Homeಮುಖಪುಟಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಎಸ್.ಎಲ್.ಭೈರಪ್ಪ

ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಎಸ್.ಎಲ್.ಭೈರಪ್ಪ

'ಒಂದು ದೇವಾಲಯವನ್ನು ನಿರ್ಮಿಸುವುದರಿಂದ ಒಂದು ಸಾವಿರ ಭಿಕ್ಷುಕರು ಹುಟ್ಟುತ್ತಾರೆ. ಆದರೆ ಒಂದು ಗ್ರಂಥಾಲಯವನ್ನು ಕಟ್ಟುವುದರಿಂದ ಒಂದು ಲಕ್ಷ ಜನ ಪ್ರಜ್ಞಾವಂತರು ರೂಪುಗೊಳ್ಳುತ್ತಾರೆ' ಎಂಬ ಅಂಬೇಡ್ಕರ್ ಮಾತು ಅರ್ಥವಾಗುವುದೆಂದು?

- Advertisement -
- Advertisement -

ಜಗತ್ತಿನಲ್ಲಿ ಧಾರ್ಮಿಕ ಬಹುತ್ವ ಅತ್ಯಂತ ಒಪ್ಪಿತ ಜೀವನ ಮೌಲ್ಯವಾಗಿದೆ. ಜಗತ್ತಿನ ಎಲ್ಲ ಧರ್ಮಗಳು ಭಾರತ ದೇಶದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಯಾವುದೇ ಒಂದು ಧರ್ಮ ಇತರ ಧರ್ಮಗಳಿಗಿಂತ ಯಾವುದೇ ಕಾರಣಕ್ಕೂ ಶ್ರೇಷ್ಟವಲ್ಲ. ಸರ್ವಧರ್ಮಗಳ ನಡುವಣ ಸಮನ್ವಯತೆ ಆಧುನಿಕ ಕಾಲಘಟ್ಟದಲ್ಲಿ ವಿಶೇಷ ಮಹತ್ವ ಹೊಂದಿದೆ. ಮನುಷ್ಯ-ಮನುಷ್ಯರ ನಡುವೆ ಭಿನ್ನ ಬೇಧಗಳನ್ನು ಪೋಷಿಸುವ ಧರ್ಮ ಒಳ್ಳೆಯ ಧರ್ಮವಾಗಲು ಸಾಧ್ಯವಿಲ್ಲ. ಅಸ್ಪೃಷ್ಯತೆ, ಲಿಂಗ ತಾರತಮ್ಯ, ಅಸಮಾನತೆ ಮತ್ತು ಶೋಷಣಾ ಪ್ರವೃತ್ತಿಗಳನ್ನು ಒಳಗೊಂಡಿರುವ ಹಿಂದೂ ಧಾರ್ಮಿಕ ವ್ಯವಸ್ಥೆಯನ್ನು ಸುಧಾರಿಸಲು ಹಲವಾರು ಮಹನೀಯರು ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಶ್ರಮಿಸಿದ್ದಾರೆ.

ಸಂತ ಕಬೀರ, ಮಹಾತ್ಮ ಫುಲೆ, ಸ್ವಾಮಿ ದಯಾನಂದ ಸರಸ್ವತಿ, ಈಶ್ವರ ಚಂದ್ರ ವಿದ್ಯಾಸಾಗರ, ರಾಜಾರಾಮ್ ಮೋಹನ್ ರಾಯ್, ಸ್ವಾಮಿ ವಿವೇಕಾನಂದ, ಪೆರಿಯಾರ್, ನಾರಾಯಣ ಗುರು, ಶಿಶುನಾಳ ಶರೀಫ್ ಮೊದಲಾದ ಮಹಾತ್ಮರು ಸರ್ವರಿಗೂ ಸಮಬಾಳನ್ನು ಕೊಡುವ ಹಿಂದೂ ಧರ್ಮವನ್ನು ಮಾನವೀಯ ನೆಲೆಗಟ್ಟಿನಲ್ಲಿ ಪುನಾರಚಿಸುವ ಪ್ರಯತ್ನ ನಡೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಬಹುಸಂಖ್ಯಾತ ಹಿಂದುಳಿದ ವರ್ಗಗಳನ್ನು ಅಸ್ಪೃಶ್ಯತೆ, ಅಸಮಾನತೆ ಮತ್ತು ಶೋಷಣೆಯೆಡೆಗೆ ದಬ್ಬುವ ಹಿಂದುತ್ವವಾದಿಗಳ ಹುನ್ನಾರವನ್ನು ಉಗ್ರವಾಗಿ ಖಂಡಿಸಿ ಬಂಡಾಯದ ಸಂಕೇತವಾಗಿ ಬೌದ್ಧ ಧರ್ಮವನ್ನು 1956ರಲ್ಲಿ ಅನಿವಾರ್ಯವಾಗಿ ಸುಮಾರು 7 ಲಕ್ಷ ಸಮಾನ ಮನಸ್ಕ ಅನುಯಾಯಿಗಳೊಂದಿಗೆ ಸ್ವೀಕರಿಸಿದ ಇತಿಹಾಸ ನಮ್ಮ ಮುಂದಿದೆ.

