಸುವುದಿಲ್ಲ, ಏಕೆಂದರೆ ಅವರು ಲಾಕಪ್ ಡೆತ್ ಆದರೆ ಯಾರು ಹೊಣೆ ಎಂದು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡುರವರು ನಾನುಗೌರಿ.ಕಾಂ ನೊಂದಿಗೆ ಮಾತನಾಡಿ “ಸಂತ್ರಸ್ತಳ ತಾಯಿ ದೂರು ನೀಡಿ 15 ದಿನವಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿಲ್ಲ. ನೊಂದವರಿಗೆ ರಕ್ಷಣೆ ನೀಡಿ, ನ್ಯಾಯ ಕೊಡಿಸಬೇಕಾದ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸಾಕಷ್ಟು ಸಾಕ್ಷಿಗಳಿದ್ದರೂ ಸಹ ತನಿಖೆ ವಿಳಂಬವಾಗುತ್ತಿದೆ ಎಂದರೆ ಏನರ್ಥ? ಪೊಲೀಸರು ಹಣದ ಆಮಿಷಕ್ಕೆ ಬಲಿಯಾಗಿದ್ದಾರೆಯೆ ಅಥವಾ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆಯೇ? ಎಂಬ ಅನುಮಾನ ಬರುತ್ತಿದೆ ಎಂದಿದ್ದಾರೆ.
ತನ್ನ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ಕುತೂಹಲಕ್ಕಾದರೂ ಪೊಲೀಸರು ತನಿಖೆ ನಡೆಸಬೇಕಿತ್ತು. ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕಿತ್ತು. ಆದರೆ ಅವರು ಸಂತ್ರಸ್ತ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಇಂತಹ ಅಪರಾಧಗಳು ಹೆಚ್ಚಲು ಕಾರಣವಾಗುತ್ತದೆ. ಹಾಗಾಗಿ ಪ್ರಕರಣದ ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಇಂತಹ ಪ್ರಕರಣಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕೆಂದು ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.
ನವೆಂಬರ್ 06ರ ಶುಕ್ರವಾರ ಬೆಳಿಗ್ಗೆ 10:30ಕ್ಕೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ. ದಸಂಸ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯ ನೇತೃತ್ವ ವಹಿಸಿವೆ.
ಇದನ್ನೂ ಓದಿ: ಮಾರ್ಯಾದೆ ಹತ್ಯೆ, ಗುಂಪು ಹಲ್ಲೆಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಿದ ರಾಜಸ್ಥಾನ ಸರ್ಕಾರ
Also Read: Honour Killing in Karnataka: Man murders daughter for loving a Dalit man


