ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (KUWJ), ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವ ಅಫಿಡವಿಟ್ನಲ್ಲಿ, ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು “ಮೂರು ಬಾರಿ ಥಳಿಸಲಾಗಿದೆ ಮತ್ತು ಬಂಧನದಲ್ಲಿದ್ದಾಗ ಮಾನಸಿಕ ಹಿಂಸೆ ನೀಡಲಾಗಿದೆ” ಎಂದು ಆರೋಪಿಸಿದೆ.
ನವೆಂಬರ್ 21 ರಂದು ಮಥುರಾ ಜೈಲಿನಲ್ಲಿ KUWJ ವಕೀಲ ವಿಲ್ಸ್ ಮ್ಯಾಥ್ಯೂಸ್ ಮತ್ತು ಪತ್ರಕರ್ತ ಸಿದ್ದೀಕ್ ಕಪ್ಪನ್ ನಡುವೆ ನಡೆದ ಅರ್ಧ ಘಂಟೆಯ ಮಾತುಕತೆಯನ್ನು ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ.
“ಕಪ್ಪನ್ ದೇಹದ ಮೇಲೆ ಮೂರು ಬಾರಿ ಲಾಠಿಯಿಂದ ಹೊಡೆಯಲಾಗಿದೆ. ಕನ್ನಡಕವನ್ನು ತೆಗೆದ ನಂತರ ಮೂರು ಬಾರಿ ಕಪಾಳಮೋಕ್ಷ ಮಾಡಿ, ಎಳೆದೊಯ್ಯಲಾಗಿದೆ, ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ಎಚ್ಚರವಾಗಿರುವಂತೆ ಬಲವಂತ ಮಾಡಲಾಗಿದೆ. ಸರಿಯಾದ ಔಷಧಿಗಳನ್ನು ನೀಡದೇ, ಗಂಭೀರ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕೇರಳ ಮೂಲದ ಪತ್ರಕರ್ತ ಸಿದ್ದೀಕ್ಗೆ ವಕೀಲರ ಭೇಟಿಗೆ ಸುಪ್ರೀಂ ಅನುಮತಿ
ದಿ ವೈರ್ನೊಂದಿಗೆ ಮಾತನಾಡಿರುವ ವಕೀಲ ಮ್ಯಾಥ್ಯೂಸ್, ’ಮಾತುಕತೆಯಲ್ಲಿ ಕಪ್ಪನ್ ತನ್ನನ್ನು ಹೊಡೆದು ಗಂಭೀರ ಮಾನಸಿಕ ಹಿಂಸೆಗೆ ಒಳಪಡಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್ ನೀಡಿದ ಆದೇಶದ ನಂತರ ವಕೀಲರು ಕೇರಳದ ಪತ್ರಕರ್ತರೊಂದಿಗೆ ಸಭೆ ನಡೆಸಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.
ಹತ್ರಾಸ್ನ ದಲಿತ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವರದಿ ಮಾಡಲು ಅಕ್ಟೋಬರ್ 5 ರಂದು ಉತ್ತರಪ್ರದೇಶಕ್ಕೆ ತೆರಳಿದ್ದ, ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಪರ್ತಕರ್ತ ಸಿದ್ದೀಕ್ ಕಪ್ಪನ್ ಅವರನ್ನುಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಕಪ್ಪನ್ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (CFI) ಇಬ್ಬರು ಸದಸ್ಯರು ಹತ್ರಾಸ್ ಅತ್ಯಾಚಾರದ ಬಗ್ಗೆ ಧಾರ್ಮಿಕ ದ್ವೇಷವನ್ನು ಉಂಟುಮಾಡುವ “ಪಿತೂರಿಯ” ಭಾಗವಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ ಮತ್ತು ಕಠಿಣ ಯುಎಪಿಎ ಮತ್ತು ದೇಶದ್ರೋಹ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಿದ್ದಾರೆ.