ಅಲ್ಪಸಂಖ್ಯಾತ ವೈದಿಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಎಲ್ಲ ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕಬಳಿಸುವ ಸಲುವಾಗಿ ತಮ್ಮನ್ನು ‘ಹಿಂದುತ್ವವಾದಿಗಳು’ ಎಂಬುದಾಗಿ ಕರೆದುಕೊಳ್ಳುತ್ತಾರೆ. ಇವರಿಗೆ ನಿಜವಾಗಿಯೂ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಒಳಿತುಗಳಿಗೆ ವಿರುದ್ಧವಾಗಿರುವ ಬ್ರಾಹ್ಮಣ್ಯದ ರಕ್ಷಣೆ ಗೌಪ್ಯ ಕಾರ್ಯಸೂಚಿಯಾಗಿದೆ. ಇವರು ನಿಜವಾದ ಅರ್ಥದಲ್ಲಿ ಹಿಂದೂ ಧರ್ಮ ಮತ್ತು ಇಂಡಿಯಾ ದೇಶದ ರಕ್ಷಕರಲ್ಲ.

ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಪ್ರಕೃತಿ ಧರ್ಮವನ್ನು ಆಧರಿಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಗೆ ಅವಕಾಶ ಮಾಡಿಕೊಡುವ ಆರೋಗ್ಯಕರ ಚಿಂತನೆಗಳು ಮತ್ತು ಆಚಾರಗಳು ಯಥೇಚ್ಛವಾಗಿವೆ. ಆದರೆ ಹಿಂದೂ ಧರ್ಮದಲ್ಲಿ ಇರುವ ಅಸ್ಪೃಶ್ಯತೆ, ಜಾತಿಯತೆ, ತಾರತಮ್ಯ ಮತ್ತು ಶೋಷಣಾ ಪ್ರವೃತ್ತಿಗಳಿಂದ ಭಾರತದ ಬಹುಜನರು ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಹಿಂದೂ ಧರ್ಮದ ಸ್ವಘೋಷಿತ ರಕ್ಷಕರೆಂದು ಬೊಬ್ಬೆ ಹೊಡೆಯುವ ವೈದಿಕರೆಂಬ ಸ್ಥಾಪಿತ ಹಿತಾಸಕ್ತಿಗಳು ಪ್ರಮುಖ ಕಾರಣರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತವನ್ನು ಜಾತಿಯ ಹೆಸರಿನಲ್ಲಿ ವಿಭಜಿಸಿ ದುರ್ಬಲಗೊಳಿಸುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ಗುಂಪಿನಲ್ಲಿ ಎಸ್.ಎಲ್.ಭೈರಪ್ಪ ಎದ್ದು ಕಾಣುತ್ತಿರುವುದು ದುರ್ದೈವದ ಸಂಗತಿಯಾಗಿದೆ.

‘ಹಿಂದೂ ಧರ್ಮದ ಹೃದಯ ವೈಶಾಲ್ಯತೆ ಅನ್ಯಧರ್ಮೀಯರಲ್ಲೂ ಇದ್ದರೆ ಧಾರ್ಮಿಕ ವಿಷಯದಲ್ಲಿ ಹೊಡೆದಾಟ – ಬಡಿದಾಟ ನಡೆಯುವುದಿಲ್ಲ’ ಎಂಬ ಇವರ ಇತ್ತೀಚಿನ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಸ್ವಾಮಿ ವಿವೇಕಾನಂದರು ಅಸ್ಪೃಶ್ಯತೆಯನ್ನು ಆಚರಿಸುವ ಹಿಂದೂ ಧರ್ಮ ಒಳ್ಳೆಯ ಧರ್ಮವಲ್ಲ ಎಂದು ಪ್ರತಿಪಾದಿಸಿದ್ದರು. ಜಾತಿಯ ಕಾರಣಕ್ಕಾಗಿ ಬಹುಸಂಖ್ಯಾತ ಮೂಲನಿವಾಸಿಗಳನ್ನು ಅಸಮಾನತೆಯೆಡೆಗೆ ದಬ್ಬುವ ಹಿಂದೂ ಧರ್ಮ ಜೀವಪರ ಧರ್ಮವಲ್ಲವೆಂದು ಅಂಬೇಡ್ಕರ್ ವಾದಿಸಿದ್ದರು. ಹಿಂದೂ ಧರ್ಮ ಸುಧಾರಣೆಗಾಗಿ ಪ್ರಯತ್ನಿಸಿದ ಮಹನೀಯರೆಲ್ಲರೂ ಅಪ್ಪಟ ಭಾರತೀಯರೇ ಹೊರತು ಹಿಂದೂ ಧರ್ಮ ವಿರೋಧಿಗಳಲ್ಲ ಎಂಬುದನ್ನು ವೈದಿಕರು ಮನಗಾಣಬೇಕು.

ಕೋವಿಡ್-19 ಪ್ರಾಕೃತಿಕ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಬೀದಿಗೆ ಬಿದ್ದ ಅಸಹಾಯಕ ಬಡವರಿಗೆ ಒಂದು ರೂಪಾಯಿಯನ್ನು ಕೊಡದ ಭೈರಪ್ಪನವರು ‘ಶ್ರೀ ರಾಮಮಂದಿರ ನಿರ್ಮಾಣ ನಿಧಿಗೆ 10 ಸಾವಿರ ರೂ. ದೇಣಿಗೆ ನೀಡಿರುವುದು’ ಒಂದು ಬಗೆಯ ಧಾರ್ಮಿಕ ಸ್ಟಂಟ್ ಆಗಿದೆಯೇ ಹೊರತು ಬೇರೇನೂ ಅಲ್ಲ. ಕೋಟ್ಯಾಂತರ ಹಿಂದುಳಿದ ಸಮುದಾಯಗಳಿಗೆ ಸೇರಿದ ಭಾರತೀಯರನ್ನು ಅಸಮಾನತೆ ಮತ್ತು ಶೋಷಣೆಗಳೆಡೆಗೆ ದಬ್ಬುವ ವೈದಿಕರ ಕಪಿಮುಷ್ಟಿಗೆ ಒಳಗಾಗಿರುವ ಹಿಂದೂ ಧರ್ಮ ಅತ್ಯಂತ ಶ್ರೇಷ್ಟ ಧರ್ಮವಾಗಲು ಸಾಧ್ಯವಿಲ್ಲವೆಂಬ ಸತ್ಯವನ್ನು ಭೈರಪ್ಪನವರು ಮನಗಾಣಬೇಕು.

ಭಾರತದಲ್ಲಿ ಗೋವಿನ ಜೀವಕ್ಕೆ ಇರುವಷ್ಟು ಮಹತ್ವ ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಜೀವಕ್ಕೆ ಇಲ್ಲದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಮನುಷ್ಯ, ಒಂದು ಮತ ಮತ್ತು ಒಂದು ಮೌಲ್ಯ ಇರುವುದು ಸತ್ಯಸಂಗತಿಯಾಗಿದೆ. ಆದರೆ ಭಾರತೀಯ ಸಮಾಜದಲ್ಲಿ ಒಬ್ಬ ಮನುಷ್ಯ, ಒಂದು ಮೌಲ್ಯ ಮತ್ತು ಗೌರವಯುತ ಬದುಕು ಸಿಗದಿರಲು ಭೈರಪ್ಪನವರಂತಹ ಧಾರ್ಮಿಕ ಮೂಲಭೂತವಾದಿಗಳ ಹುನ್ನಾರ ಪ್ರಮುಖ ಕಾರಣವಾಗಿದೆ.

ಆರ್ಥಿಕವಾಗಿಯೂ ಮೇಲ್ಜಾತಿಯವರಿಗೆ ಸಂಪತ್ತು ಮತ್ತು ಕೆಳಜಾತಿಯವರಿಗೆ ಬಡತನ ಪ್ರಾಪ್ತವಾಗಲು ಹಿಂದೂ ಧಾರ್ಮಿಕ ವ್ಯವಸ್ಥೆ ಕಾರಣವಾಗಿದೆಯೆಂಬ ಸತ್ಯವನ್ನು ಭೈರಪ್ಪನಂಥವರು ಒಪ್ಪಿಕೊಳ್ಳುವುದಿಲ್ಲ. ಸತ್ಯವನ್ನು ಮಂಡಿಸುವ ಇತಿಹಾಸಕಾರರ ಅಬ್ಬರ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಡಿಮೆಯಾಗಿದೆಯೆಂಬ ಭೈರಪ್ಪನವರ ಹೇಳಿಕೆ ಅವರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಸಂಸ್ಕೃತಿಯುಳ್ಳವರು, ಇತಿಹಾಸಪ್ರಜ್ಞೆ ಇರುವವರು, ಜನರ ಜೀವಕ್ಕೆ ಬೆಲೆ ಕೊಡುವವರು ಮತ್ತು ನಿಜವಾದ ಭಾರತೀಯರು ಅಧಿಕಾರಕ್ಕೆ ಬಂದಿದ್ದ ಪಕ್ಷದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಶೋಷಿತರು ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ಬೀದಿಯಲ್ಲಿ ಅನಾಥರಾಗಿ ಸಾಯುವಂತಹ ಹೀನಾಯ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಭೈರಪ್ಪನವರು ಏಕೆ ಅರ್ಥಮಾಡಿಕೊಳ್ಳಬಾರದು?

ರೈತರ ಭೂಮಿ, ಕಾರ್ಮಿಕರ ಉದ್ಯೋಗ, ಯುವಜನರ ಬದುಕು, ಮಹಿಳೆಯರ ಮಾನ ಮತ್ತು ಶೋಷಿತರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಆಳುವವರನ್ನು ಸಂಸ್ಕೃತಿಯುಳ್ಳವರು ಎಂದು ಕರೆಯಲು ಸಾಧ್ಯವೇ? ಭೈರಪ್ಪನಂತವರು ಇಷ್ಟೆಲ್ಲಾ ಅನಾಹುತಗಳು ಜರುಗುತ್ತಿದ್ದರೂ ಸಹ ‘ದೇಶದ ಜನರಲ್ಲಿ ಹೊಸ ಪ್ರಜ್ಞೆ ಹುಟ್ಟಿದೆ’ ಎಂಬ ಹಸಿ ಸುಳ್ಳನ್ನು ಸಾರ್ವಜನಿಕವಾಗಿ ಹೇಳಿರುವುದು ಖಂಡನೀಯ.

ದಿಲ್ಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆಯಲ್ಲಿ ಪಂಜಾಬ್‌ನವರು ಮಾತ್ರ ಭಾಗಿಯಾಗಿದ್ದಾರೆ ಎಂಬ ಭೈರಪ್ಪನವರ ಧೋರಣೆ ಅಮಾನವೀಯವಾಗಿದೆ. ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಕರ್ನಾಟಕ ಮೊದಲಾದೆಡೆಯಿಂದ ಸಹಸ್ರಾರು ರೈತರು ಅಹಿಂಸಾತ್ಮಕವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ರೈತ ವಿರೋಧಿ ದೆಹಲಿ ಗದ್ದುಗೆಗೆ ಮುತ್ತಿಗೆ ಹಾಕಿರುವುದು ದೇಶಬಾಂಧವರಲ್ಲಿ ಮೂಡಿರುವ ಹೊಸ ಹೋರಾಟ ಪ್ರಜ್ಞೆಗೆ ಸಾಕ್ಷಿಯಾಗಿದೆಯೆಂಬ ಕನಿಷ್ಟ ಅರಿವು ಭೈರಪ್ಪನವರಿಗೆ ಇಲ್ಲ. ಎಲ್ಲ ರಾಜ್ಯಗಳಲ್ಲಿಯೂ ರೈತ ವಿರೋಧಿ ಸರ್ಕಾರದ ಧೋರಣೆ ವಿರುದ್ಧ ನಿರಂತರ ಪ್ರತಿಭಟನೆಗಳು ಜರುಗುತ್ತಿರುವುದನ್ನು ನೋಡದಷ್ಟು ಅಂಧರಾಗಿದ್ದಾರೆಯೇ ಭೈರಪ್ಪ? ನಮ್ಮ ನಾಡಿನ ಸಾಕ್ಷಿಪ್ರಜ್ಞೆ ಹಾಗೂ ರೈತನಾಯಕ ದೇವನೂರ ಮಹಾದೇವ ಹೇಳಿರುವ ಹಾಗೆ ಭೈರಪ್ಪನವರು ಜೀವಪರ ಸಂವೇದನೆ ಕಳೆದುಕೊಂಡಿದ್ದಾರೆ. ದೇಗುಲಗಳ ನಿರ್ಮಾಣಕ್ಕಿಂತ ಪ್ರಬುದ್ಧ ದೇಶದ ನಿರ್ಮಾಣ ಬಹುಮುಖ್ಯವೆಂಬ ಸತ್ಯವನ್ನು ಹಿಂದೂ ಸಾಮ್ರಾಜ್ಯಶಾಹಿಯ ವಕ್ತಾರ ಭೈರಪ್ಪ ಅವರಿಗೆ ಅರ್ಥವಾಗಬೇಕಿದೆ!.

ಸಂವಿಧಾನ ಶಿಲ್ಪಿ ಹಾಗೂ ಮಾನವತಾವಾದಿ ಅಂಬೇಡ್ಕರ್ ‘ಒಂದು ದೇವಾಲಯವನ್ನು ನಿರ್ಮಿಸುವುದರಿಂದ ಒಂದು ಸಾವಿರ ಭಿಕ್ಷುಕರು ಹುಟ್ಟುತ್ತಾರೆ. ಆದರೆ ಒಂದು ಗ್ರಂಥಾಲಯವನ್ನು ಕಟ್ಟುವುದರಿಂದ ಒಂದು ಲಕ್ಷ ಜನ ಪ್ರಜ್ಞಾವಂತರು ರೂಪುಗೊಳ್ಳುತ್ತಾರೆ’ ಎಂದು ನುಡಿದ ಸತ್ಯ ಭೈರಪ್ಪನಂತಹವರಿಗೆ ಅರ್ಥವಾಗುವುದುಂಟೆ? ದೇವಾಲಯ ನಿರ್ಮಾಣದಿಂದ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಿಲ್ಲವೆಂಬುದನ್ನು ಭೈರಪ್ಪನಂತಹ ಹಿಂದುತ್ವವಾದಿಗಳು ಮೊದಲು ಅರಿಯಬೇಕು. ಮಂದಿರ ನಿರ್ಮಾಣಕ್ಕಿಂತ ಮಿಗಿಲಾಗಿ ಎಲ್ಲ ಭಾರತೀಯರಿಗೂ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸುರಕ್ಷತೆಗಳನ್ನು ಒದಗಿಸಿ ದೇಶವನ್ನು ಪ್ರಬುದ್ಧ ರಾಷ್ಟ್ರವನ್ನಾಗಿ ರೂಪಿಸುವ ಕೆಲಸ ಅತಿಮುಖ್ಯವೆಂದು ಇಂದು ನಮ್ಮನ್ನಾಳುತ್ತಿರುವವರಿಗೆ ಮನದಟ್ಟು ಮಾಡಿಕೊಡುವುದು ಪ್ರಜ್ಞಾವಂತರ ಹೊಣೆಗಾರಿಕೆಯಾಗಿದೆ.

 

  • ಡಾ.ಬಿ.ಪಿ.ಮಹೇಶ ಚಂದ್ರ ಗುರು

(ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈವಿವಿ, ಮೈಸೂರು)


ಇದನ್ನೂ ಓದಿ: ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ: ಭೈರಪ್ಪನವರಿಗೆ ತಿರುಗೇಟು ನೀಡಿದ ದೇವನೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...